Friday, September 12, 2025

ಸತ್ಯ | ನ್ಯಾಯ |ಧರ್ಮ

ಮತಗಳ್ಳತನದ ಬಗ್ಗೆ ಸ್ಫೋಟಕ ಸಾಕ್ಷ್ಯ ನೀಡುತ್ತೇವೆ: ರಾಹುಲ್ ಗಾಂಧಿ

ದೆಹಲಿ: ಮತಗಳ ಕಳ್ಳತನಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವಾರು ಪುರಾವೆಗಳನ್ನು ನೀಡಿದ್ದು, ಭವಿಷ್ಯದಲ್ಲಿ ಇನ್ನೂ ದೊಡ್ಡದಾದ, ಸ್ಫೋಟಕ್ಕೆ ಸಮನಾದ ಸಾಕ್ಷ್ಯಗಳನ್ನು ನೀಡಲಿದ್ದೇವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಹೇಳಿದ್ದಾರೆ.

ಉತ್ತರ ಪ್ರದೇಶದ ತಮ್ಮ ಲೋಕಸಭಾ ಕ್ಷೇತ್ರ ರಾಯ್ ಬರೇಲಿಯಲ್ಲಿ ಪ್ರವಾಸ ಕೈಗೊಂಡಿದ್ದ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದರು. ವಿಧಾನಸಭಾ ಚುನಾವಣೆಗಳಲ್ಲಿ ಮತಗಳ ಕಳ್ಳತನ ನಡೆದಿದೆ ಎಂದು ಅವರು ಪುನರುಚ್ಚರಿಸಿದರು.

“ಹರಿಯಾಣ, ಮಹಾರಾಷ್ಟ್ರ ಮತ್ತು ಕರ್ನಾಟಕ ಚುನಾವಣೆಗಳಲ್ಲಿ ಅಕ್ರಮಗಳು ನಡೆದಿವೆ. ಮತಗಳ ಕಳ್ಳತನವಾಗಿದೆ ಎಂಬುದು ಸತ್ಯ. ನಾವು ಈಗಾಗಲೇ ಈ ಸಂಬಂಧ ಪುರಾವೆಗಳನ್ನು ಒದಗಿಸಿದ್ದೇವೆ. ಮುಂದಿನ ದಿನಗಳಲ್ಲಿ ಹೈಡ್ರೋಜನ್ ಬಾಂಬ್‌ನಂತಹ ಶಕ್ತಿಶಾಲಿ ಸಾಕ್ಷ್ಯಗಳನ್ನು ತೋರಿಸಲಿದ್ದೇವೆ.

‘ವೋಟ್ ಚೋರ್ – ಗದ್ದಿ ಛೋಡ್’ ಎಂಬ ಘೋಷಣೆ ದೇಶಾದ್ಯಂತ ಪ್ರತಿಧ್ವನಿಸುತ್ತಿದೆ. ಮತಗಳನ್ನು ಕದಿಯುವ ಮೂಲಕವೇ ಸರ್ಕಾರಗಳು ರಚನೆಯಾಗುತ್ತಿವೆ. ಇದಕ್ಕೆ ಸಂಬಂಧಿಸಿದ ಸಾಕ್ಷ್ಯಗಳು ನಮ್ಮಲ್ಲಿವೆ ಮತ್ತು ಅವುಗಳನ್ನು ನಾವು ನೀಡುತ್ತೇವೆ ಎಂದು ಭರವಸೆ ನೀಡುತ್ತೇವೆ,” ಎಂದು ಅವರು ಹೇಳಿದರು.

ಪುನರಾವರ್ತಿತ ಪ್ರೋಟೋಕಾಲ್ ಉಲ್ಲಂಘನೆ: ಸಿಆರ್‌ಪಿಎಫ್

ವಿದೇಶ ಪ್ರವಾಸಗಳ ಸಂದರ್ಭದಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಸಂಸದ ರಾಹುಲ್ ಗಾಂಧಿ ಭದ್ರತಾ ಪ್ರೋಟೋಕಾಲ್ ಅನ್ನು ಪಾಲಿಸುತ್ತಿಲ್ಲ ಎಂದು ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (ಸಿಆರ್‌ಪಿಎಫ್) ಆರೋಪಿಸಿದೆ.

ಈ ಕುರಿತು ಅವರು ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದಿದೆ. ವಿದೇಶ ಪ್ರವಾಸಗಳ ಸಮಯದಲ್ಲಿ ರಾಹುಲ್ ತಮ್ಮ ಭದ್ರತೆಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಸಿಆರ್‌ಪಿಎಫ್ ಭದ್ರತಾ ಮುಖ್ಯಸ್ಥ ಸುನಿಲ್ ಜುನೆ ತಿಳಿಸಿದ್ದಾರೆ.

ಪ್ರಸ್ತುತ, ರಾಹುಲ್ ‘ಸುಧಾರಿತ ಝೆಡ್ ಪ್ಲಸ್’ ಭದ್ರತೆಯ ವ್ಯಾಪ್ತಿಯಲ್ಲಿದ್ದಾರೆ. ತೀವ್ರ ಅಪಾಯದಲ್ಲಿರುವ ವ್ಯಕ್ತಿಗಳಿಗೆ ಕೇಂದ್ರ ಸರ್ಕಾರ ಈ ಮಟ್ಟದ ಭದ್ರತೆಯನ್ನು ಒದಗಿಸುತ್ತದೆ. ಭದ್ರತಾ ಪ್ರೋಟೋಕಾಲ್ ಉಲ್ಲಂಘನೆಯ ಬಗ್ಗೆ ರಾಹುಲ್ ಅವರಿಗೆ ಪತ್ರ ಬರೆದಿರುವುದು ಇದು ಎರಡನೇ ಬಾರಿ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page