ಕಳೆದ ಕರ್ನಾಟಕ ವಿಧಾನಸಭಾ ಚುನಾವಣೆಯ ನಂತರ ಕರ್ನಾಟಕ ಬಿಜೆಪಿಯಷ್ಟೇ ಅಲ್ಲದೆ ಕೇಂದ್ರ ಬಿಜೆಪಿಯೂ ಒಂದಷ್ಟು ಕಳೆಗುಂದಿದೆ. ಕರ್ನಾಟಕದಲ್ಲಿ ಗ್ಯಾರಂಟಿಗಳು ಮತ್ತು ಆಡಳಿತ ವಿರೋಧಿ ಅಲೆ ಕಾಂಗ್ರೆಸ್ಸನ್ನು ಗದ್ದುಗೆಗೆ ತಲುಪಿಸಿದ್ದರೆ ಬಿಜೆಪಿಯನ್ನು ವಿಧಾನಸೌಧದ ಮೆಟ್ಟಿಲಿನಲ್ಲಿ ಮುಗ್ಗರಿಸುವಂತೆ ಮಾಡಿತು.
ಅಂದಿನಿಂದ ಇಂದಿನವರೆಗೂ ಒಡೆದ ಮನೆಯಾಗಿರುವ ಬಿಜೆಪಿಗೆ ಇಂದಿಗೂ ಒಬ್ಬ ವಿರೋಧ ಪಕ್ಷದ ನಾಯಕನನ್ನು ಆರಿಸಿಕೊಳ್ಳಲು ಸಾಧ್ಯವಾಗಿಲ್ಲ. ಇತ್ತ ರಾಜ್ಯಾಧ್ಯಕ್ಷ ಸ್ಥಾನವೂ ಕೆಲವು ತಿಂಗಳುಗಳಿಂದ ಖಾಲಿ ಉಳಿದಿದೆ. ಒಟ್ಟಾರೆ ಸದ್ಯಕ್ಕೆ ರಾಜ್ಯ ಬಿಜೆಪಿಯೆನ್ನುವುದು ಲಗಾಮೇ ಇಲ್ಲದ ಹುಚ್ಚು ಕುದುರೆಯಂತಾಗಿದೆ. ಅದರ ಮೇಲೆ ಕುಳಿತ ನಾಯಕರು ಇದು ತಮ್ಮ ಯಾವ ಕಣಿವೆಗೆ ಕೆಡವುವುದೋ ಎನ್ನುವ ಆತಂಕದಲ್ಲಿದ್ದಾರೆ.
ತಮ್ಮ ಮಗನಿಗೆ ವಿರೋಧ ಪಕ್ಷದ ನಾಯಕನ ಸ್ಥಾನವಾಗಲಿ, ರಾಜ್ಯಾಧ್ಯಕ್ಷನ ಸ್ಥಾನವಾಗಲಿ ಸಿಗುವುದ ಕಷ್ಟ ಎನ್ನುವುದರ ವಾಸನೆ ಮೂಗಿಗೆ ಬಡಿಯುತ್ತಿದ್ದಂತೆ ಯಡಿಯೂರಪ್ಪ ವಿದೇಶ ಪ್ರವಾಸದ ನೆಪದಲ್ಲಿ ಸ್ಥಳೀಯ ನಾಯಕರಿಂದ ಮುನಿಸಿಕೊಂಡು ದೂರ ಸರಿದಿದ್ದಾರೆ. ಅತ್ತ ವಿಜಯೇಂದ್ರ ಪ್ರಶಾಂತ್ ಕಿಶೋರ್ ಅವರನ್ನು ಭೇಟಿಯಾಗಿದ್ದು ಸಹ ಈ ವಾರದ ರಾಜಕೀಯ ಸೆನ್ಸೇಷನ್ ಸುದ್ದಿಯಾಗಿತ್ತು. ಅದಕ್ಕೆ ಕೈಕಾಲು ತಲೆ ಬಾಲ ಮೂಡಿ ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಸೇರಿ ಹೊಸ ಪಕ್ಷ ಕಟ್ಟುತ್ತಾರೆನ್ನುವ ತನಕ ಸಾಗಿತ್ತು.
ಕಳೆದ ಕೆಲವು ವರ್ಷಗಳಿಂದ ಬಿಜೆಪಿಯ ಖಾಲಿಯಾಗದ ಖಜಾನೆಯಂತಿದ್ದ ಬಿಜೆಪಿಯನ್ನು ಕರ್ನಾಟಕವನ್ನು ಕಳೆದುಕೊಂಡು ಬಿಜೆಪಿ ಎಷ್ಟು ಹತಾಶಗೊಂಡಿದೆಯೆಂದರೆ ಅದಕ್ಕೆ ತಾನು ಏನು ಮಾಡಬೇಕಿದೆಯೆನ್ನುವುದು ಕೂಡಾ ತಿಳಿಯುತ್ತಿಲ್ಲ. ಮೊನ್ನೆಯ ಉಡುಪಿ ಘಟನೆಯ ವಿಷಯದಲ್ಲಿ ಬಿಜೆಪಿ ಒಗ್ಗಟ್ಟಾಗಿ ಪ್ರತಿಭಟಿಸಿದಂತೆ ಕಾಣುತ್ತಿತ್ತಾದರೂ ಕೆಲವು ಮುಖ್ಯ ನಾಯಕರು ಈ ಕುರಿತು ಹೇಳಿಕೆ ನೀಡಿರಲಿಲ್ಲ. ಘಟನೆ ನಡೆದು ಎರಡು ಮೂರು ದಿನ ಸುಮ್ಮನಿದ್ದ ಬಿಜೆಪಿ ನಂತರ ಇದನ್ನು ಸೋಷಿಯಲ್ ಮೀಡಿಯಾಗಳಲ್ಲಿ ರಾಷ್ಟ್ರಮಟ್ಟದ ಹ್ಯಾಂಡಲ್ಗಳು ದೊಡ್ಡ ವಿಷಯವನ್ನಾಗಿಸಿದ ನಂತರ ಎಚ್ಚೆತ್ತುಕೊಂಡಿತಾದರೂ ಅದಕ್ಕೆ ಈ ವಿಷಯವನ್ನು ಒಂದು ಫಲಿತಾಂಶ ತರುವ ಮಟ್ಟಕ್ಕೆ ಕೊಂಡೊಯ್ಯಲು ಸಾಧ್ಯವಾಗಿಲ್ಲ.
ಅತ್ತ ರಾಷ್ಟ್ರ ನಾಯಕರೂ ರಾಜ್ಯ ಬಿಜೆಪಿಯನ್ನು ಸಂಪೂರ್ಣವಾಗಿ ಕೈಬಿಟ್ಟಿರುವಂತೆ ಕಾಣುತ್ತಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದ ಸಮಯದಲ್ಲಿ ವಾರಕ್ಕೊಮ್ಮೆ ಕರ್ನಾಟಕದಲ್ಲಿ ಕಾಣುತ್ತಿದ್ದ ರಾಷ್ಟ್ರೀಯ ನಾಯಕರು ಈಗ ಸದ್ದೇ ಮಾಡುತ್ತಿಲ್ಲ.
ಅತ್ತ ಕರ್ನಾಟಕದಲ್ಲಿ ಬಿಜೆಪಿ ಸೋಲಿಗೆ ತನ್ನದೇ ಆದ ಕಾಣಿ ಇತ್ತಿದ್ದ ಮಾಜಿ ಐಪಿಎಸ್ ಅಣ್ಣಾಮಲೈ ನೇತ್ರತ್ವದಲ್ಲಿ ತಮಿಳುನಾಡಿಲ್ಲ ಬಿಜೆಪಿ ʼಎನ್ ಮಣ್ ಎನ್ ಮಕ್ಕಳ್ʼ ಎನ್ನುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಇದುವರೆಗೆ ಅಲ್ಲಿನ ಕಾರ್ಯಕ್ರಮಗಳಲ್ಲಿ ಅಣ್ಣಾಮಲೈ ಜೊತೆ ಜೋಡಿಯೆತ್ತಿನಂತೆ ನಿಂತಿರುತ್ತಿದ್ದ ಸಿ ಟಿ ರವಿ ಈಗ ಅಲ್ಲಿ ಲೆಕ್ಕಕ್ಕೇ ಇದ್ದಂತಿಲ್ಲ!
ಈ ಬಾರಿ ಬಿಜೆಪಿ ತಮಿಳುನಾಡಿಲ್ಲಿ ಸಾಧ್ಯವಾದಷ್ಟು ಸೀಟುಗಳನ್ನು ಗೆಲ್ಲಲು ತನ್ನಿಂದ ಸಾಧ್ಯವಿರುವುದೆಲ್ಲವನ್ನೂ ಮಾಡುತ್ತಿರುವಂತಿದೆ. ಒಂದು ಕಡೆ ತನ್ನ ಮಿತ್ರಪಕ್ಷ ಅಣ್ಣಾ ಡಿಎಮ್ಕೆಯನ್ನು ನುಚ್ಚುನೂರು ಮಾಡಿದೆ. ಈ ಮೂಲಕ ಅದು ಡಿಎಮ್ಕೆ ವಿರೋಧಿ ಮತಗಳನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳುವ ಹುನ್ನಾರದಲ್ಲಿದೆ. ಆದರೆ ಅದು ಎಷ್ಟರಮಟ್ಟಿಗೆ ಫಲ ಕೊಡುತ್ತದೆಯೆನ್ನುವುದನ್ನು ಕಾದು ನೋಡಬೇಕಿದೆ.
ಈ ಬಾರಿ ಮೋದಿ ತಮಿಳುನಾಡಿನಿಂದ ಸ್ಪರ್ಧಿಸುವ ಮೂಲಕ ಆ ರಾಜ್ಯದ ಚುನಾವಣೆಗೆ ಕಿಚ್ಚು ಹಚ್ಚಲು ಪ್ರಯತ್ನಿಸುತ್ತಿದ್ದಾರೆ. ಆದರೆ ಈಗಾಗಲೇ ಗುರುತಿಸಿದ್ದ ಒಂದು ಕ್ಷೇತ್ರದಲ್ಲಿ ಅವರು ಮಕಾಡೆ ಮಲಗುವುದು ಪಕ್ಕಾ ಎಂದು ಗೊತ್ತಾಗುತ್ತಿದ್ದ ಹಾಗೆ ಈಗ ಬಿಜೆಪಿ ತಮಿಳುನಾಡಿನ ಕೊಯಮತ್ತೂರು ಅಥವಾ ಕನ್ಯಾಕುಮಾರಿ ಕ್ಷೇತ್ರದಿಂದ ಸ್ಪರ್ಧಿಸುವ ಸ್ಕೆಚ್ ರೆಡಿಯಾಗುತ್ತಿದೆ. ಅತ್ತ ತೆಲಂಗಾಣದಲ್ಲೂ ಒಂದಷ್ಟು ಭರ್ಜರಿ ಚಟುವಟಿಕೆಗಳು ಗರಿಗೆದರಿದಂತಿವೆ.
ಈ ಮೊದಲು ಅವರು ರಾಮನಾಥಪುರಂ ಕ್ಷೇತ್ರದಿಂದ ಸ್ಪರ್ಧಿಸುವ ಕುರಿತು ಮಾತುಗಳು ಕೇಳಿಬಂದಿದ್ದವು, ಆದರೆ ಆ ಕ್ಷೇತ್ರದಿಂದ ಗೆಲ್ಲುವುದು ಅಷ್ಟು ಸುಲಭವಲ್ಲ ಎನ್ನುವುದು ಅರಿವಿಗೆ ಬರುತ್ತಿದ್ದ ಹಾಗೆ ಆ ಕ್ಷೇತ್ರವನ್ನು ಪಟ್ಟಿಯಿಂದ ಕೈ ಬಿಡಲಾಗಿದೆ. ಆದರೆ ಕನ್ಯಾಕುಮಾರಿ ಮತ್ತು ಕೊಯಮತ್ತೂರು ಕ್ಷೇತ್ರಗಳು ಬಿಜೆಪಿ ಸುಭದ್ರ ಕ್ಷೇತ್ರಗಳಾಗಿವೆ.
ಹೋದಲ್ಲೆಲ್ಲ ತಮಿಳು ಮತ್ತು ತಮಿಳುನಾಡಿನ ಧ್ಯಾನ ಮಾಡುತ್ತಿರುವ ಮೋದಿ ಈ ಬಾರಿ ತನ್ನ ತಂತ್ರದಿಂದ ದಕ್ಷಿಣವನ್ನು ಬುಟ್ಟಿಗೆ ಹಾಕಿಕೊಳ್ಳುವುದು ಅಷ್ಟು ಸುಲಭವೂ ಎನ್ನುವುದನ್ನು ಕೂಡಾ ನಾವು ಗಮನಿಸಬೇಕಿದೆ. 2014 ಮತ್ತು 2019ರ ಅಲೆ ಈಗ ಇಲ್ಲ. ಬೆಲೆಯೇರಿಕೆಯೆನ್ನುವುದು ಜನರನ್ನು ಕಾದ ಹಂಚಿನಂತೆ ಸುಡುತ್ತಿದೆ. ಬರಿಯ ಭಾಷಣದಿಂದ ಬದುಕಲು ಸಾಧ್ಯವಿಲ್ಲವೆನ್ನುವ ಅರಿವು ಜನರಲ್ಲಿ ಮೂಡತೊಡಗಿದೆ.
ಜೊತೆಗೆ ಉತ್ತರ ಭಾರತದ ರಾಜ್ಯಗಳ ವಿಧಾನಸಭಾ ಚುನಾವಣೆಗಳೂ ಬಿಜೆಪಿಗೆ ಒಳ್ಳೆಯ ಶಕುನವನ್ನೇನೂ ನೀಡುತ್ತಿಲ್ಲ. ಮಧ್ಯಪ್ರದೇಶದಲ್ಲಿ ಹಿಂದಿನ ಬಾಗಿಲ ಮೂಲಕ ಆಡಳಿತ ಹಿಡಿದಿದ್ದ ಬಿಜೆಪಿಗೆ ಈ ಬಾರಿ ಪರಿಸ್ಥಿತಿ ಬಹಳ ಕಷ್ಟವಿದೆ.
ಒಟ್ಟಾರೆಯಾಗಿ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಮುಂಗಾರಿಗೂ ಮೊದಲು ಹೊಲ ಹಸನುಗೊಳಿಸುವ ರೈತನಂತೆ ರಾಜಕೀಯ ನಾಯಕರು ತಮ್ಮ ಕ್ಷೇತ್ರಗಳನ್ನು ಹಸನಗೊಳಿಸಲು ಸಿದ್ಧವಾಗುತ್ತಿದ್ದಾರೆ. ಬಿಜೆಪಿ ಈ ಬಾರಿ ತನ್ನ ಮತ ಫಸಲಿಗೆ ರಾಮ ಮಂದಿರ ಎನ್ನುವ ದಿವ್ಯ ಔಷಧವನ್ನು ನಂಬಿದಂತಿದೆ. ಈಗಾಗಲೇ ಮುಂದಿನ ವರ್ಷದ ಜನವರಿ ತಿಂಗಳಿನಲ್ಲಿ ದೇವರ ಮೂರ್ತಿ ಉದ್ಘಾಟನೆಗೆ ದಿನವಿಡಲಾಗಿದೆ.
ಇನ್ನು ಕಾಂಗ್ರೆಸ್ ಬಹುಶಃ ತನ್ನ ಗ್ಯಾರಂಟಿಗಳನ್ನೇ ಬಳಸಿ ಲೋಕಸಭೆ ಕೂಡಾ ಗೆಲ್ಲುವ ತಂತ್ರ ಹೂಡಬಹುದು.