Sunday, June 22, 2025

ಸತ್ಯ | ನ್ಯಾಯ |ಧರ್ಮ

ದಾಳಿಗೆ ಅಂಜದ ದಿಟ್ಟೆಯರು

ಜಾಗೃತ ಹೆಣ್ಣುಗಳನ್ನು  ಸೈದ್ಧಾಂತಿಕವಾಗಿ ಎದುರಿಸಲಾಗದೆ ಮಂಚಕ್ಕೆ ಕರೆಯುವ ಗಂಡುಗಳಿಗೆ ಅವರಿಗೆ ಅರ್ಥವಾಗುವ ಭಾಷೆಯಲ್ಲಿ ಇದಿರೇಟು ನೀಡಿದರೆ ಅವರೆಲ್ಲ ಕದನ ಕಣದಿಂದ ಪಲಾಯನ ಮಾಡುವ ಉತ್ತರಕುಮಾರರು ಎಂಬುದು ಆ ಹೆಣ್ಣುಗಳಿಗೆ ಅರ್ಥವಾಗಿದೆ….ಮಹಿಳಾ ದಿನಾಚರಣೆಯ ನೆನಪಲ್ಲಿ ಹೀಗೊಂದು ವಿಶ್ಲೇಷಣೆ ʼಶ್ರೀನಿ ಕಾಲಂʼ ನಲ್ಲಿ.

ಪ್ರಭುತ್ವಗಳ ದಮನಕಾರಿ ನೀತಿಗಳ ವಿರುದ್ಧದ ಬೀದಿ ಹೋರಾಟಗಳಲ್ಲಿ ಸದಾ ಮುಂಚೂಣಿಯಲ್ಲಿರುವ ಎಡಪಂಥೀಯ ನಾಯಕಿ ಕವಿತಾ ಕೃಷ್ಣನ್ ಅವರು ತಾನು ನಂಬಿದ ಸಿದ್ಧಾಂತಕ್ಕೆ ಸದಾ ಬದ್ಧರಾದವರು. ತನಗೆ ಸರಿ ಅನಿಸಿದ್ದನ್ನು ಯಾವ ಮುಲಾಜೂ ಇಲ್ಲದೆ, ಯಾವುದೇ ವೇದಿಕೆಯಲ್ಲಿ, ಸ್ಪಷ್ಟವಾಗಿ ಮತ್ತು ದಿಟ್ಟವಾಗಿ ಹೇಳುವವರು. ಇದೇ ಕಾರಣಕ್ಕೆ ವಿರೋಧಿಗಳ ಕೆಂಗಣ್ಣಿಗೆ ಈಡಾಗಿ ತೀವ್ರ ಮಾನಹಾನಿಕರ ವಾಗ್ದಾಳಿಗಳಿಗೆ ಈಡಾದವರು.

ಇಂತಹ ವಾಗ್ದಾಳಿ, ಅದೂ ಹೆಣ್ಣಿನ ಮೇಲೆ, ಅದೂ ಗುರುತು ಬಹಿರಂಗ ಪಡಿಸಬೇಕಾದ ಅವಶ್ಯಕತೆಯೇ ಇಲ್ಲದ ಸಾಮಾಜಿಕ ಮಾಧ್ಯಮಗಳ ಯುಗದಲ್ಲಿ ಹೇಗಿರುತ್ತದೆ ಎಂಬುದು ನಿಮಗೆಲ್ಲ ಗೊತ್ತೇ ಇದೆ. ಅಲ್ಲಿ ಆಕೆ ‘ಏನು ಹೇಳಿದ್ದಾಳೆ’ ಎನ್ನುವುದು ಮುಖ್ಯವಾಗುವುದಿಲ್ಲ. ‘ಆಕೆ’ ಮುಖ್ಯವಾಗುತ್ತಾಳೆ. ಆಕೆಯ ವಯಸ್ಸು, ದೇಹದ ಗಾತ್ರ, ಮೈಬಣ್ಣ (ಕವಿತಾ ರ ಮೈಬಣ‍್ಣವನ್ನೂ ಗೇಲಿ ಮಾಡಲಾಗಿತ್ತು), ಲೈಂಗಿಕ ಆಯ್ಕೆ, ಸಂಸಾರ ಮುಖ್ಯವಾಗುತ್ತದೆ. ‘ಬಿಚ್’ (ಸೂಳೆ) ಎಂದು ಕರೆಯುವ ಮೂಲಕವೇ ಅಲ್ಲಿ ‘ಯತ್ರ ನಾರ್ಯಸ್ತು ಪೂಜ್ಯಂತೆ’ ಕಾರ್ಯಕ್ರಮ ಶುರುವಾಗುತ್ತದೆ. ಮತ್ತು ಹೀಗೆ ಮಾಡುವವರೆಲ್ಲರೂ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಲೆಕ್ಕಕ್ಕಿಂತ ಹೆಚ್ಚೇ ಮಾತನಾಡುವವರು ಆಗಿರುತ್ತಾರೆ !

ಸೋನಿಯಾ ಗಾಂಧಿ

ಸೋನಿಯಾ ಗಾಂಧಿಯನ್ನು ನಿಂದಿಸುವಾಗ ‘ಬಾರ್ ಡಾನ್ಸರ್’ ಎಂದು ಕರೆಯಲಾಗುತ್ತದೆ. ಆಕೆ ಬಾರ್ ಡಾನ್ಸರ್ ಆಗಿದ್ದರೋ ಇಲ್ಲವೋ, ಅಥವಾ ಒಂದು ವೇಳೆ ಬಾರ್ ಡಾನ್ಸರ್ ಆಗಿದ್ದರೂ ಅದು ಹೇಗೆ ತಪ್ಪಾಗುತ್ತದೆ? ಅದು ಹೇಗೆ ಕೀಳು ಕೆಲಸವಾಗುತ್ತದೆ? ಓರ್ವ ಅತ್ಯಾಚಾರಿ, ಕೊಲೆಗಡುಕ, ಭ್ರಷ್ಟಾಚಾರಿಗಿಂತಲೂ ಬಾರ್ ಡಾನ್ಸರ್ ಕೆಲಸವೋ ಅಥವಾ ವೇಶ್ಯಾವೃತ್ತಿಯೋ ಅದು ಹೇಗೆ ಕೀಳು? ಎಂಬ ತರ್ಕಬದ್ಧ ಪ್ರಶ್ನೆಯನ್ನು ತಲೆ ತುಂಬಾ ಜೀವವಿರೋಧಿ ಸಿದ್ಧಾಂತ ತುಂಬಿಕೊಂಡಿರುವ ಝೂಂಬಿಗಳಲ್ಲಿ ಕೇಳಿ ಏನು ಪ್ರಯೋಜನ? ಹೆಣ್ಣು ಸೂಳೆಯಾಗಿದ್ದರೆ ಅದಕ್ಕೆ ಕಾರಣ ಗಂಡು ಅಲ್ಲವೇ? ಗಿರಾಕಿಯಾಗಿ ವೇಶ್ಯೆಯರ ಬಳಿಗೆ ಹೋಗುವುದನ್ನು ಗಂಡು ನಿಲ್ಲಿಸಿದ ಮರುಕ್ಷಣ ಜಗತ್ತಿನ ವೇಶ‍್ಯಾವಾಟಿಕೆಗಳು ಬಂದ್ ಆಗುವುದಿಲ್ಲವೇ? ಎಂಬ ತಾರ್ಕಿಕ ಪ್ರಶ್ನೆಗಳಿಗೆ ಈ ಅವಿವೇಕಿಗಳಲ್ಲಿ ಏನು ಉತ್ತರ ಇರಬಹುದು?!

ಕವಿತಾ ಕೃಷ್ಣನ್ ನೀಡಿದ ಸಂದೇಶ

ಈಗ ಮತ್ತೆ ಕವಿತಾ ಕೃಷ್ಣನ್ ವಿಷಯಕ್ಕೆ ಬರೋಣ. ಯಥಾಪ್ರಕಾರ ಕವಿತಾಗೆ ಓರ್ವ ಮುಖೇಡಿ ಮನುಷ್ಯ ‘ಬಿಚ್’ ಎಂದು ಕರೆದ. ಈ ನಿಂದನೆಯ ಮಾತಿಗೆ ಕವಿತಾ ಬೇಸರಗೊಳ್ಳಲಿಲ್ಲ, ವಿಚಲಿತರಾಗಲಿಲ್ಲ. ಬಹಳ ತಾಳ್ಮೆಯಿಂದ ಆತನಿಗೆ ಒಂದು ಉತ್ತರ ಕೊಟ್ಟರು. ಆಕೆ  ಮಾತಿನ ಮೂಲಕ ಕೊಟ್ಟ ಏಟು ಮಾತ್ರ ಆತ ಮತ್ತೆ ಮತ್ತೆ ಮುಟ್ಟಿ ನೋಡುವಂತಿತ್ತು. ಆಕೆ ಏನು ಹೇಳಿದಳು ಗೊತ್ತೇ? “ನೀನು ಸೂಳೆ ಎಂದರೆ ನನಗೆ ಖಂಡಿತಾ ಬೇಸರವಾಗುವುದಿಲ್ಲ, ಯಾಕೆಂದರೆ ನಾನು ಸೂಳೆಯರನ್ನು ಕೂಡಾ ಗೌರವದಿಂದ ನೋಡುವವಳು, ಆದರೆ ನೀನು ನನ್ನನ್ನು ಸಂಘಿ ಎಂದು ಕರೆದರೆ ನನಗೆ ನಿಜಕ್ಕೂ ಬೇಸರವಾಗುತ್ತದೆ”. ಒಂದೇ ಕಲ್ಲಿಗೆ ಎರಡು ಹಣ್ಣು ಉದುರಿಸಿದರು ಕವಿತಾ. ಒಂದೆಡೆಯಲ್ಲಿ ಯಾವ ವೃತ್ತಿಯನ್ನೂ ಅಗೌರವದಿಂದ ನೋಡಬಾರದು, ಆ ಕಾರಣಕ್ಕೆ ಸೂಳೆಯೂ ಗೌರವಕ್ಕೆ ಅರ್ಹಳು ಎಂಬ ಮಾನವೀಯ ಸಿದ್ಧಾಂತ ಮುಂದಿಡುತ್ತಲೇ, ದ್ವೇಷ ಮತ್ತು ವಿಭಜನಕಾರಿ ಸಂಘಿ ಸಿದ್ಧಾಂತವು ಜೀವ ವಿರೋಧಿಯಾದುದು, ಅದು ಸೌಹಾರ್ದ ಭಾರತಕ್ಕೆ ಗಂಡಾಂತರಕಾರಿ ಎಂಬ ಸಂದೇಶವನ್ನೂ ತಲಪಿಸಿದರು.

ಗೌರಿಯ ಉತ್ತರ

‘ನೀನು ಸತ್ತಾಗ ನಾನು ಪಟಾಕಿ ಹೊಡೆದು ಸಂಭ್ರಮಿಸುತ್ತೇನೆ’ ಎಂದೊಬ್ಬ ಯುವಕ ಗೌರಿ ಲಂಕೇಶ್ ಗೆ ಫೇಸ್ ಬುಕ್ ನಲ್ಲಿ ಬರೆದಾಗ, “ನಾನು ಸತ್ತಾಗ ಪಟಾಕಿ ಹೊಡೆದು ಸಂಭ್ರಮಿಸುತ್ತೇನೆ ಎಂದು ನೀನು ಹೇಳಿದ ಬಗ್ಗೆ ನನಗೆ ಯಾವ ಬೇಸರವೂ ಇಲ್ಲ, ನೀನು ದಾರಿ ತಪ್ಪಿದ ಹುಡುಗ, ನಾನು ಸತ್ತಾಗ ಪಟಾಕಿಗೆ ನೀನು ಖರ್ಚು ಮಾಡುವುದು ಬೇಡ, ನಿನ್ನ ವಿಳಾಸ ತಿಳಿಸು, ಪಟಾಕಿಗೆ ಬೇಕಾಗುವ ಹಣವನ್ನು ನಾನೇ ನಿನಗೆ ಕಳಿಸಿಕೊಡುತ್ತೇನೆ” ಎಂದು ತಣ್ಣಗೆ ಉತ್ತರಿಸಿದ್ದರು.

ಸ್ವರಾ ಭಾಸ್ಕರ್ ಮೇಲೆ ಸೆಕ್ಸಿಸ್ಟ್ ದಾಳಿ

ಸಾಮಾಜಿಕ ಮಾಧ್ಯಮಗಳಲ್ಲಿ ಅತ್ಯಂತ ನಿಂದನೆಗೆ ಗುರಿಯಾದವರು ಸ್ವರಾ ಭಾಸ್ಕರ್ ಎಂದರೆ ತಪ್ಪಾಗದು. ಪ್ರಭುತ್ವದ ತಪ್ಪು ನೀತಿಗಳ ವಿರುದ್ಧದ ಮತ್ತು ಸಂವಿಧಾನಾತ್ಮಕ ಹಕ್ಕುಗಳ ಪರವಾದ ತನ್ನ ದಿಟ್ಟ ನಿಲುವಿಗಾಗಿ ಅವರು ಎದುರಿಸುತ್ತಿರುವ ದಾಳಿಯಂತೂ ಭಯಾನಕವಾದುದು. ಸಿನಿಮಾ ಒಂದರಲ್ಲಿ ಆಕೆ ಅಭಿನಯಿಸಿದ ಹಸ್ತ ಮೈಥುನ ದೃಶ್ಯವನ್ನೇ ಮುಂದಿಟ್ಟುಕೊಂಡು ದಿನ ಬೆಳಗಾದರೆ ಆಕೆಯ ಮೇಲೆ ಅತ್ಯಂತ ಕೊಳಕು ಟೀಕೆಗಳನ್ನು ಮಾಡಲಾಗುತ್ತಿರುತ್ತದೆ. ಆಕೆ ಮದುವೆಯಾದಾಗಲೂ ಈ ನಿಂದನೆ ನಿಲ್ಲಲಿಲ್ಲ. ಆಕೆ ಮದುವೆಯಾದುದು ಮುಸ್ಲಿಂ ಯುವಕನನ್ನು ಎಂಬ ನೆಲೆಯಲ್ಲಿ ಇನ್ನೊಂದು ಹಂತದ ಸೆಕ್ಸಿಸ್ಟ್ ದಾಳಿಯನ್ನು ಆಕೆಯ ಮೇಲೆ ನಡೆಸಲಾಯಿತು. ಆದರೆ ಆಕೆ ಇಂತಹ ಟ್ರೋಲ್ ಗಳಿಗೆ ನಗು ನಗುತ್ತಲೇ ಅವರದೇ ಭಾಷೆಯಲ್ಲಿ ಉತ್ತರ ಕೊಡುವ ದಿಟ್ಟೆ ಮತ್ತು ಬುದ್ಧಿವಂತೆ. ‘ನನ್ನಿಂದಾಗಿ ನಿಮ್ಮಲ್ಲಿ ಅನೇಕರ ಜೀವನೋಪಾಯ ಸಾಗುತ್ತಿರುತ್ತದೆ, ಅದಕ್ಕಾದರೂ ನನಗೆ ಥ್ಯಾಂಕ್ಸ್ ಹೇಳಿರಲ್ಲ..’ ಎಂದು ಛೇಡಿಸಿ ಗಾಯದ ಮೇಲೆ ಇನ್ನಷ್ಟು ಉಪ್ಪು ಸವರಿದರು ಸ್ವರಾ. ಅವರಿಂದ ಏಟು ತಿಂದ ಟ್ರೋಲ್ ಗಳು ಮತ್ತೆ ಅಲ್ಲಿ ಉಳಿಯುವುದು ತುಂಬಾ ಕಡಿಮೆ. ಬಾಲ ಮಡಚಿಕೊಂಡು ಓಡಿರುತ್ತಾರೆ.

ಸ್ವತಂತ್ರವಾಗಿ ಚಿಂತಿಸುವ, ಪ್ರಗತಿಪರವಾಗಿ ಯೋಚಿಸುವ, ಹಿಂಸೆಯ ವಿರುದ್ಧ ದನಿ ಎತ್ತುವ, ಜೀವವಿರೋಧಿ ಸಿದ್ಧಾಂತದ ವಿರುದ್ಧ ಪ್ರತಿಭಟಿಸುವ ಹೆಣ್ಣುಮಕ್ಕಳನ್ನು ಸಮಾಜದಲ್ಲಿ ಫ್ಯಾಸಿಸ್ಟ್ ಗಂಡು ಲೋಕ ಎದುರಿಸುವುದೇ ಆಕೆಯ ತೇಜೋವಧೆಯ ಮೂಲಕ. ಯಾಕೆಂದರೆ ಆಕೆ ಎತ್ತುವ ಗಂಭೀರ ಪ್ರಶ್ನೆಗಳಿಗೆ ಅವರ ಬಳಿ ತಾರ್ಕಿಕ ಉತ್ತರವಿಲ್ಲ. ಅಲ್ಲದೆ, ಆಕೆಯ ಸಂಯಮ, ಧೈರ್ಯ, ಶಕ್ತಿ ಸಾಮರ್ಥ್ಯದ ಅಗಾಧತೆಯ ಬಗ್ಗೆ ಅವರಿಗೆ ಗೊತ್ತಿರುತ್ತದೆ ಮತ್ತು ಅದರ ಬಗ್ಗೆ ಭಯವೂ ಇರುತ್ತದೆ.

ಸಮಾಜದ ವಿಸ್ತರಣೆ

ಸಾಮಾಜಿಕ ಮಾಧ್ಯಮ ಕೂಡಾ ಇದಕ್ಕಿಂತ ಭಿನ್ನವಲ್ಲ. ಅದು ಇಂತಹ ದುಷ್ಟ ಸಮಾಜದ ವಿಸ್ತರಣೆಯೇ ಆಗಿದೆ. ಸಮಾಜದಲ್ಲಿಯಾದರೋ ಎದುರಾ ಬದುರಾ ನಿಂತು ಮಾತನಾಡಬೇಕಾಗುತ್ತದೆ, ಗುರುತು ಮರೆ ಮಾಚುವ ಅವಕಾಶವಿಲ್ಲ. ಹಾಗಾಗಿ ಅಲ್ಲಿ ಒಂದಿಷ್ಟು ಸಭ್ಯತೆಯ ಮುಖವಾಡವನ್ನು ಹಾಕಿಕೊಳ್ಳುವುದು ಅನಿವಾರ್ಯವಾಗುತ್ತದೆ. ಆದರೆ ಸಾಮಾಜಿಕ ಮಾಧ್ಯಮ ಹಾಗಲ್ಲ. ಇದು ‘ಫ್ರೀ ಫಾರ್ ಆಲ್’ ಅಂತಾರಲ್ಲ ಹಾಗೆ. ಇಲ್ಲಿ ಮರೆಯಲ್ಲಿ ನಿಂತು ಕಲ್ಲೆಸೆಯುವ ತರಹ ನಿಮ್ಮ ಮೇಲೆ ಯಾರೋ ದಾಳಿ ಮಾಡುತ್ತಿರುತ್ತಾರೆ. ಅವರು ಯಾರು, ಅವರ ಹಿನ್ನೆಲೆ ಏನು, ಅವರು ಗಂಡೋ ಹೆಣ್ಣೋ, ಎಳೆಯರೋ ವಯಸ್ಕರೋ ಒಂದೂ ತಿಳಿಯುವುದಿಲ್ಲ. ಹಾಗಾಗಿ ಅಲ್ಲಿ ಅವರು ಮನದೊಳಗೆ ಮುಚ್ಚಿಟ್ಟುಕೊಂಡಿದ್ದ ಮಾನವನ ಹುಟ್ಟು ಗುಣ ಅಂತಾರಲ್ಲ, ಅಂತಹ ಎಲ್ಲ ವಿಕಾರಗಳೂ ನಿರ್ಭಯದಿಂದ ಹೊರಬಂದು ಕಾಣಿಸಿಕೊಳ್ಳುತ್ತವೆ. ಎಂದೇ, ಅಲ್ಲಿ ವಿರೋಧಿಗಳ ಮೇಲೆ ದಾಳಿ ನಡೆಸುವಾಗ ಅವರ ಸಹೋದರಿ, ಮಡದಿ, ತಾಯಿ ಎಲ್ಲರನ್ನೂ ಮಂಚಕ್ಕೆ ಕರೆಯುವ ತನಕ ಮುಂದುವರಿಯುತ್ತಾರೆ. ಹೆಣ್ಣಾದರೆ ಅತ್ಯಾಚಾರದ ಬೆದರಿಕೆಯನ್ನೂ ಹಾಕುತ್ತಾರೆ.

ಇದೇ ಕಾರಣಕ್ಕೆ ಅನೇಕ ಹೆಣ್ಣುಮಕ್ಕಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಳ್ಳಲು, ಅಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳಲು ಹಿಂಜರಿಯುತ್ತಾರೆ. ಆದರೆ ಎಲ್ಲರೂ ಹೀಗಿರುವುದಿಲ್ಲ. ಹೆಣ್ಣುಮಕ್ಕಳು ‘ಟಿಟ್ ಫಾರ್ ಟ್ಯಾಟ್’ ಅಂತಾರಲ್ಲ ಹಾಗೆ ಧೈರ್ಯದಿಂದ ಮಾತನಾಡ ಹೊರಟರೆ ಅದರ ಹೊಡೆತ ಹೇಗಿರುತ್ತದೆ, ಸಭ್ಯತೆ ಸಂಸ್ಕಾರ ಎಲ್ಲವನ್ನೂ ಮರೆತ ಗಂಡಸರು ಎದುರಿಸಲಾಗದೆ ಹೇಗೆ ಅಡಗಿಕೊಳ್ಳಲು ಮರೆಯನ್ನು ಹುಡುಕಿ ಹೋಗುತ್ತಾರೆ ಎನ್ನುವುದಕ್ಕೆ ಉದಾಹರಣೆಯೆಂಬಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕ ಝಾನ್ಸಿ ರಾಣಿ ಲಕ್ಷ್ಮಿ ಬಾಯಿಯರು, ಕಿತ್ತೂರು ಚೆನ್ನಮ್ಮರು, ರಾಣಿ ಅಬ್ಬಕ್ಕರು ಕಾಣ ಸಿಗುತ್ತಾರೆ.

ದಿಟ್ಟೆಯರು

ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ಮಾತನಾಡಿದ್ದಕ್ಕೇ ಕವಿತಾ ಕೃಷ್ಣನ್, ಸ್ವರಾ ಭಾಸ್ಕರ್, ರಾಣಾ ಅಯೂಬ್, ಆರ್ಫಾ ಖಾನುಮ್ ಶೇರ್ವಾನಿ, ರೋಹಿಣಿ ಸಿಂಗ್, ಶಬಾನಾ ಅಜ್ಮಿ, ಬರ್ಕಾ ದತ್‍, ಸಾಗರಿಕಾ ಘೋಷ್ ಮೊದಲಾದ ಹೋರಾಟಗಾರ್ತಿಯರು ಚಲನಚಿತ್ರ ನಟಿಯರು, ಪತ್ರಕರ್ತೆಯರು, ದೂರದ ಮಾತೇಕೆ, ನಮ್ಮಲ್ಲೇ ಗೌರಿ ಲಂಕೇಶ್, ರಮ್ಯಾ, ಪ್ರಭಾ ಬೆಳವಂಗಲ, ಪ್ರತಿಭಾ ಕುಳಾಯಿ, ಬಿಂದು ಗೌಡ, ಚೇತನಾ ತೀರ್ಥಹಳ್ಳಿ, ನಜ್ಮಾ ಚಿಕ್ಕನೇರಳೆ, ಭಾರತಿ ಪ್ರಶಾಂತ್ ಹೀಗೆ ಅಸಹ್ಯ ಟೀಕೆಗಳಿಗೆ ಈಡಾದವರು ಒಬ್ಬಿಬ್ಬರಲ್ಲ. ಮತ್ತು ಇವರೆಲ್ಲರೂ ಸಾಮಾಜಿಕ ಮಾಧ್ಯಮದ ಮುಖೇಡಿ ಟ್ರೋಲ್ ಗಳನ್ನು ಎದುರಿಸುತ್ತಿರುವ ಪರಿಯೂ ಅಸಾಧಾರಣವಾದುದು. ಟೀಕೆ ಎಷ್ಟೇ ಅಸಹ್ಯವಾಗಿರಲಿ, ಇವರೆಲ್ಲ ಅಳುತ್ತ ಕೂತವರಲ್ಲ, ಓಡಿಹೋದವರೂ ಅಲ್ಲ, ‘ನಿನ್ನ ತಾಯಿಯನ್ನು ನಿನ್ನ ಸಹೋದರಿಯನ್ನೂ ನೀನು ಇದೇ ಕಣ್ಣಿನಿಂದ ನೋಡುತ್ತಿಯಾ?’ ಎಂದು ಮಾತಿನ ಮೂಲಕವೇ ಮುಟ್ಟಿ ನೋಡುವಂತಹ ಏಟು ಕೊಟ್ಟವರು.

ಅದು ರಾಜಕೀಯ ರಂಗ ಇರಲಿ, ಸಾಮಾಜಿಕ ಮಾಧ್ಯಮ ರಂಗವಿರಲಿ, ಹೆಣ್ಣು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನು, ತನ್ನ ಅಭಿಪ್ರಾಯ ವ್ಯಕ್ತಪಡಿಸುವುದನ್ನು ಬಹುವಾಗಿ ಗಂಡು ಲೋಕ ಇಷ್ಟಪಡುವುದಿಲ್ಲ. ಆಕೆಯನ್ನು ಏನಾದರೊಂದು ಕುಟಿಲ ಮಾರ್ಗದ ಮೂಲಕ ಮೌನಗೊಳಿಸಲು ಅಥವಾ ಮನೆಯ ನಾಲ್ಕು ಗೋಡೆಯೊಳಗೆ ಸೇರಿಕೊಳ್ಳುವಂತೆ ಮಾಡಲು ಯತ್ನಿಸುತ್ತಲೇ ಇರುತ್ತದೆ. ಅದಕ್ಕೆ ಬಹುವಾಗಿ ಅವರಿಗೆ ಸಿಗುವುದು ಸೆ‍ಕ್ಸಿಸ್ಟ್ ಟೀಕೆಯ ಅಸ್ತ್ರ. ಸುರತ್ಕಲ್ ಟೋಲ್ ವಿರುದ್ಧ ಪ್ರತಿಭಾ ಕುಳಾಯಿ ಬೀದಿಯಲ್ಲಿ ಮಲಗಿ ಪ್ರತಿಭಟಿಸಿದಾಗ ಬಂದ ಅಸಹ್ಯ ಟೀಕೆಗಳು ಆನಂತರದ ಪೊಲೀಸ್ ಕೇಸು, ಪಲಾಯನ, ಜಾಮೀನು, ಬಂಧನ ಇತ್ಯಾದಿ ಪ್ರಕರಣವನ್ನು ಒಮ್ಮೆ ನೆನಪಿಗೆ ತಂದುಕೊಳ್ಳಿ.

ಆದರೆ ಕಾಲ ಬದಲಾಗಿದೆ. ನಮ್ಮ ಜಾಗೃತ ಹೆಣ್ಣುಗಳು ಸಾರ್ವಜನಿಕ ರಂಗದಲ್ಲಿ ಮುನ್ನುಗ್ಗುತ್ತಿರುವ ರೀತಿ, ವ್ಯಕ್ತಪಡಿಸುವ ದಿಟ್ಟ ಅಭಿಪ್ರಾಯಗಳನ್ನು ನೋಡಿದರೆ ಏನೋ ಹೊಸ ಭರವಸೆ ಮೂಡಿಸುವಂತಿದೆ.  ಸೈದ್ಧಾಂತಿಕವಾಗಿ ಎದುರಿಸಲಾಗದೆ ಮಂಚಕ್ಕೆ ಕರೆಯುವ ಗಂಡುಗಳಿಗೆ ಅವರಿಗೆ ಅರ್ಥವಾಗುವ ಭಾಷೆಯಲ್ಲಿ ಇದಿರೇಟು ನೀಡಿದರೆ ಅವರೆಲ್ಲ ಕದನ ಕಣದಿಂದ ಪಲಾಯನ ಮಾಡುವ ಉತ್ತರಕುಮಾರರು ಎಂಬುದು ಅವರಿಗೆ ಅರ್ಥವಾಗಿದೆ.

ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಅಂಜುವ ಎಲ್ಲ ಹೆಣ್ಣುಗಳಿಗೂ ಕವಿತಾ ಕೃಷ್ಣನ್ ಮತ್ತು ಸ್ವರಾ ಭಾಸ್ಕರ್ ಅಂಥವರು ಒಂದು ಮಾದರಿಯಾಗಬೇಕು. ಜಗತ್ತಿನಲ್ಲಿ ಪ್ರತಿಭಟಿಸುವುದೇ ಗೊತ್ತಿರದ ಸಾಧು ಸ್ವಭಾವದ ದನ, ಆಡು, ಕುರಿ, ಕೋಳಿಗಳನ್ನು ಬಲಿಕೊಡಲಾಗುತ್ತದೆಯೇ ಹೊರತು ಕೊನೆಯ ಕ್ಷಣದವರೆಗೂ ತಮ್ಮದೇ ಮಿತಿಯಲ್ಲಾದರೂ ಪ್ರತಿಭಟಿಸುವ, ದಾಳಿ ನಡೆಸುವ ಬೆಕ್ಕು ನಾಯಿಗಳನ್ನು ಬಲಿಕೊಡುವುದಿಲ್ಲ. ಹೆದರುವವರನ್ನು  ಹೆದರಿಸುತ್ತಲೇ ಇರುವ ಜಗತ್ತಿದು. ದಿಟ್ಟವಾಗಿ ನಿಲ್ಲುವವರ ಮುಂದೆ ಮಂಡಿಯೂರುವ ಜಗತ್ತಿದು. ಎಲ್ಲ ದಿಟ್ಟೆಯರಿಗೂ, ಜಾಣೆಯರಿಗೂ ಅಂತಾರಾಷ್ಟ್ರೀಯ ಮಹಿಳಾ ದಿನದ ಶುಭಾಶಯಗಳು.

ಶ್ರೀನಿವಾಸ ಕಾರ್ಕಳ

ಚಿಂತಕರು

Related Articles

ಇತ್ತೀಚಿನ ಸುದ್ದಿಗಳು

You cannot copy content of this page