ಸಾಂಗ್ಲಿ: ಮಹಾರಾಷ್ಟ್ರದಲ್ಲಿ ಶಿವಾಜಿ ಮಹಾರಾಜರ ಪ್ರತಿಮೆ ಕುಸಿದು ಬಿದ್ದ ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಏಕೆ ಕ್ಷಮೆಯಾಚಿಸಿದರು ಎಂದು ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಅವರು ಗುರುವಾರ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಮಾಜಿ ಸಚಿವ ಹಾಗೂ ಭಾರತಿ ವಿದ್ಯಾಪೀಠದ ಸಂಸ್ಥಾಪಕ ಪತಂಗ ರಾವ್ ಕದಂ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ರಾಹುಲ್ ಗಾಂಧಿ, ‘ತಪ್ಪು ನಡೆದಿರದಿದ್ದರೆ ಕ್ಷಮೆ ಕೇಳುವ ಅಗತ್ಯವಿಲ್ಲ. ಮೋದಿ ಕ್ಷಮೆ ಕೇಳಲು ಮೂರು ಕಾರಣಗಳಿರಬಹುದು. ಆರ್ಎಸ್ಎಸ್ ಅಂಗಸಂಸ್ಥೆಗೆ ಗುತ್ತಿಗೆ ನೀಡಿರುವುದು ಮೊದಲ ಕಾರಣ, ನಿರ್ಮಾಣದ ವೇಳೆ ನಡೆದ ಭ್ರಷ್ಟಾಚಾರ ಎರಡನೇ ಕಾರಣ, ಪ್ರತಿಮೆ ನಿರ್ಮಿಸಿದ ನಂತರ ಅದನ್ನು ಸರಿಯಾಗಿ ನಿಲ್ಲುವಂತೆ ಮಾಡದಿರುವುದು ಮೂರನೇ ಕಾರಣ’ ಎಂದರು.
ಮೋದಿಯವರು ಶಿವಾಜಿ ಮಹಾರಾಜರ ಬಳಿ ಮಾತ್ರವಲ್ಲದೆ ಮಹಾರಾಷ್ಟ್ರದ ಪ್ರತಿಯೊಬ್ಬರ ಕ್ಷಮೆ ಕೇಳಬೇಕು ಎಂದು ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎನ್ಸಿಪಿ ಅಧ್ಯಕ್ಷ ಶರದ್ ಪವಾರ್ ಮತ್ತಿತರರು ಭಾಗವಹಿಸಿದ್ದರು.