Monday, June 17, 2024

ಸತ್ಯ | ನ್ಯಾಯ |ಧರ್ಮ

ಜಲ ಸಂರಕ್ಷಣೆ ನಮ್ಮೆಲ್ಲರ ಅತೀ ದೊಡ್ಡ ಜವಾಬ್ದಾರಿ: ದ್ರೌಪದಿ ಮುರ್ಮು

ಉತ್ತರ ಪ್ರದೇಶ: ಭಾರತೀಯ ಸಂಸ್ಕೃತಿಯಲ್ಲಿ ನೀರಿಗೆ ಪವಿತ್ರ ಸ್ಥಾನ ನೀಡಲಾಗಿದ್ದು, ನೀರು ನಮ್ಮೆಲ್ಲರ ಜೀವನಾಡಿಯಾಗಿದೆ. ಹೀಗಾಗಿ ಜಲ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು.                                                                                     

ಉತ್ತರ ಪ್ರದೇಶದ ಬೃಹತ್ ನೋಯ್ಡಾ ಪ್ರದೇಶದಲ್ಲಿ ಭಾರತ ಜಲ ಸಪ್ತಾಹ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಭಗೀರಥ ಪ್ರಯತ್ನದಿಂದ ಗಂಗೆ ಧರೆಗಿಳಿದಿದ್ದನ್ನು ನಾವೆಲ್ಲರೂ ಓದಿದ್ದೇವೆ.  ಇದು ನೀರಿನ ಮಹತ್ವವನ್ನು ಸಾರುತ್ತದೆ. ನೀರು ನಮ್ಮೆಲ್ಲರಿಗೂ ತುಂಬಾ ಮುಖ್ಯ, ಹಾಗಾಗಿ ನಾವೆಲ್ಲ ನೀರಿಲ್ಲದ ಜೀವನವನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯ ಎಂದರು.

ಪ್ರಸಕ್ತ ಸನ್ನಿವೇಶದಲ್ಲಿ ಜನಸಂಖ್ಯೆ ಹೆಚ್ಚಳದಿಂದ ಜಲನಯನ ಪ್ರದೇಶಗಳು ಕ್ಷೀಣಿಸುತ್ತಿದೆ.  ನದಿಗಳು ಮಲಿನವಾಗುತ್ತಿವೆ. ಕೆಲವೆಡೆ ಬತ್ತಿಹೋಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಹವಾಮಾನದಲ್ಲಿ ವೈಪರೀತ್ಯಗಳಾಗುತ್ತಿವೆ. ಅತಿವೃಷ್ಟಿ, ಅನಾವೃಷ್ಟಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಲ ನಿರ್ವಹಣೆ ಕುರಿತಂತೆ ವಿಚಾರ ವಿಮರ್ಶೆ ಅಗತ್ಯವಾಗಿದ್ದು, ಐದು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ದೇಶ-ವಿದೇಶಗಳಿಂದ ಆಗಮಿಸಿರುವ ತಜ್ಞರು, ಪ್ರತಿನಿಧಿಗಳು ಜಲ ಸಂರಕ್ಷಣೆ ಕುರಿತಂತೆ ಚಿಂತನ -ಮಂಥನ ನಡೆಸಲಿದ್ದಾರೆ ಎಂದು ತಿಳಿಸಿದರು.

ಕೃಷಿಯಲ್ಲಿ ಕಡಿಮೆ ನೀರಿನ ಬಳಕೆಯ ವ್ಯವಸಾಯದ ಬಗ್ಗೆ ಗಮನ ಹರಿಸುವುದು ಅಗತ್ಯ. ಕೆಲವು ದಶಕಗಳ ಹಿಂದೆ ಮಹಿಳೆಯರು ತಲೆ ಮೇಲೆ ನೀರು ಹೊತ್ತು ತರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಆದರೆ ಇಂದು ಜಲಜೀವನ ಅಭಿಯಾನದಿಂದ ಗ್ರಾಮೀಣ ವಸತಿಗಳಿಗೂ ಕೊಳವೆಯ ಮೂಲಕ ನೀರು ಪೂರೈಕೆಯಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಮತ್ತಿತರರು ಉಪಸ್ಥಿತರಿದ್ದರು.

ಜಲ ಸಂರಕ್ಷಣೆ ಏಕೆ ಮುಖ್ಯ?

ನೀರು ಭೂಮಿಯ ಮತ್ತು ಮಾನವ ದೇಹದ 70% ರಷ್ಟಿದೆ. ಇಂದಿನ ಜಗತ್ತಿನಲ್ಲಿ ಲಕ್ಷಾಂತರ ಸಮುದ್ರ ಜಾತಿಗಳು ನೀರಿನಲ್ಲಿ ವಾಸಿಸುತ್ತವೆ. ಅದಲ್ಲದೆ ಮನುಷ್ಯರಿಗೆ ನೀರಿನ ಅಗತ್ಯತೆ ತುಂಬಾ ಇರುವುದರಿಂದಾಗಿ ಮನುಕುಲವೂ ನೀರಿನ ಮೇಲೆ ಅವಲಂಬಿತವಾಗಿದೆ. 

ಇದಲ್ಲದೆ, ಎಲ್ಲ ಪ್ರಮುಖ ಕೈಗಾರಿಕೆಗಳಿಗೂ ಒಂದಲ್ಲ ಒಂದು ರೂಪದಲ್ಲಿ ನೀರು ಬೇಕಾಗುತ್ತದೆ. ಆದರೆ, ಈ ಅಮೂಲ್ಯ ಸಂಪನ್ಮೂಲ ದಿನದಿಂದ ದಿನಕ್ಕೆ ಬರಿದಾಗುತ್ತಿದೆ. ಅದರ ಹಿಂದಿನ ಬಹುತೇಕ ಕಾರಣಗಳು ಕೇವಲ ಮಾನವ ನಿರ್ಮಿತ. ಹೀಗಾಗಿ ಜಲ ಸಂರಕ್ಷಣೆಯ ಅಗತ್ಯ ಈಗ ಹಿಂದೆಂದಿಗಿಂತಲೂ ಹೆಚ್ಚಿದೆ.

Related Articles

ಇತ್ತೀಚಿನ ಸುದ್ದಿಗಳು