ಕೊಚ್ಚಿನ್: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮತ್ತು ಸಿಪಿಐನ ಆ್ಯನಿ ರಾಜಾ ಈಗಾಗಲೇ ಸ್ಪರ್ಧೆಯಲ್ಲಿರುವ ವಯನಾಡ್ ಕ್ಷೇತ್ರದಲ್ಲಿ ಕೇರಳ ಬಿಜೆಪಿ ಅಲ್ಲಿನ ರಾಜ್ಯ ಘಟಕದ ಅಧ್ಯಕ್ಷ ಕೆ.ಸುರೇಂದ್ರನ್ ಅವರನ್ನು ಕಣಕ್ಕೆ ಇಳಿಸಿದೆ. ಹೀಗಾಗಿ ಅಲ್ಲಿ ಪ್ರಬಲ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ಕೇರಳದ ಉಳಿದ ಮೂರು ಕ್ಷೇತ್ರಗಳಿಗೂ ಬಿಜೆಪಿ ತನ್ನ ಅಭ್ಯರ್ಥಿಗಳ ಹೆಸರನ್ನು ಅಂತಿಮಪಡಿಸಿದೆ. ಎರ್ನಾಕುಲಂದಿಂದ ಡಾ.ಕೆ.ಎಸ್.ರಾಧಾಕೃಷ್ಣನ್, ಅಳತ್ತೂರು ಕ್ಷೇತ್ರದಿಂದ ಡಾ.ಟಿ.ಎನ್.ಸರಸು ಹಾಗೂ ಕೊಲ್ಲಂನಿಂದ ನಟ ಜಿ.ಕೃಷ್ಣಕುಮಾರ್ ಸ್ಪರ್ಧಿಸುತ್ತಿದ್ದಾರೆ.
ರಾಹುಲ್ ಗಾಂಧಿ ಸ್ಪರ್ಧೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಸಿಪಿಐ ಪರಸ್ಪರ ಸೆಣೆಸಲು ಸಜ್ಜಾಗಿದ್ದವು. ಈಗ ಈ ಬೆಟ್ಟ ಕ್ಷೇತ್ರದಲ್ಲಿ ದೊಡ್ಡ ಹೋರಾಟಕ್ಕೆ ಬಿಜೆಪಿ ಕೂಡ ಸಜ್ಜಾಗಿದೆ ಎಂಬ ಪ್ರಬಲ ಸಂದೇಶವನ್ನು ಬಿಜೆಪಿ ಸುರೇಂದ್ರನ್ ಆಯ್ಕೆ ಮೂಲಕ ರವಾನಿಸಿದೆ ಎಂದು ಹೇಳಲಾಗುತ್ತಿದೆ. ಇಂಡಿಯಾ ಮೈತ್ರಿಕೂಟದ ಎರಡು ಘಟಕ ಪಕ್ಷಗಳಿಂದ ಪರಸ್ಪರ ವಾಕ್ಸಮರ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಯನಾಡ್ ಕ್ಷೇತ್ರ ಇಡೀ ದೇಶದ ಗಮನ ಸೆಳೆಯುತ್ತಿದೆ..
2020ರ ಫೆಬ್ರುವರಿಯಿಂದ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಸುರೇಂದರ್ನ್, 2019ರಲ್ಲಿ ಪಟ್ಟಣಂತಿಟ್ಟ ಕ್ಷೇತ್ರದಿಂದ ಸ್ಪರ್ಧಿಸಿ, ಕಾಂಗ್ರೆಸ್ ಹಾಗೂ ಸಿಪಿಎಂ ಬಳಿಕ ಮೂರನೇ ಸ್ಥಾನ ಪಡೆದಿದ್ದರು. 2021ರ ವಿಧಾನಸಭಾ ಚುನಾವಣೆಯಲ್ಲಿ ಸುರೇಂದ್ರನ್ ಕೊನ್ನಿ ಹಾಗೂ ಮಂಜೇಶ್ವರ ಕ್ಷೇತ್ರದಿಂದ ಸ್ಪರ್ಧಿಸಿ ಕ್ರಮವಾಗಿ 32811 ಹಾಗೂ 67 ಸಾವಿರ ಮತಗಳನ್ನು ಗಳಿಸಿದ್ದರು.