ಮೈಸೂರು: 2020ರಲ್ಲಿ ಜಿಲ್ಲೆಯ ಆಡಳಿತ ತರಬೇತಿ ಸಂಸ್ಥೆ(ಎಟಿಐ)ಯ ಅತಿಥಿಗೃಹದಲ್ಲಿ ವಾಸ್ತವ್ಯ ಹೂಡಿದ್ದ ರೋಹಿಣಿ ಸಿಂಧೂರಿಯವರು, ಸಂಸ್ಥೆಯಲ್ಲಿದ್ದ ಇಪ್ಪತ್ತು ವಸ್ತುಗಳನ್ನು ಜಿಲ್ಲಾಧಿಕಾರಿ ನಿವಾಸಕ್ಕೆ ತೆಗೆದುಕಕೊಂಡು ಹೋಗಿದ್ದು, ಅದನ್ನು ಹಿಂದಿರುಗಿಸುವಂತೆ ಎಟಿಐ ಜಿಲ್ಲಾಧಿಕಾರಿ ಕಛೇರಿಗೆ ಪತ್ರ ಬರೆದಿದೆ.
ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿಯವರು, 2020 ಅಕ್ಟೋಬರ್ 2ರಿಂದ, ನವೆಂಬರ್ 14ರವರೆಗೂ ಎಟಿಐನ ಅತಿಥಿಗೃಹದಲ್ಲಿ ವಾಸ್ತವ್ಯ ಹೂಡಿದ್ದರು. ನಂತರ ಅಲ್ಲಿಂದ ಜಿಲ್ಲಾಧಿಕಾರಿ ನಿವಾಸಕ್ಕೆ ಸ್ಥಳಾಂತರ ಆಗುವ ವೇಳೆ ಅಲ್ಲಿದ್ದ ಎರಡು ಬಟ್ಟೆ ಹ್ಯಾಂಗರ್, ಎರಡು ಟೆಲಿಫೋನ್ ಸ್ಟೂಲ್, ಎರಡು ಬೆತ್ತದ ಕುರ್ಚಿ, ಎರಡು ಟೀಪಾಯಿ, ಮಂಚ, ಹಾಸಿಗೆ, ಮೈಕ್ರೋ ಒವನ್, ಎರಡು ಪ್ಲಾಸ್ಟಿಕ್ ಚೇರ್, ಎರಡು ಯೋಗಾ ಮ್ಯಾಟ್, ಎರಡು ಸ್ಟೀಲ್ ಜಗ್ ಎಲ್ಲವನ್ನೂ ಜಿಲ್ಲಾಧಿಕಾರಿ ನಿವಾಸಕ್ಕೆ ತೆಗೆದುಕೊಂಡು ಹೋಗಿದ್ದು, ಅದನ್ನೆಲ್ಲಾ ಮರಳಿಸುವಂತೆ ತಿಳಿಸಲಾಗಿದೆ ಅಲ್ಲದೆ ಈ ಬಗ್ಗೆ ರೋಹಿಣಿ ಜಿಲ್ಲಾಧಿಕಾರಿ ಆಗಿದ್ದ ವೇಳೆ ಪತ್ರ ಬರೆದಿದ್ದರೂ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಎಟಿಐ ನ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಈ ಬಗ್ಗೆ ಇದುವರೆಗೂ ನಾಲ್ಕು ಬಾರಿ ಪತ್ರ ಬರೆಯಲಾಗಿದ್ದು, ಸಂಸ್ಥೆಯಿಂದ 2020 ರ ಡಿ.16, 20251ರ ಜ.8 ಹಾಗೂ ಏ.21 ಮತ್ತು ಇದೀಗ ನವೆಂಬರ್ 30ರಂದು ಸಂಸ್ಥೆಯ ಜಂಟಿ ನಿರ್ದೇಶಕರ ಕಚೇರಿಯಿಂದ ಪತ್ರ ಬರೆಯಲಾಗಿದೆ, ಎಂದು ತಿಳಿದು ಬಂದಿದೆ.
ಈ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿರುವ ರೋಹಿಣಿ ಸಿಂಧೂರಿ ಅವರು, ʼಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರೆ ಅವರು ಉತ್ತರ ಕೊಡುತ್ತಾರೆ. ನಾನು ಜಿಲ್ಲಾಧಿಕಾರಿಯಾಗಿದ್ದಾಗ ಯಾವುದೇ ಯಾವ ಪತ್ರವೂ ಬರೆದಿರಲಿಲ್ಲʼ ಎಂದು ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ಅವರು, ʼಈ ವಿಷಯದ ಕುರಿತು ಸೋಮವಾರದಂದು ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಪೂರ್ಣ ಮಾಹಿತಿ ಪಡೆದು ಪರಿಶೀಲಿಸುತ್ತೇನೆʼ ಎಂದು ತಿಳಿಸಿದ್ದಾರೆ.