Sunday, June 22, 2025

ಸತ್ಯ | ನ್ಯಾಯ |ಧರ್ಮ

ನೀನು ನಗು.. ಸುಖಿಯಾಗಿರು.. ನಿನ್ನ ಹಾಗೆ ನಾನಿರುವೆ

ನೀನು ನಗು ಸುಖಿಯಾಗಿರು ನಾನು ನಿನ್ನ ಹಾಗೆ ಇರುವೆ ಅನ್ನೋ ಬದಲು ನಿನ್ನ ಅಳಿಸಿ ನೋಯಿಸಿ ನಾನು ನಕ್ಕು ಸುಖಪಡುವೆ ಅನ್ನುವ ಈಗಿನ ಲೋಕವನ್ನು ನೋಡುವಾಗ ಎಲ್ಲವನ್ನು ತ್ಯಜಿಸಿ ತನ್ನನ್ನು ತಾನೆ ಗೆದ್ದು ನಿಂತ ಬುದ್ಧ ಅದೆಷ್ಟು ವಾಸಿ ಅನಿಸಿ ಬಿಡುತ್ತದೆ…ಇದು ಇಂದಿನ ಕ್ಯಾಂಪಸ್‌ ನಲ್ಲಿ ಮಹಾಲಕ್ಷ್ಮಿ ದೇವಾಡಿಗ.

ಬದುಕು ಈಗಿನ ಆಧುನಿಕ ಪ್ರಪಂಚದಲ್ಲಿ ಹೇಗಿದೆ ಅಂದ್ರೆ ನಿತ್ಯದ ನಮ್ಮ ರಾಮಾಯಣ  ಮತ್ತು ಮಹಾಭಾರತದಲ್ಲಿ  ನಾವು ಸುಖ ದುಃಖಗಳ ಮುಖವಾಡ ಹಾಕಿಕೊಂಡಂತೆ ಇದೆ. ಹೀಗೆ ಯಾಕೆ ಹೇಳಿದೆ ಎಂದರೆ ಮನುಷ್ಯನಿಗೆ ತನ್ನ ಹುಟ್ಟಿನಿಂದ ಹಿಡಿದು ಯಮರಾಜ ನರಕದ ಟಿಕೆಟ್ ಕೊಡುವವರೆಗೂ ಕೂಡ ತೃಪ್ತಿ ಅನ್ನೋದು ಇರುವುದಿಲ್ಲ ಅನಿಸುತ್ತದೆ. ಪೂರ್ವಜರು ಅದೆಷ್ಟು ಬಾರಿ ಅತಿಯಾಸೆ ಗತಿಗೇಡು ಅಂದಿದ್ದರೋ ಗೊತ್ತಿಲ್ಲ. ಆದರೆ ವಾಸ್ತವದಲ್ಲಿ ನಮ್ಗೆ ಅಂತಹ ಗಾದೆ ಮಾತುಗಳ ಅಗತ್ಯವೇ ಇಲ್ಲ. ಯಾಕಂದ್ರೆ ಆಸೆಗಿಂತ ಅತಿಯಾಸೆ ಮೇಲಿನ ವ್ಯಾಮೋಹವೇ ನಮಗೆ ಹೆಚ್ಚು.!

ಉದಾಹರಣೆಗೆ- ಹಣ್ಣಿದ್ದರೆ ಮರ ಇಲ್ಲ ಅನ್ನೋ ವ್ಯಥೆ , ಮರ ಇದ್ದರೆ ಹಣ್ಣಿನ ಮರದ ತೋಟ ಇಲ್ಲ ಅನ್ನೋ ಹರಿಕಥೆ. ಇಂತಹದ್ದೆ ಹಲವು ಕಥೆ ಮನುಷ್ಯರ ನಿತ್ಯದ  ರಾಮಾಯಣದಲ್ಲಿನ ಮೊದಲ ಭಾಗ. ಆಸೆಗೆ ಮಿತಿ ಇಲ್ಲ ನಿಜ. ಕೆಲವೊಂದು ಆಸೆ ಕೇವಲ ಕಲ್ಪನೆಗೆ ಮಾತ್ರ ಸೀಮಿತವಾಗಿರುತ್ತದೆ. ಇನ್ನು ಉಳಿದ ಆಸೆಯನ್ನ ವಾಸ್ತವದಲ್ಲಿ ನಿಜ ಮಾಡಬಹುದು. ಆದರೆ ಪಡೋ ಆಸೆ ನ್ಯಾಯಯುತವಾಗಿ ಇರಬೇಕಷ್ಟೆ. ಮತ್ತೊಬ್ಬರ ಜೀವ, ಜೀವನವನ್ನು ಕಿತ್ತುಕೊಂಡು ಬದುಕುವ ಚಪಲದ ಆಸೆ ಈಗಿನ ಕಾಲದಲ್ಲಿ ಅತಿ ಹೆಚ್ಚು!

ಸ್ವಾರ್ಥ, ಹಿಂಸೆ, ದ್ವೇಷ, ಅಸೂಯೆ ಇತ್ಯಾದಿ ದುರ್ಗುಣಗಳು ನಮ್ಮ ಜೊತೆಗೆ ಅಂಟಿಕೊಂಡು ಬಂದಿರುತ್ತವೆ. ಹಾಗೆಯೇ ಪ್ರೀತಿ, ಕರುಣೆ, ಸ್ನೇಹ, ದಾನ, ಧರ್ಮ, ನ್ಯಾಯ, ನೀತಿ, ಮಾನವೀಯತೆ ಕೂಡ ಜೊತೆಯಲ್ಲಿಯೇ ಇದೆ ಅನ್ನೋದನ್ನ ಮರೆತು ಜಾತಿ, ಧರ್ಮ, ಪಂಗಡ ಅನ್ನೋದರ ಮೂಲಕ ಗಲಭೆ ಭ್ರಷ್ಟಾಚಾರ ಕೊಲೆ ಅತ್ಯಾಚಾರ ಇತ್ಯಾದಿಗಳಿಗೆ ಎಡೆ ಮಾಡಿಕೊಟ್ಟು ಅದು ಇಂದು ರೌದ್ರ ರೂಪ ಪಡೆದಿರುವುದು ಮಾತ್ರ ಸುಳ್ಳಲ್ಲ. ಇದು ನಿತ್ಯದ ಜೀವನದಲ್ಲಿ ನಾವು ನೋಡುವ, ಕೇಳುವ ಆಧುನಿಕ ಮಹಾಭಾರತದ ಕುರುಕ್ಷೇತ್ರ ದಂತೆಯೇ ಭಾಸವಾಗುತ್ತದೆ. ಕೆಲವರು ಇದನ್ನು ಅರಿತು ಶಾಂತಿ ನೆಮ್ಮದಿಗಾಗಿ ದುರ್ಬುದ್ಧಿ ಬಿಟ್ಟು ಬದುಕಿದರೆ ಉಳಿದವರು ತಮ್ಮ ನೀಚ ಕೃತ್ಯ ಗಳಿಂದಲೇ ಕೊನೆಗಾಣುತ್ತಾರೆ.

ಜಗತ್ತನ್ನೇ ವಸುದೈವ ಕುಟುಂಬಕಂ ಅಂತ ಹೇಳಿದ ಮಾತಿದೆ. ಅಂದರೆ ನಾವೆಲ್ಲರೂ ಒಂದೇ ಮನೆ ಸದಸ್ಯರು, ಒಂದು ಕೂಡುಕುಟುಂಬದ ಭಾಗಗಳು ಆಗಿರುವಾಗ ಯಾರು ಯಾರನ್ನು ಯಾಕೆ ದೂರಬೇಕು? ಯಾರ್ಯಾರನ್ನು ಯಾಕೆ ಕೊಲೆ ಮಾಡಬೇಕು? ಈ ಪ್ರಶ್ನೆ ಪ್ರಶ್ನೆಯಾಗಿ ಉಳಿದಿದ್ದರೆ ಇನ್ನೊಂದು ಕಡೆಯ ಕಥೆ ಬೇರೆನೆ..

ಅಪ್ಪಣ್ಣ ತಪ್ಪು ಅಂದರೆ ಅದು ತಪ್ಪು. ಸರಿಯಾದದ್ದನ್ನು ಸರಿ ಎಂದರೂ ತಪ್ಪು. ಏನಾದರು ಅಂದರೂ ತಪ್ಪು. ಏನು ಹೇಳದಿದ್ದರೂ ತಪ್ಪೇ. ಹೀಗೆ ಎಲ್ಲದರಲ್ಲೂ ತಪ್ಪು ಹುಡುಕುತ್ತಾ ಹೋಗುವ ಬದಲು ತಪ್ಪನ್ನು ಸರಿ ಮಾಡುವಲ್ಲಿ ಗಮನ ಹರಿಸುವವರು ಸಂಖ್ಯೆ ಬೆರಳೆಣಿಕೆಯಷ್ಟೇ. 

ಕಲ್ಪನಾಲೋಕ ಹಾಗೂ ವಾಸ್ತವ ಬದುಕಿನ ನಡುವಿನ ಜಂಜಾಟದಲ್ಲಿ ಮಧ್ಯಸ್ಥಿಕೆಯ ಬದುಕು ನಮ್ಮದು. ಜೀವನದ ಇಂತಹ ರಾಮಾಯಣ ಹಾಗೂ ಮಹಾಭಾರತದಲ್ಲಿ ಈ ತರದ ಉದಾಹರಣೆಗಳು, ಪ್ರಶ್ನೆಗಳು, ಗೊಂದಲಗಳು ನಮಗೆ ಸಾಮಾನ್ಯ ಅನಿಸಿದರೂ ಕೂಡ ಇದರಲ್ಲಿ ಅಡಗಿರೋ ಉತ್ತರ ನಮ್ಮ ಜೀವನದ ಬಹುದೊಡ್ಡ ರಹಸ್ಯ.  ಅದು ಇಂದಿಗೂ ಕೂಡ ನಿಗೂಢ. ಕಾರಣ ನಮ್ಮ ಅಸಫಲ ಪ್ರಯತ್ನ.

ಮಾನವನಿಗೆ ಕಾಮ, ಮೋಹ, ಲೋಭ, ಮದ, ಮಾತ್ಸರ್ಯ ಎಲ್ಲವೂ ಹುಟ್ಟಿನಿಂದಲೇ ಮೈ ಗೂಡಿದರೂ ಕೂಡ ನಮಗೆ ಇಂತಹ ಗುಣಗಳನ್ನು ಯಾವಾಗ ಎಲ್ಲಿ ಬಳಸಬೇಕೆನ್ನುವುದು ಇನ್ನೂ ಅರಿವಿಗೆ ಬಾರದೆ ಇರುವುದೇ ಕಲಿಯುಗದ ನೀಚ ಕೃತ್ಯಗಳಿಗೆ, ಮೋಸ ವಂಚನೆ ಮುಂತಾದವುಗಳು ಸಂಭವಿಸುವುದಕ್ಕೆ ಮೂಲ ಕಾರಣ. ʼನೀನು ನಗು ಸುಖಿಯಾಗಿರು ನಾನು ನಿನ್ನ ಹಾಗೆ ಇರುವೆ ಅನ್ನೋ ಬದಲು ನಿನ್ನ ಅಳಿಸಿ ನೋಯಿಸಿ ನಾನು ನಕ್ಕು ಸುಖಪಡುವೆʼ ಅನ್ನುವ ಈಗಿನ ಲೋಕವನ್ನು ನೋಡುವಾಗ ಎಲ್ಲವನ್ನು ತ್ಯಜಿಸಿ ತನ್ನನ್ನು ತಾನೆ ಗೆದ್ದು ನಿಂತ ಬುದ್ಧ ಅದೆಷ್ಟೋ ವಾಸಿ ಅನಿಸಿಬಿಡುತ್ತದೆ.

ಜಗತ್ತನ್ನು ಉದ್ಧರಿಸಬೇಕಾದರೆ ಮೊದಲು ನಾವು ಸಜ್ಜನರಾಗಬೇಕು. ಮಾನವೀಯತೆಯನ್ನು ಅಸ್ತ್ರವಾಗಿಸಿ ಉಳಿದವರನ್ನು ಸಜ್ಜನರಾಗಿಸಿ ನಗಿಸುವಲ್ಲಿ ಪ್ರಯತ್ನವನ್ನಾದರೂ ಪಡಬೇಕು. ಇಲ್ಲವಾದರೆ ಬದುಕಿನಲ್ಲಿ ಇಂತಹ ಆಧುನಿಕ ರಾಮಾಯಣ ಭಾರತದಂತಹ ಕಥೆಗಳು ಎಂದೂ ಕೊನೆಯಾಗಲಾರವು.

ಮಹಾಲಕ್ಷ್ಮಿ ದೇವಾಡಿಗ

ಪತ್ರಿಕೋದ್ಯಮ ಪದವೀಧರೆ, ಉಡುಪಿ

Related Articles

ಇತ್ತೀಚಿನ ಸುದ್ದಿಗಳು

You cannot copy content of this page