ಹಾಸನ: ತಾವು ಹಾಸನಕ್ಕೆ ಹಿಂತಿರುಗಿದಾಗ ತಮಗೆ ಹಾರ ತುರಾಯಿ ಹಾಕುವುದು ಬೇಡ ಮತ್ತು ಪಟಾಕಿ ಸಿಡಿಸುವುದು ಬೇಡ ಎಂದು ಶಾಸಕ ಎಚ್.ಡಿ ರೇವಣ್ಣ ತಮ್ಮ ಹಿಂಬಾಲಕರಲ್ಲಿ ವಿನಂತಿಸಿಕೊಂಡಿದ್ದಾರೆ,
ಅತ್ಯಾಚಾರ ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ನ್ಯಾಯಾಲಯದಿಂದ ಜಾಮೀನು ಪಡೆದಿರುವ ಶಾಸಕ ಎಚ್.ಡಿ. ರೇವಣ್ಣ ಮುಂದಿನ ಎರಡು ದಿನಗಳಲ್ಲಿ ಜಿಲ್ಲೆಗೆ ಭೇಟಿ ನೀಡುತ್ತಿದ್ದು, ‘ಹಾರ, ತುರಾಯಿ ಹಾಕಬೇಡಿ ಹಾಗೂ ಪಟಾಕಿ ಸಿಡಿಸಬೇಡಿ’ ಎಂದು ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರಿಗೆ ರೇವಣ್ಣ ಮನವಿ ಮಾಡಿದ್ದಾರೆ.
‘ಹಾಸನ ಜಿಲ್ಲೆಯ ನನ್ನೆಲ್ಲಾ ಅಭಿಮಾನಿಗಳೇ, ನನ್ನ ಪಕ್ಷದ ಶಾಸಕರೇ, ಚುನಾಯಿತ ಪ್ರತಿನಿಧಿಗಳೇ ನಿಮ್ಮೆಲ್ಲರ ಪ್ರೀತಿ, ಹಾರೈಕೆಯಿಂದ ನಾನು ಜಾಮೀನು ಪಡೆದು ಬಿಡುಗಡೆ ಆಗಿದ್ದೇನೆ. ನಾನು ಘನ ನ್ಯಾಯಾಲಯದ ತೀರ್ಪು, ಆದೇಶಕ್ಕೆ ಗೌರವ ಕೊಡುತ್ತೇನೆ. ಕಡೆವರೆಗೂ ಅದನ್ನು ಪಾಲಿಸುತ್ತೇನೆ. ಇದಕ್ಕೆಲ್ಲಾ ನಿಮ್ಮ ಪ್ರೀತಿ, ಪ್ರಾರ್ಥನೆಯೇ ಕಾರಣ. ಜೊತೆಗೆ ತಂದೆ ತಾಯಿ, ದೇವರು ಕಾರಣ’ ಎಂದು ತಿಳಿಸಿದ್ದಾರೆ.
‘ನಿಮ್ಮ ಈ ಋಣವ ನಾನೆಂದೂ ಮರೆಯಲಾರೆ. ಕೆಲ ದಿನಗಳ ನಂತರ ಬುಧವಾರ ಬೆಳಿಗ್ಗೆ ನಾನು ನನ್ನ ತವರು ಜಿಲ್ಲೆಗೆ ಬರುತ್ತಿದ್ದೇನೆ. ಯಾರೂ ಕೂಡ ಹಾರ-ತುರಾಯಿ ಹಾಕುವುದಾಗಲೀ, ಪಟಾಕಿ ಸಿಡಿಸುವುದಾಗಲಿ ಮಾಡಬಾರದು ಎಂದು ಈ ಮೂಲಕ ಮನವಿ ಮಾಡುತ್ತೇವೆ’ ಎಂದು ವಿನಂತಿಸಿಕೊಂಡಿದ್ದಾರೆ.
When it comes to Hassan, don’t give me a necklace: H.D. Revanna