Sunday, June 23, 2024

ಸತ್ಯ | ನ್ಯಾಯ |ಧರ್ಮ

ಭಾರತಕ್ಕೆ ಮುಸ್ಲಿಂ ಪ್ರಧಾನಿ ಬೇಡವೇ? ಟ್ವಿಟರ್‌ ನಲ್ಲಿ ಬಿರುಸಿನ ಚರ್ಚೆ

ಬೆಂಗಳೂರು: ಭಾರತೀಯ ಮೂಲದ ರಿಷಿ ಸುನಕ್‌ ಬ್ರಿಟನ್‌ ಪ್ರಧಾನಿಯಾಗುತ್ತಿರುವುದು ಹಲವು ಬಗೆಯ ಚರ್ಚೆಗಳಿಗೆ ಕಾರಣವಾಗಿದ್ದು, ಭಾರತದಲ್ಲಿ ಇದುವರೆಗೆ ಒಬ್ಬರೇ ಒಬ್ಬರು ಮುಸ್ಲಿಂ ಪ್ರಧಾನಿ ಯಾಕೆ ಆಗಿಲ್ಲ ಎಂದು ಹಲವು ಟ್ವಿಟರ್‌ ಬಳಕೆದಾರರು ಪ್ರಶ್ನಿಸಿದ್ದಾರೆ.

`#MuslimPM ಹ್ಯಾಶ್‌ಟ್ಯಾಗ್‌ ಇಂದು ಟ್ವಿಟರ್‌ನಲ್ಲಿ ಟ್ರೆಂಡ್‌ ಆಗಿದ್ದು, ಸದ್ಯ ಸ್ವೀಡನ್‌ನಲ್ಲಿರುವ ಖ್ಯಾತ ಅಂಕಣಕಾರ ಅಶೋಕ್‌ ಸ್ವೈನ್‌, ಓರ್ವ ಹಿಂದು ಇಂಗ್ಲೆಂಡ್‌ ದೇಶದ ಪ್ರಧಾನಿಯಾಗುವುದಾದರೆ ಒಬ್ಬ ಮುಸ್ಲಿಂ ಅಥವಾ ಕ್ರಿಶ್ಚಿಯನ್‌ ಅಥವಾ ದಲಿತರೊಬ್ಬರು ದೇಶದ ಪ್ರಧಾನಿ ಯಾಕಾಗಬಾರದು? ಎಂದು ಟ್ವೀಟ್‌ ಮಾಡಿದ್ದಾರೆ. ಈ ಟ್ವೀಟನ್ನು ಸುಮಾರು 45,000ಕ್ಕೂ ಹೆಚ್ಚು ಮಂದಿ ಇಷ್ಟಪಟ್ಟಿದ್ದು, 7000ಕ್ಕೂ ಹೆಚ್ಚು ಮಂದಿ ರೀಟ್ವೀಟ್‌ ಮಾಡಿದ್ದಾರೆ.

ಜಾಸ್ಮಿನ್‌ ಫೆರ್ನಾಂಡೋ ಎಂಬುವವರು ಈ ಕುರಿತು ಟ್ವೀಟ್‌ ಮಾಡಿದ್ದು, ನಾವು ಮುಸ್ಲಿಂ ಪ್ರಧಾನಿಯ ಬೇಡಿಕೆ ಇಡೋದಿಲ್ಲ. ಯಾಕೆಂದರೆ ನಿಮ್ಮ ಮೈಂಡ್‌ ಸೆಟ್‌ ಅದಕ್ಕೆ ಒಪ್ಪಿಗೆ ನೀಡುವುದಿಲ್ಲ. ದಯವಿಟ್ಟು ಭಾರತದಲ್ಲಿ ಅಲ್ಪಸಂಖ್ಯಾತರನ್ನು ನೆಮ್ಮದಿಯಾಗಿ ಬದುಕಲು ಬಿಡಿ. ಭಾರತದಲ್ಲಿ ಒಬ್ಬ ದಲಿತ ಪ್ರಧಾನಿಯೂ ಆಗುವ ಸಾಧ್ಯತೆ ಇಲ್ಲ. ಯಾಕೆಂದರೆ ಹಿಂದೂ ಧಾರ್ಮಿಕ ಪುಸ್ತಕಗಳು ದಲಿತರನ್ನು ಆಡಳಿತಗಾರನ್ನಾಗಿಸಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.

ಇಂಗ್ಲೆಂಡ್‌ ನಲ್ಲಿ ಕೇವಲ 1.5% ಹಿಂದೂಗಳಿದ್ದಾರೆ. ಕ್ರಿಶ್ಚಿಯನ್‌ ಮೆಜಾರಿಟಿ ಇರುವ ಆ ದೇಶದಲ್ಲಿ ಒಬ್ಬ ಹಿಂದೂ ವ್ಯಕ್ತಿಯನ್ನು ಪ್ರಧಾನಿಯನ್ನಾಗಿ ಮಾಡಲಾಗುತ್ತಿದೆ. ಭಾರತದಲ್ಲಿ ಶೇ.15ರಷ್ಟು ಮಂದಿ ಮುಸ್ಲಿಮರಿದ್ದಾರೆ. ಮುಸ್ಲಿಂ ಪ್ರಧಾನಿಯ ವಿಷಯ ಹಾಗಿರಲಿ, ಲೋಕಸಭೆಯ 543 ಸದಸ್ಯ ಸ್ಥಾನ ಗಳಲ್ಲಿ ಮುಸ್ಲಿಮರ ಸಂಖ್ಯೆ ಕೇವಲ 27. (ಶೇ.5) ಎಂದು ಪತ್ರಕರ್ತ ಸಂದೀಪ್‌ ಸಿಂಗ್‌ ಟ್ವೀಟ್‌ ಮಾಡಿದ್ದಾರೆ.

ಮುಸ್ಲಿಂ ಪ್ರಧಾನಿ ಬೇಡಿಕೆಯನ್ನು ವಿರೋಧಿಸಿರುವ ಬಲಪಂಥೀಯ ಬರಹಗಾರ ಮಿಸ್ಟರ್‌ ಬಿ, ಮುಸ್ಲಿಂ ಪ್ರಧಾನಿ ಬೇಡಿಕೆ ಇಟ್ಟಿರುವವರು ಮೊದಲು ಈ ಪ್ರಶ್ನೆಗಳಿಗೆ ಉತ್ತರ ನೀಡಲಿ. 1) ಮುಸ್ಲಿಂ ಮೆಜಾರಿಟಿ ಇರುವ ಕಾಶ್ಮೀರದಲ್ಲಿ ಈವರೆಗೆ ಒಬ್ಬ ಹಿಂದೂ ಮುಖ್ಯಮಂತ್ರಿ ಆಗಿದ್ದಾರೆಯೇ? 2)ಸಿಖ್‌ ಮೆಜಾರಿಟಿ ಇರುವ ಪಂಜಾಬ್‌ನಲ್ಲಿ ಇದುವರೆಗೆ ಒಬ್ಬ ಹಿಂದೂ ಮುಖ್ಯಮಂತ್ರಿ ಆಗಿದ್ದಾರೆಯೇ? 3) ಕ್ರಿಶ್ಚಿಯನ್‌ ಮೆಜಾರಿಟಿ ಇರುವ ಮೇಘಾಲಯ, ನಾಗಾಲ್ಯಾಂಡ್‌ ಮತ್ತು ಮಿಜೋರಾಂಗಳಲ್ಲಿ ಇದುವರೆಗೆ ಒಬ್ಬ ಹಿಂದೂ ಮುಖ್ಯಮಂತ್ರಿ ಆಗಿದ್ದಾರೆಯೇ? ಸೆಕ್ಯುಲರಿಸಂನ ಎಲ್ಲ ಹೊರೆಯನ್ನು ಕೇವಲ ಹಿಂದುಗಳು ಮಾತ್ರ ಹೊರಬೇಕೆ ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್‌ ಪಕ್ಷದ ತಮಿಳುನಾಡು ಘಟಕದ ಪ್ರಧಾನ ಕಾರ್ಯದರ್ಶಿ ಲಕ್ಷ್ಮಿ ರಾಮಚಂದ್ರನ್‌ ಟ್ವೀಟ್‌ ಮಾಡಿದ್ದು, ರಿಷಿ ಸುನಕ್ ಬ್ರಿಟನ್‌ ಪ್ರಧಾನಿಯಾಗಿ‌ ಆಯ್ಕೆಯಾಗುತ್ತಿರುವುದಕ್ಕೆ ಭಾರತ ಸಂಭ್ರಮಿಸುತ್ತಿರುವಂತೆ ತೋರುತ್ತಿದೆ. ಭಾರತ ಒಬ್ಬ ದಲಿತ ಪ್ರಧಾನಿ, ಈಶಾನ್ಯ ರಾಜ್ಯಗಳಿಂದ ಬಂದ ಪ್ರಧಾನಿ, ಹಿಂದಿಯೇತರ ರಾಜ್ಯಗಳ ಪ್ರಧಾನಿ ಅಥವಾ ಮುಸ್ಲಿಂ ಪ್ರಧಾನಿಯನ್ನು ಮುಂದಿನ ದಿನಗಳಲ್ಲಿ ಕಾಣಲು ಸಾಧ್ಯವೇ? ಭಾರತ ಒಂದು ದೇಶವಾಗಿ ವಿಕಾಸವಾಗಲು ಇಂಥ ಸಂಭ್ರಮಿಸುವ ಕಾರಣಗಳು ಬೇಕು ಎಂದು ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು