ನವದೆಹಲಿ: ವಕ್ಫ್ (ತಿದ್ದುಪಡಿ) ಮಸೂದೆಯ ಪರಿಶೀಲನೆಗೆ ಶುಕ್ರವಾರ ಕೇಂದ್ರ ಸರ್ಕಾರ 31 ಸದಸ್ಯರ ಜಂಟಿ ಸದನ ಸಮಿತಿ (ಜೆಪಿಸಿ) ರಚಿಸಿದೆ. ಸಮಿತಿಗೆ ಸದಸ್ಯರನ್ನು ನಾಮನಿರ್ದೇಶನ ಮಾಡುವ ಪ್ರಸ್ತಾವನೆಯನ್ನು ಉಭಯ ಸದನಗಳು ಅಂಗೀಕರಿಸಿವೆ.
ಅಸ್ತಿತ್ವದಲ್ಲಿರುವ 1995ರ ವಕ್ಫ್ ಕಾಯ್ದೆಗೆ ಸುಮಾರು 40 ತಿದ್ದುಪಡಿಗಳನ್ನು ತಿದ್ದುಪಡಿ ಮಸೂದೆ ಪ್ರಸ್ತಾಪಿಸಿದೆ. ಅವುಗಳ ಬಗ್ಗೆ ಸದನ ಸಮಿತಿ ಪರಿಶೀಲನೆ ನಡೆಸಲಿದೆ.
ಸಂಸತ್ತಿನ ಮುಂದಿನ ಅಧಿವೇಶನದ ಮೊದಲ ವಾರದ ಕೊನೆಯ ದಿನದೊಳಗೆ ಜಂಟಿ ಸದನ ಸಮಿತಿಯು ತನ್ನ ವರದಿಯನ್ನು ಸಲ್ಲಿಸಲಿದೆ. ಸಮಿತಿಯ 21 ಸದಸ್ಯರನ್ನು ಲೋಕಸಭೆಯಿಂದ ಮತ್ತು ಉಳಿದವರು ರಾಜ್ಯಸಭೆಯಿಂದ ಆಯ್ಕೆ ಮಾಡಲಾಗಿದೆ.
ಲೋಕಸಭೆಯ ಸಂಸದರಾದ ಜಗದಾಂಬಿಕಾ ಪಾಲ್, ಡಾ ನಿಶಿಕಾಂತ್ ದುಬೆ, ತೇಜಸ್ವಿ ಸೂರ್ಯ, ಅಪರಾಜಿತಾ ಸಾರಂಗಿ, ಡಾ ಸಂಜಯ್ ಜೈಸ್ವಾಲ್, ದಿಲೀಪ್ ಸೈಕಿಯಾ, ಅಭಿಜಿತ್ ಗಂಗೋಪಾದಾಯ, ಡಿ ಕೆ ಅರುಣಾ, ಗೌರವ್ ಗೊಗೊಯ್, ಇಮ್ರಾನ್ ಮಸೂದ್, ಡಾ ಮೊಹಮ್ಮದ್ ಜಾವೇದ್, ಮೊಹಿಬ್ಬುಲ್ಲಾ, ಕಲ್ಯಾಣ್ ಬ್ಯಾನರ್ಜಿ, ಎ ರಾಜಾ, ಲಾವು ಶ್ರೀಕೃಷ್ಣ ದೇವರಾಯಲು, ದಿಲೇಶ್ವರ ಕಮೈತ್, ಅರವಿಂದ್ ಸಾವಂತ್, ಮಹ್ತ್ರೆ ಬಲ್ಯ ಮಾಮ ಸುರೇಶ್ ಗೋಪಿನಾಥ್, ನರೇಶ್ ಗಣಪತ್ ಮ್ಹಾಸ್ಕೆ, ಅರುಣ್ ಭಾರತಿ ಮತ್ತು ಅಸಾದುದ್ದೀನ್ ಓವೈಸಿ ಸಮಿಯಲ್ಲಿ ಇದ್ದಾರೆ.
ರಾಜ್ಯಸಭೆಯಿಂದ ಬ್ರಿಜ್ ಲಾಲ್, ಮೇಧಾ ವಿಶ್ರಮ್ ಕುಲಕರ್ಣಿ, ಗುಲಾಮ್ ಅಲಿ, ರಾಧಾ ಮೋಹನ್ ದಾಸ್ ಅಗರವಾಲ್ (ಎಲ್ಲರೂ ಬಿಜೆಪಿ) ಸೈಯದ್ ನಾಸೀರ್ ಹುಸೇನ್ (ಕಾಂಗ್ರೆಸ್), ಮೊಹಮ್ಮದ್ ನದಿಮುಲ್ ಹಕ್ (ಟಿಎಂಸಿ), ವಿ ವಿಜಯಸಾಯಿ ರೆಡ್ಡಿ (ವೈಎಸ್ಆರ್ಸಿಪಿ) , ಎಂ ಮೊಹಮ್ಮದ್ ಅಬ್ದುಲ್ಲಾ (ಡಿಎಂಕೆ), ಸಂಜಯ್ ಸಿಂಗ್ (ಎಎಪಿ) ಮತ್ತು ನಾಮನಿರ್ದೇಶಿತ ಸದಸ್ಯರಾದ ಧರ್ಮಸ್ಥಳದ ಡಾ. ವಿರೇಂದ್ರ ಹೆಗ್ಗಡೆ ಸಮಿತಿಯ ಸದ್ಯಸರಾಗಿದ್ದಾರೆ.
ಮುಸ್ಲಿಮರನ್ನು ಗುರಿಯಾಗಿಸಿ ಮಸೂದೆಯನ್ನು ರೂಪಿಸಲಾಗಿದೆ. ಇದು ಸಂವಿಧಾನದ ಮೇಲಿನ ದಾಳಿಯಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.
ಗುರುವಾರ ಲೋಕಸಭೆಯಲ್ಲಿ ಮಸೂದೆಯನ್ನು ಮಂಡಿಸಲಾಗಿದ್ದು, ತೀವ್ರ ಚರ್ಚೆಯ ನಂತರ ಜಂಟಿ ಸದನ ಸಮಿತಿಗೆ ಕಳುಹಿಸಲಾಗಿದೆ. ಪ್ರಸ್ತಾವಿತ ಕಾನೂನು ಮಸೀದಿಗಳ ಕಾರ್ಯನಿರ್ವಹಣೆಯಲ್ಲಿ ಹಸ್ತಕ್ಷೇಪ ಮಾಡುವ ಉದ್ದೇಶವನ್ನು ಹೊಂದಿಲ್ಲ ಎಂದು ಸರ್ಕಾರ ಪ್ರತಿಪಾದಿಸಿದೆ.