Thursday, June 19, 2025

ಸತ್ಯ | ನ್ಯಾಯ |ಧರ್ಮ

‘ಯಾರ ಮಧ್ಯಸ್ಥಿಕೆಯೂ ನಮಗೆ ಬೇಕಿಲ್ಲ’:  ಫೋನ್‌ ಕರೆಯಲ್ಲಿ ಟ್ರಂಪ್‌ಗೆ ಮೋದಿ ತಿರುಗೇಟು

ಐದು ವರ್ಷಗಳ ನಂತರ ಮೊದಲ ಬಾರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಪಾಕಿಸ್ತಾನದ ಸೇನಾ ಮುಖ್ಯಸ್ಥರನ್ನು ಶ್ವೇತಭವನಕ್ಕೆ ಕರೆದು ಆತಿಥಿ ಸತ್ಕಾರ ನೀಡಿದ್ದಾರೆ. ಇದಕ್ಕಿಂತ ಹಿಂದಿನ ದಿನ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಡೊನಾಲ್ಡ್ ಟ್ರಂಪ್ ಅವರಿಗೆ, ಪಾಕಿಸ್ತಾನದೊಂದಿಗಿನ ಇತ್ತೀಚಿನ ಮಿಲಿಟರಿ ಸಂಘರ್ಷದ ಸಂದರ್ಭದಲ್ಲಿ ಭಾರತವು ಯಾವುದೇ ಮಟ್ಟದಲ್ಲಿ ವ್ಯಾಪಾರ ಒಪ್ಪಂದ ಅಥವಾ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆ ಬಗ್ಗೆ ಎಂದಿಗೂ ಚರ್ಚಿಸಿಲ್ಲ ಎಂದು ಪೋನ್‌ ಮಾತುಕತೆಯಲ್ಲಿ ಹೇಳಿದ್ದಾರೆ.

ಆಲ್ಬರ್ಟಾದ ಕನನಾಸ್ಕಿಸ್‌ನಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯ ಸಂದರ್ಭದಲ್ಲಿ ನಡೆಯಬೇಕಿದ್ದ ದ್ವಿಪಕ್ಷೀಯ ಸಭೆಯನ್ನು ರದ್ದುಗೊಳಿಸಿದ ಟ್ರಂಪ್ ವಾಷಿಂಗ್ಟನ್‌ಗೆ ಬೇಗನೆ ಹಿಂದಿರುಗಿದ ಕಾರಣ, ಅವರ ಜೊತೆಗಿಮ 35 ನಿಮಿಷಗಳ ದೂರವಾಣಿ ಸಂಭಾಷಣೆಯ ಸಂದರ್ಭದಲ್ಲಿ ಮೋದಿ ಈ ಹೇಳಿಕೆ ನೀಡಿದ್ದಾರೆ.

ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರನ್ನು ಟ್ರಂಪ್ ಇಂದು ಬುಧವಾರ (ಜೂನ್ 18) ಮಧ್ಯಾಹ್ನ ಶ್ವೇತಭವನದಲ್ಲಿ ಊಟಕ್ಕೆ ಕರೆದಿದ್ದಾರೆ. ಇದಕ್ಕೆ ಮುನ್ನಾದಿನದಂದು ಟ್ರಂಪ್‌ ಅವರಿಂದ ಮೋದಿಯವರಿಗೆ ಈ ಕರೆ ಬಂದಿತು.

ಪಾಕಿಸ್ತಾನಿ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಜ್ವಾ ಜುಲೈ 2019 ರಲ್ಲಿ ಶ್ವೇತಭವನಕ್ಕೆ ಅತಿಥಿಯಾಗಿ ಹೋಗಿದ್ದರು. ಇವರು ಆಗಿನ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರೊಂದಿಗೆ ಅಧ್ಯಕ್ಷ ಟ್ರಂಪ್ ಬೇಟಿ ಮಾಡಿದ್ದರು.

ಜನತೆಯ ಟೀಕೆ ಮತ್ತು ವಿರೋಧ ಪಕ್ಷಗಳ ಪ್ರಶ್ನೆಗಳ ನಡುವೆಯೇ ಮೋದಿ-ಟ್ರಂಪ್ ಫೋನ್ ಮಾತುಕತೆ

ಭಾರತದಲ್ಲಿ ಮೋದಿಯವರಿಗೆ ಟೀಕೆಗಳು ಹೆಚ್ಚುತ್ತಿದ್ದ ನಡುವೆಯೇ ಈ ಫೋನ್ ಕರೆ ಕೂಡ ಬಂದಿದೆ. ಕೆಲವು ದಿನಗಳ ಹಿಂದೆ, ಟ್ರಂಪ್ ಸಾರ್ವಜನಿಕ ವೇದಿಕೆಗಳಲ್ಲಿ ಕನಿಷ್ಠ 13 ಬಾರಿ “ತಾನೇ ಭಾರತ – ಪಾಕ್‌ ಯುದ್ಧ ನಿಲ್ಲಿಸಿದ್ದು, ವ್ಯಾಪಾರ ಮಾಡಬೇಕೆಂದರೆ ಯುದ್ಧ ನಿಲ್ಲಿಸಿ,” ಎಂಬಂತ ಹೇಳಿಕೆಗಳನ್ನು ನೀಡುವಾಗ ಮೋದಿಯವರು ವಹಿಸಿದ್ದ “ಮೌನ”ವನ್ನು ಕಾಂಗ್ರೆಸ್ ಪಕ್ಷ ಪ್ರಶ್ನಿಸಿತ್ತು.

ಇತ್ತೀಚೆಗೆ, ಜೂನ್ 15 ರಂದು, ಟ್ರಂಪ್ ಮತ್ತೊಮ್ಮೆ ಈ ಹಿಂದಿನ ಹೇಳಿಕೆಗಳನ್ನೇ ಉಲ್ಲೇಖಿಸಿ, “ಅಮೆರಿಕದೊಂದಿಗಿನ ಟ್ರೇಡ್ ಅನ್ನು ಬಳಸಿಕೊಂಡು ಭಾರತ ಮತ್ತು ಪಾಕಿಸ್ತಾನದ ನಡುವಿನ ಮಾತುಕತೆಗಳಲ್ಲಿ ಒಗ್ಗಟ್ಟು ಮತ್ತು ವಿವೇಕವನ್ನು ತರುವ ಮೂಲಕ ತ್ವರಿತವಾಗಿ ನಿರ್ಧಾರ ತೆಗೆದುಕೊಳ್ಳಲು ಮತ್ತು ನಿಲ್ಲಿಸಲು ಸಾಧ್ಯವಾಯಿತು. ಇಸ್ರೇಲ್ ಮತ್ತು ಇರಾನ್ ನಡುವೆ ಶಾಂತಿಯನ್ನು ಸುಲಭವಾಗಿ ತರಲು ಮಧ್ಯಸ್ಥಿಕೆ ಕೆಲಸ ಮಾಡಬಹುದು,” ಎಂದು ಟ್ರಂಪ್ ಹೇಳಿದರು.

ಟ್ರಂಪ್ ಸರ್ಕಾರವು ಈ ಹೇಳಿಕೆಯನ್ನು ಕಾನೂನು ದಾಖಲೆಯಲ್ಲಿ ಔಪಚಾರಿಕಗೊಳಿಸಿತ್ತು. ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಡಬ್ಲ್ಯೂ. ಲುಟ್ನಿಕ್ ಅವರು ನ್ಯೂಯಾರ್ಕ್ ಫೆಡರಲ್ ನ್ಯಾಯಾಲಯಕ್ಕೆ ಸಲ್ಲಿಸಿದ ಲಿಖಿತ ಅರ್ಜಿಯಲ್ಲಿ, ಅಧ್ಯಕ್ಷ ಟ್ರಂಪ್ ಭಾರತ ಮತ್ತು ಪಾಕಿಸ್ತಾನದ ನಡುವಿನ “ಪೂರ್ಣ ಪ್ರಮಾಣದ ಯುದ್ಧವನ್ನು ತಪ್ಪಿಸಲು” ಪ್ರೋತ್ಸಾಹಕವಾಗಿ ವ್ಯಾಪಾರವನ್ನು ಬಳಸಿದ್ದಾರೆ ಎಂದು ಹೇಳಿದ್ದಾರೆ.

ಭಾರತದ ವಿದೇಶಾಂಗ ಸಚಿವಾಲಯ ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಟ್ರಂಪ್ ಅವರ ನಿರೂಪಣೆಯನ್ನು ಸಾರ್ವಜನಿಕವಾಗಿ ವಿರೋಧಿಸಿದ್ದರು, ಆದರೆ ಟ್ರಂಪ್‌ ಮಾತ್ರ “ಯುದ್ಧ ನಿಲ್ಲಿಸಿದೆ,” ಎಂಬ ಜಪವನ್ನು ನಿಲ್ಲಿಸಲಿಲ್ಲ. ಭಾರತವು ಇದನ್ನು ವಿರೋಧಿಸಿ ಔಪಚಾರಿಕ ಪ್ರತಿಭಟನೆಯನ್ನು ದಾಖಲಿಸಿದೆಯೇ ಎಂಬುದು ಇಂದಿನ ವರೆಗೆ ತಿಳಿದು ಬಂದಿಲ್ಲ.

ಮೇ 10 ರಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ಕೊನೆಗೊಂಡ ನಂತರ, ಟ್ರಂಪ್ ಅವರೊಂದಿಗಿನ ಮೋದಿಯವರ ಮೊದಲ ಬಾರಿಗೆ ಫೋನ್ ಮಾತುಕತೆ ನಡೆಸಿದ್ದಾರೆ.

“ಈ ಸಂಪೂರ್ಣ ಘಟನಾವಳಿಗಳ ಸರಣಿಯ ಯಾವುದೇ ಹಂತದಲ್ಲಿ ಭಾರತ-ಅಮೇರಿಕಾ ವ್ಯಾಪಾರ ಒಪ್ಪಂದದ ಬಗ್ಗೆ ಅಥವಾ ಭಾರತ ಹಾಗೂ ಪಾಕಿಸ್ತಾನದ ನಡುವೆ ಅಮೆರಿಕದ ಮಧ್ಯಸ್ಥಿಕೆಗೆ ಯಾವುದೇ ಪ್ರಸ್ತಾಪದ ಬಗ್ಗೆ ಯಾವುದೇ ಮಟ್ಟದಲ್ಲಿ ಚರ್ಚೆ ನಡೆದಿಲ್ಲ ಎಂದು ಪ್ರಧಾನಿ ಮೋದಿ ಅಧ್ಯಕ್ಷ ಟ್ರಂಪ್‌ಗೆ ಸ್ಪಷ್ಟವಾಗಿ ತಿಳಿಸಿದರು” ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿದ ವೀಡಿಯೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಶ್ವೇತಭವನದಿಂದ ಬಂದ ಕರೆಗೆ ಪ್ರತ್ಯೇಕ ಪ್ರತಿಕ್ರಿಯೆಯನ್ನು ನೀಡಲಾಗಿಲ್ಲ.

ಎರಡೂ ದೇಶಗಳ ಸೇನೆಗಳ ನಡುವಿನ ಮಾತುಕತೆಯ ನಂತರ ಭಾರತದ ಮಿಲಿಟರಿ ಕಾರ್ಯಾಚರಣೆಗಳನ್ನು ನಿಲ್ಲಿಸಿದೆ ಎಂದು ಮೋದಿ ಪುನರುಚ್ಚರಿಸಿದರು – “ಮತ್ತು ಇದು ಪಾಕಿಸ್ತಾನದ ಕೋರಿಕೆಯ ಮೇರೆಗೆ ಮಾಡಲಾಯಿತು,” ಎಂದು ಮಿಸ್ರಿ ಹೇಳಿದರು.

“ಭಾರತವು ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಯನ್ನು ಒಪ್ಪುವುದಿಲ್ಲ ಮತ್ತು ಎಂದಿಗೂ ಸ್ವೀಕರಿಸುವುದಿಲ್ಲ ಎಂದು ಪ್ರಧಾನಿ ಮೋದಿ ದೃಢವಾಗಿ ಹೇಳಿದ್ದಾರೆ. ಈ ವಿಚಾರದಲ್ಲಿ ಭಾರತದಲ್ಲಿ ಸಂಪೂರ್ಣ ರಾಜಕೀಯ ಒಮ್ಮತವಿದೆ,” ಎಂದು ಅವರು ಹೇಳಿದರು.

ಭಯೋತ್ಪಾದಕ ಶಿಬಿರಗಳ ಮೇಲೆ ಮೇ 6-7 ರಂದು ನಡೆದ ವೈಮಾನಿಕ ದಾಳಿಗಳನ್ನು “ಬಹಳ ಲೆಕ್ಕಾಚಾರ ಹಾಕಿ, ನಿಖರವಾದ ಮತ್ತು ಉಲ್ಬಣಗೊಳ್ಳದ” ದಾಳಿ ಎಂದು ಪ್ರಧಾನಿ ಬಣ್ಣಿಸಿದರು.

ಪಾಕಿಸ್ತಾನದಿಂದ ಬರುವ ಯಾವುದೇ ಗುಂಡನ್ನು  ಪ್ರತಿಯಾಗಿ ಗೋಲಾ (ಚಿಪ್ಪು)  ಮೂಲಕ ಎದುರಿಸಲಾಗುವುದು  ಎಂಬ ಭಾರತದ ಹೇಳಿಕೆಯನ್ನು ಅವರು ಪುನರುಚ್ಚರಿಸಿದರು.

ಮೋದಿ ಅವರ ಹೇಳಿಕೆಯ ಪ್ರಕಾರ, ಮೇ 9 ರ ರಾತ್ರಿ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರು “ಪಾಕಿಸ್ತಾನ ಭಾರತದ ಮೇಲೆ ದೊಡ್ಡ ದಾಳಿ ನಡೆಸಬಹುದು” ಎಂದು ಎಚ್ಚರಿಸಿದ್ದರು ಎಂಬುದು ತಿಳಿದುಬಂದಿದೆ.

ಮೇ 9 ರಂದು ಭಾರತವು “ಬಹಳ ಬಲವಾದ ಪ್ರತಿಕ್ರಿಯೆ” ನೀಡಿ ಪಾಕಿಸ್ತಾನದ ವಾಯುನೆಲೆಗಳನ್ನು “ನಿಷ್ಕ್ರಿಯ”ಗೊಳಿಸಿದ ನಂತರವೇ, ಪಾಕ್‌ ಭಾರತದ ಬಳಿ ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ವಿನಂತಿಸಿತು.

“ಪ್ರಧಾನಿಯವರು ತಿಳಿಸಿದ ಅಂಶಗಳನ್ನು ಟ್ರಂಪ್ ಎಚ್ಚರಿಕೆಯಿಂದ ಆಲಿಸಿದರು ಮತ್ತು ಭಯೋತ್ಪಾದನೆ ವಿರುದ್ಧ ಭಾರತದ ಹೋರಾಟಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದರು” ಎಂದು ಮಿಸ್ರಿ ಹೇಳಿದರು. “ಭಾರತವು ಇನ್ನು ಮುಂದೆ ಭಯೋತ್ಪಾದನೆಯನ್ನು ಪ್ರಾಕ್ಸಿ ಯುದ್ಧವೆಂದು ನೋಡುವುದಿಲ್ಲ, ಬದಲಿಗೆ ಯುದ್ಧವೆಂದೇ ಪರಿಗಣಿಸುತ್ತದೆ. ಭಾರತದ ಆಪರೇಷನ್ ಸಿಂಧೂರ್ ಇನ್ನೂ ಮುಂದುವರೆದಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ” ಎಂದು ಅವರು ಹೇಳಿದರು.

ಕೆನಡಾದಿಂದ ಹಿಂದಿರುಗಿದ ನಂತರ ಮೋದಿ ಅಮೆರಿಕದಲ್ಲಿ ತಂಗಬಹುದೇ ಎಂದು ಟ್ರಂಪ್ ವಿಚಾರಿಸಿದರು. “ಇತರ ಕಮಿಟ್‌ಮೆಂಟ್‌ಗಳ ಕಾರಣಕ್ಕಾಗಿ, ಪ್ರಧಾನಿ ಮೋದಿ ಹಾಗೆ ಮಾಡಲು ತಮ್ಮ ಅಸಾಮರ್ಥ್ಯವನ್ನು ವ್ಯಕ್ತಪಡಿಸಿದರು” ಎಂದು ಮಿಶ್ರಿ ಹೇಳಿದರು. ಹಾಗಿದ್ದೂ, ಇಬ್ಬರೂ ನಾಯಕರು ಮುಂದಿನ ದಿನಗಳಲ್ಲಿ ಭೇಟಿಯಾಗಲು ಪ್ರಯತ್ನ ಮಾಡುವುದಾಗಿ ಒಪ್ಪಿಕೊಂಡರು.

ಇಬ್ಬರೂ ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಸಂಘರ್ಷದ ಬಗ್ಗೆಯೂ ಚರ್ಚಿಸಿದರು ಮತ್ತು ರಷ್ಯಾ-ಉಕ್ರೇನ್ ಸಂಘರ್ಷದಲ್ಲಿ ಶಾಂತಿಗಾಗಿ ನೇರ ಸಂವಾದ ಅತ್ಯಗತ್ಯ ಎಂದು ಒಪ್ಪಿಕೊಂಡರು.

ಪಾಕಿಸ್ತಾನದ ಮುನೀರ್‌ಗೆ ಟ್ರಂಪ್‌ನಿಂದ ಪಾರ್ಟಿ!

ಇಂಡೋ-ಪೆಸಿಫಿಕ್ ಕುರಿತು, ಮೋದಿ ಮತ್ತು ಟ್ರಂಪ್‌ ಪರಸ್ಪರ ದೃಷ್ಟಿಕೋನಗಳನ್ನು ಹಂಚಿಕೊಂಡರು ಮತ್ತು ಈ ಪ್ರದೇಶದಲ್ಲಿ ಕ್ವಾಡ್ ಪಾತ್ರಕ್ಕೆ ಬೆಂಬಲವನ್ನು ಪುನರುಚ್ಚರಿಸಿದರು. ಮುಂದಿನ ಕ್ವಾಡ್ ಶೃಂಗಸಭೆಗೆ ಭಾರತಕ್ಕೆ ಭೇಟಿ ನೀಡುವಂತೆ ಮೋದಿ ಟ್ರಂಪ್ ಅವರಿಗೆ ಆಹ್ವಾನ ನೀಡಿದರು, ಅದನ್ನು ಟ್ರಂಪ್ ಸ್ವೀಕರಿಸಿದರು ಎಂದು ವಿದೇಶಾಂಗ ಕಾರ್ಯದರ್ಶಿ ಹೇಳಿದ್ದಾರೆ.

ಭಯೋತ್ಪಾದನೆಯ ವಿರುದ್ಧದ ತನ್ನ ಹೋರಾಟವನ್ನು ಅಮೆರಿಕ ಬೆಂಬಲಿಸುತ್ತದೆ ಎಂದು ಭಾರತ ಹೇಳಿದ್ದರೂ, ಪಾಕಿಸ್ತಾನವನ್ನು “ಭಯೋತ್ಪಾದನೆಯ ಜಾಗತಿಕ ಕೇಂದ್ರ ” ಎಂಬ ಭಾರತದ ನಿಲುವನ್ನು ಟ್ರಂಪ್ ಸರ್ಕಾರ ಬೆಂಬಲಿಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ .

ಬದಲಾಗಿ, ಅಫ್ಘಾನಿಸ್ತಾನದಿಂದ ಅಮೆರಿಕ ತನ್ನ ಪಡೆಗಳನ್ನು ಹಿಂತೆಗೆದುಕೊಂಡ ನಂತರ, ಅಧ್ಯಕ್ಷ ಟ್ರಂಪ್ ನೇತೃತ್ವದಲ್ಲಿ ಭಯೋತ್ಪಾದನಾ ನಿಗ್ರಹಕ್ಕೆ ಪಾಕಿಸ್ತಾನವನ್ನು ವೇದಿಕೆಯಾಗಿ ರೂಪಿಸಿಕೊಂಡಿದೆ. ಅಮೇರಿಕಾ ಪಾಕಿಸ್ತಾನವನ್ನು ಭಯೋತ್ಪಾದನಾ ನಿಗ್ರಹದ ಪ್ರಮುಖ ಪಾಲುದಾರ ಎಂದು ಪರಿಗಣಿಸಿದೆ.

ಈ ಕಾರಣಕ್ಕಾಗಿ ಮುನೀರ್ ಅವರಿಗೆ ಭೋಜನ ಕೂಟ ಆಯೋಜಿಸುವ ಟ್ರಂಪ್ ನಿರ್ಧಾರವು ಮಹತ್ವದ್ದಾಗಿದೆ. ಭಾರತದೊಂದಿಗಿನ ಸಂಘರ್ಷದ ಸಮಯದಲ್ಲಿ ಪಾಕಿಸ್ತಾನದಲ್ಲಿ ಮುನೀರ್ ಅವರ ಖ್ಯಾತಿಯನ್ನು ಹೆಚ್ಚಿತು. ಈ ಹಿಂದೆ ಮಿಲಿಟರಿ ಸ್ಥಾಪನೆಯನ್ನು ಟೀಕಿಸಿದ್ದ ವಿರೋಧ ಪಕ್ಷ ಪಿಟಿಐ ಸೇರಿದಂತೆ ಪಾಕಿಸ್ತಾನದಾದ್ಯಂತ ಅವರಿಗೆ ಬೆಂಬಲವನ್ನು ವ್ಯಕ್ತವಾಗಿತ್ತು.

ಕಾಂಗ್ರೆಸ್ಸನಲ್‌ ಹಿಯರಿಂಗ್‌ನಲ್ಲಿ  ಇಸ್ಲಾಮಿಕ್ ಸ್ಟೇಟ್-ಖೋರಾಸನ್ ವಿರುದ್ಧ ಹೋರಾಡಲು ಪಾಕಿಸ್ತಾನವು “ಅದ್ಭುತ ಪಾಲುದಾರ” ಎಂದು ಯುಎಸ್ ಸೆಂಟ್ರಲ್ ಕಮಾಂಡ್ ಮುಖ್ಯಸ್ಥ ಜನರಲ್ ಮೈಕೆಲ್ ಕುರಿಲ್ಲಾ ಹೊಗಳಿದ ಬೆನ್ನಲ್ಲೇ ಪಾಕಿಸ್ತಾನದ ಸೇನಾ ಮುಖ್ಯಸ್ಥರನ್ನು ಊಟಕ್ಕೆ ಕರೆಯಲಾಗಿದೆ. (ಖೋರಾಸನ್ ಎಂದರೆ ಇಂದಿನ ಇರಾನ್, ಅಫ್ಘಾನಿಸ್ತಾನ, ತುರ್ಕಮೆನಿಸ್ತಾನ್ ಮತ್ತು ಉಜ್ಬೇಕಿಸ್ತಾನ್‌ನ ಕೆಲವು ಭಾಗಗಳನ್ನು ಒಳಗೊಂಡ ಐತಿಹಾಸಿಕ ಭೂ ಪ್ರದೇಶ)

ಈ ವರ್ಷದ ಆರಂಭದಲ್ಲಿ, ಅಂದರೆ ಫೆಬ್ರವರಿಯಲ್ಲಿ ಅಮೇರಿಕನ್ ಕಾಂಗ್ರೆಸ್‌ಗೆ ನೀಡಿದ ಮೊದಲ ಭಾಷಣದಲ್ಲಿ ಟ್ರಂಪ್, 13 ಅಮೆರಿಕನ್ ಸೈನಿಕರನ್ನು ಕೊಂದ ಕಾಬೂಲ್‌ನಲ್ಲಿ ನಡೆದ ಅಬ್ಬೆ ಗೇಟ್ ಬಾಂಬ್ ಸ್ಫೋಟದ ಮಾಸ್ಟರ್‌ಮೈಂಡ್‌ಗಳಲ್ಲಿ ಒಬ್ಬನಾದ ಮೊಹಮ್ಮದ್ ಶರೀಫುಲ್ಲಾನನ್ನು ಬಂಧಿಸಿ ಹಸ್ತಾಂತರಿಸಿದ್ದಕ್ಕಾಗಿ ಪಾಕಿಸ್ತಾನವನ್ನು ಹೊಗಳಿದ್ದರು.

ಟ್ರಂಪ್ ಭಾರತದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿದ್ದರೂ, ಪಾಕಿಸ್ತಾನವನ್ನು ಸ್ಪಷ್ಟ ಮತ್ತು ನಿಷ್ಠುರವಾಗಿ ಖಂಡಿಸಲಿಲ್ಲ. ಭಾರತ ಮತ್ತು ಪಾಕಿಸ್ತಾನವನ್ನು ಒಂದೇ ಸಮಾನಾಗಿ ನೋಡಿ ಹೇಳಿಕೆಗಳನ್ನು ನೀಡುತ್ತಾ ಬಂದರು, ಮತ್ತು ಪಾಕಿಸ್ತಾನ “ಬಹಳ ಬಲವಾದ ನಾಯಕತ್ವ ” ಹೊಂದಿದೆ ಎಂದು ಹೊಗಳಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page