Home ಬ್ರೇಕಿಂಗ್ ಸುದ್ದಿ 40% ಕಮೀಷನ್ ಆರೋಪ ನ್ಯಾಯಾಂಗ ತನಿಖೆಗೆ ; ಬಿಜೆಪಿಗೆ ದೊಡ್ಡ ತಲೆನೋವಾದ ಸರ್ಕಾರದ ಆದೇಶ

40% ಕಮೀಷನ್ ಆರೋಪ ನ್ಯಾಯಾಂಗ ತನಿಖೆಗೆ ; ಬಿಜೆಪಿಗೆ ದೊಡ್ಡ ತಲೆನೋವಾದ ಸರ್ಕಾರದ ಆದೇಶ

0

ಚುನಾವಣೆಗೂ ಮುನ್ನ ಬಾರೀ ಸದ್ದು ಮಾಡಿದ್ದ ಬಿಜೆಪಿ ಸರ್ಕಾರದ ಮೇಲಿನ 40% ಕಮೀಷನ್ ಆರೋಪದ ಪ್ರಕರಣವನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನ್ಯಾಯಾಂಗ ತನಿಖೆಗೆ ಒಪ್ಪಿಸಿದೆ. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದಲ್ಲಿ ಸಮಿತಿ ರಚಿಸಿ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿವಿಧ ಇಲಾಖೆಗಳಲ್ಲಿ ನಡೆದ 40% ಕಮೀಷನ್ ಹಗರಣ ರಾಜ್ಯ ಮಾತ್ರವಲ್ಲದೆ ದೇಶಾದ್ಯಂತ ದೊಡ್ಡ ಸದ್ದು ಮಾಡಿತ್ತು. ಇದೇ ಕಾರಣಕ್ಕೆ ಬೊಮ್ಮಾಯಿ ನೇತೃತ್ವದ ಸರ್ಕಾರ ಚುನಾವಣೆಯಲ್ಲೂ ದೊಡ್ಡ ಮಟ್ಟದಲ್ಲಿ ಮುಗ್ಗರಿಸಿತ್ತು. ಕಾಂಗ್ರೆಸ್ ಮಾತ್ರವಲ್ಲದೆ ರಾಜ್ಯ ಗುತ್ತಿಗೆದಾರರ ಸಂಘ ಕೂಡ ಬಿಜೆಪಿ ಮೇಲೆ ಈ ಆರೋಪ ಮಾಡಿದ ಹಿನ್ನೆಲೆಯಲ್ಲಿ 40% ಹಗರಣ ಹೆಚ್ಚು ಮಹತ್ವ ಪಡೆದಿತ್ತು.

ಇನ್ನು ಜಸ್ಟೀಸ್ ನಾಗಮೋಹನ್ ದಾಸ್ ಅವರ ನೇತೃತ್ವದ ಸಮಿತಿಗೆ ಈ ಬಗ್ಗೆ ವರದಿ ಸಿದ್ದಪಡಿಸಲು ಒಂದು ತಿಂಗಳ ಕಾಲಾವಕಾಶ ನೀಡಿದೆ. ಹಗರಣದ ಸ್ಥಳ ಹಾಗೂ ದಾಖಲಾತಿಗಳನ್ನು ಪರಿಶೀಲಿಸಿ ವಿವರವಾದ ತನಿಖೆ ನಡೆಸಿ, ಲೋಪದೋಷಗಳ ಮಾಹಿತಿ ಹಾಗೂ ಕಾರಣರಾದ ಆರೋಪಿಗಳನ್ನು ಪತ್ತೆ ಮಾಡಿ ಸಂಪೂರ್ಣ ವರದಿಯನ್ನು ಒಂದು ತಿಂಗಳು ದಿನಗಳ ಒಳಗೆ ನೀಡಬೇಕು. ಹಾಗೇ ಈ ಪ್ರಕರಣಕ್ಕೆ ಸಂಬಂಧಿಸಿದ ಅಗತ್ಯ ಕಡತ, ದಾಖಲೆಗಳನ್ನು ಆಯಾ ಇಲಾಖೆಯ ಅಧಿಕಾರಿಗಳು ಈ ತನಿಖಾ ಸಮಿತಿಗೆ ನೀಡಬೇಕೆಂದು ಆದೇಶದಲ್ಲಿ ಸೂಚಿಸಿದೆ.

ಬಿಟ್‌ ಕಾಯಿನ್‌ ಹಗರಣದ ಕುರಿತು ಮರು ತನಿಖೆಗೆ ಎಸ್ಐಟಿಗೆ ಜವಾಬ್ದಾರಿ ನೀಡಿದ ಆದೇಶ ಹೊರಬಿದ್ದ ಬೆನ್ನಲ್ಲೇ, 40% ಹಗರಣದ ಆರೋಪಕ್ಕೆ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದು ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ರಾಜ್ಯ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿದ್ದ ಈ ಕಮಿಷನ್‌ ದಂಧೆ ಆರೋಪವನ್ನು ನ್ಯಾಯಾಂಗ ತನಿಖೆಗೊಪ್ಪಿಸುವ ಮೂಲಕ ಮಹತ್ವದ ತೀರ್ಮಾನವನ್ನು ಸರ್ಕಾರ ಕೈಗೊಂಡಿದೆ.

You cannot copy content of this page

Exit mobile version