Saturday, June 15, 2024

ಸತ್ಯ | ನ್ಯಾಯ |ಧರ್ಮ

ಸಿದ್ದರಾಮಯ್ಯನವರ ಮೇಲೆ ಕುಮಾರಸ್ವಾಮಿಯವರಿಗೆ ಯಾಕಿಷ್ಟು ಸಿಟ್ಟು?

ಕುಮಾರಸ್ವಾಮಿಯವರಿಗೆ ಯಡಿಯೂರಪ್ಪನವರ ಮೇಲೆ ಸಿದ್ದರಾಮಯ್ಯನವರ ಮೇಲಿರುವಷ್ಟು ಜಿದ್ದಿನ ಸಿಟ್ಟಿಲ್ಲ. ಇದನ್ನು ಜಾತಿಯ ವ್ಯಾಖ್ಯಾನವಲ್ಲದೆ ಮತ್ತ್ಯಾವುದೂ ಸಮರ್ಥವಾಗಿ ವಿವರಿಸಲಾರದು. ಹಾಗಂತ ನೇರವಾಗಿ ಜಾತಿಗಣ್ಣಿನಿಂದಲೇ ಅವರು ಇಷ್ಟೆಲ್ಲವನ್ನು ಮಾಡುತ್ತಿದ್ದಾರೆ ಎನ್ನುತ್ತಿಲ್ಲ. ಆದರೆ ಅವರ ನಡವಳಿಕೆಯ ಮೇಲೆ ಜಾತಿವ್ಯವಸ್ಥೆಯ ಈ ಪ್ರಭಾವ ಪರೋಕ್ಷವಾಗಿ ತನ್ನ ಕೆಲಸ ಮಾಡುತ್ತಿದೆ ಎನ್ನುವುದನ್ನು ತಳ್ಳಿಹಾಕಲು ಬರುವುದಿಲ್ಲ – ಮಾಚಯ್ಯ ಎಂ ಹಿಪ್ಪರಗಿ, ರಾಜಕೀಯ ವಿಶ್ಲೇಷಕರು

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು, ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮೇಲೆ ಅಧಿಕೃತ ವಿರೋಧ ಪಕ್ಷವಾದ ಬಿಜೆಪಿ ಕೂಡಾ ನಾಚುವಷ್ಟು ಆಕ್ರಮಣಕಾರಿ ದಾಳಿ ಶುರು ಮಾಡಿದ್ದಾರೆ. ಆ ದಾಳಿಯಲ್ಲಿ ವಿರೋಧ ಪಕ್ಷದ ಹೊಣೆಗಾರಿಕೆಗಿಂತ ಸ್ಪಷ್ಟವಾಗಿ ಬೇರೇನೊ ಗೋಚರಿಸುತ್ತಿದೆ. ಏನದು?

ಕಳಪೆ ಸೀಟು ಗಳಿಕೆಗೆ (19) ಕುಸಿದ ಅವರ ಪಕ್ಷದ ಸೋಲಿನ ಹತಾಶೆಯಾ? ಅಥವಾ ಸಿದ್ದರಾಮಯ್ಯನವರ ಮೇಲೆ ಅವರಿಗಿರುವ ವೈಯಕ್ತಿಕ ಸಿಟ್ಟಾ? ಅಥವಾ ಜಾತಿವಾದದ ಕಡುಕೆಟ್ಟ ಅಸಹನೆಯಾ?

ವೈಯಕ್ತಿಕ ಮುನಿಸು.. ನೋ ಡೌಟ್

ಸಿದ್ದರಾಮಯ್ಯನವರ ಮೇಲೆ ಕುಮಾರಸ್ವಾಮಿಯವರಿಗೆ ಇರುವ ವೈಯಕ್ತಿಕ ಮುನಿಸು ಏನಿದೆಯಲ್ಲ, ಅದೇ ಈ ದಾಳಿಗೆ ಪ್ರಧಾನ ಕಾರಣ. ಆದರೆ ಇದಿಷ್ಟಕ್ಕೇ ನಾವು ಸಂತೃಪ್ತಗೊಂಡರೆ, ನಮ್ಮ ಮೂಲ ಪ್ರಶ್ನೆಗೆ ಪರಿಪೂರ್ಣ ಉತ್ತರ ಕಂಡುಕೊಂಡಂತಾಗುವುದಿಲ್ಲ. ಯಾಕೆಂದರೆ, ಈ ಕಾರಣದಲ್ಲಿ ಮೊದಲನೇ ಮತ್ತು ಮೂರನೇ ಕಾರಣಗಳ ಛಾಯೆಯನ್ನು ನಾವು ನಿರಾಕರಿಸಲು ಸಾಧ್ಯವಿಲ್ಲ. ಅರ್ಥಾತ್, ಸೋಲಿನ ಹತಾಶೆ ಮತ್ತು ಜಾತಿವಾದದ ಅಸಹನೆ ಕೂಡಾ ಕುಮಾರಸ್ವಾಮಿಯವರ ದಾಳಿಯ ತೀವ್ರತೆಯನ್ನು ನಿರ್ಧರಿಸುತ್ತಿವೆ. ಈ ಥರದ ಪ್ರೇರಣೆಗಳಿಂದ ನಡೆಯುವ ರಾಜಕೀಯ ದಾಳಿಗಳು ಪ್ರಬುದ್ಧ ರಾಜಕಾರಣಕ್ಕಷ್ಟೇ ಹಿನ್ನಡೆಯಲ್ಲ, ಬದಲಿಗೆ ಕುಮಾರಸ್ವಾಮಿಯವರ ರಾಜಕೀಯ ವರ್ಚಸ್ಸನ್ನೂ ಶಿಥಿಲಗೊಳಿಸುತ್ತವೆ.

ಸೋಲಿನ ಹತಾಶೆಯನ್ನು ನಾವು ರುಜುವಾತು ಮಾಡಬೇಕಾದ ಜರೂರತ್ತೇನೂ ಇಲ್ಲ. ಸ್ಪಷ್ಟ ಬಹುಮತ ಪಡೆದು ಸ್ವಂತ ಬಲದ ಮೇಲೆ ಸರ್ಕಾರ ರಚಿಸುವ ಭ್ರಮೆ ಕುಮಾರಸ್ವಾಮಿಯವರಿಗಾಗಲಿ, ಅಥವಾ ಅವರ ತಂದೆ ಮಾಜಿ ಪ್ರಧಾನಿ ದೇವೇಗೌಡರಿಗಾಗಲಿ ಇರಲಿಲ್ಲವಾದರೂ, ಕಡೇಪಕ್ಷ 2018ರ ಫಲಿತಾಂಶ ಪುನರಾವರ್ತನೆಯಾಗಿ ಅತಂತ್ರ ವಿಧಾನಸಭೆ ನಿರ್ಮಾಣವಾಗುತ್ತದೆ; ಆಗ, ತಮ್ಮ ಪಕ್ಷ ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ ಎಂಬ ಆಸೆಯಂತೂ ಕುಮಾರಸ್ವಾಮಿಯವರಿಗಿತ್ತು. ಅಂತಹ ಸಂದರ್ಭ ಎದುರಾದರೆ, ಯಾವುದೇ ಪಕ್ಷಕ್ಕೂ ಸುಲಭದ ತುತ್ತಾಗದೆ, ದೃಢವಾಗಿ ತನ್ನ ಇಂಗಿತವನ್ನು ಸಾಧಿಸಿಕೊಳ್ಳಲು ಅವಕಾಶ ಸೃಷ್ಟಿಸಿಕೊಳ್ಳುವ ಸಲುವಾಗಿಯೇ ಫಲಿತಾಂಶ ಹೊರಬೀಳುವ ಸನಿಹದಲ್ಲಿ ಕುಮಾರಸ್ವಾಮಿಯವರು ವಿದೇಶ ಪ್ರವಾಸಕ್ಕೆ ತೆರಳಿದ್ದು.

ಜೆಡಿಎಸ್‌ನ ತಂತ್ರಗಾರಿಕೆ..

ಹೊಂದಾಣಿಕೆಯ ಪ್ರಸ್ತಾಪವನ್ನು ಹಿಡಿದು ಎಡತಾಕುವ ಬಿಜೆಪಿ ಅಥವಾ ಕಾಂಗ್ರೆಸ್ ಪಕ್ಷಗಳಿಗೆ, ಕುಮಾರಸ್ವಾಮಿಯವರ ಅನುಪಸ್ಥಿತಿಯನ್ನೇ ನೆಪ ಮಾಡಿಕೊಂಡು ಚೌಕಾಶಿಗೆ ಅವುಗಳನ್ನು ಬಗ್ಗಿಸುವುದು ಜೆಡಿಎಸ್‌ನ ತುಂಬಾ ಜಾಣ್ಮೆಯ ತಂತ್ರಗಾರಿಕೆಯಾಗಿತ್ತು. ಇವೆರಡೂ ಪಕ್ಷಗಳು ಒಂದನ್ನೊಂದು ಅಧಿಕಾರದಿಂದ ದೂರ ಇಡುವ ತುರ್ತಿನಲ್ಲಿದ್ದು, ಒಪ್ಪಂದದ ಮಾತುಕತೆ ವಿಳಂಬವಾದಷ್ಟೂ ಅವು ಮೆತ್ತಗಾಗಿ ನಮ್ಮ ಪ್ರಸ್ತಾಪಕ್ಕೆ ಒಪ್ಪುತ್ತವೆ ಅನ್ನೋದನ್ನು ದೇವೇಗೌಡರಂತಹ ಅನುಭವಿ ರಾಜಕಾರಣಿಗೆ ಊಹಿಸಲು ಕಷ್ಟವೇನೂ ಅಲ್ಲ. ಆದರೆ ಅವರ ಲೆಕ್ಕಾಚಾರವೆಲ್ಲ ಬುಡಮೇಲಾಗುವಂತೆ, ಕರ್ನಾಟಕದ ಮತದಾರ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ದಯಪಾಲಿಸಿದ್ದ; ಅಲ್ಲದೇ, ಕುಮಾರಸ್ವಾಮಿಯವರ ಪಕ್ಷವನ್ನು 20ರ ಗಡಿ ಕೂಡಾ ದಾಟಿಸದೆ, ಹತ್ತೊಂಬತ್ತರ ಸರಹದ್ದಿಗೆ ತಂದು ನಿಲ್ಲಿಸಿದ್ದ. ಇದು ಸಿಂಗಪೂರದಲ್ಲಿದ್ದ ಕುಮಾರಸ್ವಾಮಿಯವರು ಊಹಿಸದಿದ್ದ ದೊಡ್ಡ ಆಘಾತ. ಅದನ್ನು ಇನ್ನಷ್ಟು ತೀಕ್ಷ್ಣವಾಗಿಸಿದ್ದು ಅವರ ಮಗ ನಿಖಿಲ್ ಕುಮಾರಸ್ವಾಮಿಯವರ ಸತತ ಎರಡನೇ ಸೋಲು!

ಕಡೇಪಕ್ಷ, ಬಿಜೆಪಿಗೆ ತಾನು ಗೆಲ್ಲುವುದಿಲ್ಲ ಎಂಬ ಸ್ಪಷ್ಟ ಮುನ್ನೋಟವಿತ್ತು. ಹಾಗಾಗಿಯೇ, ಅವರು ಮುಂಬರುವ ಸರ್ಕಾರಕ್ಕೆ ಆರಂಭದಲ್ಲಿಯೇ ಕೆಟ್ಟ ಹೆಸರು ಬರುವಂತೆ ವಿದ್ಯುತ್ ದರಗಳ ಬೆಲೆಯನ್ನು ಹೆಚ್ಚಿಸುವ ಪ್ರಸ್ತಾಪವನ್ನು ಅಂಗೀಕರಿಸುವ ಮೂಲಕ ತಮ್ಮ ಸೋಲನ್ನು ಸಂತೈಸಿಕೊಳ್ಳಲು ಬೇಕಾದ ತಯಾರಿ ಮಾಡಿಕೊಂಡಿದ್ದರು. ಆದರೆ ಜೆಡಿಎಸ್ ಪಾಲಿಗೆ, ಮುಖ್ಯವಾಗಿ ಕುಮಾರಸ್ವಾಮಿಯವರಿಗೆ ಇದೊಂದು ದೊಡ್ಡ ಆಘಾತದ ಫಲಿತಾಂಶ. ಅವರು ಹತಾಶೆಗೆ ತುತ್ತಾಗಿರುವುದರಲ್ಲಿ ಅಚ್ಚರಿ ಇಲ್ಲ. ಯಾಕೆಂದರೆ ತಮ್ಮ ತಂದೆ ದೇವೇಗೌಡರಂತೆ, ಕುಮಾರಸ್ವಾಮಿಯವರು ತಳಮಟ್ಟದಿಂದ ರಾಜಕಾರಣದ ಏಳುಬೀಳುಗಳನ್ನು ಕಂಡು ಬಂದವರಲ್ಲ. ಅವರ ಹೇಳಿಕೆಗಳು, ಆರೋಪಗಳು ಪ್ರಬುದ್ಧ ರಾಜಕಾರಣದ ಮಾನದಂಡಗಳನ್ನು ಮುಟ್ಟಲಾರದೆ, ಅವರು ಪಜೀತಿಗೆ ಸಿಲುಕಿಕೊಂಡಿದ್ದೇ ಇದಕ್ಕೆ ಸಾಕ್ಷಿ. ಇತ್ತೀಚೆಗೆ ಅವರು ’ನನಗೆ ರಾಜಕಾರಣದಲ್ಲಿ ಯಾವುದೇ ಆಸಕ್ತಿಯಿಲ್ಲ, ಆದರೆ ಜನರ ಒತ್ತಾಯಕ್ಕಾಗಿ ಇಲ್ಲಿದ್ದೇನಷ್ಟೆ’ ಎಂದು ನೀಡಿದ ಹೇಳಿಕೆ ಕೂಡಾ ಇದನ್ನು ಸಾಬೀತು ಮಾಡುತ್ತೆ. ಹಾಗಾಗಿ ಕುಮಾರಸ್ವಾಮಿಯವರಿಗೆ ಈ ಸೋಲನ್ನು ಸ್ಪರ್ಧಾತ್ಮಕ ರಾಜಕಾರಣಿಯಂತೆ ಸ್ವೀಕರಿಸಲು ಸಾಧ್ಯವಾಗಿಲ್ಲ ಎಂಬುದನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು.

ಕುಮಾರಸ್ವಾಮಿಯವರು ಆಘಾತಕ್ಕೀಡಾಗಲು ಮತ್ತೊಂದು ಕಾರಣ..

ಕುಮಾರಸ್ವಾಮಿಯವರು ನಿರ್ದಿಷ್ಟವಾಗಿ ಈ ಚುನಾವಣೆಯ ಫಲಿತಾಂಶದಿಂದ ಆಘಾತಕ್ಕೀಡಾಗಲು ಮತ್ತೊಂದು ಕಾರಣವಿದೆ. ಜೆಡಿಎಸ್ ಪಕ್ಷದ ಮೂಲ ಅಡಿಪಾಯವೇ ದೇವೇಗೌಡರು. ಇವತ್ತು ಒಕ್ಕಲಿಗ ಸಮುದಾಯದ ಬಹುದೊಡ್ಡ ಸಮೂಹ ಜೆಡಿಎಸ್ ಪಕ್ಷವನ್ನು ಬೆಂಬಲಿಸುತ್ತದೆಂದರೆ, ಅದಕ್ಕೆ ಮುಖ್ಯ ಕಾರಣ ದೇವೇಗೌಡರ ಸೆಳೆತ; ಸಮುದಾಯದ ನಾಯಕರಾಗಿ ಅವರು ಹೊಮ್ಮಿದ ರೀತಿ ಮತ್ತು ಸೃಷ್ಟಿಸಿಕೊಂಡ ವರ್ಚಸ್ಸು. ಅಂತಹ ದೇವೇಗೌಡರು, ಈ ಚುನಾವಣೆಯಲ್ಲೇ ತುಂಬಾ ಪ್ರಯಾಸಪಟ್ಟು ಪ್ರಚಾರದಲ್ಲಿ ಕಾಣಿಸಿಕೊಂಡರು ಮತ್ತು ಇದು ತಮ್ಮ ಕೊನೆಯ ಸಕ್ರಿಯ ಚುನಾವಣಾ ರಾಜಕಾರಣ ಎಂದು ಘೋಷಿಸಿದ್ದಾರೆ. ದೇವೇಗೌಡರ ಸಕ್ರಿಯ ತೊಡಗಿಕೊಳ್ಳುವಿಕೆಯಿರದ ಮುಂಬರುವ ಚುನಾವಣೆಗಳಲ್ಲಿ ಜೆಡಿಎಸ್ ಪಕ್ಷದ ಅಸ್ತಿತ್ವ ಹೇಗಿರಲಿದೆ ಎಂಬುದರ ಅಂದಾಜು ಖುದ್ದು ದೇವೇಗೌಡರಿಗೇ ಇರುವುದರಲ್ಲಿ ಅನುಮಾನ. ಅಕಸ್ಮಾತ್ ಈ ಫಲಿತಾಂಶ ತಮ್ಮ ಪಕ್ಷವನ್ನು ಅಧಿಕಾರದ ಹೊಸ್ತಿಲಿಗೆ ಕೊಂಡೊಯ್ದರೆ, ಅದನ್ನು ಬಳಸಿಕೊಂಡು ಪಕ್ಷವನ್ನು ಕಟ್ಟಬಹುದು ಎಂಬ ನಿರೀಕ್ಷೆ ಕುಮಾರಸ್ವಾಮಿಯವರಿಗಿತ್ತು. ಆದರೆ ಅದಕ್ಕೆ ಕರ್ನಾಟಕದ ಮತದಾರ ಆಸ್ಪದ ಕೊಟ್ಟಿಲ್ಲ. ಇದು ಅವರ ಹತಾಶೆಯ ತೀವ್ರತೆ ಹೆಚ್ಚಾಗಲು ಇನ್ನೊಂದು ಕಾರಣ.

ಗಂಭೀರ ಮತ್ತು ಪ್ರಾಮಾಣಿಕ ಆತ್ಮವಿಮರ್ಶೆಗೆ ಮುಂದಾಗಿದ್ದೇ ಆದಲ್ಲಿ..

ಹಾಗೆ ನೋಡಿದರೆ, ಕುಮಾರಸ್ವಾಮಿಯವರು ಹಾಗೂ ಜೆಡಿಎಸ್ ಪಕ್ಷ ಗಂಭೀರ ಮತ್ತು ಪ್ರಾಮಾಣಿಕ ಆತ್ಮವಿಮರ್ಶೆಗೆ ಮುಂದಾಗಿದ್ದೇ ಆದಲ್ಲಿ, ಇದು ದೊಡ್ಡಮಟ್ಟದ ಸೋಲೇನೂ ಅಲ್ಲ. ಯಾಕೆಂದರೆ, ಜನತಾದಳ ಇಬ್ಭಾಗವಾಗಿ ಜೆಡಿಎಸ್ ಪಕ್ಷ ಅಸ್ತಿತ್ವಕ್ಕೆ ಬಂದಾಗ, 1999ರ ಚುನಾವಣೆಯಲ್ಲಿ ಜೆಡಿಎಸ್ ಗಳಿಸಿದ್ದು ಈಗಿಗಿಂತಲೂ ತುಂಬಾ ಕಮ್ಮಿ, ಅಂದರೆ ಕೇವಲ 10 ಸೀಟುಗಳನ್ನು ಮಾತ್ರ! ದೇವೇಗೌಡರು, ಸಿದ್ದರಾಮಯ್ಯ, ಪಿಜಿಆರ್ ಸಿಂಧ್ಯಾ, ಎಂಪಿ ಪ್ರಕಾಶ್, ಸಿ.ಎಂ. ಇಬ್ರಾಹಿಂ ತರಹದ ವೈಬ್ರೆಂಟ್ ನಾಕರುಗಳಿದ್ದಾಗ್ಯೂ ಅಷ್ಟು ಕಡಿಮೆ ಸೀಟು ದಕ್ಕಿದ್ದವು. ಆದರೆ ಅವರೆಲ್ಲ ಆ ಸೋಲನ್ನು ಸವಾಲಾಗಿ ಸ್ವೀಕರಿಸಿ, ರಚನಾತ್ಮಕ ರಾಜಕಾರಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರಿಂದ ಪಕ್ಷವು 2004ರ ಚುನಾವಣೆಯ ಹೊತ್ತಿಗೆ58ಸೀಟುಗಳನ್ನು ಗೆಲ್ಲುವ ಮಟ್ಟಕ್ಕೆ ಬೆಳೆಯಿತು. ಜೆಡಿಎಸ್‌ಗೆ ಆಗ ಇದ್ದ ಅನುಕೂಲಕರ ವಾತಾವರಣ ಮತ್ತು ವೈವಿಧ್ಯಮಯ ನಾಯಕತ್ವಗಳು ಈಗ ಇಲ್ಲದಿರಬಹುದು. ಆದರೆ ಈಗಿರುವ ಪ್ರತಿಕೂಲಗಳನ್ನು ಮೀರಿ ನಿಲ್ಲುವ ವಿಸ್ತಾರಕ್ಕೆ ಕುಮಾರಸ್ವಾಮಿಯವರು ಹಂಬಲಿಸಿದರೆ, ಜೆಡಿಎಸ್ ಪಕ್ಷ ಹಾಗೂ ಅವರ ವೈಯಕ್ತಿಕ ವರ್ಚಸ್ಸು ಎರಡೂ ವೃದ್ಧಿಯಾಗುವ ಸಾಧ್ಯತೆಯುಂಟು. ಹತಾಶೆಯ ತೀರ್ಮಾನಗಳು ಮತ್ತು ವರ್ತನೆಗಳು ಯಾವುದೇ ವ್ಯಕ್ತಿಯ ಘನತೆಯನ್ನು ಕುಂದಿಸುತ್ತವೆ.

ಆ ಸಿಟ್ಟಿನಲ್ಲಿ ಜಾತಿಯ ಪಾತ್ರವೇನು?

ಆದರೆ ನಾವೀಗ ಮುಖ್ಯವಾಗಿ ಗಮನಿಸಬೇಕಿರುವುದು ಕುಮಾರಸ್ವಾಮಿಯವರಿಗೆ ಸಿದ್ದರಾಮಯ್ಯನವರ ಮೇಲೆ ಯಾಕಷ್ಟು ವೈಯಕ್ತಿಕ ಸಿಟ್ಟು? ಹಾಗೂ ಆ ಸಿಟ್ಟಿನಲ್ಲಿ ಜಾತಿಯ ಪಾತ್ರವೇನು? ಎಂಬುದನ್ನು. ನಿಜ ಹೇಳಬೇಕೆಂದರೆ, ಸ್ವತಃ ದೇವೇಗೌಡರಿಗೂ ಸಿದ್ದರಾಮಯ್ಯನವರ ಮೇಲೆ ಅಪಾರ ಸಿಟ್ಟಿದೆ. ಆದರೆ ಆ ಸಿಟ್ಟಿನ ತೋರ್ಪಡಿಕೆಯಲ್ಲಿ ಮತ್ತು ನಿಯಂತ್ರಿಸಿಕೊಳ್ಳುವುದರಲ್ಲಿ ಅವರು ತಮ್ಮ ರಾಜಕೀಯ ಅನುಭವವನ್ನು ಬಳಸಿಕೊಂಡಿದ್ದಾರೆ. ಹಾಗಾಗಿ ಸಿದ್ದರಾಮಯ್ಯನವರ ಕುರಿತು ದೇವೇಗೌಡರು ಮಾಡುವ ಆರೋಪ ಅಥವಾ ಅವರಾಡುವ ವ್ಯಂಗ್ಯದ ಮಾತುಗಳಲ್ಲಿ ರಾಜಕೀಯ ಮುತ್ಸದ್ದಿತನವನ್ನು ಕಾಣಬಹುದು. ಕುಮಾರಸ್ವಾಮಿಯವರ ಸಿಟ್ಟಿನಲ್ಲಿ ಆ ನಿಯಂತ್ರಣವೂ ಇಲ್ಲ, ಮುತ್ಸದ್ದಿತನವೂ ಕಾಣುವುದಿಲ್ಲ.

ಜೆಡಿಎಸ್‌ನಿಂದ ಹೊರಬಂದಿದ್ದಕ್ಕೆ ಈ ಪರಿ ಸಿಟ್ಟಾ?

ದೇವೇಗೌಡರ ಜೊತೆ ಮುನಿಸಿಕೊಂಡು ಸಿದ್ದರಾಮಯ್ಯನವರು ಜೆಡಿಎಸ್‌ನಿಂದ ಹೊರಬಂದಿದ್ದರಿಂದ ಕುಮಾರಸ್ವಾಮಿಯವರಿಗೆ ಈ ಪರಿ ಸಿಟ್ಟಾ? ಖಂಡಿತ, ಸಿಟ್ಟು ಹುಟ್ಟಲು ಅದೇ ಕಾರಣ. ಆದರೆ ಆ ಸಿಟ್ಟು ಮುಂದುವರೆದುಕೊಂಡು ಬರಲು ಬೇರೆಯದೇ ಕಾರಣಗಳಿವೆ. ಯಾಕೆಂದರೆ, ಸಿದ್ದರಾಮಯ್ಯನವರಂತೆ ಜೆಡಿಎಸ್ ಪಕ್ಷವನ್ನು ತೊರೆದಿದ್ದ ಹಲವರ ಜೊತೆ ಕುಮಾರಸ್ವಾಮಿಯವರಿಗೆ ಇದೇ ಬಗೆಯ ಸಿಟ್ಟಿಲ್ಲ ಅನ್ನೋದೆ ಇದಕ್ಕೆ ಸಾಕ್ಷಿ. ಸಿದ್ದರಾಮಯ್ಯನವರ ಜೊತೆ ಪಕ್ಷ ಬಿಟ್ಟಿದ್ದ ಸಿ ಎಂ ಇಬ್ರಾಹಿಂ ಅವರನ್ನು ತಮ್ಮ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದರು. ತಮ್ಮ ರಾಜಕೀಯ ಜೀವನದುದ್ದಕ್ಕೂ ದೇವೇಗೌಡರ ಕುಟುಂಬವನ್ನು ಟೀಕಿಸುತ್ತಲೇ ಬಂದ ಎಚ್.ವಿಶ್ವನಾಥ್ ಅವರಿಗೂ ಪಕ್ಷದ ಅಧ್ಯಕ್ಷ ಗಾದಿ ಕೊಟ್ಟರು. ಆದರೆ ಸಿದ್ದರಾಮಯ್ಯನವರ ಮೇಲಷ್ಟೆ ಯಾಕೆ ಈ ನಿರಂತರ ಸಿಟ್ಟು?

ಸಿದ್ದರಾಮಯ್ಯನವರ ಮೇಲಷ್ಟೆ ಯಾಕೆ ಸಿಟ್ಟು?

ಅದಕ್ಕೆ ಮುಖ್ಯ ಕಾರಣ ಸಿದ್ದರಾಮಯ್ಯನವರಲ್ಲಿರುವ ಸಾಮರ್ಥ್ಯ! ಆ ಸಾಮರ್ಥ್ಯದಿಂದಾಗಿ ನಿರಂತರವಾಗಿ ಅವರು ಮೇಲಕ್ಕೇರುತ್ತಿರುವ ಬೆಳವಣಿಗೆ! ಇದನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ನಾವು ಜಾತಿವ್ಯವಸ್ಥೆಯ ಸಂಕೀರ್ಣತೆಯನ್ನು ಅರ್ಥ ಮಾಡಿಕೊಳ್ಳಬೇಕು. ಈ ಶ್ರೇಣಿ ವ್ಯವಸ್ಥೆಯಲ್ಲಿ ತುತ್ತತುದಿಯಲ್ಲಿರುವ ದ್ವಿಜರನ್ನು ಬಿಟ್ಟರೆ ಇನ್ನುಳಿದವರೆಲ್ಲರೂ ಶೋಷಿತರು ಎಂಬುದು ಎಷ್ಟು ಸತ್ಯವೋ, ಕಟ್ಟಕಡೆಯ ಅಂತ್ಯಜರನ್ನು ಹೊರತುಪಡಿಸಿದರೆ ಎಲ್ಲರೂ ಶೋಷಕರು ಎನ್ನುವುದೂ ಅಷ್ಟೇ ಸತ್ಯ. ಶ್ರೇಣಿ ವ್ಯವಸ್ಥೆಯಲ್ಲಿ ನಮಗಿಂತ ಮೇಲಿನವರ ದೌರ್ಜನ್ಯವನ್ನು, ಹುನ್ನಾರಗಳನ್ನು ಪ್ರಶ್ನಿಸುವವರೇ, ತಮಗಿಂತ ಕೆಳಗಿರುವವರ ಮೇಲೆ ಯಾವ ಅಳುಕೂ ಇಲ್ಲದೆ ದೌರ್ಜನ್ಯ ಎಸಗುತ್ತಾರೆ. ಜಾತಿವ್ಯವಸ್ಥೆಯ ಫಲಾನುಭವಿಗಳಾಗುತ್ತಾರೆ. ಫ್ಯೂಡಲ್ ಹಿನ್ನೆಲೆಯ ಜಾತಿ ಸಮೂಹಗಳಲ್ಲಿ ಇದನ್ನು ಸ್ಪಷ್ಟವಾಗಿ ಗುರುತಿಸಬಹುದು.

ಕುವೆಂಪು, ಶಾಂತವೇರಿ ಗೋಪಾಲಗೌಡರಂತಹ ಸಮಕಾಲೀನ ವಿಶಾಲ ವ್ಯಕ್ತಿತ್ವಗಳ ಹೊರತಾಗಿಯೂ, ಕರ್ನಾಟಕದ ಸಾಮಾಜಿಕ ವಿಸ್ತಾರದಲ್ಲಿ ದೇವೇಗೌಡರು-ಕುಮಾರಸ್ವಾಮಿಯವರು ಪ್ರತಿನಿಧಿಸುವ ಒಕ್ಕಲಿಗ ಜಾತಿಯು ಇಂತಹ ವರ್ಗೀಕರಣಕ್ಕೆ ಸೇರುವಂತದ್ದು. ಹಳೇ ಮೈಸೂರು ಪ್ರಾಂತ್ಯದ ಬಹುಪಾಲು ಜಾತಿ ದೌರ್ಜನ್ಯದ ಪ್ರಕರಣಗಳನ್ನು ಪರಿಶೀಲಿಸಿದಾಗ ನಮಗಿದು ಸಾಬೀತಾಗುತ್ತದೆ. ತೀರಾ ಇತ್ತೀಚೆಗೆ ಮಾಗಡಿಯಲ್ಲಿ ದಲಿತ ಶಿಕ್ಷಕನೊಬ್ಬ ದೇವರ ಆರತಿ ತಟ್ಟೆ ಮುಟ್ಟಿದ್ದಕ್ಕೆ ನಡೆದ ಹಲ್ಲೆ, ಇದಕ್ಕೊಂದು ತಾಜಾ ಉದಾಹರಣೆ. ನಾನಿದನ್ನು ಕೇವಲ ಒಕ್ಕಲಿಗ ಜಾತಿಗೆ ಸೀಮಿತಗೊಳಿಸುವುದಿಲ್ಲ. ಶ್ರೇಣಿ ವ್ಯವಸ್ಥೆಯಲ್ಲಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸಬಲಗೊಳ್ಳುತ್ತಾ ಬಂದ ಪ್ರತಿ ಜಾತಿಯು ಸಹಾ ತನ್ನೊಳಗೆ ಫ್ಯೂಡಲ್‌ತನಗಳನ್ನು ಬೆಳೆಸಿಕೊಳ್ಳುತ್ತಾ ಬರುತ್ತದೆ. ಒಂದು ಕಾಲಕ್ಕೆ ತೀರಾ ಕೆಳಮಟ್ಟದ ಶೋಷಿತ ಸಮುದಾಯಗಳೆಂದು ಗುರುತಿಸಿಕೊಂಡಿದ್ದ ಕುರುಬ ಮತ್ತು ನಾಯಕ ಸಮುದಾಯಗಳು ಇವತ್ತು ತಮಗೆ ಸಿಕ್ಕಿರುವ ಶೈಕ್ಷಣಿಕ, ರಾಜಕೀಯ ಸೌಲತ್ತುಗಳಿಂದಾಗಿ ಫ್ಯೂಡಲ್‌ಗಳಾಗಿ ರೂಪಾಂತರವಾಗುತ್ತಿರುವುದನ್ನು ಉತ್ತರ ಕರ್ನಾಟಕ ಭಾಗದಲ್ಲಿ ದಾಖಲಾಗುತ್ತಿರುವ ಜಾತಿ ದೌರ್ಜನ್ಯ ಪ್ರಕರಣಗಳು ಸಾಬೀತು ಮಾಡುತ್ತವೆ. ಇನ್ನು ಬಸವಣ್ಣನವರ ಸಮಾನತೆಯ ಆಶಯದ ಮೇಲೆ ಹುಟ್ಟಿಕೊಂಡ ಲಿಂಗಾಯತ ಸಮುದಾಯವಾಗಲಿ, ಜಾತಿವಿರೋಧಿ ಹೋರಾಟದ ಹರಿಕಾರರಾದ ನಾರಾಯಣ ಗುರುಗಳನ್ನು ತಮ್ಮ ಆದರ್ಶವಾಗಿಸಿಕೊಂಡ ಬಿಲ್ಲವ ಸಮುದಾಯವಾಗಲಿ (ಕೋಮುವಾದವು ಜಾತಿವಾದದ ಮತ್ತೊಂದು ಮಜಲು ಎನ್ನುವುದನ್ನು ಒಪ್ಪುವುದಾದರೆ, ಮನುಷ್ಯಪ್ರೀತಿಯನ್ನು ಬೋಧಿಸಿದ ಈ ಮಹಾನ್ ಸಂತರ ಆಶಯಕ್ಕೆ ವಿರುದ್ಧವಾಗಿ ಅನ್ಯಧರ್ಮೀಯರ ಮೇಲೆ ದ್ವೇಷ ಸಾಧಿಸುವ ಜೀವದ್ರೋಹಿಗಳ ಹುನ್ನಾರಕ್ಕೆ ಈ ಸಮುದಾಯಗಳು ಬಲಿಯಾಗಿರುವುದನ್ನು ಪರಿಗಣಿಸಿದಾಗ) ಈ ವಿಶ್ಲೇಷಣೆಯಿಂದ ಹೊರಗುಳಿಯಲಾರವು ಎನ್ನುವುದು ನಿಜಕ್ಕೂ ದುರಂತದ ಸಂಗತಿ.

ತಮ್ಮ ಪಕ್ಷದ ಹೆಸರಿಗೆ ಜಾತ್ಯಾತೀತ ಪದವನ್ನು ಸೇರಿಸಿಕೊಂಡಿದ್ದಾಗ್ಯೂ ದೇವೇಗೌಡರು ಅನುಸರಿಸಿಕೊಂಡು ಬಂದಿದ್ದು ಶುದ್ಧ ಜಾತಿ ರಾಜಕಾರಣವನ್ನು. ಒಬ್ಬ ಮಾಜಿ ಪ್ರಧಾನಿ, ಮಾಜಿ ಮುಖ್ಯಮಂತ್ರಿ, ಹಲವು ಸಲ ಮಂತ್ರಿಗಿರಿಗಳನ್ನು ಹೊಂದಿದ್ದಾಗ್ಯೂ ಜೆಡಿಎಸ್ ಪಕ್ಷವನ್ನು ಹಳೇ ಮೈಸೂರು ಪ್ರಾಂತ್ಯದಿಂದಾಚೆಗೆ ವಿಸ್ತರಿಸಲು ದೇವೇಗೌಡರಿಗಾಗಲಿ, ಕುಮಾರಸ್ವಾಮಿಯವರಿಗಾಗಲಿ ಏಕೆ ಸಾಧ್ಯವಾಗಲಿಲ್ಲ ಎಂಬ ಪ್ರಶ್ನೆಗೆ ಉತ್ತರವೇ ಈ ಹೇಳಿಕೆಯನ್ನು ಸಮರ್ಥಿಸುತ್ತದೆ. ಜಾತಿ ರಾಜಕಾರಣ ಅರ್ಥಾತ್ ಜಾತಿ ಸಂಕೀರ್ಣತೆಯನ್ನು ತುಂಬಿಕೊಂಡವರಿಗೆ ತಮಗಿಂತ ಕೆಳಸ್ತರದ ವ್ಯಕ್ತಿ ತಮಗಿಂತ ಸಮರ್ಥಶಾಲಿಯಾಗಿರುವುದನ್ನು  ಹಾಗೂ ತಮಗಿಂತ ಎತ್ತರಕ್ಕೆ ಬೆಳೆದು ನಿಲ್ಲುವುದನ್ನು ಯಾವತ್ತೂ ಸಹಿಸಲು ಸಾಧ್ಯವಿಲ್ಲ. ಹಾಗೊಂದು ವೇಳೆ ಬೆಳೆಯುವುದಾದರೆ, ತಮ್ಮ ಪ್ರಭಾ ವಲಯದಲ್ಲಿದ್ದುಕೊಂಡು, ತನ್ನ ಕೃಪೆಯಿಂದ ಬೆಳೆಯಬೇಕೆ ವಿನಾ, ತನ್ನನ್ನು ಎದುರು ಹಾಕಿಕೊಂಡು ಬೆಳೆಯುವುದನ್ನು ಸಹಿಸಲಾರವು. ಅದರಲ್ಲೂ ಒಂದು ಕಾಲದಲ್ಲಿ ತಮ್ಮ ಹಿಡಿತದಲ್ಲಿದ್ದ ವ್ಯಕ್ತಿ ತಮ್ಮ ವಿರುದ್ಧವೇ ಸೆಟೆದು ಬೆಳೆಯುವುದನ್ನು ಸುಮ್ಮನೆ ಸಹಿಸಿಕೊಳ್ಳುವ ಗುಣವನ್ನು ಶ್ರೇಣಿಕರಣದ ಜಾತಿವ್ಯವಸ್ಥೆ ಕಲಿಸುವುದಿಲ್ಲ. ಇದೇ ಸಿದ್ದರಾಮಯ್ಯನವರ ಮೇಲೆ ಕುಮಾರಸ್ವಾಮಿಯವರು ಸಿಟ್ಟು ಸಾಧಿಸಲು ಮುಖ್ಯ ಕಾರಣ.

ಸಿದ್ದರಾಮಯ್ಯನವರು ಕುಮಾರಸ್ವಾಮಿಯವರ ರಾಜಕಾರಣವನ್ನು ಟೀಕಿಸುತ್ತಾರೆ ಎಂಬುದೊಂದೇ ಸಿಟ್ಟಿಗೆ ಕಾರಣವಲ್ಲ. ಹಾಗಿದ್ದರೆ, ಯಡಿಯೂರಪ್ಪನವರೂ ಕುಮಾರಸ್ವಾಮಿಯವರನ್ನು ರಾಜಕೀಯ ಕಾರಣಕ್ಕೆ ಟೀಕಿಸುತ್ತಾರೆ. ಅವರ ಮೇಲೂ ಇದೇ ಜಿದ್ದನ್ನು ಸಾಧಿಸಿದ್ದಾರಾ? ಇಲ್ಲ! ಹಾಗೆ ನೋಡಿದರೆ, ಕುಮಾರಸ್ವಾಮಿಯವರ ರಾಜಕೀಯ ವ್ಯಕ್ತಿತ್ವಕ್ಕೆ ದೊಡ್ಡ ಏಟು ಕೊಟ್ಟಿದ್ದು ಸಿದ್ದರಾಮಯ್ಯನವರಲ್ಲ, ಯಡಿಯೂರಪ್ಪನವರು! ಅದರಲ್ಲೂ ಯಡಿಯೂರಪ್ಪನವರ ತಪ್ಪಿಲ್ಲ, ಸ್ವತಃ ಕುಮಾರಸ್ವಾಮಿಯವರದೇ ಪ್ರಮಾದವಿತ್ತು. 2006 ರಲ್ಲಿ ಬಿಜೆಪಿ ಜೊತೆ ಸೇರಿಕೊಂಡು ಸಮ್ಮಿಶ್ರ ಸರ್ಕಾರ ರಚಿಸಿದ್ದಾಗ, ಒಪ್ಪಂದದ ಪ್ರಕಾರ ಯಡಿಯೂರಪ್ಪನವರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಹಸ್ತಾಂತರ ಮಾಡದ ಕುಮಾರಸ್ವಾಮಿಯವರ ವಿರುದ್ಧ ನಾಡಿನಾದ್ಯಂತ ‘ವಚನಭ್ರಷ್ಟ’ತೆಯ ಪ್ರಚಾರ ಮಾಡಿ, ಆ ಅನುಕಂಪದಲ್ಲಿ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಿದ್ದು ಯಡಿಯೂರಪ್ಪನವರು. ಇವತ್ತಿಗೂ ಕುಮಾರಸ್ವಾಮಿಯವರಿಗೆ ಆ ಕಳಂಕವನ್ನು ಸಂಪೂರ್ಣವಾಗಿ ನಿವಾರಿಸಿಕೊಳ್ಳಲು ಸಾಧ್ಯವಾಗಿಲ್ಲ. ಕುಮಾರಸ್ವಾಮಿಯವರ ಆಡಳಿತವನ್ನು ಮೆಚ್ಚುವವರು ಕೂಡಾ ವಚನಭ್ರಷ್ಟ ಆರೋಪದಿಂದಾಗಿ ಅವರಿಗೆ ಜೋತುಬಿದ್ದಿರುವ ಮಾತು ತಪ್ಪುವ ಅವರ ಗುಣವನ್ನು ಟೀಕಿಸುತ್ತಾರೆ.

ಅಷ್ಟಾದರೂ ಕುಮಾರಸ್ವಾಮಿಯವರಿಗೆ ಯಡಿಯೂರಪ್ಪನವರ ಮೇಲೆ ಸಿದ್ದರಾಮಯ್ಯನವರ ಮೇಲಿರುವಷ್ಟು ಜಿದ್ದಿನ ಸಿಟ್ಟಿಲ್ಲ. ಇದನ್ನು ಜಾತಿಯ ವ್ಯಾಖ್ಯಾನವಲ್ಲದೆ ಮತ್ತ್ಯಾವುದೂ ಸಮರ್ಥವಾಗಿ ವಿವರಿಸಲಾರದು. ಹಾಗಂತ ನೇರವಾಗಿ ಜಾತಿಗಣ್ಣಿನಿಂದಲೇ ಕುಮಾರಸ್ವಾಮಿಯವರು ಇಷ್ಟೆಲ್ಲವನ್ನು ಮಾಡುತ್ತಿದ್ದಾರೆ ಎನ್ನುತ್ತಿಲ್ಲ. ಆದರೆ ಅವರ ನಡವಳಿಕೆಯ ಮೇಲೆ ಜಾತಿವ್ಯವಸ್ಥೆಯ ಈ ಪ್ರಭಾವ ಪರೋಕ್ಷವಾಗಿ ತನ್ನ ಕೆಲಸ ಮಾಡುತ್ತಿದೆ ಎನ್ನುವುದನ್ನು ತಳ್ಳಿಹಾಕಲಿಕ್ಕೆ ಬರುವುದಿಲ್ಲ.

ಇದ್ಯಾವುದೂ ಅಸಹಜವಲ್ಲ. ತಲೆಮಾರುಗಳಿಂದ ನಮ್ಮ ನಡುವೆ ಬೇರುಬಿಟ್ಟಿರುವ ಜಾತಿವ್ಯವಸ್ಥೆಯ ಗಟ್ಟಿ ಬೇರುಗಳ ನಡುವೆಯೇ ನಾವು ಬೆಳೆಯಬೇಕಾಗಿರುವುದರಿಂದ ನಮಗೆ ಅರಿವಿಲ್ಲದೇ, ಇಂತಹ ಪ್ರಭಾವಗಳಿಗೆ ಈಡಾಗುತ್ತೇವೆ. ನಾವು ಹೀಗೆ ಎಂದು ಒಪ್ಪಿಕೊಳ್ಳುವುದಕ್ಕೂ ನಮ್ಮಿಂದಾಗದಷ್ಟು ಸಂಕೀರ್ಣ ರೂಪದಲ್ಲಿ ಈ ವ್ಯವಸ್ಥೆ ನಮ್ಮೊಳಗೆ ಬೆರೆತು ಹೋಗಿರುತ್ತದೆ. ಆದರೆ ನಮ್ಮ ಅಧ್ಯಯನ, ಸಾರ್ವಜನಿಕ ಜೀವನದ ಅನುಭವ, ನಾಗರೀಕ ಸಮಾಜದ ಹೊಣೆಗಾರಿಕೆಗಳನ್ನು ಅರ್ಥ ಮಾಡಿಕೊಂಡಂತೆ ನಾವು ಈ ಸಿಕ್ಕುಗಳಿಂದ ಬಿಡಿಸಿಕೊಳ್ಳುವ ಯತ್ನ ಮಾಡಬೇಕಾಗುತ್ತದೆ. ಅದರಲ್ಲಿ ಎಷ್ಟರಮಟ್ಟಿಗೆ ಯಶ ಕಾಣುತ್ತೇವೆ ಎನ್ನುವುದು ನಂತರದ ಮಾತು. ಆದರೆ ಆ ನಿಟ್ಟಿನಲ್ಲಿ ಪ್ರಯತ್ನಶೀಲರಾಗುವುದು ನಮ್ಮ ಕರ್ತವ್ಯ. ಆ ಪ್ರಯತ್ನಶೀಲತೆ ಕುಮಾರಸ್ವಾಮಿಯವರ ಈ ಆಕ್ರಮಣಗಳಲ್ಲಿ ಕಾಣದಿರುವುದು ಜೆಡಿಎಸ್‌ನ ಭವಿಷ್ಯದ ದೃಷ್ಟಿಯಿಂದ ಖಂಡಿತ ಒಳಿತಲ್ಲ.

ಮಾಚಯ್ಯ ಎಂ ಹಿಪ್ಪರಗಿ

ರಾಜಕೀಯ ವಿಶ್ಲೇಷಕರು

ಇದನ್ನೂ ಓದಿ-ಕುಮಾರಸ್ವಾಮಿಯವರ ಆರೋಪಗಳೂ, ಗಾಂಧೀಜಿಯ ಭ್ರಷ್ಟಾಚಾರವೂ….

Related Articles

ಇತ್ತೀಚಿನ ಸುದ್ದಿಗಳು