Wednesday, June 26, 2024

ಸತ್ಯ | ನ್ಯಾಯ |ಧರ್ಮ

ಬುದ್ಧಿ ಬೇರೆಯವರ ಕೈಗೆ ಕೊಟ್ಟಾಗ ಜಿಲ್ಲೆ ಹಿಂದುಳಿಯದಿರುವುದೇ..?

ಉಡುಪಿ ಜಿಲ್ಲೆ 2023 ರಲ್ಲಿ ಶಿಕ್ಷಣ ಸೂಚ್ಯಂಕದಲ್ಲಿ 13 ನೇ ಸ್ಥಾನಕ್ಕೆ ಕುಸಿದಿದೆ. 2015 ರಲ್ಲಿ ಕಾಂಗ್ರೆಸ್ ಸರಕಾರವಿದ್ದ ಸಂದರ್ಭದಲ್ಲಿ 1ನೇ ಸ್ಥಾನ, 2016 ರಲ್ಲಿ 2 ನೇ ಸ್ಥಾನ, 2017 ರಲ್ಲಿ 1 ನೇ ಸ್ಥಾನ ಹಾಗೂ 2018 ರಲ್ಲಿ 1 ನೇ ಸ್ಥಾನಕ್ಕೇರಿದ್ದ ಉಡುಪಿ ಜಿಲ್ಲೆ 2020 ರಲ್ಲಿ 7 ನೇ ಸ್ಥಾನ, 2022 ರಲ್ಲಿ 16 ನೇ ಸ್ಥಾನ ಪಡೆದು ಕಳೆಪ ಸಾಧನೆ ತೋರಿದೆ – ಡಾ. ಸುಬ್ರಹ್ಮಣ್ಯ ಭಟ್, ಬೈಂದೂರು.

ಮಂಗಳವಾರ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉಡುಪಿಗೆ ಬಂದು, ಉಡುಪಿ ಜಿಲ್ಲೆಯ ಪ್ರಗತಿ ಪರಿಶೀಲನೆ ಮಾಡಿದ್ದು ಸಂತೋಷದ ಸಂಗತಿ. ಆದರೆ ಅಲ್ಲಿ ಅನಾವರಣಗೊಂಡ ಪ್ರಗತಿಪತ್ರ ಕಂಡು, ಕೇಳಿ ತುಂಬ ಬೇಸರವಾಯಿತು. ಆದರೆ ಈ ಕಳಪೆ ಸಾಧನೆಗೆ ಕಾರಣ ನಾವೇ…! ಹೌದು. ಬುದ್ಧಿವಂತರ ಜಿಲ್ಲೆ ಎನ್ನಿಸಿಕೊಂಡಿದ್ದ ಉಡುಪಿಯ ಜನರು ತಮ್ಮ ಬುದ್ಧಿಯನ್ನು ಧರ್ಮಾಂಧರ ಕೈಗೆ ಕೊಟ್ಟು, ಅವರು ಊದಿದ ಪುಂಗಿಗೆ ತಲೆ ತೂಗಿದ್ದರ ಪರಿಣಾಮ ಶಿಕ್ಷಣ ಹಾಗೂ ಆರೋಗ್ಯ ಮಾತ್ರವಲ್ಲದೇ ಎಲ್ಲಾ ಕ್ಷೇತ್ರದಲ್ಲೂ ಅಭಿವೃದ್ಧಿಯಲ್ಲಿ ಕುಂಠಿತವಾಗುತ್ತಿದೆ. ಈ ವಿಚಾರವನ್ನು ಸ್ವತ: ಸಿದ್ದರಾಮಯ್ಯನವರೇ ಬೇಸರದಿಂದ ಹಂಚಿಕೊಂಡರು. ಉತ್ತಮ ಶಾಲೆ ಕಾಲೇಜು, ಆಸ್ಪತ್ರೆ ಎಲ್ಲವೂ ಇಲ್ಲಿ ಇದ್ದರೂ ಮುಕ್ತವಾಗಿ ಓದುವ, ಸೌಲಭ್ಯವನ್ನು ಪಡೆದುಕೊಳ್ಳುವ ಮುಕ್ತ ಮನಸ್ಥಿತಿ ಇಲ್ಲದ ಮೇಲೆ ಯಾವುದಿದ್ದರೂ ಉಪಯೋಗವಿಲ್ಲ. ಹಾಗಾಗಿಯೇ ಉಡುಪಿ ಅಭಿವೃದ್ಧಿಯ ಪಥದಲ್ಲಿ ಕುಂಟುತ್ತಾ ಸಾಗಿದೆ.

ಇದು ಕಳವಳಕಾರಿ ಬೆಳವಣಿಗೆ..

ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಗೆ ಬರುವ ಮೊದಲೇ ವಿವಿಧ ಕ್ಷೇತ್ರಗಳಲ್ಲಿನ ಉಡುಪಿ ಜಿಲ್ಲೆಯ ಸಾಧನೆಯ ಅವಲೋಕನ ನಡೆಸಿಯೇ ಸಿ.ಎಂ. ಬಂದಿದ್ದರು. ಅಪಾರವಾದ ಆಡಳಿತಾತ್ಮಕ ಅನುಭವವಿರುವ ಸಿದ್ದರಾಮಯ್ಯನವರು ಜಿಲ್ಲಾಮಟ್ಟದ ಎಲ್ಲಾ ಅಧಿಕಾರಿಗಳಿಂದಲೂ ಮಾಹಿತಿ ಪಡೆದುಕೊಳ್ಳುತ್ತಾ ಕಳಪೆ ಸಾಧನೆಗೆ ಕಾರಣವನ್ನು ಕೇಳುತ್ತಾ, ಎಚ್ಚರಿಕೆ ನೀಡುತ್ತಾ ಜಡ್ಡುಗಟ್ಟಿದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದರು. ಬಹುಮುಖ್ಯವಾಗಿ ಶಿಕ್ಷಣ ಮತ್ತು ಆರೋಗ್ಯ ಇಲಾಖೆಯ ಮೇಲೆ ಗಮನ ಹರಿಸಿದ ಮುಖ್ಯಮಂತ್ರಿಗಳು ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ಲೋಪ ಸರಿಪಡಿಸಿಕೊಳ್ಳದಿದ್ದರೆ ಅಮಾನತು ಮಾಡುವುದಾಗಿ ಖಡಕ್ ವಾರ್ನಿಂಗ್ ಕೊಟ್ಟರು. ಅದಕ್ಕೂ ಕಾರಣ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಮಹಿಳೆಯರ ಹಾಗೂ ಮಕ್ಕಳ ಸಾವಿನ ಸಂಖ್ಯೆ…! ಅದರ ಜೊತೆಜೊತೆಗೆ ಕುಸಿಯುತ್ತಿರುವ ಆರೋಗ್ಯ ಸೂಚ್ಯಂಕ. 2015 ರಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಇದ್ದಾಗ ಇದೇ ಉಡುಪಿ ಜಿಲ್ಲೆ ಆರೋಗ್ಯ ಸೂಚ್ಯಂಕದಲ್ಲಿ ನಂಬರ್ ಒನ್ ಆಗಿತ್ತು. ಇಡೀ ರಾಜ್ಯಕ್ಕೆ ಒಂದನೇ ಸ್ಥಾನದಲ್ಲಿದ್ದ ಉಡುಪಿ ಈಗ 19 ನೇ ಸ್ಥಾನಕ್ಕೆ ಕುಸಿದಿದೆ…! 2015-16 ರಲ್ಲಿ 14 ಮಂದಿ ತಾಯಂದಿರ ಸಾವಾಗಿತ್ತು. ಆದರೆ 2021-22 ನೇ ಸಾಲಿನಲ್ಲಿ 126 ಜನ ತಾಯಂದಿರು ಅಸು ನೀಗಿದ್ದಾರೆ…! ಹಾಗೆಯೇ ಮಕ್ಕಳ ಸಾವಿನ ಪ್ರಮಾಣದಲ್ಲೂ ವಿಪರೀತ ಏರಿಕೆಯಾಗಿದ್ದು 2015-16 ರಲ್ಲಿ 50 ಮಕ್ಕಳು ಸಾವನ್ನಪ್ಪಿದ್ದರೆ 2022-23 ರಲ್ಲಿ 166 ಕಂದಮ್ಮಗಳು ಇಹಲೋಕ ತ್ಯಜಿಸಿದ್ದಾರೆ…! ವಿಶ್ವವಿಖ್ಯಾತ ಮಣಿಪಾಲ ಆಸ್ಪತ್ರೆ ಸೇರಿದಂತೆ ಹತ್ತಾರು ಹೈಟೆಕ್ ಆಸ್ಪತ್ರೆಗಳನ್ನು ಹೊಂದಿದ್ದರೂ ಈ ಪ್ರಮಾಣದಲ್ಲಿ ಸಾವು ಸಂಭವಿಸುತ್ತಿರುವುದು ಕಳವಳಕಾರಿ ಬೆಳವಣಿಗೆ. ತಜ್ಞ ವೈದ್ಯರಿದ್ದೂ, ಸಕಲ ಸೌಲಭ್ಯಗಳಿದ್ದೂ, ಕ್ಲಪ್ತ ಸಮಯಕ್ಕೆ ರೋಗಿಗಳು ಆಸ್ಪತ್ರೆಗೆ ಬಂದಿದ್ದರೂ ಹೀಗೆ ಸಾವು ಸಂಭವಿಸುತ್ತಿರುವುದಾದರೂ ಏಕೆ…? ಎನ್ನುವ ವಿಚಾರದಲ್ಲಿ ಆರೋಗ್ಯ ಇಲಾಖೆ ಕೂಲಂಕಷವಾಗಿ ಅಧ್ಯಯನ ನಡೆಸಬೇಕಾದ ಅನಿವಾರ್ಯತೆ ಇದೆ. ಈ ಎಲ್ಲಾ ಅಂಶಗಳನ್ನು ಗಮನಿಸಿದರೆ ನಾವೆತ್ತ ಸಾಗುತ್ತಿದ್ದೇವೆ ಎನ್ನುವುದು ಮೇಲ್ನೋಟಕ್ಕೆ ಅರಿವಾಗುತ್ತದೆ. 

ಉಡುಪಿ ಜಿಲ್ಲೆ ಹೀಗೇಕೆ ಹಿಂದುಳಿಯುತ್ತಿದೆ?

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಉತ್ತರ ಕರ್ನಾಟಕ ಭಾಗದ ಲಕ್ಷಾಂತರ ಮಕ್ಕಳು ಬಂದು‌ ವಿದ್ಯಾಭ್ಯಾಸ ಮಾಡುತ್ತಾರೆ. ಏಕೆಂದರೆ ಇಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಸಂಸ್ಥೆಗಳಿವೆ ಎನ್ನುವ ನಂಬಿಕೆ ಅವರಿಗೆ. ಆದರೆ ಈಗ ಆ ನಂಬಿಕೆ ಕಡಿಮೆಯಾಗುತ್ತಿದ್ದು ಉಡುಪಿ ಜಿಲ್ಲೆ 2023 ರಲ್ಲಿ ಶಿಕ್ಷಣ ಸೂಚ್ಯಂಕದಲ್ಲಿ 13 ನೇ ಸ್ಥಾನಕ್ಕೆ ಕುಸಿದಿದೆ. 2015 ರಲ್ಲಿ ಕಾಂಗ್ರೆಸ್ ಸರಕಾರವಿದ್ದ ಸಂದರ್ಭದಲ್ಲಿ 1ನೇ ಸ್ಥಾನ, 2016 ರಲ್ಲಿ 2 ನೇ ಸ್ಥಾನ, 2017 ರಲ್ಲಿ 1 ನೇ ಸ್ಥಾನ ಹಾಗೂ 2018 ರಲ್ಲಿ 1 ನೇ ಸ್ಥಾನಕ್ಕೇರಿದ್ದ ಉಡುಪಿ ಜಿಲ್ಲೆ 2020 ರಲ್ಲಿ 7 ನೇ ಸ್ಥಾನ, 2022 ರಲ್ಲಿ 16 ನೇ ಸ್ಥಾನ ಪಡೆದು ಕಳೆಪ ಸಾಧನೆ ತೋರಿದೆ. ಇದಕ್ಕೆ ಬಹುಮುಖ್ಯ ಕಾರಣ ಶಿಕ್ಷಣ ಕ್ಷೇತ್ರದತ್ತ ಇಲ್ಲಿನ ಜನರು ತೋರುತ್ತಿರುವ ಅಸಡ್ಡೆ. ಶಾಲಾ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಧರ್ಮದ ಅಮಲು ತುಂಬಿ ಹಿಜಾಬ್ ಮೊದಲಾದ ವಿಚಾರವಲ್ಲದೇ ಕೆಲವೊಂದು ಸಂಘಟನೆಗಳು ವಿದ್ಯಾರ್ಥಿ ದೆಸೆಯಲ್ಲಿಯೇ ಮಕ್ಕಳನ್ನು ದಾರಿ ತಪ್ಪಿಸುತ್ತಿರುವುದು ಬಹುಮುಖ್ಯ ಕಾರಣವಾಗಿದೆ. ಬಿಜೆಪಿ ಸರಕಾರದ ಅವಧಿಯಲ್ಲಿ ಉಡುಪಿ ಜಿಲ್ಲೆಯ ಐದು ಶಾಸಕರು ಬಿಜೆಪಿಯವರೇ ಆಗಿದ್ದು ಈಗಲೂ ಐದು ಶಾಸಕರು ಅದೇ ಪಕ್ಷದವರು. ಧರ್ಮಗಳ ನಡುವಿನ ಘರ್ಷಣೆ ಹಾಗೂ ಸೂಕ್ಷ್ಮ ವಿಚಾರಗಳಲ್ಲಿ ವಿದ್ಯಾರ್ಥಿಗಳನ್ನು ಎಳೆದು ತರುತ್ತಿರುವುದರಿಂದ ಓದಿನ ಕಡೆಗೆ ಮಕ್ಕಳ ಗಮನ ಕಡಿಮೆಯಾಗುತ್ತಿದೆ. ಇದರ ಜೊತೆಗೆ ತಮ್ಮ ಮಕ್ಕಳಿಗೆ ಕರಾವಳಿ ಜಿಲ್ಲೆಗಳು ಸುರಕ್ಷಿತವಲ್ಲ ಎನ್ನುವ ಭಾವನೆ ಉತ್ತರ ಕರ್ನಾಟಕ ಭಾಗದ ಪೋಷಕರಲ್ಲಿ ಮೂಡಿದ್ದು, ಅವರುಗಳು ತಮ್ಮ ಮಕ್ಕಳನ್ನು ಉಡುಪಿ ಜಿಲ್ಲೆಯ ಶಿಕ್ಷಣ ಸಂಸ್ಥೆಗಳಿಗೆ ಸೇರಿಸಲು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ಉತ್ತಮ ಸಾಧನೆ ತೋರುವ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಶಿಕ್ಷಣ ಸಂಸ್ಥೆಗಳ ಸಾಧನೆಗೆ ಕೊಡಲಿ ಪೆಟ್ಟು ಬಿದ್ದಂತಾಗಿದೆ. ಈ ಎಲ್ಲಾ ಕಾರಣಗಳಿಂದಾಗಿ ಒಂದು ಕಾಲದಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ನಂಬರ್ ಒನ್ ಆಗಿದ್ದ ಉಡುಪಿ ಜಿಲ್ಲೆ ಹಿಂದುಳಿಯುತ್ತಿದೆ.

ಸಿ.ಎಂ. ಕಾರ್ಯದಕ್ಷತೆ ಕಂಡು ಬಿಜೆಪಿ ಶಾಸಕರು ಮೌನಕ್ಕೆ ಮೊರೆ ಹೋದರೇ?

ಇದರ ಜೊತೆಗೆ ಮುಖ್ಯಮಂತ್ರಿಗಳು 98 ಕಿ.ಮೀ. ನಷ್ಟು ಉದ್ದವಿರುವ ಕಡಲ ತೀರದಲ್ಲಿ ಕೊರೆತವನ್ನು ತಡೆಗಟ್ಟುವ ಕುರಿತು ಡಿಪಿಆರ್ ಮಾಡುವಂತೆ ಸಂಬಂಧಪಟ್ಟ ಇಲಾಖೆಯವರಿಗೆ ಸೂಚನೆ ನೀಡಿದರು. ಹಾಗೆಯೇ ಪೊಲೀಸ್ ಇಲಾಖೆಯಲ್ಲಿ ಸೈಬರ್ ಕ್ರೈಂ ಹಾಗೂ ಅಪಘಾತ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿರುವುದರ ಕುರಿತು ಕಳವಳ ವ್ಯಕ್ತಪಡಿಸಿದರು. ಅಪಘಾತದಿಂದ ಸಾವಿನ ಪ್ರಮಾಣ ಹೆಚ್ಚುತ್ತಿದ್ದು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆಯೂ ಸೂಚನೆ ನೀಡಿದರು. ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಜಿಲ್ಲಾ ಪಂಚಾಯತ್ ರಸ್ತೆ, ಲೋಕೋಪಯೋಗಿ ರಸ್ತೆಗಳೆಲ್ಲವುದರ ಅಭಿವೃದ್ಧಿ ಹಾಗೂ ದುರಸ್ತಿಯ ಕುರಿತು ಆಯಾಯ ಇಲಾಖೆಯವರ ಜೊತೆ ಸಮನ್ವಯ ಸಾಧಿಸಿಕೊಂಡು ಕೆಲಸ ಮಾಡುವಂತೆ ಜಿಲ್ಲಾಧಿಕಾರಿಯವರಿಗೆ ನಿರ್ದೇಶನ ನೀಡಿದರು. ಹೀಗೆ ಒಂದೊಂದೇ ಇಲಾಖೆಯ ಪ್ರಗತಿಯ ಅವಲೋಕನ ಮಾಡುತ್ತಿದ್ದ ಸಿ.ಎಂ. ಅವರ ಕಾರ್ಯದಕ್ಷತೆ ಕಂಡು ಸಭೆಯಲ್ಲಿ ಕುಳಿತಿದ್ದ ಬಿಜೆಪಿ ಶಾಸಕರು ಮೌನಕ್ಕೆ ಮೊರೆಹೋಗಿದ್ದರು. ಇದು ಒಬ್ಬ ಸುಶಿಕ್ಷಿತ, ಪ್ರಜ್ಞಾವಂತ, ದಕ್ಷ ನಾಯಕ ನಮ್ಮ ರಾಜ್ಯವನ್ನಾಳುತ್ತಿದ್ದರೆ ಹೇಗೆ ಕೆಲಸ ನಿರ್ವಹಿಸುತ್ತಾರೆ ಎನ್ನುವುದಕ್ಕೆ ಜೀವಂತ ನಿದರ್ಶನವಾಗಿತ್ತು. ಧರ್ಮ ಧರ್ಮಗಳ ನಡುವಿನ ಸಂಘರ್ಷದಲ್ಲಿ ಬೆಂದು ಹೋಗಿರುವ ಉಡುಪಿ ಜಿಲ್ಲೆಯ ಜನ ಈಗಲಾದರೂ ತಾವೆತ್ತ ಸಾಗುತ್ತಿದ್ದೇವೆ ಎನ್ನುವುದನ್ನು ಮನಗಂಡು ಪ್ರಜ್ಞಾವಂತರಾಗಬೇಕಾಗಿದೆ. ಆಗ ಮತ್ತೆ ಬುದ್ಧಿವಂತರ ಜಿಲ್ಲೆಯಾಗಿ ಉಡುಪಿ ಜಿಲ್ಲೆ ದೇಶದ ಭೂಪಟದಲ್ಲಿ ಗುರುತಿಸಲ್ಪಟ್ಟೀತು. ಇಲ್ಲವಾದರೆ ಬುದ್ಧಿ ಒಂಥರಾ ಇರುವ ಜನರ ಜಿಲ್ಲೆಯೆಂಬ ಕುಖ್ಯಾತಿ ಪಡೆದು, ಅಭಿವೃದ್ಧಿಯ ಹಾದಿಯಲ್ಲಿ ಆಮೆಗತಿಯಲ್ಲಿ ಸಾಗಲಿದೆ…!

ಡಾ. ಸುಬ್ರಹ್ಮಣ್ಯ ಭಟ್, ಬೈಂದೂರು.

ವೃತ್ತಿಯಲ್ಲಿ ವೈದ್ಯರಾಗಿರುವ ಇವರು ಬೈಂದೂರಿನ ಸಂವೇದನಾ ವಿಜ್ಞಾನ ವಾಣಿಜ್ಯ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರೂ ಆಗಿದ್ದಾರೆ.

ಇದನ್ನೂ ಓದಿ-ಉಡುಪಿ ನೇತ್ರ ಜ್ಯೋತಿ ಕಾಲೇಜು ಪ್ರಕರಣ; SIT ಗೆ ವಹಿಸುವ ಪ್ರಶ್ನೆಯೇ ಇಲ್ಲ: ಸಿಎಂ ಸಿದ್ದರಾಮಯ್ಯ

Related Articles

ಇತ್ತೀಚಿನ ಸುದ್ದಿಗಳು