ಹಾಸನ: ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.ಆಲೂರು ತಾಲ್ಲೂಕಿನ ಹಳ್ಳಿಯೂರು ಗ್ರಾಮದಲ್ಲಿ ವರದಕ್ಷಣೆ ಕಿರುಕುಳದಿಂದ ಮನನೊಂದು 20 ವರ್ಷದ ಧನ್ಯಶ್ರೀ ಎಂಬ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದರು.
ಪ್ರೀತಿಸಿ ಮದುವೆ ಆದವನಿಂದಲೇ ವರದಕ್ಷಿಣೆ ಕಿರುಕುಳ:
ಸಕಲೇಶಪುರ ತಾಲ್ಲೂಕಿನ ಬ್ಯಾಕೆರೆಗಡಿ (ಜನ್ನಾಪುರ) ಗ್ರಾಮದ ನಿವಾಸಿ ಧನ್ಯಶ್ರೀ, ಹಳ್ಳಿಯೂರು ಗ್ರಾಮದ ಪ್ರೇಮ್ಕುಮಾರ್ ಅವರನ್ನು ಎರಡು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಮದುವೆಯ ನಂತರದ ಮೊದಲ ವರ್ಷ ಸರಾಗವಾಗಿ ಕಳೆದರೂ, ಕಳೆದ ಒಂದು ವರ್ಷದಿಂದ ಪ್ರೇಮ್ಕುಮಾರ್ ಧನ್ಯಶ್ರೀಗೆ ವರದಕ್ಷಿಣೆ ತರುವಂತೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗುತ್ತಿದೆ.
ತವರು ಮನೆಯಿಂದ ಮರಳಿದ ಬಳಿಕ ದುರಂತ:
ಭಾನುವಾರ ತವರು ಮನೆಯಿಂದ ಹಳ್ಳಿಯೂರಿಗೆ ವಾಪಸ್ ಬಂದಿದ್ದ ಧನ್ಯಶ್ರೀ, ಪತಿಯೊಂದಿಗೆ ಮಾತನಾಡಲು ಹೋಗಿದ್ದಾಗ, “ವರದಕ್ಷಿಣೆ ತಂದಿಲ್ಲ” ಎಂಬ ಕಾರಣಕ್ಕೆ ಜಗಳ ಶುರುವಾಗಿದೆ. ಈ ವೇಳೆ ಪ್ರೇಮ್ಕುಮಾರ್ ಮಾತ್ರವಲ್ಲದೆ, ಅವರ ತಾಯಿ ಭವಾನಿ ಮತ್ತು ತಂದೆ ಪ್ರದೀಪ್ ಸಹ ಧನ್ಯಶ್ರೀ ಮೇಲೆ ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ.
ಆತ್ಮಹತ್ಯೆ:ಈ ಘಟನೆಗಳಿಂದ ಬೇಸರಗೊಂಡ ಧನ್ಯಶ್ರೀ, ನಿನ್ನೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪೊಲೀಸ್ ತನಿಖೆ:
ಘಟನೆಯ ನಂತರ ಸ್ಥಳಕ್ಕೆ ಭೇಟಿ ನೀಡಿದ ಆಲೂರು ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣವನ್ನು ದಾಖಲಿಸಿದ್ದಾರೆ. ಧನ್ಯಶ್ರೀ ಪತಿ, ಅತ್ತೆ, ಮಾವ ಹಾಗೂ ಕುಟುಂಬದ ಇತರರ ವಿರುದ್ಧ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಕುಟುಂಬದ ಆಕ್ರೋಶ:
ಈ ಘಟನೆಗೆ ಪ್ರೇಮ್ಕುಮಾರ್ ಮತ್ತು ಅವರ ಕುಟುಂಬವೇ ಕಾರಣ ಎಂದು ಧನ್ಯಶ್ರೀ ಸಂಬಂಧಿಕರು ಆರೋಪಿಸಿದ್ದಾರೆ.