Wednesday, June 26, 2024

ಸತ್ಯ | ನ್ಯಾಯ |ಧರ್ಮ

ಮಹಿಳೆ | ಮತದಾನಕ್ಕೆ ಬೇಕೇಬೇಕು; ಅಧಿಕಾರಕ್ಕೆ ಬೇಕೆಂದಿಲ್ಲ!

ಪುರುಷಾಳ್ವಿಕೆಯ ಈ ವ್ಯವಸ್ಥೆಯಲ್ಲಿ ಅಧಿಕೃತವಾಗಿ ಚುನಾವಣಾ ರಾಜಕೀಯ ಕ್ಷೇತ್ರ ಪ್ರವೇಶಿಸಲು ಬಯಸುವ ಎಲ್ಲ ಅರ್ಹತೆಯುಳ್ಳ ಮಹಿಳೆ ಕೂಡ ಅನೇಕ ಬಾರಿ, ಪ್ರಬಲ ರಾಜಕೀಯ ಶಕ್ತಿಗಳ ಕಾಲಿಗೆ ಸಿಕ್ಕುವ ಫುಟ್ಬಾಲ್ ಆಗಿರುತ್ತಾಳೆ! ಅವಳನ್ನು ಗೋಲು ಬಾರಿಸಲು ಬಳಸಿಕೊಳ್ಳುವುದೂ, ಬೇಕೆಂದ ಕಡೆಗೆ ಒದೆಯುವುದು, ಬೇಡವಾದರೆ ದೂರಕ್ಕೆ ನೂಕುವುದೂ….. ಎಲ್ಲವೂ ಸಮಯ, ಸಂದರ್ಭಕ್ಕೆ ತಕ್ಕಂತೆ ಬದಲಾಗುತ್ತಿರುತ್ತದಷ್ಟೇ. – ರೂಪ ಹಾಸನ

ಕರ್ನಾಟಕದಲ್ಲೀಗ ಮತ್ತೊಂದು ವಿಧಾನಸಭಾ ಚುನಾವಣೆಯ ಹಣಾಹಣಿ! ಜನನಾಯಕರ ದ್ವೇಷ, ಮತ್ಸರ, ಆಕ್ರೋಶದ ಪರಸ್ಪರ ಕೆಸರೆರಚಾಟದ ಮಾತುಗಳು, ಎಗ್ಗುಸಿಗ್ಗಿಲ್ಲದ ಪಕ್ಷಾಂತರಗಳು, ಅಪವಿತ್ರ ಮೈತ್ರಿಗಳು, ಮತದಾರರಿಗೆ ಕಂಡುಕೇಳರಿಯದಷ್ಟು ಭ್ರಷ್ಟಹಣ, ಉಡುಗೊರೆಗಳ ಹಂಚಿಕೆ… ಇದು ಅಸಹ್ಯದ ಪರಮಾವಧಿ ತಲುಪಿರುವ ಚುನಾವಣಾ ರಾಜಕಾರಣದ ಹಲವು ಮುಖಗಳು. ಇವೆಲ್ಲವನ್ನು ಅಸಹಾಯಕತೆಯಿಂದ ನೋಡುತ್ತಾ ಮತ್ತೆ ಮತ್ತೆ ಸಾಲು ಸಾಲು ಪ್ರಶ್ನೆಗಳು ಧುತ್ತೆಂದು ಎದುರು ನಿಲ್ಲುತ್ತವೆ. ಈ ಚುನಾವಣೆಯಲ್ಲಿ ಮಹಿಳೆಯ ಪಾತ್ರ ಏನು? ಚುನಾವಣಾ ಸಂಬಂಧದ ಪ್ರಮುಖ ನಿರ್ಧಾರ, ನಿರ್ಣಯಗಳನ್ನು ತೆಗೆದುಕೊಳ್ಳಲು ಪಕ್ಷಗಳು ಮಹಿಳೆಯರನ್ನು ಒಳಗೊಂಡಿದ್ದೆಷ್ಟು? ಎಲ್ಲ ಪಕ್ಷಗಳೂ ಮಹಿಳೆಯರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೇಟ್‍ಗಳನ್ನು ನೀಡಿದ್ದೆಷ್ಟು? ಚುನಾವಣಾ ಪ್ರಣಾಳಿಕೆಯಲ್ಲಿ ಮಹಿಳಾ ಸಮಸ್ಯೆಗಳ ಪರಿಹಾರಕ್ಕೆ ಎಷ್ಟು ಆದ್ಯತೆ ನೀಡಲಾಗಿದೆ? ಎಷ್ಟು ಮಂದಿ ಮಹಿಳೆಯರು ಗೆದ್ದು ಶಾಸಕಿಯರಾಗುತ್ತಾರೆ? ಹೊಸ ಸರ್ಕಾರದಲ್ಲಿ ಸಚಿವ ಸ್ಥಾನ ಎಷ್ಟು ಮಂದಿ ಮಹಿಳೆಯರಿಗೆ ನೀಡಲಾಗುತ್ತದೆ? ನೀಡಿದರೂ ಯಾವೆಲ್ಲ ಖಾತೆ?… ಹೀಗೇ. ಆದರೆ ಕರ್ನಾಟಕ ರಾಜಕೀಯ ಇತಿಹಾಸವನ್ನು ಕೊಂಚವಾದರೂ ಬಲ್ಲ ಪ್ರಜ್ಞಾವಂತರಿಗೆಲ್ಲಾ ಬಹುಶಃ ಉತ್ತರ ಗೊತ್ತೇ ಇದೆ! ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲಿ, ಹೆಚ್ಚೆಚ್ಚು ಆಯ್ಕೆಯಾಗಲಿ, ಮಹಿಳೆಯರ ನಾಯಕತ್ವ ಹೆಚ್ಚಿ ಈ ಕ್ಷುದ್ರ ರಾಜಕೀಯ ವಾತಾವರಣ ಬದಲಾಗುವಂತಾಗಲಿ… ಎಂಬುದು ಉಳಿದ ಆಶಾವಾದ.

ಚುನಾವಣೆಗಳ ಸ್ಪರ್ಧೆಯಲ್ಲಿ ಎಲ್ಲಿದ್ದೇವೆ?

ಆದರೆ ನಾವು ಜನಸಂಖ್ಯೆಯ ಅಂದಾಜು ಅರ್ಧದಷ್ಟಿರುವ ಮಹಿಳೆಯರು ಶಾಸನ ಸಭೆಯ ಚುನಾವಣೆಗಳ ಸ್ಪರ್ಧೆಯಲ್ಲಿ ಎಲ್ಲಿದ್ದೇವೆ ಎಂದು ದುರ್ಬಿನು ಹಾಕಿ ಹುಡುಕಬೇಕಿದೆ. ಚುನಾವಣೆಯಿಂದ ಚುನಾವಣೆಗೆ ಮಹಿಳೆಯರ ಪಾತ್ರದಲ್ಲಿ ಗಮನಾರ್ಹ ಬದಲಾವಣೆಯೇನೂ ಆಗಿಲ್ಲವೆಂಬುದೂ ನಿರಾಸೆಯನ್ನುಂಟುಮಾಡುತ್ತದೆ. ಕರ್ನಾಟಕ ವಿಧಾನಸಭಾ ಚುನಾವಣೆಯ ಅಂದಾಜು 45 ವರ್ಷಗಳ ಇತಿಹಾಸದಲ್ಲಿ ಎಷ್ಟು ಮಹಿಳೆಯರು ಸ್ಪರ್ಧಿಸಿದ್ದರು, ಅದರಲ್ಲಿ ಗೆದ್ದವರೆಷ್ಟು ಎಂದು ಅವಲೋಕನ ಮಾಡಿದರೆ-1978ರಲ್ಲಿ 30 ಅಭ್ಯರ್ಥಿಗಳಲ್ಲಿ 8 ವಿಜೇತರು, 1983ರಲ್ಲಿ 34 ಅಭ್ಯರ್ಥಿಗಳಲ್ಲಿ ಒಬ್ಬರು ವಿಜೇತರು, 1985ರಲ್ಲಿ 108 ಅಭ್ಯರ್ಥಿಗಳಲ್ಲಿ 8 ವಿಜೇತರು, 1989ರಲ್ಲಿ 78 ಅಭ್ಯರ್ಥಿಗಳಲ್ಲಿ 10 ವಿಜೇತರು, 1994ರಲ್ಲಿ 117 ಅಭ್ಯರ್ಥಿಗಳಲ್ಲಿ 7 ವಿಜೇತರು, 1999ರಲ್ಲಿ 62 ಅಭ್ಯರ್ಥಿಗಳಲ್ಲಿ 6 ವಿಜೇತರು, 2004ರಲ್ಲಿ 101 ಅಭ್ಯರ್ಥಿಗಳಲ್ಲಿ 6 ವಿಜೇತರು 2008ರಲ್ಲಿ 107 ಅಭ್ಯರ್ಥಿಗಳಲ್ಲಿ 3 ವಿಜೇತರು, 2013ರಲ್ಲಿ 175 ಅಭ್ಯರ್ಥಿಗಳಲ್ಲಿ 6 ವಿಜೇತರು, 2018ರಲ್ಲಿ 219 ಅಭ್ಯರ್ಥಿಗಳಲ್ಲಿ 7 ವಿಜೇತರು… ಒಟ್ಟು ಇದುವರೆಗೆ 1,114 ಮಹಿಳಾ ಸ್ಪರ್ಧಿಗಳ ಪೈಕಿ 102 ಮಹಿಳಾ ಅಭ್ಯರ್ಥಿಗಳು ಮಾತ್ರ ಚುನಾವಣೆಯಲ್ಲಿ ಗೆದ್ದಿದ್ದಾರೆ!  

ರಾಜಕೀಯ ತಂತ್ರಗಾರಿಕೆಗಳು ಲೆಕ್ಕಾಚಾರಗಳು..

ಹಾಗೆ ಪ್ರತಿ ಪಕ್ಷದ ಟಿಕೇಟ್ ಹಂಚಿಕೆಯಲ್ಲೂ ಹಲವು ಬಗೆಯ ರಾಜಕೀಯ ತಂತ್ರಗಾರಿಕೆಗಳೂ, ಲೆಕ್ಕಾಚಾರಗಳೂ ಕೆಲಸ ಮಾಡುತ್ತವೆ. ಜಾತಿ/ಧಾರ್ಮಿಕ ಸಮುದಾಯಗಳ ಪ್ರಾಬಲ್ಯ, ಗೆಲುವಿನ ಸಾಧ್ಯತೆ, ಹಣಬಲ, ತೋಳ್ಬಲದ ಸಾಮರ್ಥ್ಯ ರಾಜಕೀಯ ಅನುಭವ, ಜನಬೆಂಬಲ, ಅಭ್ಯರ್ಥಿಗಳ ಸ್ಥಳೀಯ ಸಮೀಕರಣ… ಮುಂತಾದುವುಕ್ಕೆ ಆದ್ಯತೆ ನೀಡಲಾಗುತ್ತದೆ. ಲಿಂಗಸಮಾನತೆಯ ಅಂಶ ಅಲ್ಲಿ ಚರ್ಚೆಗೂ ಬರುವುದಿಲ್ಲ! ಪುರುಷಾಳ್ವಿಕೆಯ ಈ ವ್ಯವಸ್ಥೆಯಲ್ಲಿ ಅಧಿಕೃತವಾಗಿ ಚುನಾವಣಾ ರಾಜಕೀಯ ಕ್ಷೇತ್ರ ಪ್ರವೇಶಿಸಲು ಬಯಸುವ ಎಲ್ಲ ಅರ್ಹತೆಯುಳ್ಳ ಮಹಿಳೆ ಕೂಡ ಅನೇಕ ಬಾರಿ, ಪ್ರಬಲ ರಾಜಕೀಯ ಶಕ್ತಿಗಳ ಕಾಲಿಗೆ ಸಿಕ್ಕುವ ಫುಟ್ಬಾಲ್ ಆಗಿರುತ್ತಾಳೆ! ಅವಳನ್ನು ಗೋಲು ಬಾರಿಸಲು ಬಳಸಿಕೊಳ್ಳುವುದೂ, ಬೇಕೆಂದ ಕಡೆಗೆ ಒದೆಯುವುದು, ಬೇಡವಾದರೆ ದೂರಕ್ಕೆ ನೂಕುವುದೂ….. ಎಲ್ಲವೂ ಸಮಯ, ಸಂದರ್ಭಕ್ಕೆ ತಕ್ಕಂತೆ ಬದಲಾಗುತ್ತಿರುತ್ತದಷ್ಟೇ ಎಂಬುದು ತಕ್ಷಣಕ್ಕೆ ಕಣ್ಣಿಗೆ ಗೋಚರಿಸುವ ಸತ್ಯ. ಹಾಗೇ ಎಲ್ಲಾ ಪಕ್ಷಗಳಲ್ಲೂ ಸ್ವತಂತ್ರ ವ್ಯಕ್ತಿತ್ವದ ಮಹಿಳೆಗೆ ಟಿಕೇಟ್ ನೀಡುವ ಪ್ರಮಾಣ ಕೂಡ ಅತ್ಯಂತ ಕಡಿಮೆಯೇ! ದನಿ ಎತ್ತಿ ಲೋಪಗಳನ್ನು ಪ್ರಶ್ನಿಸುವ, ಹಕ್ಕುಗಳನ್ನು ಕೇಳುವ, ನಿಷ್ಠುರವಾದಿ, ಪ್ರಾಮಾಣಿಕತೆಯಿಂದ ನಡೆದುಕೊಳ್ಳುವ ಹೆಣ್ಮಕ್ಕಳು ಎಲ್ಲೆಡೆಯೂ ವರ್ಜ್ಯ! ರಾಜಕೀಯ-ರಾಜಕಾರಣದ ಚುನಾವಣಾ ತಂತ್ರಗಾರಿಕೆಗಳು ಹೆಚ್ಚಾಗಿ ಗಂಡು ಪಾಳೇಗಾರಿಕೆಯ ಕ್ಷೇತ್ರವೇ ಆಗಿರುವಾಗ, ಪುರುಷರಿಗೆ ಅಸ್ತಿತ್ವದ ಭಯ ಕಾಡುತ್ತದೆ. ಹೀಗಾಗಿ ಒಂದೋ ರಾಜಕಾರಣಿ ಸತ್ತಿದ್ದು, ಅನುಕಂಪಗಿಟ್ಟಿಸಲು ಅವನ ಪತ್ನಿಗೆ, ಕುಟುಂಬದ ರಾಜಕೀಯ ಪುರುಷರ ಬೆಂಬಲವಿರುವವರಿಗೆ ಅಥವಾ ಸೋಲು ಖಚಿತವಾದ ಸ್ಥಳದಲ್ಲಿ ಮಾತ್ರ ಮಹಿಳೆಗೆ ಟಿಕೆಟ್ ನೀಡುವುದನ್ನು ಹೆಚ್ಚಾಗಿ ಕಾಣುತ್ತಾ ಬಂದಿದ್ದೇವೆ! ಜೊತೆಗೆ ಇತ್ತೀಚೆಗೆ ಸಿನಿಮಾ ಕ್ಷೇತ್ರದ ಮಹಿಳೆಯರನ್ನು ಕೇವಲ ಅವರ ತಾರಾಮೌಲ್ಯವನ್ನು ಪರಿಗಣಿಸಿ, ಮತ್ಯಾವ ರಾಜಕೀಯ ಅರ್ಹತೆ ಇಲ್ಲದಿದ್ದಾಗಲೂ ರಾಜಕೀಯಕ್ಕೆ ಕರೆ ತರುವ ಕೆಟ್ಟ ಪದ್ಧತಿಯೂ ಚಾಲ್ತಿಗೆ ಬಂದಿದೆ.

ಇದು ಬದಲಾಗಬೇಕು..

ರಾಜಕಾರಣದಲ್ಲಿ ಅಪರಾಧ, ಅಪ್ರಮಾಣಿಕತೆ ಮತ್ತು ಭ್ರಷ್ಟತೆ ಮಿತಿಮೀರಿರುವುದು ಮಹಿಳೆ ರಾಜಕೀಯದಿಂದ ದೂರ ಉಳಿಯಲು ಇನ್ನೊಂದು ಕಾರಣ. ರಾಜಕಾರಣದ ಉದ್ದೇಶಕ್ಕಾಗಿ ಅದರ ಹೆಸರಲ್ಲಿ ನಡೆಯುತ್ತಿರುವ ದೊಂಬಿ, ಗಲಭೆ, ಹಿಂಸಾಚಾರ, ಪುರುಷ ದರ್ಪದ ಅಸಹ್ಯ, ಅಸಭ್ಯ ಪ್ರಕರಣಗಳನ್ನು ಗಮನಿಸುವಾಗ ಮಹಿಳೆ- ತಾನು ಯಾಕಾದರೂ ರಾಜಕೀಯದಲ್ಲಿ ಪಾಲ್ಗೊಳ್ಳಬೇಕು ಎಂದು ಭೀತಿಗೊಳಗಾಗುತ್ತಾಳೆ. ಈ ರಾಜಕೀಯ ಕೆಸರೆರಚಾಟದಲ್ಲಿ ಗಂಡಸರಿಗದೆಷ್ಟೇ ಖುಷಿಯಾದರೂ, ಸಭ್ಯತೆಯ ಗಡಿ ಮೀರುವ ವರ್ತನೆ, ದ್ವೇಷ, ಸೇಡು ಸಮರ್ಥನೀಯವೆನಿಸಿದರೂ ಟಿವಿಗಳಲ್ಲಿ, ಪತ್ರಿಕೆಯಲ್ಲಿ ಇದರ ಆಟಾಟೋಪ, ಸಮರ್ಥನೆ, ರಾಜಕಾರಣಿಗಳ ನುಡಿಮುತ್ತುಗಳನ್ನು ಕೇಳುವ ಮಹಿಳೆಯರು ಅಸಹ್ಯ ಪಟ್ಟುಕೊಳ್ಳುವುದೇ ವಾಸ್ತವ! ಇಂತಹ ಅವಲಕ್ಷಣದ ರಾಜಕೀಯ ಸನ್ನಿವೇಶದಲ್ಲಿ ನಾಯಕತ್ವ ಗುಣ, ಸಂಘಟನಾ ಚಾತುರ್ಯವಿರುವ ಮಹಿಳೆಯರು ಕೂಡ ರಾಜಕೀಯ ಪ್ರವೇಶಿಸಲು ಬಯಸುವುದು ಕಡಿಮೆಯೆ. ಇದು ರಾಜಕೀಯ- ಮಹಿಳೆಯನ್ನು ಒಳಗೊಳ್ಳಲಾಗದ ಸ್ಥಿತಿ ತಲುಪಿರುವ ನಾಚಿಕೆಗೇಡಿನ ಹಂತ. ಇದೂ ಬದಲಾಗಬೇಕು.

ಪಿತೃಪ್ರಾಧಾನ್ಯದ ಪೂರ್ವಾಗ್ರಹ..

ಇನ್ನು ಚುನಾವಣೆ ಗೆದ್ದ ಮಹಿಳೆಯರಲ್ಲಿ ಸಚಿವ ಸ್ಥಾನ ದಕ್ಕಿದ್ದೆಷ್ಟು ಮಂದಿಗೆ ಎಂದು ನೋಡಿದರೆ- 1952ರಲ್ಲಿ ರಾಜ್ಯ ಮೊದಲ ಶಾಸಕಾಂಗ ಸಭೆ ಅಸ್ತಿತ್ವಕ್ಕೆ ಬಂದ ನಂತರದಿಂದ ಇದುವರೆಗೆ ಕೇವಲ 31 ಮಹಿಳೆಯರು ಸಚಿವ ಸ್ಥಾನವನ್ನು ಅಲಂಕರಿಸಿದ್ದಾರೆ. ಅದರಲ್ಲಿ ಹೆಚ್ಚಿನವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ‘ಮಹಿಳೆಯರು ಮುಖ್ಯವಾಗಿ ಕುಟುಂಬ ಪಾಲಕರು ಮತ್ತು ಸಂಸ್ಕೃತಿ ರಕ್ಷಕರು ಆದ್ದರಿಂದ ಅವರಿಗೆ ಈ ಹುದ್ದೆಗಳೇ ಅರ್ಹ’ ಎಂಬ ಪಿತೃಪ್ರಾಧಾನ್ಯದ ಪೂರ್ವಾಗ್ರಹವೇ ಈ ಹಂಚಿಕೆಯ ಹಿಂದಿರುವ ಲೆಕ್ಕಾಚಾರವೆಂಬುದು ಯಾರೂ ಊಹಿಸಬಹುದಾದ ಸತ್ಯ. ಇದಕ್ಕೆ ಅಪವಾದವೆಂಬಂತೆ ಒಂದೆರಡು ಬಾರಿ ಮಾತ್ರ ವೈದ್ಯಕೀಯ ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್, ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ವಿದ್ಯುತ್ ಖಾತೆಗಳ ಸಚಿವ ಸ್ಥಾನ ಮಹಿಳೆಯರಿಗೆ ದೊರಕಿದೆಯಷ್ಟೇ. ಇನ್ನು ಮುಖ್ಯಮಂತ್ರಿ ಇರಲಿ, ಉಪಮುಖ್ಯಮಂತ್ರಿಯ ಸ್ಥಾನವೂ ಕನಸಾಗಿಯೇ ಉಳಿದಿದೆ! ಹೀಗಾಗಿ ಸರ್ಕಾರ ಎಂದರೆ- ಹೆಚ್ಚಿನ ಬಾರಿ ಪುರುಷ ಕೇಂದ್ರಿತ, ಪುರುಷರಿಗಾಗಿ, ಪುರುಷರಿಗೋಸ್ಕರ ಮಾತ್ರ ಎಂಬಂತಾಗಿ ಎಲ್ಲ ಪ್ರಮುಖ ಪಕ್ಷದಲ್ಲಿರುವ ಮಹಿಳೆಯರೂ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಸುವ ಭರವಸೆಯನ್ನು ಕಳೆದುಕೊಂಡಿದ್ದಾರೆ.

ಮಹಿಳಾ ಪ್ರಾತಿನಿಧ್ಯ ಕೇವಲ ಶೇಕಡ 7ರಷ್ಟು ಮಾತ್ರ!

ಹಾಗೆ ಈ ಬಾರಿಯ ಚುನಾವಣೆಯ ಚಿತ್ರಣದಲ್ಲೇನೂ ಮಹಿಳಾ ಪ್ರಾತಿನಿಧ್ಯದಲ್ಲಿ ಹೆಚ್ಚಿನ ಬದಲಾವಣೆ ಆಗಿಲ್ಲ. ಈ ಬಾರಿ ಸ್ಪರ್ಧಿಸಿರುವ 2613 ಅಭ್ಯರ್ಥಿಗಳಲ್ಲಿ, 185 ಮಂದಿ ಮಾತ್ರ ಮಹಿಳೆಯರು ಕಣದಲ್ಲಿದ್ದಾರೆ. ಕಳೆದ ಬಾರಿ 219 ಇದ್ದ ಸಂಖ್ಯೆ ಈ ಬಾರಿ ಏರಿಕೆಯ ಬದಲು, ಮತ್ತಷ್ಟು ಕುಸಿತ ಕಂಡಿದೆ. ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ, ಜನತಾದಳ ಈ ಬಾರಿ ಶೇಕಡ 5ರಷ್ಟೂ ಮಹಿಳೆಯರಿಗೆ ಪ್ರಾತಿನಿಧ್ಯ ನೀಡಿಲ್ಲವೆಂಬುದು ವಿಪರ್ಯಾಸ. ಹಾಗೆ ಎಡ ಹಾಗೂ ಪ್ರಗತಿಪರ ಚಿಂತನೆಯ ಪಕ್ಷಗಳಲ್ಲಿ ಮಹಿಳಾ ಸ್ಪರ್ಧೆ ಗೌಣ, ಇಲ್ಲವೇ ಬೆರಳೆಣಿಕೆಯಷ್ಟು ಮಾತ್ರ ಇರುವುದು ದುರಂತ. ಪ್ರಾಯೋಗಿಕವಾಗಿ ಸ್ಪರ್ಧಿಸುತ್ತಿರುವ ಕೆಲ ಹೊಸ ಪಕ್ಷಗಳಲ್ಲಿ ಹೆಚ್ಚಿನ ಮಹಿಳೆಯರು ಚುನಾವಣಾ ಕಣಕ್ಕಳಿದಿರುವುದು ಸ್ವಾಗತಾರ್ಹ. ಒಟ್ಟಾರೆ ಈ ಬಾರಿಯ ಚುನಾವಣೆಯಲ್ಲಿ ಮಹಿಳಾ ಪ್ರಾತಿನಿಧ್ಯ ಕೇವಲ ಶೇಕಡ 7ರಷ್ಟು ಮಾತ್ರ!

ಈ ಬಾರಿ 2.63 ಕೋಟಿ ಮಹಿಳಾ ಮತದಾರರು!

ಆದರೆ ಚುನಾವಣೆಯಲ್ಲಿ ಸ್ಪರ್ಧೆಗಿಳಿಸಲು ಮಹಿಳೆಯರನ್ನು ಒಳಗೊಳ್ಳುವುದು ಅತ್ಯಲ್ಪವಾದರೂ, ರಾಜಕೀಯ ಪಕ್ಷಗಳ ಗೆಲುವಿಗೆ ಮಹಿಳಾ ಮತದಾರರೇ ನಿರ್ಣಾಯಕರು! ಮಹಿಳಾ ಮತದಾರರ ಸಂಖ್ಯೆ ಚುನಾವಣೆಯಿಂದ ಚುನಾವಣೆಗೆ ಹೆಚ್ಚುತ್ತಿದ್ದು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ 2.63 ಕೋಟಿ ಮಹಿಳಾ ಮತದಾರರಿದ್ದಾರೆ. ಅದರಲ್ಲೂ ಕರ್ನಾಟಕದ ಅರ್ಧದಷ್ಟು ವಿಧಾನಸಭಾ ಕ್ಷೇತ್ರಗಳಲ್ಲಿ ಪುರುಷ ಮತದಾರರಿಗಿಂತ ಮಹಿಳಾ ಮತದಾರರೇ ಹೆಚ್ಚಿದ್ದಾರೆ! ಹೀಗಾಗಿ ರಾಜಕೀಯ ಪಕ್ಷಗಳಿಗೆ ಚುನಾವಣೆಯಲ್ಲಿ ಮಹಿಳೆ ಹೆಚ್ಚಾಗಿ ಓಟ್ ಬ್ಯಾಂಕ್ ಆಗಿ ಮಾತ್ರ ಗೋಚರಿಸುತ್ತಿದ್ದಾಳೆ. ಮಹಿಳಾ ಮತದಾರರನ್ನು ಸೆಳೆಯುವ ಹಲವು ಬಗೆಯ ಹುನ್ನಾರಗಳು ಎಲ್ಲ ಪಕ್ಷಗಳಿಂದಲೂ ಢಾಳಾಗಿಯೇ ಕಾಣುತ್ತಿದೆ. ಸ್ತ್ರೀಶಕ್ತಿ ಸಂಘಗಳು, ಹಲವು ಮಹಿಳಾ ಸಂಘಟನೆಗಳಿಗೆ ಆಮಿಷ ಒಡ್ಡಿ ರಾಜಕೀಯ ಜಾಥಾ, ಮೆರವಣಿಗೆ, ಸಭೆ, ಸಮಾವೇಶಗಳಿಗೆ ಕರೆದೊಯ್ಯಲಾಗುತ್ತದೆ. ಜೈಕಾರ ಹಾಕಲೂ, ಮತ ಚಲಾಯಿಸಲು ಮನ ಒಲಿಸಲೂ ಹಣ, ವಿವಿಧ ಉಡುಗೊರೆಗಳನ್ನೂ ನೀಡಲಾಗುತ್ತದೆ. ಎಲ್ಲ ಪಕ್ಷಗಳ ಪ್ರಣಾಳಿಕೆಗಳಲ್ಲೂ ಮಹಿಳೆಯರನ್ನು ಕೇಂದ್ರೀಕರಿಸಿ ಕೆಲ ಉಚಿತ ಕೊಡುಗೆಗಳನ್ನು ಘೋಷಿಸಲಾಗಿದೆ. ಆದರೆ ಇಷ್ಟು ಸಾಕೆ?

ಯಾರಿಗೂ ಇಚ್ಛಾಶಕ್ತಿ ಇಲ್ಲ.

ಹೆಚ್ಚಿನ ರಾಷ್ಟ್ರೀಯ, ಪ್ರಾದೇಶಿಕ ಅಥವಾ ಪ್ರಗತಿಪರ ಪಕ್ಷಗಳು ಶಾಸನ ಸಭೆಗಳಲ್ಲಿ ಮಹಿಳಾ ಮೀಸಲಾತಿಯ ಕುರಿತು ದಶಕಗಳಿಂದ ತುಟಿಯಂಚಿನ ಒತ್ತಾಯದ ಮಾತುಗಳನ್ನಾಡುತ್ತಲೇ ಬಂದಿವೆ. ಆದರೆ ಯಾರಿಗೂ ಇಚ್ಛಾಶಕ್ತಿ ಇಲ್ಲ. ಅವುಗಳು ಆಂತರ್ಯದಲ್ಲಿ ಈ ಮೀಸಲಾತಿಯ ವಿರೋಧವಾಗಿಯೇ ಇವೆ! ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ರಾಜಕಾರಣಕ್ಕೆ ಬಂದರೆ ರಾಜಕಾರಣದಲ್ಲಿ ಪುರುಷ ಪ್ರಾತಿನಿಧ್ಯ ಕಡಿಮೆ ಆಗುತ್ತದೆ, ಈಗಿನ ಜಾತಿ/ಧರ್ಮದ ಮೀಸಲಾತಿಯ ಚಿತ್ರಣ ಬದಲಾಗುತ್ತದೆ, ಒಟ್ಟಾರೆ ಪುರುಷರು ಅಧಿಕಾರ ವಂಚಿತರಾಗುತ್ತಾರೆ ಎನ್ನುವ ಆತಂಕ, ಅಧಿಕಾರದ ರುಚಿಯನ್ನು ಅನುಭವಿಸುತ್ತಾ ಬಂದಿರುವ ಎಲ್ಲ ಪಕ್ಷಗಳ ಹೆಚ್ಚಿನ ಪುರುಷಾಧಿಪತಿಗಳದ್ದೂ! ಹೀಗಾಗಿ ಚುನಾವಣೆಯೆಂಬ ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ ಮಹಿಳಾ ಸಮೂಹಕ್ಕೆ ವಂಚನೆಯಾಗುತ್ತಲೇ ಬಂದಿದೆ.

ಮಹಿಳಾ ಸಮೂಹ ಎಚ್ಚೆತ್ತು ಕೊಳ್ಳಬೇಕಿದೆ..

ಪ್ರಜಾತಂತ್ರದಲ್ಲಿ ಮಹಿಳೆಯರನ್ನು ಕೇವಲ ಫಲಾನುಭವಿಗಳಾಗಿಸದೇ ಯೋಜನೆಗಳ ರಚನೆಯಲ್ಲಿ ಮತ್ತು ತೀರ್ಮಾನ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಸಮಾನ ಪ್ರಾತಿನಿಧ್ಯವಿರುವಂತೆ ನೋಡಿಕೊಳ್ಳಬೇಕು. ಮಹಿಳೆಯರ ಸಮಾನ ಒಳಗೊಳ್ಳುವಿಕೆಯಿಲ್ಲದ ಯಾವುದೇ ಕ್ಷೇತ್ರ, ಯೋಜನೆ, ವ್ಯವಸ್ಥೆ ಮತ್ತು ಯಾವುದೇ ಸಮಾಜ ಹಾಗೂ ಸರ್ಕಾರ ಖಂಡಿತವಾಗಿಯೂ ಪರಿಪೂರ್ಣವಾಗಿರಲು, ಆರೋಗ್ಯಕರವಾಗಿರಲು ಸಾಧ್ಯವಿಲ್ಲ. ಅದೊಂದು ಬಗೆಯ ಮನೋ/ದೈಹಿಕ ಅಂಗವೈಕಲ್ಯತೆಯಿರುವ ಸಮಾಜವೇ ಸೈ. ಈ ಗುರುತರ ಲೋಪವನ್ನು ಸರಿಪಡಿಸದೆ ಸ್ವಾತಂತ್ರ್ಯವೆಂಬುದಕ್ಕೂ ಅರ್ಥವಿಲ್ಲ, ಸಂವಿಧಾನ, ಪ್ರಜಾಪ್ರಭುತ್ವಕ್ಕೂ ಅರ್ಥವಿಲ್ಲ! ಹೀಗಾಗಿ ಮಹಿಳಾ ಮೀಸಲಾತಿಯು ರಾಜಕೀಯವನ್ನೂ ಒಳಗೊಂಡು ಎಲ್ಲಾ ಕ್ಷೇತ್ರಗಳಲ್ಲಿ ಜಾರಿಗೆ ಬರಬೇಕು. ವೈಜ್ಞಾನಿಕವಾಗಿ ಶಾಸನಸಭೆಗೆ ಮಹಿಳಾ ಮೀಸಲಾತಿಯು ಜನಸಂಖ್ಯಾಧಾರಿತವಾಗಿ -ಅಂದರೆ  ಶೇ.50 ರಷ್ಟು ಮೀಸಲಾತಿಯನ್ನು ಪಡೆಯಬೇಕಿರುವುದು ಎಲ್ಲ ರೀತಿಯಲ್ಲೂ ಅಪೇಕ್ಷಣೇಯವಾದುದು. ಆದರೆ ಸಧ್ಯ, ಸರ್ಕಾರಗಳು ಒಪ್ಪಿಕೊಂಡಿರುವ 33% ಆದರೂ ತಕ್ಷಣಕ್ಕೆ ಜಾರಿಯಾಗಲೇಬೇಕು. ಆಗ ಮಾತ್ರ ನಮ್ಮ ಸಾರ್ವತ್ರಿಕ ಚುನಾವಣೆಗಳಲ್ಲಿ, ಮಹಿಳೆಯನ್ನು ಒಳಗೊಂಡ ಸರ್ಕಾರಗಳಲ್ಲಿ, ಒಟ್ಟಾರೆ ಸಮಾಜದಲ್ಲಿ ಮೂಲಮಟ್ಟದ ಬದಲಾವಣೆಯನ್ನು ನಿರೀಕ್ಷಿಸಲು ಸಾಧ್ಯವಾಗಬಹುದು. ಇದನ್ನು ಸಾಧ್ಯವಾಗಿಸುವತ್ತ ಎಚ್ಚೆತ್ತ ಮಹಿಳಾ ಸಮೂಹ ತುರ್ತು ಕಾರ್ಯಪ್ರವೃತ್ತವಾಗಬೇಕಿದೆ.

ರೂಪ ಹಾಸನ

ಜೀವಪರ ಕಾಳಜಿಯೊಂದಿಗೆ ಸಾಹಿತ್ಯ ಕೃಷಿ ಮಾಡುವ ಇವರು ತಮ್ಮದೇ ಆದ ʼಪ್ರೇರಣಾ ವಿಕಾಸ ವೇದಿಕೆʼಯ ಮೂಲಕ ಮಕ್ಕಳು ಹಾಗೂ ಮಹಿಳಾ ಹಕ್ಕುಗಳಿಗೆ ದನಿಯಾಗುತ್ತಿದ್ದಾರೆ.

ಇದನ್ನೂ ಓದಿ-https://peepalmedia.com/women-in-politics/ http://ರಾಜಕಾರಣದಲ್ಲಿ ಮಹಿಳೆಯರ ಮುಖಾಮುಖಿ

Related Articles

ಇತ್ತೀಚಿನ ಸುದ್ದಿಗಳು