Thursday, June 19, 2025

ಸತ್ಯ | ನ್ಯಾಯ |ಧರ್ಮ

ಕರಾವಳಿ ದರೋಡೆಕೋರ ಶಿವಾಜಿಯನ್ನು ಹೀರೋ ಮಾಡ್ತಾರಾ ರಿಷಬ್ ಶೆಟ್ಟಿ?

“..ಶಿವಾಜಿಗೆ ಇತಿಹಾಸದಲ್ಲಿ ಸ್ಥಾನವಿರಬಹುದು. ಆದರೆ ರಿಷಬ್ ಶೆಟ್ಟಿ ಹುಟ್ಟಿದ ಕರಾವಳಿಗೆ ಶಿವಾಜಿ ಒರ್ವ ವಿಲನ್, ದರೋಡೆಕೋರ !
1665 ರಲ್ಲಿ ಛತ್ರಪತಿ ಶಿವಾಜಿ ಬಸ್ರೂರಿನಲ್ಲಿ ದರೋಡೆ ನಡೆಸದೇ ಇದ್ದಲ್ಲಿ ಇವತ್ತು ಇಡೀ ಕರಾವಳಿ ಹೀಗಿರುತ್ತಿರಲಿಲ್ಲ. ಮುಂಬೈಯನ್ನೂ ಮೀರಿಸುವ ವಾಣಿಜ್ಯ ನಗರಿಯಾಗಿ ಇರುತ್ತಿತ್ತು..” ನವೀನ್ ಸೂರಿಂಜೆಯವರ ಬರಹದಲ್ಲಿ

ನಟ ರಿಷಬ್ ಶೆಟ್ಟಿ ಬಲಪಂಥೀಯ ಸಿದ್ದಾಂತವಾದಿ. ‘ಕಾಂತಾರ’ ದಲಿತರ ವಿರೋಧಿ ಮನಸ್ಥಿತಿಯ ಸಿನೇಮಾ. ಕರಾವಳಿಯ ಸಂಸ್ಕೃತಿಯ ಪರಿಚಯದ ನೆಪದಲ್ಲಿ ‘ದಲಿತರು ಕೋಣ ಸಾಕಿ, ಕಂಬಳ ಕ್ರೀಡೆಯಲ್ಲಿ ಭಾಗವಹಿಸಬಾರದು, ಕೋಲ ಕಟ್ಟುವುದಷ್ಟೆ ಅವರ ಕೆಲಸ’ ಎಂದು ಕಾಂತಾರ ಮೂಲಕ ನಯವಾಗಿ ಸಾರಲಾಯಿತು. ಈಗ ‘ಛತ್ರಪತಿ ಶಿವಾಜಿ’ ಸಿನೇಮಾ ಮೂಲಕ ರಿಷಬ್ ಬಲಪಂಥೀಯತೆಯ ಇನ್ನೊಂದು ಮುಖ ತೋರಿಸುತ್ತಿದ್ದಾರೆ.

ಶಿವಾಜಿಗೆ ಇತಿಹಾಸದಲ್ಲಿ ಸ್ಥಾನವಿರಬಹುದು. ಆದರೆ ರಿಷಬ್ ಶೆಟ್ಟಿ ಹುಟ್ಟಿದ ಕರಾವಳಿಗೆ ಶಿವಾಜಿ ಒರ್ವ ವಿಲನ್, ದರೋಡೆಕೋರ !
1665 ರಲ್ಲಿ ಛತ್ರಪತಿ ಶಿವಾಜಿ ಬಸ್ರೂರಿನಲ್ಲಿ ದರೋಡೆ ನಡೆಸದೇ ಇದ್ದಲ್ಲಿ ಇವತ್ತು ಇಡೀ ಕರಾವಳಿ ಹೀಗಿರುತ್ತಿರಲಿಲ್ಲ. ಮುಂಬೈಯನ್ನೂ ಮೀರಿಸುವ ವಾಣಿಜ್ಯ ನಗರಿಯಾಗಿ ಇರುತ್ತಿತ್ತು.

ಆಗ ಬಸ್ರೂರು ಕರಾವಳಿಯ ದೊಡ್ಡ ವಾಣಿಜ್ಯ ನಗರ. ಕ್ರಿಶ 12 ನೇ ಶತಮಾನದಲ್ಲಿ ಬಸ್ರೂರು ವೈಭವದ ಪಟ್ಟಣ. ತೆಂಗಿನಕಾಯಿ, ಅಕ್ಕಿ, ಕಾಳುಮೆಣಸು, ತಾಳೆ, ಲವಂಗ, ದಾಲ್ಚಿನಿ, ದವಸದಾನ್ಯಗಳು ಸೇರಿದಂತೆ ಕರಾವಳಿ ಮಲೆನಾಡಿಗರು ಬೆಳೆಯುತ್ತಿದ್ದ ಮಸಾಲ ಪದಾರ್ಥಗಳನ್ನು ಬಸ್ರೂರಿನ ಮೂಲಕ ವಿದೇಶಗಳಿಗೆ ಸರಬರಾಜು ಮಾಡಲಾಗುತ್ತಿತ್ತು. ಚೀನಾದಿಂದ ಪಾತ್ರೆ, ರೇಷ್ಮೆ ವಸ್ತ್ರಗಳನ್ನು ಬಸ್ರೂರಿನ ಮೂಲಕ ಆಮದು ಮಾಡಲಾಗುತ್ತಿತ್ತು. ಚೀನಾಕ್ಕೆ ಬಸ್ರೂರಿನಿಂದ ಕಬ್ಬು ರಫ್ತು ಮಾಡಲಾಗುತ್ತಿತ್ತು.

ಶಿವಾಜಿಯ ‘ಬಸ್ರೂರು ದರೋಡೆ’ಯು ಮಹಾಶಿವರಾತ್ರಿ ದಿನದಂದು ನಡೆಯುತ್ತದೆ. (ಆಧಾರ : SIVAJIS RAID ON BASRUR By T S Shejwalkar – 1942, Page :145) ಬಸ್ರೂರು ಮಹಾಲಿಂಗೇಶ್ವರ ಜಾತ್ರೆ ಮಹಾಶಿವರಾತ್ರಿಯಂದೇ ನಡೆಯುತ್ತದೆ. ಆಗೆಲ್ಲಾ ಜಾತ್ರೆಯೆಂದರೆ ಧಾರ್ಮಿಕ ಕಾರ್ಯಕ್ರಮವಲ್ಲ. ಮಹಾಲಿಂಗೇಶ್ವರನ ತೇರು ಎಳೆಯುವ ಜಾತ್ರೆಯೆಂದರೆ ಕೃಷಿಕರ ಬದುಕಿನ ಮಹತ್ತರ ದಿನ. ಆ ದಿನ ಸಂತೆಯಲ್ಲಿ ಕೃಷಿಕರು ಬೆಳೆದಿದ್ದನ್ನು ನೇರವಾಗಿ ಮಾರಾಟ ಮಾಡುತ್ತಾರೆ. ಮೊದಲೇ ವಾಣಿಜ್ಯ ನಗರ ಬೇರೆ. ಅಂದು ರೈತರು ಮತ್ತು ವ್ಯಾಪಾರಿಗಳ ಬಳಿ ಹಣವಿರುತ್ತದೆ ಎಂದುಕೊಂಡು 1665 ರ ಫೆಬ್ರವರಿಯ ಮಹಾಶಿವರಾತ್ರಿ ದಿನ ಶಿವಾಜಿ ತನ್ನ ದರೋಡೆಕೋರ ಸೈನ್ಯದ ಜೊತೆ ದಾಳಿ ಮಾಡಿ ದೇವಸ್ಥಾನವನ್ನೂ ಸೇರಿದಂತೆ ಲೂಟಿ ಮಾಡಿದರು. ಬಸ್ರೂರಿನ ಮುಖ್ಯ ವ್ಯಾಪಾರಿ ವರ್ಗವಾಗಿದ್ದ ಜಿಎಸ್ ಬಿ (ಗೌಡ ಸಾರಸ್ವತ ಬ್ರಾಹ್ಮಣ)ರ ಮೇಲೆ ಶಿವಾಜಿ ದರೋಡೆ ಪಡೆ ಹಲ್ಲೆ ನಡೆಸಿತು. ಹಲವು ಹಿಂದೂ-ಬ್ರಾಹ್ಮಣರ ಸಾವು ನೋವುಗಳು ನಡೆದವು. ಈ ದಾಳಿಯ ಬಳಿಕ ಬಸ್ರೂರು ವ್ಯಾಪಾರ ಕೇಂದ್ರ ನೆನೆಗುದಿಗೆ ಬಿದ್ದಿತ್ತು.

ಕರಾವಳಿಯ ಮೇಲೆ ಶಿವಾಜಿ ದರೋಡೆಗಾಗಿ ದಾಳಿ ಮಾಡಿದ ಎಂಬುದು ಇತಿಹಾಸದ ಪುಟಗಳಲ್ಲಿ ದಾಖಲಾದ ಸತ್ಯ. ಅದನ್ನು ಬಲಪಂಥೀಯರು ‘ಪೋರ್ಚುಗೀಸರ ವಾಣಿಜ್ಯ ಕೇಂದ್ರದ ಮೇಲೆ ನಡೆದ ದಾಳಿ’ ಎನ್ನುತ್ತಾರೆ. ಇದು ಅಪ್ಪಟ ಸುಳ್ಳು. ಶಿವಾಜಿಯು ದಕ್ಷಿಣ ಕನ್ನಡ ಜಿಲ್ಲೆಯ ಮೇಲೆ ದಾಳಿ ಮಾಡುವಾಗ ಪೋರ್ಚುಗೀಸರ ಆಡಳಿತವಿರುವ ಗೋವಾವನ್ನು ಹಾದು ಬರುತ್ತಾರೆ. ಗೋವಾದಲ್ಲಿರುವ ಪೋರ್ಚುಗೀಸರ ಮೇಲೆ ಯಾವ ದಾಳಿಯನ್ನೂ ಮಾಡಲ್ಲ. (ಆಧಾರ : SIVAJIS RAID ON BASRUR By T S Shejwalkar – 1942, Page :140)

ಆಗ ದಕ್ಷಿಣ ಕನ್ನಡದ ಬಸ್ರೂರಿನಲ್ಲಿ ಕೆಳದಿಯ ಭದ್ರಪ್ಪ ನಾಯಕ ಡಚ್ಚರೊಂದಿಗೆ ವಹಿವಾಟು ನಡೆಸುತ್ತಿದ್ದರು. ಪೋರ್ಚುಗೀಸರೂ ಕೂಡಾ ಕೆಳದಿಯವರ ಜೊತೆ ವ್ಯಾಪಾರ ವಹಿವಾಟಿಗೆ ಒಪ್ಪಂದ ಮಾಡಿದ್ದರೇ ವಿನಹ ಬಸ್ರೂರು‌ ಪೋರ್ಚುಗೀಸರ ಹಿಡಿತದಲ್ಲಿ ಇರಲಿಲ್ಲ. ಕನ್ನಡಿಗರೇ ಆದ ಕೆಳದಿಯವರ ಹಿಡಿತದಲ್ಲಿತ್ತು. ನಗ ನಾಣ್ಯಗಳ ದರೋಡೆಯ ಕಾರಣಕ್ಕಾಗಿಯೇ ಶಿವಾಜಿ ದಕ್ಷಿಣ ಕನ್ನಡ ಜಿಲ್ಲೆಗೆ ದಾಳಿ ನಡೆಸಿದರು.

ಕರಾವಳಿಯ ದೇವಸ್ಥಾನದ ಜಾತ್ರೆಗಳ ಮೇಲೆ ದಾಳಿ ನಡೆಸಿ ದರೋಡೆ ನಡೆಸಿದ ಶಿವಾಜಿಯನ್ನು ಕರಾವಳಿಯ ನೆಲದಲ್ಲಿ ಯಾರೂ ವಿಜೃಂಭಿಸಲು ಸಾಧ್ಯವಿಲ್ಲ. ಶಿವಾಜಿ ಕರಾವಳಿಯ ಪಾಲಿಗೆ ದರೋಡೆಕೋರನೇ ಹೊರತು ಹೋರಾಟಗಾರನಲ್ಲ. ನಟ ರಿಷಬ್ ಶೆಟ್ಟಿಯ ಸಿದ್ದಾಂತ ಏನಾದರೂ ಇರಲಿ, ಅವರು ಪಾತ್ರದ ಮೂಲಕ ದರೋಡೆಕೋರನನ್ನು ಹೀರೋ ಎಂದು ಬಿಂಬಿಸುವುದು ಅವರ ಹುಟ್ಟೂರಿಗೆ ಮಾಡುವ ಅವಮಾನ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page