Home ವಿಶೇಷ ೧೯೭೨ರ ಘಟಿಕೋತ್ಸವದಲ್ಲಿ ಒಂದು ಭಾಷಣ: ಅಲೀಸ್ ವಾಕರ್

೧೯೭೨ರ ಘಟಿಕೋತ್ಸವದಲ್ಲಿ ಒಂದು ಭಾಷಣ: ಅಲೀಸ್ ವಾಕರ್

0

ಕನ್ನಡಕ್ಕೆ: ಎಂ.ಆರ್. ಕಮಲ

ಪ್ರತಿ ವರ್ಷದ ಸೆಪ್ಟೆಂಬರ್‌ ತಿಂಗಳ ೩೦ನೇ ದಿನವನ್ನು ʼವಿಶ್ವ ಅನುವಾದ ದಿನʼ ವನ್ನಾಗಿ ಆಚರಿಸಲಾಗುತ್ತದೆ. ತಮ್ಮ ಅನುವಾದದ ಮೂಲಕ ದೇಶ, ಭಾಷೆ, ಸಂಸ್ಕೃತಿಗಳನ್ನು ಜೋಡಿಸುವ ಎಲ್ಲಾ ಅನುವಾದಕರಿಗೂ ಪೀಪಲ್‌ ಮೀಡಿಯಾ ಶುಭಾಶಯಗಳನ್ನು ಸಲ್ಲಿಸುತ್ತದೆ.

ಅಲೀಸ್ ವಾಕರ್

(ಅಲೀಸ್ ವಾಕರ್ ಪ್ರಸಿದ್ಧ  ಆಫ್ರಿಕನ್-ಅಮೇರಿಕನ್  ಕವಿ, ಕಾದಂಬರಿಕಾರ್ತಿ ಮತ್ತು ಸ್ತ್ರೀವಾದಿ ಚಿಂತಕಿ. ಇವರ `ಕಲರ್ ಪರ್ಪಲ್’ ಕಾದಂಬರಿ ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿಯನ್ನು ಪಡೆದಿದೆ. `ಇನ್ ಸರ್ಚ್ ಆಫ್ ಅವರ್‌ ಮದರ್ಸ್ ಗಾರ್ಡನ್ಸ್’ ಅಲೀಸ್ ವಾಕರ್  ಅವರ ಭಾಷಣ, ಲೇಖನ, ಪ್ರಬಂಧಗಳನ್ನು ಒಳಗೊಂಡಿರುವ ಪುಸ್ತಕ. ಆಫ್ರಿಕನ್-ಅಮೇರಿಕನ್ ಸಮಾಜದ ಬದುಕಿನ ಕಷ್ಟಸುಖ, ಏಳುಬೀಳುಗಳನ್ನು ಅತ್ಯಂತ ಸೂಕ್ಷ್ಮಸಂವೇದನೆ, ಅಂತಃಕರಣ ಮತ್ತು ನಿರುದ್ವಿಗ್ನತೆಯಿಂದ ಅಲೀಸ್ ಚಿತ್ರಿಸಿದ್ದಾರೆ. ಈ ಪುಸ್ತಕದಿಂದ ಕೆಲವು ಭಾಗಗಳನ್ನು ಎಂ.ಆರ್. ಕಮಲ ಅವರು ಅನುವಾದಿಸಿದ್ದಾರೆ. ಈ ಅನುವಾದದ  `ಕೆನ್ನೀಲಿ’ ಮುಂದಿನ ತಿಂಗಳ ಮೊದಲ ವಾರದಲ್ಲಿ ಪ್ರಕಟವಾಗುತ್ತಿದೆ. ವಿಶ್ವ ಅನುವಾದ ದಿನದ ವಿಶೇಷವಾಗಿ ಅದರ ಒಂದು ಭಾಗ ಇಲ್ಲಿದೆ.) 

ನಿಮ್ಮನ್ನು ಉದ್ದೇಶಿಸಿ ಭಾಷಣ ಮಾಡಬೇಕೆಂದು  ಚಾರ್ಲ್ಸ್ ಡಿಕಾರ್ಲೊ ಹೇಳಿದಾಗ ಇಂತಹ ಸಭೆಗಳಲ್ಲಿ  ಯಾವುದರ ಬಗ್ಗೆ ಮಾತನಾಡಬೇಕೆಂಬ ವಿಚಾರವೇ  ನನಗೆ ತಿಳಿದಿರಲಿಲ್ಲ. ವಿಧಿಯುಕ್ತವಾದ `ಪದವಿ-ಪೂರ್ವ’ ಶಿಷ್ಟಾಚಾರಗಳಲ್ಲಿ ನಾನೆಂದೂ ಭಾಗಿಯಾಗಿರಲಿಲ್ಲ. ಶ್ರೀಮತಿ ರೋಶೆನ್ ಬುಷ್ ಅವರ ಮನೆಯ ಬೆಂಕಿ ಗೂಡಿನ ಬದಿಯಿಂದ, ಸಣ್ಣ ಲೋಟವೊಂದರಲ್ಲಿ  ಶಾಂಪೈನ್ ಪಡೆದು, ಮುದಗೊಳಿಸುವ ಒಂದೆರಡು ಮಾತಿನಿಂದ ಹೊರ ಜಗತ್ತಿಗೆ ದೂಡಲ್ಪಟ್ಟವಳು.

`ಯಾವುದರ ಬಗ್ಗೆ ಮಾತಾಡಲಿ?’ ಕೇಳಿದೆ. `ನೋಡೋಣ..ಯುದ್ಧ, ಬಡತನ, ಹೆಣ್ಣು ಮಕ್ಕಳ ಸ್ಸ್ಥಿತಿಗತಿ, ನಿಮ್ಮ ಬರವಣಿಗೆ, ಜೀವನ .. ಸಾರಾ ಲಾರೆನ್ಸ್ ನಲ್ಲಿದ್ದಾಗಿನ ನಿಮ್ಮ ಬದುಕು. ..ಹೀಗೆ ಯಾವುದಾದರೂ ಸರಿ ‘ ಎಂದು ಚಾರ್ಲ್ಸ್ ಉತ್ತರಿಸಿದ.

ಕೆಲ ಕ್ಷಣಗಳ ಕಾಲ ಸುಮ್ಮನಿದ್ದು `ಅದೇನು ಕಲ್ಪನೆಯಾಗಿರಬೇಕಿಲ್ಲ, ದೀರ್ಘವಾಗಿಯೂ ಇರಬೇಕಿಲ್ಲ.  ಅದನ್ನು  ಎಲ್ಲೂ ಪ್ರಕಟಿಸುವುದಿಲ್ಲ. ಹೃದಯದಿಂದ ಮಾತನಾಡಿದರೆ ಆಯಿತು’ ಎಂದ.

`ಎಲ್ಲದರ ಬಗ್ಗೆ ಸಂಕ್ಷಿಪ್ತವಾಗಿ, ಹೃದಯಪೂರ್ವಕವಾಗಿ ಮಾತನಾಡುವುದು ಹೇಗೆ?’ ಎಂದು ಈ ಭಾಷಣವನ್ನು ಕರೆಯಬಹುದು ಎಂದೆ.

ಕಳೆದ ಬಾರಿ ನಾನಿಲ್ಲಿ ಮಾತನಾಡಿದಾಗ ಕಪ್ಪು ಬರಹಗಾರ್ತಿಯರ ಅಧ್ಯಯನದಲ್ಲಿ  ತೊಡಗಿಕೊಂಡಿದ್ದೆ. ಅದು ನನ್ನ ಬದುಕಿನ ಕೆಲವು ವರ್ಷಗಳನ್ನು ಸಿರಿವಂತಗೊಳಿಸಿತ್ತು.. ನಾನು ಮತ್ತು ನನ್ನ ಗಂಡ ಮಿಸ್ಸಿಸ್ಸಿಪ್ಪಿಯಲ್ಲಿ ವಾಸ ಮಾಡಲು ಹೋದ ತಕ್ಷಣ ಈ ಅಧ್ಯಯನ ಆರಂಭವಾಗಿತ್ತು. ಅಷ್ಟು ಹೊತ್ತಿಗೆ ನಮ್ಮನ್ನು ಹೊಡೆಯುತ್ತಾರೆ, ಗುಂಪುಗಟ್ಟುತ್ತಾರೆ, ನಮ್ಮ ಮೇಲೆ ಬಾಂಬ್ ಎಸೆಯುತ್ತಾರೆ ಇತ್ಯಾದಿ ಆತಂಕಗಳೆಲ್ಲ ಮರೆಯಾಗಿದ್ದವು. ಐದು ವರ್ಷಗಳ ಕಾಲ ಗ್ರಾಮರ್ ಶಾಲೆಯಲ್ಲಿ ಕಲಿತ  ಐವತ್ತೈದರಿಂದ ಅರವತ್ತರ ಒಳಗಿನ ಪ್ರಬುದ್ಧವಾದ ಹೆಣ್ಣುಮಕ್ಕಳಿಗೆ ಇತಿಹಾಸವನ್ನು ಬೋಧಿಸುವುದರ ಬಗ್ಗೆ ನನ್ನ ಆಸಕ್ತಿ ಕುದುರಿತ್ತು. ಅವರ ಬಳಿ ಆತ್ಮಕತೆಗಳನ್ನು ಬರೆಸುವುದು. ಅದನ್ನು ಓದುತ್ತಲೇ, ರಾಜಕೀಯ, ಸಾಮಾಜಿಕ ಚಳುವಳಿಗಳೊಂದಿಗೆ ಅವರ ಅನುಭವದ ತುಣುಕುಗಳನ್ನು  ಸೇರಿಸಿ ವಿಷಯವನ್ನು  ಅರ್ಥಮಾಡಿಸಬಹುದು ಎಂಬ ಉದ್ದೇಶವಿತ್ತು.

ಹಾಗೆಂದ ಮಾತ್ರಕ್ಕೆ ನನ್ನ ಸುತ್ತಲಿದ್ದ ಎಲ್ಲ ಹೆಂಗಸರು ತಮ್ಮ ತಮ್ಮ ಬಗ್ಗೆ ಬರೆಯಬೇಕೆಂದು  ಕಾದು  ಕುಳಿತವರಲ್ಲ.  ಶ್ರೀಮತಿ ವಿನ್ಸನ್  ಹಡ್ಸನ್ ಅವರ ಮನೆಯ ಮೇಲೆ  ಒಂದಕ್ಕಿಂತ ಹೆಚ್ಚು ಬಾರಿ ಕ್ಯೂ ಕ್ಲಕ್ಸ್  ಕ್ಲಾನ್ ಗುಂಪು  ಬಾಂಬನ್ನು  ಎಸೆದಿತ್ತು.  ಮಿಸ್ಸಿಸಿಪ್ಪಿಯಲ್ಲಿ ಸೌಹಾರ್ದವಾಗಿ ಬದುಕುತ್ತಿದ್ದ ವಿಶಿಷ್ಟ ಹೆಣ್ಣುಮಗಳು ಹಡ್ಸನ್. ಇತಿಹಾಸ ಮಾತ್ರವಲ್ಲ ಕ್ರಾಂತಿಕಾರಿ ನೇತಾರಳಾಗಿ ಬದಲಾವಣೆ ತರಲು ತನ್ನ ಕರ್ತವ್ಯಗಳೇನು ಎಂಬ ಅರಿವಿದ್ದವಳು. ಈ ಗುಂಪನ್ನು ಎದುರಿಸಲು ಒಂದು ಜರ್ಮನ್ ಶೆಫರ್ಡ್ ನಾಯಿಯನ್ನು ಸಾಕಿಕೊಂಡಿದ್ದಳು. ಬಾಂಬರ್ ಗಳು ಬರುತ್ತಿದ್ದಾರೆಂದು ತಿಳಿದ  ತಕ್ಷಣ ಅದು ಜೋರಾಗಿ ಬೊಗಳಲು ಆರಂಭಿಸುತ್ತಿತ್ತು. ಅವಳ ಬಳಿಯಿದ್ದ ಎರಡು ಶಾಟ್ ಗನ್ನುಗಳನ್ನು  ಉಪಯೋಗಿಸಲು ಹಿಂಜರಿಯುತ್ತಿರಲಿಲ್ಲ.  ಕೆರಳಿಸುವವರು, ಕೊಲೆಗಾರರ ವಿರುದ್ಧ ಏಕಾಂಗಿ ಹೋರಾಟ ಮಾಡುವುದು ಹೇಗೆ ಎನ್ನುವುದನ್ನು  ಉಳಿದವರಿಗೂ  ಅರ್ಥ ಮಾಡಿಸಲು  ಅದೆಲ್ಲವನ್ನು ಆಕೆ ಬರೆಯಲು ಶುರು ಮಾಡಿದ್ದರು.

ಶ್ರೀಮತಿ ಹಡ್ಸನ್ ಅವರಿಂದ ಹೆಣ್ಣು ಮಕ್ಕಳ ಬಗ್ಗೆ  ಗೌರವ  ಭಾವನೆ ಮೂಡಿ ಬೇರೆ ಬೇರೆ ಹೆಣ್ಣುಮಕ್ಕಳ ಕೃತಿಗಳನ್ನು  ಹುಡುಕಲು ಆರಂಭಿಸಿದೆ. ಬರವಣಿಗೆಯಲ್ಲಿ ತೊಡಗಿಕೊಂಡ ಹೆಣ್ಣುಮಕ್ಕಳನ್ನು ಕಂಡು ಅಪಹಾಸ್ಯ ಮಾಡುವುದು, ತುಚ್ಛೀಕರಿಸುವುದು  ಸಾಧ್ಯವಾದರೆ  ವಿಮರ್ಶಕರು ಅವರನ್ನು  ಅಳಿಸಿ  ಹಾಕುವುದು  ಸಾಮಾನ್ಯವಾಗಿತ್ತು. ತಮ್ಮನ್ನು ತಾವು ಬರವಣಿಗೆಯಲ್ಲಿ ಅಭಿವ್ಯಕ್ತಿಸಿದ ಹೆಚ್ಚಿನ ಹೆಣ್ಣುಮಕ್ಕಳು, ಬದುಕುವುದಕ್ಕೆ ಹೋರಾಡುತ್ತ, ಬಡತನದಲ್ಲಿ ಮರೆಯಾಗಿ, ಅವಧಿಗಿಂತ ಮೊದಲೇ ಕತ್ತಲಲ್ಲಿ ಕಳೆದುಹೋಗಿದ್ದೇ ಹೆಚ್ಚು.

ಲೂಸಿ ಟೆರ್ರಿ ಬದುಕಿದ್ದಾರೋ, ಸತ್ತಿದ್ದಾರೋ ನಮಗೆ ತಿಳಿಯದು.  ಫಿಲಿಸ್  ವೀಟ್ಲಿ  ಸಣ್ಣ ಮನೆಯೊಂದರಲ್ಲಿ  ಮೂವರು ಮಕ್ಕಳೊಂದಿಗೆ ವಾಸಿಸುತ್ತ, ಸೇವಕಿಯಾಗಿ ಕೆಲಸ ಮಾಡಿ, ಪೌಷ್ಟಿಕಾಂಶದ ಕೊರತೆಯಿಂದ ಸತ್ತಿದ್ದು ತಿಳಿದಿತ್ತು. ನೆಲ್ಲಾ ಲಾರೆನ್ಸ್, ಎರಡು ಹೊತ್ತು ಊಟ, ಮಲಗಲೊಂದು ಜಾಗ ಸಿಗುತ್ತದೆ ಎನ್ನುವ ಕಾರಣಕ್ಕೆ ಬರವಣಿಗೆಯನ್ನು ತೊರೆದು  ನರ್ಸ್ ಕೆಲಸಕ್ಕೆ ಸೇರಿ ಕಣ್ಮರೆಯಾದಳು. ಅದುವರೆಗೂ ಪ್ರಕಟವಾಗಿದ್ದರಲ್ಲಿಯೇ ಅತ್ಯಂತ ಅಧಿಕೃತವಾದ ಕಪ್ಪು ಪ್ರೇಮದ ಕತೆಯನ್ನು ಬರೆದಿದ್ದ  ಜೋರ ನಿಯೋ ಹರ್ಟ್ ಸನ್  ಫ್ಲೋರಿಡಾದ ಜವುಳು ನೆಲದಲ್ಲಿ  ಮನೆಗೆಲಸದವಳಾಗಿ, ಬಡತನದಲ್ಲಿಯೇ ಸಾವನ್ನಪ್ಪಿದಳು. ಅವಳು  ಸಾಯುವ ಹೊತ್ತಿಗೆ ಆರು ಪುಸ್ತಕಗಳನ್ನು ಬರೆದಿದ್ದಳು. ಬಹಳ ಆಸಕ್ತಿದಾಯಕ ವಿಷಯವೆಂದರೆ ಕಪ್ಪು ವಿಮರ್ಶಕರು ಮತ್ತು ಬಿಳಿಯ ವಿಮರ್ಶಕರು ಅವಳ ಅಭಿಜಾತ ಕೃತಿ `ದೆರ್ ಐಸ್ ವರ್ ವಾಚಿಂಗ್ ಗಾಡ್’ ಅನ್ನು ಅವಳ ಸಮಕಾಲೀನನಾದ ರಿಚರ್ಡ್ ರೈಟ್ ಅವರ `ನೇಟಿವ್ ಸನ್’ ಕೃತಿಯ ನಂತರದ ಕೃತಿಯೆಂದು ಪರಿಗಣಿಸಿದ್ದರು. ಇವೆರಡನ್ನೂ ಒಂದೇ ಅವಧಿಯಲ್ಲಿ ಬರೆಯಲಾಗಿತ್ತು. ಜೀವನದ ಹದಿನೆಂಟರಲ್ಲಿ ಒಂದು ಭಾಗವನ್ನು ಬಿಳಿಯರ ಬಗ್ಗೆ ಚಿಂತಿಸುತ್ತ ಕಳೆದ ಕಪ್ಪು ಹುಡುಗ ಮತ್ತು  ಕಪ್ಪು ಹುಡುಗಿಯ ಪ್ರೇಮ ಕತೆಯದು. ಆದರೆ ಅದು  ಬಿಳಿಯ ಜನರನ್ನೇ ತಲೆಯಲ್ಲಿಟ್ಟುಕೊಂಡಿದ್ದ ಪ್ರಮುಖ ಪಾತ್ರವೊಂದರ ಕಾದಂಬರಿಯಷ್ಟು ಯಾಕೋ ಮುಖ್ಯವೆನಿಸಲಿಲ್ಲ. ವಿದೇಶಿ ಭೂಮಿಯಲ್ಲಿ ರೈಟ್  ಘನತೆಯಿಂದಲೇ  ಸತ್ತರೆ, ಹರ್ಸ್ಟನ್  ತನ್ನದೇ ಜಾಗದಲ್ಲಿ ಬಹಿಷ್ಕೃತೆಯಾಗಿ, ಹಣವಿಲ್ಲದೆ ಸತ್ತಳು.

ಆದರೂ ನಾನು ಅವಳ ಬಗ್ಗೆ, ಅವಳಂಥವರ ಬಗ್ಗೆ  ನಿರಾಶಾವಾದಿಯಾಗಿಲ್ಲ. ಅಂತಹ ಸಂಕಟದ ಸ್ಥಿತಿಯಲ್ಲೂ ಅವರು ಅದ್ಭುತವಾದ ಕೃತಿಗಳನ್ನು ನೀಡಿದರು. ತಮ್ಮ ತುಂಬು  ಜೀವನವನ್ನು ಉಪಯೋಗಕಾರಿಯಾಗಿಯೇ  ಕಳೆದರು. ಹೆಚ್ಚಿನವರು ಈವತ್ತಿಗೆ ಇಲ್ಲವಾದರೂ ಯುವ ಸಮುದಾಯ ಧನ್ಯತಾಭಾವದಿಂದ  ಅವರ ಕೃತಿಗಳನ್ನು ಓದುತ್ತಿದೆ.

ಕಾಲೇಜನ್ನು ತೊರೆದು ಹೋಗುತ್ತಿರುವ ನಿಮ್ಮಂಥ ಯುವ ಸಮುದಾಯ, ಅದರಲ್ಲೂ ಹೆಣ್ಣುಮಕ್ಕಳು ಸಮಾಜಕ್ಕೆ  ನೀಡಬೇಕಾಗಿರುವ ಉತ್ತಮವಾದ ಕೊಡುಗೆ ಮತ್ತದರ ಸಾಧ್ಯತೆಗಳ ಬಗ್ಗೆ ಯೋಚಿಸಬೇಕು. ಗಂಡಸರ ಪಾಲಿಗೆ ಅವು  ಉಪದ್ರವಗಳು ಎನಿಸಬಹುದು. ಈ ವಿಷಯವನ್ನು ಮನದಟ್ಟು ಮಾಡಿಕೊಂಡರೆ ಹೆಣ್ಣುಮಕ್ಕಳ ಬೆಳವಣಿಗೆಯನ್ನು ನಿಗ್ರಹಿಸಲು ಯತ್ನಿಸುವ ಎಲ್ಲರ ವಿರುದ್ಧ  ಹೋರಾಟ ಮಾಡುವ ಮನಃಸ್ಥಿತಿ ಒದಗುತ್ತದೆ. ಕಪ್ಪು ಹೆಣ್ಣು ಮಗಳು ಇಂತಹ ಜಗತ್ತಿಗೆ ಕಾಲಿಡಬೇಕಾದರೆ ಉಳಿದವರಿಗಿಂತ ದುಪ್ಪಟ್ಟು ಸಿದ್ಧತೆಗಳನ್ನು ಮಾಡಿಕೊಂಡಿರಬೇಕಾಗುತ್ತದೆ. ಹೊಸ ಪ್ರಪಂಚದಲ್ಲಿ ಮಾತ್ರ  ಹಕ್ಕುಗಳನ್ನು ಸಾಧಿಸುವುದಲ್ಲ, ಹಳೆಯ ಪ್ರಪಂಚದಲ್ಲಿ ಕೂಡ. ಮಾತನಾಡಬೇಕಾಗಿದ್ದ ಲೆಕ್ಕವಿರದಷ್ಟು ಹೆಣ್ಣುಮಕ್ಕಳು ಕಣ್ಮರೆಯಾಗಿದ್ದಾರೆ, ಮರೆತುಹೋಗಿದ್ದಾರೆ. ಅವರನ್ನು  ಕಂಡು ಹಿಡಿಯುವ ಕೆಲಸವನ್ನು  ಮಾಡಬೇಕು. ಕಪ್ಪು ಹೆಣ್ಣುಮಕ್ಕಳು ಎನ್ನುವ ಒಂದೇ  ಕಾರಣಕ್ಕೆ  ಒತ್ತಾಯ ಪೂರ್ವಕವಾಗಿ  ಹೇರಿದ  ಮೌನದಿಂದ,  ಔದಾಸೀನ್ಯದಿಂದ ಅವರನ್ನು  ಬಿಡುಗಡೆ ಮಾಡಬೇಕು.

ಒಂದನ್ನು ನೆನಪಿಡಿ, ಈ ಸಮೂಹ ಸನ್ನಿಯ, ಕುರಿ ಮಂದೆಯ  ದಿನಗಳಲ್ಲಿ  ನೀವು ಮೌನವಾಗಿರುವಂತೆ  ಒತ್ತಾಯಿಸುವ, ಬೆಳವಣಿಗೆಗೆ ಕಡಿವಾಣ ಹಾಕುವ, ಬಯಸಿದಂತೆ ಅರಳಿಕೊಳ್ಳಲು ಬಿಡದ. ಕಷ್ಟಪಟ್ಟು ನೀವು ನೀಡಿದ ಕೊಡುಗೆಗಳನ್ನು ನಿಕೃಷ್ಟವಾಗಿ ಕಾಣುವ ಯಾವುದೇ ವ್ಯಕ್ತಿಯಿರಲಿ, ಅವನು ನಿಮ್ಮ ಗೆಳೆಯನಲ್ಲ, ಬಂಧುವೂ ಅಲ್ಲ. ಈ ಕಾರಣದಿಂದಲೇ ಸಾಮಾನ್ಯವಾಗಿ ಚರಿತ್ರಕಾರರು ಹೆಣ್ಣುಗಳಿಗೆ ಶತ್ರುಗಳಾಗಿರುತ್ತಾರೆ, ಅದರಲ್ಲೂ ಕಪ್ಪು ಹೆಣ್ಣುಮಕ್ಕಳಿಗೆ. ಇವರಷ್ಟೇ ಅಲ್ಲ, ಯಾರ ಬಳಿ ನಾವು ಕಲಿಯಲು ಹೋಗುತ್ತಿದ್ದೆವೋ ಅವರು ಕೂಡ. ಅಜ್ಞಾನ, ದುರಹಂಕಾರ, ಜನಾಂಗವಾದ ಅನೇಕ ವಿಶ್ವವಿದ್ಯಾಲಯಗಳಲ್ಲಿ  ಉನ್ನತ  ಜ್ಞಾನವೆಂಬಂತೆ ಅರಳಿಕೊಳ್ಳುತ್ತಿದೆ.

ಇಲ್ಲಿಂದ ತೆರಳಿದ  ಮೇಲೆ ನಿಮ್ಮ ಕೆಲಸವೆಂದರೆ ಹಿಂದೆ ಶಿಕ್ಷಣ ಪಡೆದ ಮಹಿಳೆಯರಂತೆ- ಜಗತ್ತನ್ನು ಬದಲಿಸುವುದು. ಅದಕ್ಕಿಂತ ಕಡಿಮೆ ಅಥವಾ ಸುಲಭದ್ದನ್ನು ಮಾಡಬಾರದು. ನೀವು ಇತ್ತೀಚಿನ ಹೆಣ್ಣುಮಕ್ಕಳ `ವಿಮೋಚನೆಯ  ಸಾಹಿತ್ಯ’ವನ್ನು ಓದುತ್ತಿರಬಹುದು. ಅದರಲ್ಲಿ ಕೆಲವು ವಿಷಯಗಳನ್ನು ನೀವು  ಒಪ್ಪದೆಯೂ ಇರಬಹುದು. ಶತಮಾನಗಳಿಂದ ಹೆಣ್ಣುಮಕ್ಕಳು ಕಂಡುಕೊಂಡಿರುವುದೇನೆಂದರೆ ಜಗತ್ತನ್ನು ಬದಲಿಸಲು ಸಾಕಷ್ಟು  ಸಮಯ ಹಿಡಿಯುತ್ತದೆ. ಅದು ಚಲನಶೀಲತೆಯ ಜೊತೆಗೆ ಹಣವನ್ನೂ ಬಯಸುತ್ತದೆ. ವರ್ಜಿನಿಯಾ ವುಲ್ಫ್  ಹೇಳುವಂತೆ  `ತನ್ನದೇ ಆದ ಸ್ವಂತ ಕೋಣೆ’ ಮತ್ತು ಅದಕ್ಕೊಂದು  `ಬೀಗ ಮತ್ತು ಬೀಗದ ಕೈ’ ಇರಬೇಕು. ಹೆಣ್ಣುಮಕ್ಕಳು ಮುಖ್ಯವಾಗಿ ತಮ್ಮ ಬಗ್ಗೆ ಮತ್ತು ಗೆಳೆಯರು, ಪ್ರೇಮಿ, ಗಂಡನ ಕಷ್ಟಗಳು, ಎಲ್ಲ ಎದೆ ಬಿರಿತಗಳು, ನೋವುಗಳ ಬಗ್ಗೆ  ಯೋಚಿಸುವ ಸಾಧ್ಯತೆಯಿರಬೇಕು.. ಆಗ  ಆಲೋಚನೆಯ ಸ್ವಾತಂತ್ರ್ಯ ಅಥವಾ ನಿಮ್ಮ  ಕೆಲಸಗಳಿಗೆ ಬೆಲೆಯಿದೆಯೇ  ಎಂದು ನೀವು ಅಚ್ಚರಿ ಪಡುತ್ತೀರ.

ಹೆಣ್ಣುಮಗಳಾಗಿ ಹುಟ್ಟಿರುವುದೇ ಒಂದು ಸಂತಸದ ವಿಷಯ. ಅದರಲ್ಲೂ ಕಪ್ಪು ಹೆಂಗಸಾಗಿ. ನಮ್ಮ ದೈನಂದಿನ ಸಂಗತಿಗಳಿಂದ ಶ್ರೀಮಂತವಾಗಿ ಹೊಸ ಸಾಧ್ಯತೆಗಳನ್ನು ಅದು ತೆರೆಯುತ್ತದೆ ಎನ್ನುವ ಕಾರಣಕ್ಕಲ್ಲ. ಅದರ ಭೂತಕಾಲ ಚಿನ್ನದಂತೆ ಆ  ಕಾಲದಲ್ಲಿ  ಹೊಳೆದ  ನಮ್ಮ ಸೋದರಿಯರೊಂದಿಗೆ ಅಂಟಿಕೊಂಡಿದೆ. ಅವರು ನಮಗೆ ಭರವಸೆಯನ್ನು ನೀಡಿದ್ದಾರೆ. ಗತದ ಉಜ್ವಲತೆಯನ್ನು ನಿರೂಪಿಸಿದ್ದಾರೆ, ಅದು ನಮ್ಮನ್ನು ಬಿಡುಗಡೆಗೊಳಿಸಿ ಭವಿಷ್ಯದ ಹಕ್ಕುಗಳನ್ನು ಸಂಪೂರ್ಣವಾಗಿ  ಪಡೆಯುವುದಕ್ಕೆ ದಾರಿಯಾಗಬೇಕು.

ಇದೆಲ್ಲವನ್ನು ಸಂಕ್ಷಿಪ್ತವಾಗಿ, ಹೃದಯದಿಂದಲೇ ಹೇಳಿದ್ದೇನೆ.

***

(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)

ಎಂ ಆರ್‌ ಕಮಲ
ಕವಯಿತ್ರಿಯಾಗಿ, ಅನುವಾದಕಿಯಾಗಿ ಕನ್ನಡ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರು

🔸ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo

ಇದನ್ನೂ ನೋಡಿ: ದೈವಾರಾದನೆ ಅಂದ್ರೆ ಸಮಾಜದ ಸಮಾನತೆ ಕಾಪಾಡುವ ವಿಚಾರ : ಕಾಂತಾರ ಕುರಿತು ರಿಷಬ್ ಹೇಳಿದ್ದು ಹೀಗೆ!

Reviews KANTARA After Watching Celebrity Show

https://youtu.be/iWsr2qQQDBM

https://fb.watch/fRPSMXFqJD/

You cannot copy content of this page

Exit mobile version