Home ಬ್ರೇಕಿಂಗ್ ಸುದ್ದಿ 10 ವರ್ಷ ಯಾಕ್ರೀ ಓದ್ಬೇಕು ಮಕ್ಕಳು – ವ್ಯವಸ್ಥೆ ವಿರುದ್ಧ ಆರ್.ಜಿ.ವಿ ಗರಂ

10 ವರ್ಷ ಯಾಕ್ರೀ ಓದ್ಬೇಕು ಮಕ್ಕಳು – ವ್ಯವಸ್ಥೆ ವಿರುದ್ಧ ಆರ್.ಜಿ.ವಿ ಗರಂ

ಮುಂಬೈ : ದೇಶಾದ್ಯಂತ ತಲ್ಲಣ ಸೃಷ್ಟಿಸಿರುವ ‘ನೀಟ್’ ಪರೀಕ್ಷಾ ಅಕ್ರಮದ ಕಿಚ್ಚು ಹಾಗೂ ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಯ ಬಿಸಿ ಇನ್ನೂ ಆರಿಲ್ಲ. ಇಂತಹ ಬಿಸಿಯೇರಿದ ವಾತಾವರಣದ ನಡುವೆಯೇ, ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ (NEET) ಸುದ್ದಿಯಾಗುವ ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (Ram Gopal Varma) ಸೋಷಿಯಲ್ ಮೀಡಿಯಾದಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ. ಕೃತಕ ಬುದ್ಧಿಮತ್ತೆ (AI) ಜಗತ್ತನ್ನು ಆಳುತ್ತಿರುವ ಈ ದಿನಗಳಲ್ಲಿ 10 ವರ್ಷಗಳ ಕಾಲ ಕಷ್ಟಪಟ್ಟು ಓದುವ ವೈದ್ಯಕೀಯ ಶಿಕ್ಷಣದ ಅಗತ್ಯವೇನಿದೆ ಎಂದು ಪ್ರಶ್ನಿಸಿರುವ ಅವರು, ಪ್ರಸ್ತುತ ಇರುವ ಶಿಕ್ಷಣ ವ್ಯವಸ್ಥೆಯನ್ನು ಜರೆದಿದ್ದಾರೆ.

ಈಗಿರುವ ಶಿಕ್ಷಣ ವ್ಯವಸ್ಥೆಯನ್ನು ಕೊಲ್ಲಬೇಕು
ಪರೀಕ್ಷಾ ಅಕ್ರಮದ ವಿರೋಧಿಸಿ ಪ್ರತಿಪಕ್ಷಗಳು ನಡೆಸಿದ ಬೃಹತ್ ಹೋರಾಟದ ಬೆನ್ನಲ್ಲೇ ಶಿಕ್ಷಣ ಸಚಿವರು ಪದತ್ಯಾಗ ಮಾಡಿದ್ದರು. ಈ ಘಟನೆ ನಡೆದ ಕೆಲವೇ ದಿನಗಳಲ್ಲಿ ತಮ್ಮ ‘ಎಕ್ಸ್’ ಖಾತೆಯಲ್ಲಿ ಸುದೀರ್ಘ ಪೋಸ್ಟ್ ಹಾಕಿರುವ ಆರ್.ಜಿ.ವಿ, “ಈಗಿರುವ ಶಿಕ್ಷಣ ವ್ಯವಸ್ಥೆಯನ್ನು ಕೊಲ್ಲಬೇಕು” ಎಂದು ಕರೆ ನೀಡಿದ್ದಾರೆ. ಇಂದಿನ ಪೋಷಕರು ಮತ್ತು ಹಿರಿಯರು ಹಳಸಲು ವಿದ್ಯಾಭ್ಯಾಸದ ಹಿಂದೆ ಬೀಳುವಂತೆ ಮಕ್ಕಳನ್ನು ಒತ್ತಾಯಿಸದೆ, ಭವಿಷ್ಯದ ತಂತ್ರಜ್ಞಾನವಾದ ‘ಎಐ’ ಕಡೆಗೆ ಮುನ್ನಡೆಸಬೇಕು ಎಂದು ಕಿವಿಮಾತು ಹೇಳಿದ್ದಾರೆ.

ಸಾಂಪ್ರದಾಯಿಕ ವೈದ್ಯಕೀಯ ಶಿಕ್ಷಣವನ್ನು ಕಟುವಾಗಿ ವಿಮರ್ಶಿಸಿರುವ ವರ್ಮಾ, ಬಾಯಿಪಾಠ ಮಾಡುವುದು, ಪರೀಕ್ಷೆ ಬರೆದು ಅಂಕ ಗಳಿಸುವುದು ಮತ್ತು ಪದವಿ ಹಿಡಿದು ನೌಕರಿಗೆ ಅಲೆಯುವ ಹಳೆಯ ಪದ್ಧತಿಯನ್ನು ಈಗಲೇ ಹರಿದು ಹಾಕಬೇಕು ಎಂದಿದ್ದಾರೆ. ಒಬ್ಬ ಯುವಕ ಡಾಕ್ಟರ್ ಆಗಲು ಎಂಬಿಬಿಎಸ್ ಹಾಗೂ ಉನ್ನತ ವ್ಯಾಸಂಗ ಸೇರಿ ಕನಿಷ್ಠ 10 ವರ್ಷ ತಪಸ್ಸು ಮಾಡುತ್ತಾನೆ. ಆದರೆ, ಇಷ್ಟೆಲ್ಲಾ ವರ್ಷ ಓದಿ ಆತ ಗಳಿಸುವ ಜ್ಞಾನ ಈಗಾಗಲೇ ಪ್ರತಿಯೊಬ್ಬರ ಕೈಯಲ್ಲಿರುವ ಸ್ಮಾರ್ಟ್‌ಫೋನ್‌ನಲ್ಲಿದೆ. ರೋಗ ಪತ್ತೆ ಹಚ್ಚುವುದು ಮತ್ತು ಚಿಕಿತ್ಸೆ ನೀಡುವುದನ್ನು ಎಐ ತಂತ್ರಜ್ಞಾನವು ಮನುಷ್ಯರಿಗಿಂತ ಅತಿ ವೇಗವಾಗಿ ಹಾಗೂ ನಿಖರವಾಗಿ ಮಾಡುತ್ತಿದೆ. ಹೀಗಿರುವಾಗ ವಿದ್ಯಾರ್ಥಿಗಳು ಇಂದಿಗೂ ‘ನೀಟ್’ ಪರೀಕ್ಷೆಗಾಗಿ ಯಾಕೆ ಜೀವ ಸೆಯ್ಯುತ್ತಿದ್ದಾರೆ ಎಂದು ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ತಂತ್ರಜ್ಞಾನದ ಪಿತಾಮಹ ಜೆಫ್ರಿ ಹಿಂಟನ್ ಅವರೇ ಎಐ ಸಾಮರ್ಥ್ಯದ ಬಗ್ಗೆ ಪದೇ ಪದೇ ಎಚ್ಚರಿಸುತ್ತಿದ್ದಾರೆ. ಇನ್ನು ಕೆಲವೇ ವರ್ಷಗಳಲ್ಲಿ ವೈದ್ಯರ ಸ್ಥಾನವನ್ನು ತಂತ್ರಜ್ಞಾನವೇ ತುಂಬಲಿದ್ದು, ವೈದ್ಯರು ಕೇವಲ ಮಧ್ಯವರ್ತಿಗಳಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಶಿಕ್ಷಣ ಪದ್ಧತಿ ಈಗಾಗಲೇ ಜೀವ ಕಳೆದುಕೊಂಡಿದೆ

“ನನ್ನ ಮೊಬೈಲ್ ಫೋನ್‌ಗೆ ಗೊತ್ತಿರುವ ಸಂಗತಿಯನ್ನು ನಾನೇಕೆ ನೆನಪಿಟ್ಟುಕೊಳ್ಳಬೇಕು?” ಎಂದು ಕೇಳುವ ಇಂದಿನ ತಲೆಮಾರಿನ ಯುವಕರನ್ನು ಸಮಾಜವು ಬಂಡಾಯಗಾರರಂತೆ ನೋಡುತ್ತಿದೆ. ಇಂದಿನ ಶಿಕ್ಷಣ ಪದ್ಧತಿ ಈಗಾಗಲೇ ಜೀವ ಕಳೆದುಕೊಂಡಿದ್ದು, ಅದನ್ನು ಹೂತು ಹಾಕಲು ಪೋಷಕರು ಹಿಂಜರಿಯುತ್ತಿದ್ದಾರೆ. ಹಿರಿಯರ ಅಜ್ಞಾನಕ್ಕೆ ಯುವಕರ ಭವಿಷ್ಯ ಬಲಿಯಾಗುವ ಮುನ್ನ ಇಡೀ ವ್ಯವಸ್ಥೆಯನ್ನು ಕಸದ ಬುಟ್ಟಿಗೆ ಎಸೆದು, ಎಲ್ಲರನ್ನೂ ಎಐ ತಂತ್ರಜ್ಞಾನದತ್ತ ಕೊಂಡೊಯ್ಯುವುದೇ ಏಕೈಕ ಪರಿಹಾರ ಎಂದು ವರ್ಮಾ ವಾದಿಸಿದ್ದಾರೆ.

ವರ್ಮಾ ಅವರ ಈ ಸರಣಿ ಪೋಸ್ಟ್‌ಗಳು ಇಂಟರ್ನೆಟ್‌ನಲ್ಲಿ ತೀವ್ರ ಸಂವಾದಕ್ಕೆ ಕಾರಣವಾಗಿವೆ. ರೋಬೋಟ್‌ಗಳು ಶಸ್ತ್ರಚಿಕಿತ್ಸೆ ಮಾಡುತ್ತವೆ ಎನ್ನುವುದು ಶುದ್ಧ ಸುಳ್ಳು ಎಂದು ಕೆಲವರು ಆಕ್ರೋಶ ಹೊರಹಾಕಿದ್ದಾರೆ. ಆದರೆ, ಭಾರತದಲ್ಲಿ ಶಿಕ್ಷಣವೇ ಒಂದು ದೊಡ್ಡ ದಂಧೆಯಾಗಿದ್ದು, ಎಲ್‌ಕೆಜಿ ತರಗತಿಗೇ ಲಕ್ಷಾಂತರ ರೂಪಾಯಿ ಸುರಿಯುವ ಪೋಷಕರು ವರ್ಮಾ ಮಾತನ್ನು ಕೇಳಿ ಎಚ್ಚರಗೊಳ್ಳಬೇಕು ಎಂದು ಇನ್ನು ಕೆಲವರು ಬೆಂಬಲಿಸಿದ್ದಾರೆ. ಸಾಮಾನ್ಯ ಮತ್ತು ಬಡ ಕುಟುಂಬದ ಮಕ್ಕಳಿಗೆ ಇಂದಿಗೂ ಶಿಕ್ಷಣವೇ ಏಕೈಕ ಆಸರೆ ಎಂದು ಮತ್ತೊಂದು ವರ್ಗ ವಾದಿಸಿದೆ.

ಇದೇ ವೇಳೆ, ಪರೀಕ್ಷಾ ಅಕ್ರಮದ ಹಗರಣದ ಕುರಿತು ಬಾಲಿವುಡ್ ನಟ ಸಲ್ಮಾನ್ ಖಾನ್ ಸಹ ಆತಂಕ ವ್ಯಕ್ತಪಡಿಸಿದ್ದು, ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಹಾಗೂ ವಿದ್ಯಾರ್ಥಿಗಳ ಹೋರಾಟಕ್ಕೆ ರಾಜಕೀಯ ಬಣ್ಣ ಬಳಿಯಬಾರದು ಎಂದು ಹೇಳಿದ್ದಾರೆ. ಅವರೊಂದಿಗೆ ನಟರಾದ ನಸೀರುದ್ದೀನ್ ಶಾ, ರತ್ನಾ ಪಾಠಕ್ ಶಾ, ಅಭಯ್ ಡಿಯೋಲ್ ಮತ್ತು ಸೋನಾಕ್ಷಿ ಸಿನ್ಹಾ ಸೇರಿದಂತೆ ಹಲವು ನಾಯಕರು ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತಿರುವುದು ದೇಶದಾದ್ಯಂತ ಗಮನ ಸೆಳೆದಿದೆ.

You cannot copy content of this page

Exit mobile version