Home ರಾಜಕೀಯ ಅಡ್ವೊಕೇಟ್ ಜನರಲ್ ನೇಮಕ ; ಬಿಜೆಪಿ ಬಗೆಗಿನ ಮೃದು ಧೋರಣೆಯವರ ಅವಶ್ಯಕತೆ ಇತ್ತೇ?

ಅಡ್ವೊಕೇಟ್ ಜನರಲ್ ನೇಮಕ ; ಬಿಜೆಪಿ ಬಗೆಗಿನ ಮೃದು ಧೋರಣೆಯವರ ಅವಶ್ಯಕತೆ ಇತ್ತೇ?

0

ಸಿದ್ದರಾಮಯ್ಯ ಸರ್ಕಾರ ರಚನೆಯಾಗಿ 50 ದಿನಗಳ ದಾಟಿ ಮುಂದೆ ಹೋಗ್ತಿದೆ. ಕೊಟ್ಟ ಭರವಸೆಗಳನ್ನ ಒಂದೊಂದಾಗಿ ಪೂರೈಸುವ ಪ್ರಯತ್ನದಲ್ಲಿದ್ದಾರೆ. ಇದರ ಜೊತೆ ಜೊತೆಗೆ ಆಯಕಟ್ಟಿನ ಜಾಗಗಳಲ್ಲಿ ತಮಗೆ ಬೇಕಾದ ವ್ಯಕ್ತಿಗಳನ್ನು ತಮಗೆ ಬೇಕಾದ ಜಾಗಗಳಲ್ಲಿ ಕೂರಿಸುವ ಕೆಲಸ ಕೂಡಾ ಭರದಿಂದಲೇ ಸಾಗಿದೆ. ಆದರೆ ಸರ್ಕಾರ ಆಯಕಟ್ಟಿನ ಜಾಗದಲ್ಲಿ ಬಿಜೆಪಿ ಪಕ್ಷದ ಬಗೆಗಿನ ಮೃದು ಧೋರಣೆ ಇರುವ ವ್ಯಕ್ತಿಯ ಆಯ್ಕೆ ಯಾಕೆ ಮಾಡಿದೆ ಎಂಬ ಅಪಸ್ವರ ಕಾಂಗ್ರೆಸ್ ಪಾಳಯದಿಂದಲೇ ಕೇಳಿ ಬರುತ್ತಿದೆ.

ಅಂದಹಾಗೆ 03.07.2023 ಕ್ಕೆ ಅನ್ವಯವಾಗುವಂತೆ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ಹೆಚ್ಚುವರಿ ಅಡ್ವೊಕೇಟ್ ಜನರಲ್ ಅವರನ್ನು ಆಯ್ಕೆ ಮಾಡಿದೆ. ಅವರಲ್ಲಿ ಪ್ರಮುಖವಾಗಿ ಶ್ರೀ ವಿಕ್ರಮ್ ಹುಯಿಲ್ ಗೋಳ, ಶ್ರೀ ಕೆಂಪಣ್ಣ, ಶ್ರೀ ಸಂತೋಷ್ ಎಸ್.ಗೋಗಿ, ಶ್ರೀಮತಿ ಪ್ರತಿಮಾ ಹೊನ್ನಾಪುರ, ಶ್ರೀ ಎಸ್.ಇಸ್ಮಾಯಿಲ್ ಜಬಿವುಲ್ಲಾ ಇವರುಗಳು ಸೋಮವಾರದ ದಿನ ಸರ್ಕಾರದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿ ನೇಮಕಗೊಂಡಿದ್ದಾರೆ.

ಇದರಲ್ಲಿ ಸಂತೋಷ್ ಎಸ್ ಗೋಗಿ ಅವರ ಬಗ್ಗೆ ಕಾಂಗ್ರೆಸ್ ಪಾಳಯದಲ್ಲೇ ಹೆಚ್ಚು ಅಪಸ್ವರ ಕೇಳಿ ಬಂದಿದೆ. ಇದಕ್ಕೆ ಮುಖ್ಯ ಕಾರಣ ಏನೆಂದರೆ ಈ ವ್ಯಕ್ತಿಯ ಬಿಜೆಪಿ ಮೇಲಿನ ಮೃದು ಧೋರಣೆ. ಅದೂ ಬಹಿರಂಗವಾಗಿ ತೋರಿಸಿಕೊಂಡಂತೆ ಇವರ ಟ್ವಿಟ್ಟರ್ ಖಾತೆಯೇ ಸಾಕ್ಷಿಯಾಗಿ ನಿಲ್ಲುತ್ತದೆ.

ಸಂತೋಷ್ ಗೋಗಿಯವರ ಟ್ವಿಟ್ಟರ್ ಖಾತೆ ಮತ್ತು ಅವರು ಅನುಸರಿಸುವ (ಫಾಲೋ Follow) ವ್ಯಕ್ತಿಗಳು ಬಹುತೇಕ ಬಿಜೆಪಿ ಮಂದಿಯೇ ಆಗಿದ್ದಾರೆ. ಅಲ್ಲಲ್ಲಿ ಅರವಿಂದ್ ಕೇಜ್ರಿವಾಲ್, ಸಿದ್ದರಾಮಯ್ಯ, ಹೆಚ್.ಡಿ.ಕುಮಾರಸ್ವಾಮಿಯಂತಹ ವ್ಯಕ್ತಿಗಳನ್ನು ಹೊರತುಪಡಿಸಿ ಉಳಿದ 90 ಪ್ರತಿಶತ ಮಂದಿ ಬಿಜೆಪಿಯವರೇ ಎಂಬುದು ಆಶ್ಚರ್ಯಕರ ವಿಚಾರ.

ಅದರಲ್ಲಿ ನರೇಂದ್ರ ಮೋದಿ, ಅಮಿತ್ ಷಾ, ಜೆಪಿ ನಡ್ಡಾ, ಬಿ.ಎಲ್.ಸಂತೋಷ್, ಸ್ಮೃತಿ ಇರಾನಿ, ಸುಬ್ರಮಣಿಯನ್ ಸ್ವಾಮಿ, ಭಾಸ್ಕರ್ ರಾವ್, ಸದಾನಂದ ಗೌಡ, ಪಿಯೂಶ್ ಗೋಯಲ್, ಪ್ರಕಾಶ್ ಜಾವಡೇಕರ್, ನಳಿನ್ ಕುಮಾರ್ ಕಟೀಲ್, ದಿಗ್ವಿಜಯ್ ಸಿಂಗ್, ಕ್ರಿಕೆಟಿಗ ಹಾಗೂ ಸಂಸದ ಗೌತಮ್ ಗಂಭೀರ್, ರಾಜನಾಥ್ ಸಿಂಗ್‌.. ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಕೇವಲ ಫಾಲೋ ಮಾಡಿದ್ದರೂ ಸರಿ, ಹೋಗಲಿ ಎಂದು ಸುಮ್ಮನಾಗಬಹುದು. ಅವರು ಲೈಕ್ (Like) ಮಾಡಿರುವ ಪಟ್ಟಿಯನ್ನು ಹೋಗಿ ತಡಕಾಡಿದರೂ ಅಲ್ಲಿ ಸಿಗುವುದು ಕೂಡಾ ಬಿಜೆಪಿ ಮಂದಿಯದ್ದೇ.

ಅದೂ ಸರಿಯೆಂದುಕೊಂಡರೂ ಬಿ.ಎಲ್.ಸಂತೋಷ್ ರಂತಹ ವ್ಯಕ್ತಿ ಮಾಡಿದ ಟ್ವಿಟ್ ಗಳೂ ಸಹ ಸಂತೋಷ್ ಗೋಗಿಯವರ ಟ್ವಿಟ್ಟರ್ ಖಾತೆಯಲ್ಲಿ ರಿಟ್ವಿಟ್ (Re tweet) ಆಗಿರುವುದು ಸ್ಪಷ್ಟವಾಗಿ ಈ ವ್ಯಕ್ತಿ ಬಿಜೆಪಿ ಪರವಾಗಿರುವ ಮೃದು ಧೋರಣೆ ಹೊಂದಿದ ವ್ಯಕ್ತಿ ಎಂಬುದನ್ನು ಸಾಭೀತುಪಡಿಸುತ್ತಿದೆ. ‌ಸರ್ಕಾರಿ ಹುದ್ದೆ ಅದರಲ್ಲೂ ಅಡ್ವೊಕೇಟ್ ಜನರಲ್ ಹುದ್ದೆಗೆ ಆಯ್ಕೆ ಆಗುವಂತಹ ವ್ಯಕ್ತಿಗಳು ರಾಜಕೀಯವಾಗಿ ಇಷ್ಟು ಬಹಿರಂಗವಾಗಿ ಗುರುತಿಸಿಕೊಂಡಿರುವಾಗ ಕಾಂಗ್ರೆಸ್ ಸರ್ಕಾರದ ಆಯ್ಕೆಯ ಬಗ್ಗೆ ಸಹಜವಾಗಿ ಅಪಸ್ವರದ ಮಾತು ಕಾಂಗ್ರೆಸ್ ನ ಒಳಗೇ ಕೇಳಿ ಬಂದಿದೆ.

ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇರುವಾಗಲೂ ಕಂಡೂ ಕಂಡು ಇಂತಹ ವ್ಯಕ್ತಿಗಳನ್ನೇ ಆಯ್ಕೆ ಮಾಡಿರುವುದು ಗೊತ್ತಿಲ್ಲದೆ ಮಾಡಿದೆಯೋ ಅಥವಾ ಗೊತ್ತಿದ್ದೇ ಮಾಡಿದೆಯೋ ಎಂಬ ಅನುಮಾನ ಕಾಡದಿರದು.

You cannot copy content of this page

Exit mobile version