ಬೆಂಗಳೂರು: ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಎಂಎಲ್ಸಿ ಸಿ.ಟಿ. ರವಿ ಅವರು ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದು ಎಫ್ಐಆರ್ ದಾಖಲಾದ ಬಗ್ಗೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಿ.ಟಿ. ರವಿ ಪ್ರಚೋದನಕಾರಿ ಭಾಷಣ ಮಾಡಿಲ್ಲ. “ಇದಕ್ಕಿಂತ ಕೆಟ್ಟದಾಗಿ ಕಾಂಗ್ರೆಸ್ ನವರು ಹಲವು ಬಾರಿ ಮಾತನಾಡಿದ್ದಾರೆ. ವಿಧಾನಸೌಧದಲ್ಲಿ ‘ಪಾಕ್ ಜಿಂದಾಬಾದ್’ ಎಂದವರಿಗೆ ಏನು ಮಾಡಿದ್ರಿ? ಸಿ.ಟಿ. ರವಿ ದೇಶದ್ರೋಹಿ ಕೆಲಸ ಏನಾದರೂ ಮಾಡಿದ್ದಾರಾ?” ಎಂದು ಪ್ರಶ್ನಿಸಿದರು.
“ಯಾರ್ಯಾರು ಮಾತನಾಡುತ್ತಾರೋ ಅವರ ವಿರುದ್ಧ ಕೇಸ್ ದಾಖಲಿಸಲು ಕಾಂಗ್ರೆಸ್ನಲ್ಲಿ ಒಂದು ತಂಡ ರಚಿಸಿದ್ದಾರೆ, ಅದರಲ್ಲಿ ಸಚಿವರೂ ಇದ್ದಾರೆ. ಆದರೆ, ಇನ್ನೆರಡು ವರ್ಷಗಳ ನಂತರ ಇದು ನಿಮಗೇ ತಿರುಗುಬಾಣವಾಗುತ್ತದೆ. ನಮ್ಮ ಸರ್ಕಾರ ಬಂದಾಗ ನಿಮ್ಮ ಮೇಲೂ ನೂರಕ್ಕೆ ನೂರರಷ್ಟು ಇದನ್ನೇ ಮಾಡುತ್ತೇವೆ. ಇದರ ಅಪ್ಪನಂತಹ ಡಬಲ್ ಕೇಸ್ ದಾಖಲಿಸುತ್ತೇವೆ. ಕೇಂದ್ರದಲ್ಲೂ ನಾವು ಅಧಿಕಾರದಲ್ಲಿದ್ದೇವೆ, ರಾಜ್ಯದಲ್ಲೂ ಅಧಿಕಾರಕ್ಕೆ ಬರುತ್ತೇವೆ. ಆಗ ನಮ್ಮ ಬಳಿ ಬೇಡುವಂತಹ ಸ್ಥಿತಿ ನಿಮಗೆ ಬರುತ್ತದೆ” ಎಂದು ಎಚ್ಚರಿಕೆ ನೀಡಿದರು.
“ಮುಸ್ಲಿಮರದ್ದೇ ತಪ್ಪು ಎಂದು ಚಲುವರಾಯಸ್ವಾಮಿ ಅವರೇ ಹೇಳಿದ್ದಾರೆ. ಆದರೆ, ಕೃತ್ಯ ಎಸಗಿದವರ ವಿರುದ್ಧ ಗೂಂಡಾ ಕಾಯ್ದೆ ಹಾಕುವ ಬಗ್ಗೆ ಯಾವುದೇ ಚರ್ಚೆ ಮಾಡಿಲ್ಲ” ಎಂದು ಆರ್. ಅಶೋಕ್ ಆರೋಪಿಸಿದರು.