Sunday, June 16, 2024

ಸತ್ಯ | ನ್ಯಾಯ |ಧರ್ಮ

ಬ್ಯಾಂಕ್‌ ನೌಕರರೇಕೆ ಸ್ಥಳೀಯ ಭಾಷೆ ಕಲಿಯುತ್ತಿಲ್ಲ?: ನಿರ್ಮಲಾ ಸೀತಾರಾಮನ್‌

ಮುಂಬಯಿ: ಭಾರತದ ಬ್ಯಾಂಕುಗಳಲ್ಲಿ ಒಂದು ನಿರ್ದಿಷ್ಟ ಭಾಷೆ ಬಾರದ ಜನರ ದೇಶಭಕ್ತಿಯನ್ನು ಪ್ರಶ್ನಿಸುವುದು. ಆ ಭಾಷೆಯಲ್ಲಿ ಮಾತನಾಡುವಂತೆ ಒತ್ತಾಯಿಸುವುದನ್ನು ಸಹಿಸಲಾಗದು ಎಂದು ನಿರ್ಮಲಾ ಸೀತಾರಾಮನ್‌ ಅವರು ಶುಕ್ರವಾರ ಮುಂಬಯಿಯಲ್ಲಿ ನಡೆದ ಬ್ಯಾಂಕುಗಳ ಒಕ್ಕೂಟದ ಸಭೆಯಲ್ಲಿ ಎಚ್ಚರಿಸಿದರು.

ಹಿಂದಿ ಬಾರದಿರುವುದು ದೇಶಭಕ್ತಿಯಿಲ್ಲದಿರುವುದರ ದ್ಯೋತಕವೆಂಬಂತೆ ಮಾತನಾಡುವುದನ್ನು ನಿಲ್ಲಿಸುವುದರ ಜೊತೆಗೆ ಬ್ಯಾಂಕ್‌ ಸಿಬ್ಬಂದಿ ಸ್ಥಳೀಯ ಭಾಷೆಯನ್ನು ಕಲಿಯಬೇಕೆಂದು ಹೇಳಿದರು. ಮುಂದುವರೆದು ಮಾತನಾಡಿದ ಅವರು, “ಸ್ಥಳೀಯ ಭಾಷೆ ಮಾತನಾಡಲು ಬರುವವರನ್ನು ಬ್ಯಾಂಕಿನ ಗ್ರಾಹಕರೊಡನೆ ವ್ಯವಹರಿಸುವ ಸ್ಥಳಗಳಲ್ಲಿ ಕೂರಿಸಲು ಸಾಧ್ಯವಿಲ್ಲದ ಬ್ಯಾಂಕುಗಳು ನೇರವಾಗಿ ಗ್ರಾಹಕ ಸೇವೆ ನೀಡಬೇಕಾದಂತಹ ಸೌಲಭ್ಯಗಳನ್ನು ಒದಗಿಸುವುದನ್ನು ಬಿಟ್ಟುಬಿಡಲಿ,” ಎಂದು ಖಾರವಾಗಿ ಹೇಳಿದ್ದಾರೆ.

ಬ್ಯಾಂಕುಗಳು ತಮ್ಮ ಬ್ರಾಂಚುಗಳಲ್ಲಿ ಕೆಲಸ ಮಾಡುವವರನ್ನು ಮರುಹೊಂದಿಸಿ ಸ್ಥಳೀಯ ಭಾಷೆ ಗೊತ್ತಿರುವವರನ್ನು ಗ್ರಾಹಕರೊಡನೆ ನೇರ ಸಂಪರ್ಕಕ್ಕೆ ಬರುವ ಸ್ಥಳಗಲ್ಲಿ ನೇಮಿಸಬೇಕೆಂದು ಬ್ಯಾಂಕುಗಳಿಗೆ ಸೂಚನೆ ನೀಡಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬ್ಯಾಂಕ್‌ ನೌಕರರು ದಕ್ಷಿಣ ಭಾರತದ ಜನರಿಗೆ ಹಿಂದಿಯಲ್ಲಿ ಮಾತನಾಡುವಂತೆ ಆಗ್ರಹಿಸುತ್ತಿರುವುದರ ಕುರಿತು ಆಕ್ರೋಶ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಮಂತ್ರಿಗಳಿಂದ ಈ ಹೇಳಿಕೆ ಬಂದಿದೆ. ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ದಕ್ಷಿಣ ಭಾರತೀಯರು ಕಡಿಮೆಯಿರುವುದು, ಅವರು ಐಟಿ ಸೇರಿದಂತೆ ಖಾಸಗಿ ಕೆಲಸಗಳ ಕಡೆ ಗಮನ ಕೊಡುತ್ತಿರುವುದರಿಂದಾಗಿ ಈ ಸಮಸ್ಯೆಯಾಗುತ್ತಿದೆಯೆಂದು ಬ್ಯಾಂಕ್‌ ವಲಯದವರು ಹೇಳುತ್ತಾರೆಯಾದರೂ; ಬ್ಯಾಂಕಿಂಗ್‌ ಪರೀಕ್ಷೆ ವ್ಯವಸ್ಥೆ ಇದಕ್ಕೆ ಮುಖ್ಯ ಕಾರಣ ಎನ್ನುವುದು ದಕ್ಷಿಣ ಭಾರತದ ಹೋರಾಟಗಾರರ ಅಭಿಪ್ರಾಯ.

ಹಣಕಾಸು ಮಂತ್ರಿಯವರ ಈ ಹೇಳಿಕೆಯ ಹಿನ್ನೆಲೆಯಲ್ಲಿ ಕನ್ನಡ ಪರ ಹೋರಾಟಗಾರರೂ, ಭಾಷಾ ಕೇಂದ್ರಿತ ಗ್ರಾಹ ಚಳುವಳಿಯಲ್ಲಿ ತೊಡಗಿಸಿಕೊಂಡಿರುವವರೂ ಆಗಿರುವ ಅರುಣ ಜಾವಗಲ್‌ ಅವರು ಈ ಕುರಿತು ಪ್ರತಿಕ್ರಿಯಿಸಿದ್ದ, ತಮ್ಮ ಫೇಸ್ಬುಕ್‌ ಖಾತೆಯಲ್ಲಿ ಈ ರೀತಿಯಾಗಿ ಬರೆದುಕೊಂಡಿದ್ದಾರೆ.

“ಬ್ಯಾಂಕಿನಲ್ಲಿ ಹಿಂದಿಯೇತರ ನಾಗರೀಕರಿಗೆ ತೊಂದರೆಯಾಗುತ್ತಿರುವುದು ದೆಹಲಿ ಕೇಂದ್ರಿತ ಹಿಂದಿ ಮೂಲಭೂತವಾದಿ ರಾಜಕಾರಣಿಗಳಿಗೆ ತಿಳಿದಿದೆ. ಬ್ಯಾಂಕಿನ ಸಿಬ್ಬಂದಿ ಸ್ಥಳೀಯ ಭಾಷೆಯಲ್ಲಿ ಮಾತನಾಡಬೇಕು ಅಂತ ಭಾರತ ಒಕ್ಕೂಟ ಸರಕಾರದ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ, ಈ ಬಗ್ಗೆ ಮಾತನಾಡಿದ ಹಾಗೆ ಮಾಡಿ ಸುಮ್ಮನಾಗುತ್ತಾರಾ ಅಥವಾ ರಾಜ್ಯ ಭಾಷೆಯಲ್ಲಿ ಬ್ಯಾಂಕಿಂಗ್ ಸೇವೆ ಸಿಗುವಂತೆ ನಿಯಮಗಳನ್ನು ಮಾಡಿ, RBI ಮೂಲಕ ಜಾರಿಗೆ ತರುತ್ತಾರಾ ನೋಡಬೇಕಿದೆ

ಬ್ಯಾಂಕಿನಲ್ಲಿ ಆಯಾ ರಾಜ್ಯದ ಭಾಷೆಯಲ್ಲಿ ಸೇವೆ ಸಿಗದಿರಲು ಮೂಲ ಕಾರಣ-

  1. IBPS ಪರೀಕ್ಷೆಯ ನಿಯಮಗಳನ್ನು ಸಡಿಸಿಲಿ ಹೊರ ರಾಜ್ಯದವರು ಆಯ್ಕೆಯಾಗಲು ಸಹಾಯವಾಗುವಂತೆ ಮಾಡಿದ್ದು
  2. RBI ಮೂಲಕ ಹಿಂದಿ ಹೆಚ್ಚು ಬಳಸುವ ಬ್ಯಾಂಕಿಗೆ ಬಹುಮಾನ ಕೊಡುವುದು
  3. ಜನರ ಭಾಷೆಯಲ್ಲಿ ಸೇವೆ ಸಿಗುವಂತೆ ಗಟ್ಟಿಯಾಗಿ ಕಾನೂನು/ನಿಯಮ ಮಾಡದೇ RBI ಮೂಲಕ Master circualr on Hindi usgage ಎನ್ನುವಂತಹಾ ಸುತ್ತೋಲೆಗಳನ್ನು ಹೊರಡಿಸಿ ಹೆಚ್ಚು ಹೆಚ್ಚು ಹಿಂದಿ ಬಳಕೆಗೆ ಒತ್ತಡ ಹಾಕಿದ್ದು.

ಬರಿ ಬಾಯಿ ಮಾತಿನಿಂದ ಬ್ಯಾಂಕು/ಬ್ಯಾಂಕಿನ ಸಿಬ್ಬಂದಿ ಬದಲಾಗೊಲ್ಲಾ, Consumer Protection Act -1986 ಗೆ ತಿದ್ದುಪಡಿ ತಂದು, ಗ್ರಾಹಕರ ಭಾಷಾ ಹಕ್ಕನ್ನು ಎತ್ತಿಹಿಡಿಯುವ ಅಂಶಗಳನ್ನು ಸೇರಿಸಬೇಕು. RBI ಮೂಲಕ ಭಾಷಾ ಹಕ್ಕನ್ನು ಎತ್ತಿಹಿಡಿಯುವ ಸುತ್ತೋಲೆಗಳನ್ನು ಹೊರಡಿಸಬೇಕು.”

https://m.facebook.com/story.php?story_fbid=pfbid02RGjXY4KFKsK2ZToR79VXK1t6M4KSE6M7iHLdUM5GnWcYefu5sqkKCMYdiSYu7TkUl&id=100001487623623&eav=AfYueYkkY7g2jkEAIbUFIZESSZkg0AanG4OOvJ4_2ubc8Kz6IWzs9axDKqApG3i8ows&m_entstream_source=timeline&paipv=0

ಈಗೀಗ ಕರ್ನಾಟಕವೂ ಸೇರಿದಂತೆ ಹಿಂದಿ ಹೇರಿಕೆ ವಿರುದ್ಧದ ಹೋರಾಟ ಮತ್ತು ಸ್ಥಳೀಯ ಭಾಷೆಯಲ್ಲಿ ಸೇವೆ ನೀಡಬೇಕೆನ್ನುವ ಕೂಗಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಬೆಂಬಲ ಸಿಕ್ಕಿದ್ದ ಬಹುತೇಕ ಕಂಪನಿಗಳು ಗ್ರಾಹಕರಿಗೆ ಕನ್ನಡದಲ್ಲೇ ತಮ್ಮ ಮಾಹಿತಿ ಸೇವೆಗಳನ್ನು ನೀಡುತ್ತಿದ್ದಾರೆ. ಈ ಬದಲಾವಣೆಗಳ ಹಿಂದೆ ಹಲವು ಕನ್ನಡಪರ ಜನರ ಮತ್ತು ಸಂಘಟನೆಗಳ ಪಾತ್ರವಿದೆ. ಈ ಹಿನ್ನೆಲೆಯಲ್ಲಿ ನಿರ್ಮಲಾ ಸೀತರಾಮನ್‌ ಅವರ ಹೇಳಿಕೆಗೆ ಬಹಳ ಮಹತ್ವವಿದೆ. ಮತ್ತು ಜನರ ಒತ್ತಾಸೆಗೆ ಮಣಿದು ಮುಖ್ಯವಾಗಿ ಸಾರ್ವಜನಿಕ ವಲಯದ ಬ್ಯಾಂಕಿಂಗ್‌ ಸೇವೆ ತಮ್ಮ ಭಾಷಿಕ ಒರಟುತನವನ್ನ ತೊರೆದು ಇನ್ನೂ ಮುಂದಾದರೂ ಜನರ ಭಾಷೆಯಲ್ಲಿಯೇ ಸೇವೆ ನೀಡುತ್ತವೆಯೇ ಎನ್ನುವುದನ್ನು ಕಾದು ನೋಡಬೇಕಿದೆ.

Related Articles

ಇತ್ತೀಚಿನ ಸುದ್ದಿಗಳು