ಬೆಂಗಳೂರು ಜೂ 4:ನಾನಾ ದೇಶಗಳ ಪ್ರವಾಸ ಮಾಡುವ ಮೂಲಕ ಸಹಿಷ್ಣುತೆ ಮತ್ತು ಮನುಷ್ಯ ಪ್ರೀತಿಯನ್ನು ಹೆಚ್ಚಿಸಿಕೊಳ್ಳಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು.
ವಿಶ್ವವಾಣಿ ಮಾಧ್ಯಮ ಸಂಸ್ಥೆ FKCCI ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ “ಪ್ರವಾಸಿ ಪ್ರಪಂಚ” ವಾರ ಪತ್ರಿಕೆಯನ್ನು ಜನಾರ್ಪಣೆಗೊಳಿಸಿ ಮಾತನಾಡಿದರು.
ವಿಶ್ವೇಶ್ವರ ಭಟ್ ಅವರು ಸಾಹಸ ಪ್ರವೃತ್ತಿ ಉಳ್ಳವರು. ಈ ಪ್ರವೃತ್ತಿ ಇದ್ದರೇನೇ ಸಾಧನೆ ಮಾಡಲು ಸಾಧ್ಯ ಎಂದರು.
ಪ್ರವಾಸಿತಾಣಗಳಿಗೆ ಹೋಗುವುದು ಎಂದರೆ ಆ ಭಾಗದ ಪರಿಸರ, ಜನ ಸಂಸ್ಕೃತಿ, ಜೀವನ ವಿಧಾನ ಎಲ್ಲವನ್ನೂ ಅರ್ಥ ಮಾಡಿಕೊಳ್ಳುವುದಾಗಿದೆ. ಆ ಮೂಲಕ ಮನುಷ್ಯ ಪ್ರೀತಿಯನ್ನು ಹೆಚ್ಚಿಸಿಕೊಳ್ಳುವುದಾಗಿದೆ, ಪರಸ್ಪರರ ಸಂಸ್ಕೃತಿ ಬಗ್ಗೆ ಸಹಿಷ್ಣುತೆಯನ್ನು ಬೆಳೆಸಿಕೊಳ್ಳುವುದಾಗಿದೆ ಎಂದರು.
ವಿಶ್ವೇಶ್ವರ ಭಟ್ಟರು ವಿಶ್ವ ಪರ್ಯಟಣೆ ಮೂಲಕ ತಮ್ಮ ಬದುಕನ್ನು ಸಾರ್ಥಕ ಮಾಡಿಕೊಂಡಿದ್ದಾರೆ. ವಿಶ್ವೇಶ್ವರ ಭಟ್ ಸಂಪಾದಕತ್ವದ ವಿಶ್ವವಾಣಿಯನ್ನು ನಾನೇ ಲೋಕಾರ್ಪಣೆ ಮಾಡಿದ್ದೆ. ಈಗ ಪ್ರವಾಸಿ ಪ್ರಪಂಚವನ್ನೂ ನಾನೇ ಲೋಕಾರ್ಪಣೆಗೊಳಿಸಿದ್ದೇನೆ. ನಾನು ವಿಶ್ವವಾಣಿಯನ್ನೂ ತಪ್ಪದೆ ನೋಡಿದ್ದೇನೆ ಎಂದರು.
ವಿಶ್ವೇಶ್ವರ ಭಟ್ಟರು 97 ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಇವರು ಹಲವು ಪತ್ರಿಕೆಗಳನ್ನೂ ಬೆಳೆಸಿದ್ದಾರೆ. ನಿಮ್ಮ ಪ್ರವಾಸದ ಅನುಭವ ಪ್ರವಾಸಿ ಪ್ರಪಂಚ ಪತ್ರಿಕೆಗೆ ಅನುಕೂಲವಾಗಲಿದೆ ಎಂದರು.