ಜೆಜೆಪಿ ಶಾಸಕ ಈಶ್ವರ್ ಸಿಂಗ್ ಅವರು ಬುಧವಾರ ತಮ್ಮ ಕ್ಷೇತ್ರದಲ್ಲಿ ಪ್ರವಾಹ ಪರಿಸ್ಥಿತಿಯ ಅವಲೋಕನ ನಡೆಸುತ್ತಿದ್ದಾಗ ಮಹಿಳೆಯೊಬ್ಬರು ಕಪಾಳಮೋಕ್ಷ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ, ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಡುತ್ತಿದೆ.
ಜನನಾಯಕ್ ಜನತಾ ಪಕ್ಷ (ಜೆಜೆಪಿ) ಹರಿಯಾಣದಲ್ಲಿ ಬಿಜೆಪಿ ನೇತೃತ್ವದ ಆಡಳಿತಾರೂಢ ಮೈತ್ರಿಕೂಟದ ಭಾಗವಾಗಿದೆ.
ಘಗ್ಗರ್ ನದಿ ಉಕ್ಕಿ ಹರಿಯುತ್ತಿರುವ ಕಾರಣ ಸಿಂಗ್ ಅವರ ಘುಲಾ ಕ್ಷೇತ್ರದ ಭಾಟಿಯಾ ಗ್ರಾಮದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾ ಬಗ್ಗೆ ಮಹಿಳೆ ಆಕ್ರೋಶಗೊಂಡಿದ್ದರು.
ಈ ಕುರಿತು ಸಿಂಗ್ ಅವರನ್ನು ಕೇಳಿದಾಗ ತಾನು ಪರಿಸ್ಥಿತಿಯನ್ನು ಅವಲೋಕಿಸಲು ಹೋಗಿರುವುದಾಗಿ ಹೇಳಿದ್ದರು. ತಮ್ಮ ಊರಿನ ಸಣ್ಣ ಡ್ಯಾಮ್ ಉಕ್ಕಿ ಹರಿದು ಊರ ತುಂಬಾ ನೀರು ನಿಂತ ಕಾರಣ ಮಹಿಳೆ ಸೇರಿದಂತೆ ಊರಿನ ಜನರು ಶಾಸಕನನ್ನು ತರಾಟೆಗೆ ತೆಗೆದುಕೊಂಡರು.
ಇದಕ್ಕೆ ಪ್ರತಿಕ್ರಿಯಿಸುತ್ತಾ “ನಾನು ಸರಿಯಾಗಿ ಕೆಲಸ ಮಾಡಿದ್ದರೆ ಅಣೆಕಟ್ಟು ಉಕ್ಕಿ ಹರಿಯುತ್ತಿರಲಿಲ್ಲ ಎಂದು ಮಹಿಳೆ ಹೇಳಿದರು. ನಾನು ಅವರಿಗೆ ಇದು ನೈಸರ್ಗಿಕ ವಿಕೋಪ ಮತ್ತು ಕಳೆದ ಕೆಲವು ದಿನಳಿಂದ ಭಾರೀ ಮಳೆಯಾಗಿದೆ ಎಂದು ವಿವರಿಸಿದ್ದರೂ ಆಕೆ ಕೇಳುವ ಸ್ಥಿತಿಯ್ಲಲಿರಲಿಲ್ಲ” ಎಂದು ಸಿಂಗ್ ಹೇಳಿದರು.
ಆದರೆ ಮಹಿಳೆಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವಂತೆ ತಾನು ಹೇಳಿಲ್ಲ ಎಂದು ಸಿಂಗ್ ಹೇಳಿದ್ದಾರೆ.
ಇತ್ತೀಚೆಗೆ ಸುರಿದ ಬಾರಿ ಮಳೆಯ ನಂತರ ಉಕ್ಕಿ ಹರಿಯುತ್ತಿರುವ ಘಗ್ಗರ್ ನದಿಯಿಂದ ಪಂಜಾಬ್ ಮತ್ತು ಹರಿಯಾಣದ ಹಲವಾರು ಗ್ರಾಮಗಳು ಬಾಧಿತವಾಗಿವೆ.
ಎರಡು ರಾಜ್ಯಗಳಲ್ಲಿ ನಿರಂತರ ಮಳೆಯಿಂದಾಗಿ ಹಲವು ಭಾಗಗಳು ಜಲಾವೃತಗೊಂಡಿರುವುದರಿಂದ ಎರಡು ರಾಜ್ಯಗಳಲ್ಲಿ ಪರಿಹಾರ ಕ್ರಮಗಳು ಯುದ್ಧೋಪಾದಿಯಲ್ಲಿ ನಡೆಯುತ್ತಿವೆ.