‘ಪಾಪಿ’ ಪಾಕಿಸ್ತಾನ ಮತ್ತಷ್ಟು ಚೂರಾಗಲಿದೆ: ಯುಪಿ ಸಿಎಂ ಯೋಗಿ ಆದಿತ್ಯನಾಥ್

ಲಖಿಂಪುರ ಖೇರಿ: ಪಾಕಿಸ್ತಾನವನ್ನು ‘ಪಾಪಿ’ ಎಂದು ಬಣ್ಣಿಸಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಆ ದೇಶವು ಮುಂದಿನ ದಿನಗಳಲ್ಲಿ ಮತ್ತಷ್ಟು ಹೋಳಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಶನಿವಾರ ಮಿಯಾಂಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಅವರು, 1947ರ ವಿಭಜನೆ ಮತ್ತು 1971ರ ಯುದ್ಧದ ಸಂದರ್ಭದಲ್ಲಿ ಬಾಂಗ್ಲಾದೇಶದಿಂದ ಸ್ಥಳಾಂತರಗೊಂಡು ದಶಕಗಳಿಂದ ಇಲ್ಲಿ ನೆಲೆಸಿದ್ದ ಸಾವಿರಕ್ಕೂ ಹೆಚ್ಚು ಹಿಂದೂ ಕುಟುಂಬಗಳಿಗೆ ಭೂಮಿಯ ಮಾಲೀಕತ್ವದ ಹಕ್ಕುಪತ್ರಗಳನ್ನು ವಿತರಿಸಿ ಮಾತನಾಡಿದರು. ಭಾರತವನ್ನು ವಿಭಜಿಸಿದ ಪಾಪಿ ಪಾಕಿಸ್ತಾನವು ಈಗಾಗಲೇ ಇಬ್ಬಾಗವಾಗಿದೆ ಮತ್ತು ಅಲ್ಲಿ ಇತರ ಧರ್ಮಗಳಿಗೆ ಸ್ಥಾನವಿಲ್ಲದ ಕಾರಣ ಅಲ್ಪಸಂಖ್ಯಾತರು ತೀವ್ರ ಶಿಕ್ಷೆ ಅನುಭವಿಸುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಸಿಎಂ ಯೋಗಿ ಅವರು ಮಿಯಾಂಪುರ ಗ್ರಾಮವನ್ನು ‘ರವೀಂದ್ರ ನಗರ’ ಎಂದು ಮರುನಾಮಕರಣ ಮಾಡುವುದಾಗಿ ಘೋಷಿಸಿದರು. ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡ ಅವರು, “ಕಾಂಗ್ರೆಸ್ ದಶಕಗಳ ಕಾಲ ನಿಮ್ಮ ಮತಗಳನ್ನು ಪಡೆದುಕೊಂಡರೂ ನಿಮಗೆ ಭೂಮಿಯ ಹಕ್ಕನ್ನು ನೀಡಲಿಲ್ಲ. ನಿಮ್ಮ ಅಸ್ಮಿತೆಯನ್ನು ಮರೆಮಾಚಲು ಈ ಗ್ರಾಮದಲ್ಲಿ ಒಬ್ಬನೇ ಒಬ್ಬ ‘ಮಿಯಾಂ’ ಇಲ್ಲದಿದ್ದರೂ ಇದಕ್ಕೆ ‘ಮಿಯಾಂಪುರ’ ಎಂದು ಹೆಸರಿಟ್ಟಿತ್ತು. ಇನ್ನು ಮುಂದೆ ರಾಷ್ಟ್ರಗೀತೆಯನ್ನು ಬರೆದ ರವೀಂದ್ರನಾಥ ಟ್ಯಾಗೋರ್ ಅವರ ಹೆಸರಿನಲ್ಲಿ ಈ ಗ್ರಾಮ ಗುರುತಿಸಿಕೊಳ್ಳಲಿದೆ” ಎಂದು ಹೇಳಿದರು. ಬಂಗಾಳದ ಭೂಮಿಯು ಭಾರತದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ತಾಣವಾಗಿದೆ ಎಂದು ಅವರು ಈ ಸಂದರ್ಭದಲ್ಲಿ ಬಣ್ಣಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ‘ಸಬ್ ಕಾ ಸಾತ್, ಸಬ್ ಕಾ ವಿಕಾಸ್’ ಮಂತ್ರದ ಅಡಿಯಲ್ಲಿ ಈ ಹಕ್ಕುಪತ್ರಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದ ಯೋಗಿ, ಲಖಿಂಪುರ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಅಂದಾಜು 417 ಕೋಟಿ ರೂಪಾಯಿ ಮೊತ್ತದ 213 ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಬಂಕಿಮ ಚಂದ್ರ ಚಟರ್ಜಿ ಅವರು ಬರೆದ ‘ವಂದೇ ಮಾತರಂ’ ಗೀತೆಯ 150ನೇ ವರ್ಷಾಚರಣೆಯನ್ನು ನೆನಪಿಸಿದ ಅವರು, ದಶಕಗಳ ಕನಸನ್ನು ನನಸು ಮಾಡಲು ತಾವು ಇಲ್ಲಿಗೆ ಬಂದಿರುವುದಾಗಿ ಹೇಳಿದರು. ಇದೇ ವೇಳೆ ಪ್ರಯಾಗ್‌ರಾಜ್‌ನ ಮಘ ಮೇಳದಲ್ಲಿ ಸಾಧು-ಸಂತರು ಯೋಗಿ ಆದಿತ್ಯನಾಥ್ ಅವರನ್ನು ಭವಿಷ್ಯದ ಪ್ರಧಾನಿ ಎಂದು ಹರಸಿದರು.

Related Articles

ಇತ್ತೀಚಿನ ಸುದ್ದಿಗಳು