ಹಲವು ಪೂಜೆಗಳನ್ನು ಮಾಡಿಸಿದರೂ ತನಗೆ ದೇವರು ಹೆಣ್ಣು ಹುಡುಕಿಕೊಡಲಿಲ್ಲವೆಂದು ಸಿಟ್ಟ ಮಾಡಿಕೊಂಡು ದೇವಸ್ಥಾನದಲ್ಲಿದ್ದ ಶಿವಲಿಂಗವನ್ನೇ ಕದ್ದ ಘಟನೆ ಉತ್ತರ ಪ್ರದೇಶದಿಂದ ವರದಿಯಾಗಿದೆ.
ಈ ಸ್ವಾರಸ್ಯಕರ ಘಟನೆ ಉತ್ತರ ಪ್ರದೇಶ ರಾಜ್ಯದ ಕೌಶಂಬಿ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಯ ಕುರಿತಾದ ವಿವರಗಳನ್ನು ನೋಡುವುದಾದರೆ, ಈ ಊರಿನ ಚೋಟು ಎನ್ನುವ ಯುವಕ ತನಗೆ ಬೇಗ ಮದುವೆಯಾಗಲಿ ಎಂದು ದಿನವೂ ತನ್ನ ತಂಗಿಯೊಡನೆ ಊರಿನಲ್ಲಿದ್ದ ಶಿವನ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸುತ್ತಿದ್ದ.
ಹೀಗೆ ತಿಂಗಳ ಕಾಲ ಪೂಜಿಸಿದರೂ ಅವನಿಗೆ ಎಲ್ಲೂ ಹುಡುಗಿ ಸಿಕ್ಕಿರಲಿಲ್ಲ. ತಾನು ಇಷ್ಟೆಲ್ಲ ಪೂಜಿಸುತ್ತಿದ್ದರೂ ದೇವರು ತನಗೆ ಸಹಾಯ ಮಾಡುತ್ತಿಲ್ಲವೆಂದು ಸಿಟ್ಟುಗೊಂಡು ಕೊನೆಗೆ ಚೋಟು ದೇವಸ್ಥಾನದ ಶಿವಲಿಂಗವನ್ನೇ ಕದ್ದಿದ್ದಾನೆ.
ಇತ್ತ ದೇವಸ್ಥಾನದಲ್ಲಿದ್ದ ದೇವರು ಕಾಣೆಯಾಗಿದ್ದನ್ನು ಕಂಡ ಗ್ರಾಮಸ್ಥರು ಗಾಬರಿಯಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಊರಿನಲ್ಲಿರುವ ಎಲ್ಲರನ್ನೂ ವಿಚಾರಣೆ ನಡೆಸಲಾಗಿ ಕೊನೆಗೆ ಚೋಟುವಿನ ಮೇಲೆ ಅನುಮಾನ ಮೂಡಿದ್ದರಿಂದ ಅವನನ್ನು ವಶಕ್ಕೆ ಪಡೆದಿದ್ದಾರೆ.
ಕೊನೆಗೆ ಅವನನ್ನು ವಿಚಾರಿಸಿದಾಗ ಹಲವು ಪೂಜೆಗಳನ್ನು ಮಾಡಿದರೂ ತನಗೆ ಹುಡುಗಿ ಹುಡುಕಿ ಕೊಡದ ದೇವರ ಮೇಲೆ ಕೋಪಗೊಂಡು ಕೃತ್ಯ ಎಸಗಿರುವುದಾಗಿ ಚೋಟು ಹೇಳಿದ್ದಾನೆ. ನಂತರ ಊರಿನ ಪೊದೆಯೊಂದಲ್ಲಿ ಇದ್ದ ಶಿವಲಿಂಗವನ್ನು ಪೊಲೀಸರು ವಶಪಡಿಸಿಕೊಂಡು ನಂತರ ದೇವಸ್ಥಾನಕ್ಕೆ ನೀಡಿದ್ದಾರೆ.