Sunday, June 8, 2025

ಸತ್ಯ | ನ್ಯಾಯ |ಧರ್ಮ

ರಾಜ್ಯಪಾಲ v/s ತಮಿಳುನಾಡು ಸರ್ಕಾರ: ಒಕ್ಕೂಟ ವ್ಯವಸ್ಥೆಯ ಘನತೆಯನ್ನು ಮರುಸ್ಥಾಪಿಸಿದ ಸುಪ್ರೀಂ ಕೋರ್ಟ್

ತಮಿಳುನಾಡಿನ ಗವರ್ನರ್ ಆರ್.ಎನ್. ರವಿ, ನರೇಂದ್ರ ಮೋದಿ ಆಡಳಿತದಿಂದ ನೇಮಕಗೊಂಡವರು, ರಾಜ್ಯ ವಿಧಾನಸಭೆ ಅಂಗೀಕರಿಸಿದ 10 ಮಸೂದೆಗಳ ವಿಷಯದಲ್ಲಿ ಯಾವುದೇ ಕ್ರಮ ಕೈಗೊಳ್ಳದೆ ಇರುವುದನ್ನು ಸುಪ್ರೀಂ ಕೋರ್ಟ್ ಖಂಡಿಸಿದೆ. ಈ ಕೃತ್ಯವನ್ನು ಅಸಾಂವಿಧಾನಿಕ, ಕಾನೂನುಬಾಹಿರ ಮತ್ತು ದೋಷಪೂರಿತ ಎಂದು ಕರೆದಿರುವ ಕೋರ್ಟ್, “ತಮಿಳುನಾಡು ಗವರ್ನಮೆಂಟ್ ಮತ್ತು ತಮಿಳುನಾಡು ಗವರ್ನರ್” ಪ್ರಕರಣದಲ್ಲಿ ಐತಿಹಾಸಿಕ ತೀರ್ಪು ನೀಡಿದೆ.

ಈ ಮಸೂದೆಗಳನ್ನು ಗವರ್ನರ್ ಮರುಪರಿಶೀಲನೆಗೆ ಕಳುಹಿಸಿದ ನಂತರ‌, ರಾಜ್ಯ ವಿಧಾನಸಭೆಯು ತಡ ಮಾಡದೆ ಈ ಮಸೂದೆಗಳನ್ನು ಎರಡನೇ ಬಾರಿಗೆ ಅಂಗೀಕರಿಸಿತ್ತು. ಆದರೆ ರವಿ ಅವುಗಳನ್ನು ರಾಷ್ಟ್ರಪತಿಗಳ ಪರಿಗಣನೆಗೆ ಕಳುಹಿಸಿದ್ದರು. ಇಂತಹ ಸಂದರ್ಭಗಳಲ್ಲಿ ಸಂವಿಧಾನದ 142ನೇ ವಿಧಿ ಕಲ್ಪಿಸಿರುವ ವಿಶೇಷ ಅಧಿಕಾರವು ಸುಪ್ರೀಮ್‌ ಕೋರ್ಟಿಗೆ “ರಾಜ್ಯಕ್ಕೆ ಸಂಪೂರ್ಣ ನ್ಯಾಯ” ಒದಗಿಸು ಅವಕಾಶವನ್ನು ನೀಡುತ್ತದೆ.

ಇದೀಗ ಕೋರ್ಟ್ ಈ ಮಸೂದೆಗಳನ್ನು ಸರ್ಕಾರವು ರಾಜ್ಯಪಾಲರ ಕಚೇರಿಗೆ ಸಲ್ಲಿಸಿದ ದಿನಾಂಕದಿಂದಲೇ ಅವುಗಳಿಗೆ ಅಂಗೀಕಾರ ಸಿಕ್ಕಿದೆ ಎಂದು ಘೋಷಿಸಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಒಂದು ಮಸೂದೆಗೆ ಅಂಗೀಕಾರ ನೀಡಿ, ಏಳನ್ನು ತಿರಸ್ಕರಿಸಿ, ಮತ್ತೆರಡು ಮಸೂದೆಗಳನ್ನು ಪರಿಗಣನೆಗೆ ತೆಗೆದುಕೊಳ್ಳದೆ ಇರುವುದನ್ನು ಅಸಿಂಧು ಎಂದೂ ಕೋರ್ಟ್‌ ಹೇಳಿದೆ.

ಈ ತೀರ್ಪು ಫೆಡರಲ್‌ ಒಕ್ಕೂಟ ವ್ಯವಸ್ಥೆಯ ರಕ್ಷಣೆಯ ವಿಷಯದಲ್ಲಿ ಒಂದು ಮೈಲಿಗಲ್ಲು ಎನ್ನಿಸಿಕೊಂಡಿದೆ. ಭಾರತದ ಸಾಂವಿಧಾನಿಕ ಕಾನೂನು ವಿಕಾಸದ ಹಾದಿಯಲ್ಲಿ ಇದು ನಿಜವಾಗಿಯೂ ಮಹತ್ವದ ಹೆಜ್ಜೆಯಾಗಿದೆ.

2023ರ ಏಪ್ರಿಲ್‌ನಲ್ಲಿ, ರವಿ, ವಿಧಾನಸಭೆಯ ಅಂಗೀಕೃತ ಮಸೂದೆಗೆ ರಾಜ್ಯಪಾಲರು ಅಂಕಿತ ಹಾಕಲು ನಿರಾಕರಿಸಿದರೆ,  ಆ “ಮಸೂದೆ ಸತ್ತಂತೆ” ಎಂಬ ಅಸಾಂವಿಧಾನಿಕ ಹೇಳಿಕೆ ನೀಡಿದ್ದರು. ಇದು ಅವರು 159ನೇ ವಿಧಿಯಡಿ “ಸಂವಿಧಾನವನ್ನು ರಕ್ಷಿಸುವ, ಕಾಪಾಡುವ ಮತ್ತು ಸಮರ್ಥಿಸುವ” ಕೆಲಸ ಮಾಡುವುದಾಗಿ ಮಾಡಿರುವ ಪ್ರಮಾಣಕ್ಕೆ ವಿರುದ್ಧವಾಗಿತ್ತು. ಈಗ ಸುಪ್ರೀಂ ಕೋರ್ಟ್‌ ರಾಜ್ಯಪಾಲರ ಪ್ರಮಾಣದ ಪಾವಿತ್ರ್ಯತೆಯನ್ನು ಗುರುತಿಸಿ, ರಾಜ್ಯಪಾಲರು ರಾಜಕೀಯ ಆಲೋಚನೆಗಳಿಂದ ಪ್ರಭಾವಿತರಾಗದೆ “ಸಂಸದೀಯ ಪ್ರಜಾಪ್ರಭುತ್ವದ ಸ್ಥಾಪಿತ ಸಂಪ್ರದಾಯಗಳಿಗೆ” ಅನುಗುಣವಾಗಿ ಕಾರ್ಯ ನಿರ್ವಹಿಸಬೇಕೆಂದು ಒತ್ತಿ ಹೇಳಿತು.

ರಾಜ್ಯಪಾಲ ರವಿಯವರು 10 ಮಸೂದೆಗಳ ವಿಷಯದಲ್ಲಿ ನಡೆದುಕೊಂಡ ರೀತಿ ರಾಜಕೀಯ ಪ್ರೇರಿತವಾಗಿದ್ದವು, ಸಂವಿಧಾನ ಮತ್ತು ಸಾಂವಿಧಾನಿಕ ನೈತಿಕತೆಯನ್ನು ಎತ್ತಿಹಿಡಿಯುವ ಅವರ ಕರ್ತವ್ಯಕ್ಕೆ ವಿರುದ್ಧವಾಗಿದ್ದವು. ಈ ಮೂಲಕ, ಬಿಜೆಪಿ ಆಡಳಿತವಿಲ್ಲದ ರಾಜ್ಯಗಳ ರಾಜ್ಯಪಾಲರು ಚುನಾಯಿತ ಸರ್ಕಾರಗಳನ್ನು ಕೆಲಸ ಮಾಡದಂತೆ ಕಟ್ಟಿಹಾಕಿ, ಜನಾದೇಶಕ್ಕೆ ಕಿಮ್ಮತ್ತಿಲ್ಲದ ಹಾಗೆ ಮಾಡುತ್ತಿದ್ದರು.

ಬಿಜೆಪಿ ಆಡಳಿತವಿಲ್ಲದ ರಾಜ್ಯಗಳಲ್ಲಿ ರಾಜ್ಯಪಾಲರ ಪಕ್ಷಪಾತಿ ವರ್ತನೆ

ಬಿಜೆಪಿ ಆಡಳಿತವಿಲ್ಲದ ಹಲವು ರಾಜ್ಯಗಳಲ್ಲಿ, ರಾಜ್ಯಪಾಲರು ಸಂವಿಧಾನದ 200ನೇ ವಿಧಿಯಂತೆ ವಿಧಾನಸಭೆಯಿಂದ ಅಂಗೀಕೃತ ಮಸೂದೆಗಳಿಗೆ ಅಂಕಿತ ಹಾಕದೆ ಸತಾಯಿಸುತ್ತಿದ್ದಾರೆ. ಈ ವಿಧಿಯು ರಾಜ್ಯಪಾಲರಿಗೆ ಮಸೂದೆಗೆ (ಎ) ಅಂಗೀಕಾರ ನೀಡುವುದು, (ಬಿ) ಅಂಗೀಕಾರ ನಿರಾಕರಿಸುವುದು, ಅಥವಾ (ಸಿ) ರಾಷ್ಟ್ರಪತಿಗಳ ಪರಿಗಣನೆಗೆ ಕಳುಹಿಸುವ ಆಯ್ಕೆಗಳನ್ನು ನೀಡುತ್ತದೆ. ಹಣಕಾಸು ಮಸೂದೆಯಲ್ಲದಿದ್ದರೆ, ರಾಜ್ಯಪಾಲರಿಗೆ “ಸಾಧ್ಯವಿರುವಷ್ಟು ಬೇಗ” ಮಸೂದೆಯನ್ನು ಮರುಪರಿಶೀಲನೆಗೆ ಕಳುಹಿಸಬಹುದು, ಆದರೆ ವಿಧಾನಸಭೆಯು ಅದನ್ನು ಮತ್ತೆ ಅಂಗೀಕರಿಸಿದರೆ, ರಾಜ್ಯಪಾಲ ಅಂಕಿತ ಹಾಕಲು ನಿರಾಕರಿಸುವಂತಿಲ್ಲ.

“ಆದಷ್ಟು ಬೇಗ (As soon as possible)” ಎಂಬ ಪದಗುಚ್ಛವು ಕಾಲಮಿತಿಯನ್ನು ನಿಗದಿಪಡಿಸದೆ ಇರುವ ಕಾರಣ, 2014ರ ನಂತರ ಬಿಜೆಪಿ ಆಡಳಿತವಿಲ್ಲದ ರಾಜ್ಯಗಳ ರಾಜ್ಯಪಾಲರು ಈ ಕೊರತೆಯ ಲಾಭ ಪಡೆದು ಮಸೂದೆಗಳನ್ನು ಇತ್ಯರ್ಥಗೊಳಿಸದೆ ಕಾಯ್ದಿರಿಸಿದ್ದಾರೆ.

2016ರ ಅರುಣಾಚಲ ಪ್ರದೇಶ ವಿಧಾನಸಭೆ ಪ್ರಕರಣದಲ್ಲಿ (ನಬಾಂ ರೆಬಿಯಾ ಮತ್ತು ಬಮಾಂಗ್ ಫೆಲಿಕ್ಸ್ v/s ಉಪ ಸ್ಪೀಕರ್), ಸುಪ್ರೀಂ ಕೋರ್ಟ್ “ಆದಷ್ಟು ಬೇಗ” ಎಂದರೆ ” ರಾಜ್ಯಪಾಲ ಮಸೂದೆಯನ್ನು ಅನಿರ್ದಿಷ್ಟ ಕಾಲದವರೆಗೆ ತಡೆದಿಟ್ಟುಕೊಳ್ಳಬಾರದು, ಅವರು ಅದನ್ನು ವಿಧಾನಸಭೆಗೆ ಸಂದೇಶದೊಂದಿಗೆ ಕಳುಹಿಸಬೇಕು” ಎಂದಿತ್ತು. ಆದರೆ, ಬಿಜೆಪಿ ಆಡಳಿತವಿಲ್ಲದ ರಾಜ್ಯಗಳ ರಾಜ್ಯಪಾಲರು ಈ ಸೂಚನೆಯನ್ನು ಗಣನೆಗೆ ತೆಗೆದುಕೊಂಡಿರಲಿಲ್ಲ.

2023ರಲ್ಲಿ, ಪಂಜಾಬ್ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್, ಆಮ್ ಆದ್ಮಿ ಪಕ್ಷದ ಬಹುಮತವಿರುವ ವಿಧಾನಸಭೆಯ ಕೆಲವು ಮಸೂದೆಗಳಿಗೆ ಅಂಗೀಕಾರ ನೀಡದೆ, 200ನೇ ವಿಧಿಯಂತೆ ಮರುಪರಿಶೀಲನೆಗೆ ಕಳುಹಿಸಿರಲಿಲ್ಲ ಎಂದು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿತು.

ಕೇರಳದ ಗವರ್ನರ್ ಆರಿಫ್ ಮೊಹಮ್ಮದ್ ಖಾನ್ 2023ರ ನವೆಂಬರ್‌ನಲ್ಲಿ ಎರಡು ವರ್ಷಗಳಿಗಿಂತ ಹೆಚ್ಚು ಕಾಲ ತಮ್ಮ ಬಳಿ ಇರಿಸಿಕೊಂಡಿದ್ದ ಏಳು ಮಸೂದೆಗಳನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಕಳುಹಿಸಿದ್ದರು.

ತೆಲಂಗಾಣದಲ್ಲಿ, (ಹಿಂದಿನ) ಗವರ್ನರ್ ತಮಿಳಿಸೈ ಸೌಂದರರಾಜನ್ ಅವರ ಬಳಿ 10ಕ್ಕೂ ಹೆಚ್ಚು ಪ್ರಮುಖ ಮಸೂದೆಗಳು ಬಾಕಿಯಿದ್ದವು, ಇವುಗಳಲ್ಲಿ ಏಳನ್ನು 2022ರ ಸೆಪ್ಟೆಂಬರ್‌ನಲ್ಲಿ ವಿಧಾನಸಭೆಯಲ್ಲಿ ಅಂಗೀಕರಿಸಿ ರಾಜ್ಯಪಾಲರ ಅಂಗೀಕಾರಕ್ಕೆ ಕಳುಹಿಸಲಾಗಿತ್ತು.

ಮಸೂದೆಗಳ ಇತ್ಯರ್ಥಕ್ಕೆ ಕಾಲಮಿತಿ

ರಾಜ್ಯಪಾಲರ ಈ ಕೆಟ್ಟ ಇತಿಹಾಸದ ವಿರುದ್ಧ, ತಮಿಳುನಾಡು ರಾಜ್ಯಪಾಲರಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ತೀರ್ಪು ಮಸೂದೆಗಳ ಇತ್ಯರ್ಥಕ್ಕೆ ಕಾಲಮಿತಿ ನಿಗದಿ ಮಾಡುವ ಮೂಲಕ ಚುನಾಯಿತ ರಾಜ್ಯ ವಿಧಾನಸಭೆಗಳ ಸ್ವಾಯತ್ತತೆಗೆ ದೊಡ್ಡ ಬಲವನ್ನು ನೀಡಿದೆ. ಇದು ಚುನಾಯಿತರಲ್ಲದ ರಾಜ್ಯಪಾಲರು ವಿಧಾನಸಭೆಯ ಅಧಿಕಾರವನ್ನು ಮೊಟಕುಗೊಳಿಸುವುದನ್ನು ತಡೆಯುತ್ತದೆ ಮತ್ತು ಸಾಂವಿಧಾನಿಕ ನೈತಿಕತೆಗೆ ತಕ್ಕಂತೆ ಸರ್ಕಾರ ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ.

ಸುಪ್ರೀಂ ಕೋರ್ಟ್ ಮಸೂದೆಗಳ ಇತ್ಯರ್ಥಕ್ಕೆ ಕಾಲಮಿತಿ ನೀಡಿರುವುದು ಮಹತ್ವದ ಬೆಳವಣಿಗೆಯಾಗಿದೆ. ರಾಜ್ಯಪಾಲರು ಒಂದು ತಿಂಗಳ ಒಳಗೆ ಮಸೂದೆಗೆ ಅಂಕಿತ ಹಾಕಲು ನಿರಾಕರಿಸಬಹುದು ಅಥವಾ ರಾಷ್ಟ್ರಪತಿಗೆ ಕಳುಹಿಸಬಹುದು. ಮಂತ್ರಿಮಂಡಲದ ಸಲಹೆಗೆ ಅಂಕಿತ ಹಾಕಲು ನಿರಾಕರಿಸಿದರೆ, ಮೂರು ತಿಂಗಳ ಒಳಗೆ ಆ ಮಸೂದೆಯನ್ನು ವಿಧಾನಸಭೆಗೆ ಮರಳಿಸಬೇಕು.

ಸಚಿವ ಸಂಪುಟದ ಶಿಫಾರಸಿನ ನಂತರ ರಾಜ್ಯಪಾಲರು ಅಂಕಿತ ಹಾಕದಿರಲು ಅಥವಾ ರಾಷ್ಟ್ರಪತಿಗಳಿಗೆ ಮಸೂದೆಯನ್ನು ಕಳುಹಿಸಲು ನಿರ್ಧರಿಸಿದರೆ, ಈ ನಿರ್ಧಾರವನ್ನು ಒಂದು ತಿಂಗಳೊಳಗೆ ತೆಗೆದುಕೊಳ್ಳಬೇಕು.

ಸಚಿವ ಸಂಪುಟದ ಶಿಫಾರಸಿನ ವಿರುದ್ಧ ರಾಜ್ಯಪಾಲರು ನಿರ್ಧಾರ ಕೈಗೊಂಡ ಸಂದರ್ಭದಲ್ಲಿ, ಮಸೂದೆಯನ್ನು ಮೂರು ತಿಂಗಳ ಅವಧಿಯೊಳಗೆ ಶಾಸಕಾಂಗಕ್ಕೆ ಹಿಂತಿರುಗಿಸಬೇಕಾಗುತ್ತದೆ.

ರಾಷ್ಟ್ರಪತಿ ರಾಜ್ಯಪಾಲ ಕಳುಹಿಸಿದ ಮಸೂದೆಗಳನ್ನು ಮೂರು ತಿಂಗಳ ಒಳಗೆ ಇತ್ಯರ್ಥಗೊಳಿಸಬೇಕು.

ಈ ಕಾಲಮಿತಿಯು ಕೇಂದ್ರ-ರಾಜ್ಯ ಸಂಬಂಧಗಳಿಗೆ ಸಂಬಂಧಿಸಿದಂತೆ ಸರ್ಕಾರಿ ಆಯೋಗ ನೀಡಿದ ಶಿಫಾರಸುಗಳಿಗೆ ಹತ್ತಿರವಾಗಿದೆ. ರಾಷ್ಟ್ರಪತಿಗೆ ಸುಪ್ರೀಂ ಕೋರ್ಟ್ ಮೂರು ತಿಂಗಳ ಕಾಲಾವಕಾಶ ನೀಡಿದರೆ, ಆಯೋಗ ನಾಲ್ಕು ತಿಂಗಳು ಶಿಫಾರಸು ಮಾಡಿತ್ತು.

ಸಾಂವಿಧಾನಿಕ ತಜ್ಞ ಡಿ.ಡಿ. ಬಸು ಅವರನ್ನು ಉಲ್ಲೇಖಿಸಿದ ಆಯೋಗ ರಾಜ್ಯಪಾಲರ ಮಸೂದೆಗಳನ್ನು ರಾಷ್ಟ್ರಪತಿಗೆ ಕಳುಹಿಸುವ ಅಧಿಕಾರವು “ರಾಜ್ಯದ ವಿಧಾನಸಭೆಯ ಮೇಲೆ ಕೇಂದ್ರದ ಕಾರ್ಯಾಂಗದ ಅಧಿಕಾರವನ್ನು ಸ್ಥಾಪಿಸುವ” ರೀತಿಯಲ್ಲಿ ಇರಬಾರದು ಎಂದಿತ್ತು.

ಸುಪ್ರೀಂ ಕೋರ್ಟ್‌ನ ಈ ಮಹತ್ತರ ತೀರ್ಪು ಮೇಲಿನ ಆಶಯವನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ.

  • ಎಸ್.ಎನ್. ಸಾಹು

ಎಸ್.ಎನ್. ಸಾಹು, ಭಾರತದ ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಅವರ ವಿಶೇಷ ಕರ್ತವ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.

(ಮೂಲ ಬರಹ: ದಿ ವೈರ್‌ ಇಂಡಿಯಾ)

Related Articles

ಇತ್ತೀಚಿನ ಸುದ್ದಿಗಳು

You cannot copy content of this page