Monday, June 17, 2024

ಸತ್ಯ | ನ್ಯಾಯ |ಧರ್ಮ

ಒಂಟಿ ತಾಯಂದಿರ ಮಕ್ಕಳಿಗೆ ಅಪ್ಪನೆಂಬವನ ಹಂಗು

ಅಪ್ಪನ ಯಾವುದೇ ಹಂಗಿಲ್ಲದಂತೆ ಬೆಳೆದ ಒಂಟಿ ತಾಯಂದಿರ ಮಕ್ಕಳು ಎದುರಿಸುವ, ಅನುಭವಿಸುವ ನೋವು ಹಿಂಸೆ ತಳಮಳ ಕಸಿವಿಸಿಗಳಿಗೆ ಉತ್ತರ ನೀಡುವವರು ಯಾರು? ಯಾವುದೇ ಅರ್ಜಿ ಫಾರಂಗಳನ್ನು ಬದಲಾದ ಸಾಮಾಜಿಕ ಸ್ಥಿತಿಗೆ ತಕ್ಕಂತೆ ಬದಲಿಸುವ ಹೊಣೆಗಾರಿಕೆ ಯಾರದ್ದು? ಒಂಟಿ ತಾಯಂದಿರ ಮಕ್ಕಳ ಬಹುದೊಡ್ಡ ಸಮಸ್ಯೆಯೊಂದನ್ನು ಮಹಿಳಾ ದಿನದ ಹಿನ್ನೆಲೆಯಲ್ಲಿ  ಮುನ್ನೆಲೆಗೆ ತಂದಿದ್ದಾರೆ ಪತ್ರಕರ್ತೆ ಚಂದ್ರಾವತಿ ಬಡ್ಡಡ್ಕ.

ಒಬ್ಬಳೇ ಮಗಳು. ಅಣ್ಣ ತಮ್ಮಂದಿರ ಮುದ್ದಿನ ಸೋದರಿ. ಕಾಲೇಜು ಮುಗಿಯಿತು. ಮದುವೆ ಆಯಿತು. ಮನೆಯಲ್ಲಿ ರಾಜಕುಮಾರಿಯಂತೆ ಇದ್ದವಳು. ಮದುವೆಯಾದ ಬಳಿಕ ಆರಂಭದಿಂದಲೂ ಏನೋ ಕುಸುಕುಸು. ಧುಸುಮುಸು! ಅದು ಸರಿ ಇಲ್ಲ, ಇದು ಸರಿಯಾಗಿರಲಿಲ್ಲ, ಅವರು ಹಾಗೆ ಸರಿ ಇಲ್ಲ, ಇವರು ಹೀಗೆ ಸರಿ ಇಲ್ಲ…. ಹೀಗೆ ಅವರಿವರ ಮೇಲೆ ದೂರುಗಳಿಲ್ಲದ ದಿನವೇ ಇರುತ್ತಿರಲಿಲ್ಲ. ಅವರೆಲ್ಲ ಸರಿ ಇಲ್ಲದಿದ್ದರೆ ಬಿಟ್ಟಾಕಿ. ನಾನು ಸರಿ ಇದ್ದೀನಲ್ಲ ಕೇಳಿದಳು. ನೀನು ಸರಿ ಇದ್ದಿಯಾದರೂ… ಮುಂದುವರಿದವು ದೂರುಗಳು. 

ವರ್ಷ ಒಂದು ಉರುಳಿತು. ದೂರುಗಳು ಮತ್ತಷ್ಟು ದಟ್ಟವಾದವು. ಈ ನಡುವೆ ಮಡಿಲಿಗೊಂದು ಹೆಣ್ಣು ಕೂಸು. ಕೂಸಾದಮೇಲೆ ಸರಿ ಹೋದಾನೆಂದು ಮನೆಯವರು ಸಮಾಧಾನಿಸಿದ್ದು ಸುಳ್ಳಾಯಿತು. ವಿವಾಹೋತ್ತರದಲ್ಲಿ ಜೀವನಕ್ಕಾಗಿ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಟ್ಟಿದ್ದ ತವರಿನವರ ಬಗ್ಗೆ ದೂರು ಇನ್ನೂ ಮುಗಿಯದಿರುವುದು ಇವಳಿಗೆ ಪಿಚ್ಚೆನಿಸಿತು. ಹೇಗೋ ಎಲ್ಲವನ್ನು ಸಹಿಸಿಕೊಂಡು ಮಗುವಿನ ಲಾಲನೆ ಪಾಲನೆಯಲ್ಲಿ ತೊಡಗಿದ್ದಳು. “ಬೇರೆ ಯಾರನ್ನಾದರೂ ಮದುವೆಯಾಗಿದ್ದರೆ ಇನ್ನಷ್ಟು ಸಿಗುತ್ತಿತ್ತು. ಅವರು ಮಗಳನ್ನು ಕೊಡಲು ತಯಾರಿದ್ದರು. ಇವರು ಇಷ್ಟು ಕೊಡುತ್ತೇನೆಂದಿದ್ದರು…..” ಎಂಬ ಗಂಡನ ಸ್ವಯಂ ಮರುಕದ ಲೆಕ್ಕಾಚಾರದ ನಡುವೆ, ಗಂಡನ ಅಪ್ಪನ ದಬ್ಬಾಳಿಕೆಯೂ ಸೇರಿಕೊಂಡಿತ್ತು. ಅತ್ತಲಿಂದ ನಾದಿನಿಯ ದೂರೂ ದಿನೇದಿನೇ ಏರುತ್ತಿತ್ತು. ಅದೊಂದು ದಿನ ಕ್ಷುಲ್ಲಕ ಕಾರಣಕ್ಕೆ ಮಾವ ಬಡಿಗೆಯಿಂದ ಏಟು ನೀಡಿದ್ದು ಅವಳ ತಾಳ್ಮೆಯನ್ನು ಇಂಗಿಸಿತು. ವರ್ಷದ ಕೂಸನ್ನು ಹಾಗೆ ಎತ್ತಿಕೊಂಡವಳೇ ಎದ್ದು ತವರಿಗೆ ನಡೆದಳು. 

ಅಮ್ಮನ ಸೊಂಟವೇರಿ ಹಾಗೆ ಬಂದ ಕೂಸು ಮತ್ತೆಂದೂ ಅಪ್ಪನ ಮುಖ ನೋಡಿದ್ದಿಲ್ಲ. ಸಂಧಾನ – ಅನುಸಂಧಾನ ಮಾತುಕತೆಗಳು ಮುರಿದು ಬಿದ್ದವು. ವಿವಾಹ ವಿಚ್ಛೇದನವಾಯಿತು. ತವರಿನಲ್ಲಿ ನೆಲೆಯೂರಿದಳು. ಅವನು ವಿಚ್ಛೇದನ ಸಿಕ್ಕಿದ್ದೇ ಕಾದುಕೊಂಡಿದ್ದವನಂತೆ ಇನ್ನೊಂದು ಮದುವೆಯಾದ. ಮಕ್ಕಳೂ ಅದವು. ಇತ್ತ ಇವಳಿಗೂ ಯೌವ್ವನವಿತ್ತು. ಇನ್ನೊಂದು ಮದುವೆಯೂ ಆಗಬಹುದಿತ್ತು. ಆದರೆ ಅವಳೆದುರಿಗೆ ಮಗಳ ಭವಿಷ್ಯವೇ ಬೃಹದಾಕಾರವಾಗಿತ್ತು. ಮಗುವಿನ ಮನಸಿಗೆ ಘಾಸಿಯಾಗಬಾರದೆಂದು ಜಾಗ್ರತೆ ವಹಿಸಿದಳು. ಹಲವು ಏಳು ಬೀಳುಗಳನ್ನು ಎದುರಿಸಿದಳು. ತವರಿನ ಬೆಂಬಲಕ್ಕೆ ಕೊರತೆ ಇರಲಿಲ್ಲ. ಸ್ನೇಹಿತರು, ಬಂಧುಗಳ ಸಹಕಾರವೂ ಇತ್ತು. ಎಲ್ಲವೂ ಇದೆ “ಆದರೂ…..” ಎಂಬುದು ಕಾಡಿದರೂ ಹಲ್ಲುಕಚ್ಚಿ ಮುಂದಡಿ ಇಟ್ಟಳು.

 ಮಗಳನ್ನು ಉತ್ತಮ ಶಾಲೆಗೆ ಸೇರಿಸಿದಳು. ಅವಳು ಇಚ್ಛಿಸಿದ ವಿದ್ಯಾಭ್ಯಾಸವನ್ನೇ ನೀಡಿದಳು. ಅಮ್ಮನ  ಸರ್ವಸ್ವ, ಅಮ್ಮನ ಪ್ರಪಂಚ ಮಗಳು. ಮಗಳ ಸರ್ವಸ್ವವೂ ಅಮ್ಮನೇ. ಅಪ್ಪನ ಯಾವುದೇ ಹಂಗು ಬಿಡಿ, ನೆರಳೂ ಇಲ್ಲದಂತೆ ಬೆಳೆದವಳು. ಆದರೂ ಯಾವುದೇ ಕೊರತೆ ಇಲ್ಲದಂತೆ ಉಂಡುಟ್ಟು ವಿದ್ಯೆ ಕಲಿತಳಾದರೂ ಉದ್ದಕ್ಕೂ ಅರ್ಜಿ ಫಾರಂಗಳನ್ನು ತುಂಬುವಾಗೆಲ್ಲ ಅಪ್ಪನ ಹೆಸರು ಎಂದಿರುವ ಕಾಲಂ ಅಮ್ಮ-ಮಗಳಿಬ್ಬರಿಗೂ ಕಿರಿಕಿರಿ ಉಂಟು ಮಾಡುತ್ತಿತ್ತು. ಕೆಲವು ಕಡೆಗಳಲ್ಲಿ ಅಪ್ಪನ ಹೆಸರಿರುವಲ್ಲಿ ಅಮ್ಮನ ಹೆಸರು ಬರೆಸಲು ಒದ್ದಾಡಿದ್ದೂ ಆಯ್ತು. ಇನ್ನೂ ಕೆಲವು ಕಡೆ ಅಮ್ಮನ ಹೆಸರು ನಮೂದಿಸಿದ ದಾಖಲೆಪತ್ರಗಳು ಕೈಗೆ ಸಿಗುವ ವೇಳೆಗೆ ಅಮ್ಮನ ಹೆಸರಿನ ಕಾಗುಣಿತ ತಿರುಚಿ ಅದನ್ನು ‘ಅಪ್ಪನ’ ಹೆಸರು ಮಾಡಿಡಲಾಗುತ್ತಿತ್ತು.

ಸ್ನಾತಕೋತ್ತರ ಪದವಿ ಪಡೆದ ಬಳಿಕ ಅವಳಿಗೆ ಅಪ್ಪನ ನೋಡಬೇಕು, ಮಾತಾಡಬೇಕೆನಿಸಿತು. ಬಲ್ಲ ಮೂಲಗಳನ್ನೆಲ್ಲ ಕೆದಕಿ ಅಪ್ಪನ ಸಂಪರ್ಕ ಸಂಖ್ಯೆಯನ್ನು ಪತ್ತೆ ಮಾಡಿ ಕೊಟ್ಟರು ಹಿತೈಷಿಗಳು. ಭಾವೋದ್ವೇಗದಿಂದ ಡಯಲ್ ಮಾಡಿದಳು. ಅತ್ತಲಿಂದ ಹಲೋ ಎಂದಿತು ಅಪ್ಪನ ಧ್ವನಿ. ಮೊದಲ ಬಾರಿಗೆ ಧ್ವನಿ ಕೇಳಿದಳು. ನಾನು ….. ಪರಿಚಯಿಸಿಕೊಂಡಳು. ಅತ್ತಲಿಂದ ಯಾವುದೇ ಭಾವನೆಗಳಿಲ್ಲದ ನಿರ್ಭಾವುಕ ಮಾತುಗಳು. ಹೇಗಿದ್ಯಾ ಏನು ಮಾಡುತ್ತಿಯಾ ಎಂಬ ಯಾವುದೇ ಮಾತುಗಳಿಲ್ಲ. 25 ವರ್ಷಗಳ ಬಳಿಕ ಮತ್ತೆ ದೂರುಪೆಟ್ಟಿಗೆ ಓಪನ್ ಆದಂತಾಯ್ತೇನೋ! ನಿನ್ನ ಅಜ್ಜಿ ಸರಿ ಇಲ್ಲ. ನಿನ್ನ …….ವರು ಹಾಗೆ….. ಇವರು ಹೀಗೆ…. ಯೋಗ ಮಾಡು….. ಧ್ಯಾನ ಮಾಡು….. ಅತ್ತಲಿಂದ ಕೇಳಿದ ಮಾತುಗಳಿಂದ ಇವಳ ಇಷ್ಟೂ ವರ್ಷದ ಕುತೂಹಲ, ಉತ್ಸಾಹಗಳು ಜರ್ರನೆ ಇಳಿದವು. ಎಲ್.ಕೆಜಿಯಿಂದ ಹಿಡಿದು ಪಿಜಿ ತನಕ ಓದಲು ಆರ್ಥಿಕ, ನೈತಿಕ ಸ್ಥೈರ್ಯ ನೀಡಿದ ಅಜ್ಜಿ ತಾತ, ಯಾವುದೇ ಕುಂದುಕೊರತೆ ಇಲ್ಲದಂತೆ ಬೆಳೆಯುವಲ್ಲಿ ನೆರವಾದ ಬಂಧುಗಳು ಕಣ್ಮುಂದೆ ಸುಳಿದರು.  ಫೋನಿನ ಕೆಂಪು ಬಟನ್ ತನಗರಿವಿಲ್ಲದೆ ಒತ್ತಿದಳು.

ಸಾಮಾನ್ಯವಾಗಿ ನಮ್ಮ ಸಮಾಜದಲ್ಲಿ ಅಪ್ಪನೇ ಕುಟುಂಬದ ಯಜಮಾನ ಕೇರ್‌ಟೇಕರ್ ಆಗಿರುವುದು ಸಹಜವಾದರೂ ಇಂತಹ ಪ್ರಕರಣಗಳು ಬೇಕಾದಷ್ಟಿವೆ. ಸಿಂಗಲ್ ಪೇರೆಂಟ್‌ಗಳು ಹೆಚ್ಚುತ್ತಿದ್ದಾರೆ. ಮಕ್ಕಳನ್ನು ಸಾಕಿ ಸಲಹಿ ಅವರೆಲ್ಲ ಬೇಕುಬೇಡಗಳನ್ನು ಗಮನಿಸಿ ಬೆಳೆಸುತ್ತಾರೆ.  ಸಾಮಾಜಿಕ ವ್ಯವಸ್ಥೆಗಳಲ್ಲಿ ನಾವು ಬದಲಾವಣೆ ಕಾಣುತ್ತಿದ್ದೇವೆ. ಸ್ಥಿತ್ಯಂತರಗಳಾಗುತ್ತಿವೆ. ಆದರೆ ಇದಕ್ಕೆ ತಕ್ಕಂತೆ ಆಡಳಿತಾರೂಢ ಕಚೇರಿಗಳಲ್ಲಿನ ಕಾಗದ ಪತ್ರಗಳಲ್ಲಿ ಸಾಮಾಜಿಕ ಅವಶ್ಯಕತೆಗೆ ತಕ್ಕಂತೆ ಬದಲಾವಣೆಗಳು ಅಥವಾ ತಿದ್ದುಪಡಿಗಳು ಆದಂತಿಲ್ಲ. ಮಾಮೂಲಾಗಿ ನೋಡಿದರೆ ಅದರಲ್ಲೇನಿದೆ? ಎಂಬ ಪ್ರಶ್ನೆಗಳು ಎದುರಾಗುತ್ತವೆ. ಕ್ಷುಲ್ಲಕ ವಿಷಯವೆಂದು ನಿರ್ಲಕ್ಷ್ಯದ ನಗು ಸೂಸುವವರಿದ್ದಾರೆ. ಆದರೆ ಇಂತಹ ಪರಿಸ್ಥಿತಿಗಳನ್ನೆದುರಿಸಿದ ಮಕ್ಕಳ ಮನಸ್ಸಿನ ನೋವು ಯಾತನೆಗಳು ಸಹ ಲೆಕ್ಕಕ್ಕಿರಬೇಕಲ್ಲವ?. ಸಿಂಗಲ್ ಪೇರೆಂಟ್ ಪುರುಷರೂ ಇದ್ದಾರೆ. ಮಕ್ಕಳನ್ನು ಬೆಳೆಸುವಲ್ಲಿನ ಅವರ ಪರಿಶ್ರಮವೂ ಬಹಳವೇ ಆಗಿದೆ. ಆದರೆ ಮಹಿಳಾ ಸಿಂಗಲ್ ಪೇರೆಂಟ್‌ಗಳು ಎದುರಿಸುವಂತ ಇಂತಹ ಸಂಕಷ್ಟಗಳು ಅವರಿಗೆ ಎದುರಾಗುವುದಿಲ್ಲ ಎನ್ನಬಹುದು.

ಈ ಹುಡುಗಿ ತನ್ನ ವಿದ್ಯಾಭ್ಯಾಸ ಪದವಿ ಅರ್ಹತೆಗೆ ತಕ್ಕಂತಹ ಸರಕಾರಿ ನೌಕರಿಯನ್ನು ಪಡೆದಳು. ಎಲ್ಲರಿಗೂ ಖುಷಿ ಮತ್ತು ಸಮಾಧಾನ. ಒಂಟಿ ಪೋಷಕಳಾಗಿರುವ ಅಮ್ಮ ಮತ್ತವಳ ಮಗಳ ಪ್ರಯತ್ನ ಫಲಕೊಟ್ಟಿತ್ತೆಂಬ ಸಂಭ್ರಮ. ಮಗಳು ದಡ ಸೇರಿದ ಸಂತಸ. ಆದರೆ ಸಂಬಳ ಪಡೆಯುವಾಗ ಶಿಷ್ಟಾಚಾರದಂತೆ ಸಲ್ಲಿಸುವ ಆನ್‌ಲೈನ್ ಅರ್ಜಿ ತುಂಬುವಾಗ ಮತ್ತದೇ ಗೋಳು. ಮ್ಯಾನುವಲ್ ಅರ್ಜಿಯಲ್ಲಾದರೆ ಕೈಬರಹದಲ್ಲಿ ಬರೆಯಬಹುದು; ಅದರೆ ಬರೆಯದೇ ಇರಬಹುದು. ಆದರೆ ಈ ಆನ್‌ಲೈಸ್ ಫಾರಂ ಭರ್ತಿ ಮಾಡುವ ವೇಳೆಗೆ ಖಡ್ಡಾಯ ಕಾಲಂಗಳನ್ನು ಭರ್ತಿಮಾಡದಿದ್ದರೆ ಮುಂದಕ್ಕೆ ಹೋಗಲು ಸಾಧ್ಯವೇ ಆಗುವುದಿಲ್ಲ. ಆ ಪ್ರೋಗ್ರಾಂಗಳು ಹಾಗಿರುತ್ತವೆ. ಇದರಲ್ಲಿ ತಂದೆಯ ಹೆಸರು ಮಾತ್ರವಾದರೆ ಹೇಗಾದರೂ ಇರಲಿ ಅತ್ತ ಎಂದು ಬರೆದು ಬಿಡಬಹುದಿತ್ತೇನೋ. ಆದರೆ ತಂದೆಯ ಮೊಬೈಲ್ ನಂಬರ್, ಜನ್ಮದಿನಾಂಕ ಮತ್ತಿತರ ವಿವರಗಳನ್ನೆಲ್ಲ ತುಂಬದಿದ್ದರೆ ಮುಂದಿನ ಕಾಲಂಗೆ ಹೋಗಲಾಗುವುದಿಲ್ಲ!

ಅಪ್ಪನ ಯಾವುದೇ ಹಂಗಿಲ್ಲದಂತೆ ಸಿಂಗಲ್ ಪೇರೆಂಟಿಂಗ್‌ನಲ್ಲಿ ಬೆಳೆದ ಮಕ್ಕಳು ಇಂತಹ ಸಂದರ್ಭಗಳಲ್ಲಿ ಅನುಭವಿಸುವ ನೋವು ಹಿಂಸೆ ತಳಮಳ ಕಸಿವಿಸಿಗಳಿಗೆ ಉತ್ತರ ನೀಡುವವರು ಯಾರು. ಯಾವುದೇ ಅರ್ಜಿ ಫಾರಂಗಳನ್ನು ಬದಲಾದ ಸಾಮಾಜಿಕ ಸ್ಥಿತಿಗೆ ತಕ್ಕಂತೆ ಬದಲಿಸುವ ಹೊಣೆಗಾರಿಕೆ ಯಾರದ್ದು?

ಚಂದ್ರಾವತಿ ಬಡ್ಡಡ್ಕ

ಮುದ್ರಣ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಕೆಲಸ ಮಾಡುತ್ತಿದ್ದ ಇವರು ಈಗ ಸ್ವತಂತ್ರವಾಗಿ ಮಾಧ್ಯಮಗಳಲ್ಲಿ ಅಂಕಣ ಬರವಣಿಗೆ, ಅನುವಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಕನ್ನಡ, ಅರೆಭಾಷೆ, ಹಾಗೂ ತುಳುವಿನ ಅವರ ಲಘು ಬಿಗು ಬರಹಗಳು ಓದುಗರ ಅಪಾರ ಮೆಚ್ಚುಗೆಯನ್ನು ಗಳಿಸಿವೆ. 

Related Articles

ಇತ್ತೀಚಿನ ಸುದ್ದಿಗಳು