Home ವಿಶೇಷ ತಿರುಮಲ – ತಿರುಪತಿ | ಚಿರತೆ ದಾಳಿಯ ಹಿಂದಿದೆಯಾ ಅಕೇಶಿಯಾ ಎನ್ನುವ ಅಪ್ರಯೋಜಕ ಮರದ ಕತೆ?

ತಿರುಮಲ – ತಿರುಪತಿ | ಚಿರತೆ ದಾಳಿಯ ಹಿಂದಿದೆಯಾ ಅಕೇಶಿಯಾ ಎನ್ನುವ ಅಪ್ರಯೋಜಕ ಮರದ ಕತೆ?

0

ತಿರುಮಲ ಪಾದಚಾರಿ ಮಾರ್ಗದಲ್ಲಿ ಚಿರತೆ ದಾಳಿಗೆ ಸಿಲುಕಿ ಮಗು ಸಾವನ್ನಪ್ಪಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಜನರಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.

ತಿರುಮಲವು ಪೂರ್ವ ಘಟ್ಟಗಳ ಶೇಷಾಚಲಂ ಬೆಟ್ಟದಲ್ಲಿದೆ. ವೆಂಕಟೇಶ್ವರನ ದರ್ಶನಕ್ಕೆ ಅರಣ್ಯಗಳ ಮೂಲಕ ಕಾಲುದಾರಿಗಳು ಮತ್ತು ವಾಹನಗಳ ಮಾರ್ಗಗಳಿವೆ. ಅಲಿಪಿರಿಯಿಂದ ತಿರುಮಲಕ್ಕೆ ಹೋಗುವ ಮೆಟ್ಟಿಲುಗಳ ಮೇಲೆ ಚಿರತೆಯ ದಾಳಿ ನಡೆದಿದ್ದು, ಇತ್ತೀಚಿನ ದಿನಗಳಲ್ಲಿ ಇದು ಎರಡನೇ ಘಟನೆಯಾಗಿದೆ.

ಈ ವರ್ಷ ಜೂನ್‌ನಲ್ಲಿ ನಡೆದ ದಾಳಿಯಲ್ಲಿ ಐದು ವರ್ಷದ ಬಾಲಕನೊಬ್ಬ ಗಾಯಗೊಂಡಿದ್ದರೆ, ಆಗಸ್ಟ್ 11 ರ ರಾತ್ರಿ ನಡೆದ ದಾಳಿಯಲ್ಲಿ ಆರು ವರ್ಷದ ಬಾಲಕಿ ಸಾವನ್ನಪ್ಪಿದ್ದಳು. ಇದರೊಂದಿಗೆ ಚಿರತೆ ಮತ್ತಿತರ ಪ್ರಾಣಿಗಳು ಮೆಟ್ಟಿಲು ಪ್ರವೇಶಿಸಲು ಕಾರಣವೇನು ಎಂಬ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.

ಚಿರತೆಗಳು ಏಕೆ ಬರುತ್ತಿವೆ?

ರಾಯಲಸೀಮಾ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಭೂಮನ್ ಮಾತನಾಡಿ, ತಿರುಪತಿಯಿಂದ ತಿರುಮಲಕ್ಕೆ ಹೋಗುವ ಮೆಟ್ಟಿಲುಗಳಿಗೆ ಚಿರತೆಗಳು ಹೆಚ್ಚಾಗಿ ಬರಲು ಹಲವು ಕಾರಣಗಳಿವೆ.

ಅವುಗಳಲ್ಲಿ ಒಂದು ಅಕೇಶಿಯಾ ಮರಗಳು. ತಿರುಮಲ ಬೆಟ್ಟಗಳಲ್ಲಿ ಬೆಳೆದಿರುವ ಅಕೇಶಿಯಾ ಮರಗಳಿಂದಾಗಿ ಪ್ರಸ್ತುತ ಸಮಸ್ಯೆ ಉದ್ಭವಿಸಿದೆ ಎನ್ನುತ್ತಾರೆ ಭೂಮನ್.

“ಗಂಟ ಮಂಟಪ ಮತ್ತು ನಾಮಲ ಗವಿ ಬಳಿ 225 ಎಕರೆ ವಿಸ್ತೀರ್ಣವಿತ್ತು, 1985ರಲ್ಲಿ ಟಿಟಿಡಿ ಮರಗಳಿಲ್ಲವೆನ್ನುವ ಕಾರಣಕ್ಕೆ ಅಕೇಶಿಯಾ ಮರಗಳನ್ನು ನೆಡಿಸಿತು.

ಆ ಮರಗಳಿಂದಾಗಿ ಅಲ್ಲಿ ಬೆಳೆಯುವ ಶ್ರೀಗಂಧ, ಈಚಲು ಮುಂತಾದ ಮರಗಳು ಬೆಳೆಯುತ್ತಿಲ್ಲ. ಅಕೇಶಿಯಾದಿಂದಾಗಿ ಬೇರೆ ಯಾವುದೇ ಸಸ್ಯಗಳು ಬದುಕುಳಿಯುವುದಿಲ್ಲ. ಮರಗಳು ಬೆಳೆದರೂ ಫಲ ನೀಡುವುದಿಲ್ಲ.

ಇದರಿಂದ ಆಹಾರ ಕೊರತೆಯಾಗುವ ಕಾರಣ ಅಲ್ಲಿ ಯಾವುದೇ ಪ್ರಾಣಿಗಳು ವಾಸಿಸುವುದಿಲ್ಲ. ಆದರೆ ಕೆಲವು ಚಿರತೆಗಳು ಅದೇ ಪ್ರದೇಶದಲ್ಲಿ ನೆಲೆಗಳನ್ನು ಸ್ಥಾಪಿಸಿವೆ.

ಇತ್ತೀಚೆಗೆ ಸುಮಾರು 30 ಎಕರೆ ಅಕೇಶಿಯಾ ಮರಗಳನ್ನು ಕಡಿಯಲಾಗಿದೆ. ಇದರಿಂದಾಗಿ ಅಲ್ಲಿಯವರೆಗೂ ಅವುಗಳ ನೆರಳಿನಲ್ಲಿಯೇ ವಾಸವಾಗಿದ್ದ ಚಿರತೆಗಳು ಮನುಷ್ಯರಿಗೆ ಹತ್ತಿರದಲ್ಲೇ ತಮ್ಮ ನೆಲೆಯನ್ನು ಸ್ಥಾಪಿಸಿಕೊಂಡಿವೆ,’’ ಎನ್ನುತ್ತಾರೆ ಭೂಮನ್.

“ಅಕೇಶಿಯಾ ಮರಗಳನ್ನು ಕಡಿದಿರುವುದು ನಿಜ, ಆದರೆ ಅದೇ ಕಾರಣಕ್ಕೆ ಚಿರತೆಗಳು ಇತ್ತ ಬರುತ್ತಿವೆ ಎನ್ನುವುದರಲ್ಲಿ ನಿಜವಿಲ್ಲ” ಎಂದು ಟಿಟಿಡಿಯ ಡಿಎಫ್‌ಒ ಶ್ರೀನಿವಾಸುಲು ಬಿಬಿಸಿಗೆ ತಿಳಿಸಿದ್ದಾರೆ.

ಭವಿಷ್ಯದಲ್ಲಿ ಇನ್ನಷ್ಟು ಬೆದರಿಕೆಗಳು?

ಚಿರತೆಗಳು ಮೆಟ್ಟಿಲುಗಳ ಒಳಗೆ ಬರಲು ಭೂಮನ್ ಹೇಳುವ ಎರಡನೇ ಕಾರಣ ಅಂಗಡಿಗಳು. ಇವುಗಳನ್ನು ನಿಯಂತ್ರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಚಿರತೆ, ಕರಡಿ, ಆನೆಗಳ ಕಾಟ ಇನ್ನಷ್ಟು ಹೆಚ್ಚಲಿದೆ ಎಂದು ಭೂಮನ್ ಎಚ್ಚರಿಸುತ್ತಾರೆ.

”ರಸ್ತೆಯುದ್ದಕ್ಕೂ ಅಂಗಡಿಗಳಿವೆ, ಅಲ್ಲಿನ ತ್ಯಾಜ್ಯವನ್ನು ಕಾಡಿನಲ್ಲಿ ಸುರಿಯುವುದರಿಂದ ಅದನ್ನು ತಿಂದು ಅಭ್ಯಾಸವಾದ ಸಾಧು ಪ್ರಾಣಿಗಳು ಜನರ ಬಳಿ ಬರುತ್ತವೆ, ಆ ಪ್ರಾಣಿಗಳನ್ನು ಹುಡುಕಿಕೊಂಡು ಚಿರತೆಗಳು ಬರುತ್ತವೆ, ಮೊದಲು ಅಂಗಡಿಗಳನ್ನು ನಿಯಂತ್ರಿಸಬೇಕು.”

ಯಾತ್ರಿಕರು ಕಸವನ್ನು ತೊಟ್ಟಿಗಳಲ್ಲಿ ಎಸೆಯದೆ ಎಲ್ಲೆಂದರಲ್ಲಿ ಎಸೆದು ಹೋಗುತ್ತಾರೆ. ಈ ಕುರಿತು ಈಗಿನಿಂದಲೇ ಜಾಗೃತಿ ಮೂಡಿಸದಿದ್ದರೆ ಭವಿಷ್ಯದಲ್ಲಿ ಕರಡಿ, ಚಿರತೆ, ಆನೆಗಳಿಗಳಿಂದಲೂ ಅಪಾಯ ಎದುರಾಗಲಿದೆ,’’ ಎಂದು ಭೂಮನ್ ಹೇಳಿದರು.

ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಮೊದಲು ಜಿಂಕೆ ಪಾರ್ಕ್ ಇತ್ತು. ಜಿಂಕೆಗಳನ್ನು ಹುಡುಕಿಕೊಂಡು ಬರುವ ಚಿರತೆಗಳ ಸಂಖ್ಯೆ ಹೆಚ್ಚಾದ ಕಾರಣ ಅದನ್ನು ತೆಗೆದುಹಾಕಲಾಯಿತು.

ಆದರೆ ಕಾಲ್ನಡಿಗೆಯಲ್ಲಿ ತೆರಳುವ ಭಕ್ತರು ಆಗಾಗ ಅಲ್ಲಲ್ಲಿ ಕಾಣಸಿಗುವ ಜಿಂಕೆಗಳಿಗೆ ಏನಾದರೂ ತಿನ್ನಲು ನೀಡುವುದರಿಂದ ಜಿಂಕೆಗಳು ಈ ಭಾಗಕ್ಕೆ ಬರುತ್ತಲೇ ಇವೆ ಎನ್ನುತ್ತಾರೆ ತಿರುಪತಿ ಅರಣ್ಯ ಸಂರಕ್ಷಣಾಧಿಕಾರಿ ನಾಗೇಶ್ವರ ರಾವ್.

ಟಿಟಿಡಿ ಅಧ್ಯಕ್ಷ ಭೂಮನ ಕರುಣಾಕರ ರೆಡ್ಡಿ ಮಾತನಾಡಿ, ಪಾದಚಾರಿ ಮಾರ್ಗದಲ್ಲಿ ತೆರಳುವ ಭಕ್ತರಿಗೆ ಜಿಂಕೆಗಳಿಗೆ ಆಹಾರ ನೀಡದಂತೆ ತಿಳಿಹೇಳುತ್ತಿದ್ದೇವೆ ಎನ್ನುತ್ತಾರೆ.

ತಿರುಮಲ ಬೆಟ್ಟಗಳಲ್ಲಿ ಕಾಡುಪ್ರಾಣಿಗಳ ಓಡಾಟ ಹೊಸದೇನಲ್ಲ ಎನ್ನುತ್ತಾರೆ ಭೂಮನ್.
‘ಹಿಂದೆ ತಿರುಮಲಕ್ಕೆ ಹೋಗುವ ಭಕ್ತರು ತಾಳ-ಜಾಗಟೆ ಬಾರಿಸುತ್ತಾ, ಘೋಷಣೆ ಕೂಗುತ್ತಾ, ಕೇಕೆ ಹಾಕುತ್ತಾ ಹಾಡು ಹೇಳುತ್ತಿದ್ದರು.ಈಗ ಭಕ್ತರ ಸಂಖ್ಯೆ ವಿಪರೀತ ಹೆಚ್ಚಿದೆ, ಭಜನೆ ಮಾಡುತ್ತಾ ಅಲ್ಲಿಗೆ ಹೋಗಲು ದಾರಿಯೇ ಇಲ್ಲ’ ಎಂದರು.

ಶ್ರೀಕಾಳಹಸ್ತಿಯ ಭಕ್ತ ವೆಂಕಟಸುಬ್ಬಾರೆಡ್ಡಿ ಮಾತನಾಡಿ, ಬಾಲ್ಯದಲ್ಲಿ ತಂದೆಯೊಂದಿಗೆ ಪಾದಚಾರಿ ಮಾರ್ಗದಲ್ಲಿ ತಿರುಮಲಕ್ಕೆ ಹೋಗುವಾಗ ಭಜನೆ ಮಾಡುತ್ತಾ ಗುಂಪು ಗುಂಪಾಗಿ ಹೋಗುತ್ತಿದ್ದೆವು ಎಂದರು.

ಮೆಟ್ಟಿಲುಗಳಲ್ಲಿ ಅಪಾಯಕಾರಿ ವಲಯಗಳು ಯಾವುವು?

ತಿರುಮಲವನ್ನು ತಲುಪಲು ಒಟ್ಟು ಮೂರು ನಡಿಗೆ ಮಾರ್ಗಗಳಿವೆ. ಕಡಪದಿಂದ ತಿರುಮಲಕ್ಕೆ ಹೋಗಲು ಕುಕ್ಕಲ ದೊಡ್ಡಿ ಮೂಲಕ ಒಂದು ಮಾರ್ಗವಿದೆ. ಇದು ಅನ್ನಮಯ್ಯ ನಡೆದು ಬಂದ ದಾರಿ ಎನ್ನುತ್ತಾರೆ. ಆದರೆ, ಈ ಮಾರ್ಗದಲ್ಲಿ ಭಕ್ತರಿಗೆ ಪ್ರವೇಶವಿಲ್ಲ.

ಎರಡನೆಯದು ಶ್ರೀವಾರಿ ಮೆಟ್ಟುವಿನಿಂದ ಪ್ರಾರಂಭವಾಗುವ ಪಾದಚಾರಿ ಮಾರ್ಗವಾಗಿದೆ. ಈ ದಾರಿಯಲ್ಲಿ ಹೆಚ್ಚು ಭಕ್ತರು ಹೋಗುವುದಿಲ್ಲ.

ಮೂರನೆಯದು, ಅಲಿಪಿರಿಯಿಂದ ಪ್ರಾರಂಭವಾಗುವ ಮೆಟ್ಟಿಲು. ತಿರುಮಲಕ್ಕೆ ನಡೆದುಕೊಂಡು ಹೋಗಬಯಸುವ ಬಹುಪಾಲು ಭಕ್ತರು ಈ ಮಾರ್ಗದಿಂದ ಹೋಗುತ್ತಾರೆ. ಈ ಮೆಟ್ಟಿಲುದಾರಿಯಲ್ಲಿ ಚಿರತೆ ದಾಳಿಯ ಘಟನೆಗಳೂ ನಡೆದಿವೆ.

250ನೇ ಮೆಟ್ಟಿಲಿನ ಹತ್ತಿರ ಎರಡನೇ ಗೋಪುರವಾದ ಮೈಸೂರು ಗೋಪುರ ಬರುತ್ತದೆ. ಅದರ ನಂತರ, ಮೂರನೇ ಗಾಳಿ ಗುಮ್ಮಟವು 2,083ನೇ ಹಂತದ ಬಳಿ ಬರುತ್ತದೆ. ಅಲ್ಲಿಂದ ಬೆಟ್ಟದ ಮೇಲಿನ ನಡಿಗೆದಾರಿ ಬಯಲಿನಂತಿದೆ. ಏಳನೇ ಮೈಲಿನಲ್ಲಿರುವ ಆಂಜನೇಯ ಸ್ವಾಮಿ ಪ್ರತಿಮೆಯನ್ನು ತಲುಪಲು ಇದು ಸುಲಭವಾದ ದಾರಿಯಾಗಿದೆ. ಎರಡು ತಿಂಗಳ ಹಿಂದೆ, ಜೂನ್‌ನಲ್ಲಿ, ಅದೇ ಪ್ರದೇಶದಲ್ಲಿ ಕೌಶಿಕ್ ಎಂಬ ಬಾಲಕನ ಮೇಲೆ ಚಿರತೆಯೊಂದು ದಾಳಿ ಮಾಡಿತ್ತು.

ಆಂಜನೇಯ ಸ್ವಾಮಿ ಮೂರ್ತಿಯಿಂದ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನಕ್ಕೆ ತೆರಳುವ ಮಾರ್ಗದ 2,831ನೇ ಮೆಟ್ಟಿಲು ಬಳಿ ಕೆಲವು ದಿನಗಳ ಹಿಂದೆ ಚಿರತೆಯೊಂದು ಮಗು ಲಕ್ಷಿತಾ ಮೇಲೆ ದಾಳಿ ನಡೆಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆಗಳ ಹಿನ್ನೆಲೆಯಲ್ಲಿ ಟಿಟಿಡಿ ಆಂಜನೇಯ ಸ್ವಾಮಿ ಪ್ರತಿಮೆಯಿಂದ 2,850 ಮೆಟ್ಟಿಲು ಬಳಿಯ ಲಕ್ಷಿನರಸಿಂಹಸ್ವಾಮಿ ದೇವಸ್ಥಾನದವರೆಗಿನ ರಸ್ತೆಯನ್ನು ಅಪಾಯಕಾರಿ ವಲಯ ಎಂದು ಘೋಷಿಸಿದೆ.

ಹನುಮಾನ್ ಪ್ರತಿಮೆ ಮತ್ತು ಲಕ್ಷ್ಮಿ ನರಸಿಂಹ ದೇವಸ್ಥಾನದ ನಡುವಿನ ಅಂತರವು ಒಂದೂವರೆ ಕಿಲೋಮೀಟರ್. ಈ ರಸ್ತೆಯ ಇಕ್ಕೆಲಗಳಲ್ಲಿ ಎರಡರಿಂದ ಮೂರು ಮೀಟರ್ ಅಂತರದಲ್ಲಿ ದಟ್ಟ ಅರಣ್ಯವಿದೆ.

ದಾಳಿ ಮಾಡಿದ್ದು ಅದೇ ಚಿರತೆಯೇ?

ಚಿರತೆ ಲಕ್ಷಿತಾ ಮೇಲೆ ದಾಳಿ ಮಾಡಿದೆ ಎಂದು ಹೇಳಲಾದ ಪ್ರದೇಶವನ್ನು ಬಿಬಿಸಿ ಪರಿಶೀಲಿಸಿದೆ. ಕಾಲುದಾರಿಯಿಂದ ಸುಮಾರು 50 ಮೀಟರ್ ದೂರದಲ್ಲಿ ಈ ಪ್ರದೇಶವು ಚಿಕ್ಕ ಗುಡ್ಡದಂತಿದೆ. ಸುತ್ತಲೂ ಬಂಡೆಗಳು ಮತ್ತು ಸಣ್ಣ ಮರಗಳಿವೆ.

ಮಗುವನ್ನು ಚಿರತೆ ಕೊಂದಿದೆ ಎನ್ನಲಾದ ಪ್ರದೇಶದಲ್ಲಿ ಇಂದಿಗೂ ಮನುಷ್ಯರ ಕೂದಲು ಕಾಣುತ್ತಿದೆ. ಈ ಹಿಂದೆ ರಕ್ತದ ಕಲೆಗಳಿದ್ದು ಅವು ಬಿಸಿಲಿಗೆ ಒಣಗಿ ಹೋಗಿವೆ ಎನ್ನಲಾಗಿದೆ.

ಆ ಕಲ್ಲು, ಮರಗಳನ್ನು ದಾಟಿ ಹೋದರೆ ದಟ್ಟವಾದ ಕಾಡು. ಈ ಪ್ರದೇಶದಲ್ಲಿ ಹಾಕಲಾಗಿದ್ದ ಬೋನಿಗೆ ಚಿರತೆಯೊಂದು ಬಿದ್ದಿದೆ. ಚಿರತೆಯನ್ನು ತೆಗೆದುಕೊಂಡು ಹೋಗಿ ಎಸ್‌ವಿ ಮೃಗಾಲಯದಲ್ಲಿ ಇರಿಸಲಾಗಿದೆ.

ಮಗುವನ್ನು ಕೊಂದ ಚಿರತೆ ಅದೇ ಎಂಬುದು ದೃಢಪಟ್ಟರೆ ಅದನ್ನು ಅಲ್ಲೇ ಉಳಿಸಿ ಸಂರಕ್ಷಿಸಲಾಗುವುದು ಇಲ್ಲವಾದಲ್ಲಿ ಕಾಡಿಗೆ ಬಿಡಲಾಗುವುದು ಎಂದು ನಾಗೇಶ್ವರರಾವ್ ತಿಳಿಸಿದರು.

ಆದರೆ, ಈ ವಿಚಾರ ಮಾಸುವ ಮುನ್ನವೇ ಇಂದು ಮತ್ತೊಂದು ಚಿರತೆ ಬೋನಿಗೆ ಬಿದ್ದಿದೆ.

“ನಾವು ಹಿಡಿದ ಚಿರತೆ ಮತ್ತು ದಾಳಿ ಮಾಡಿದ ಚಿರತೆ ಒಂದೇ ಎಂದು ಕಂಡುಬಂದರೆ, ನಾವು ಅದನ್ನು ಶಾಶ್ವತವಾಗಿ ಮೃಗಾಲಯದಲ್ಲಿ ಇಡುತ್ತೇವೆ. ಏಕೆಂದರೆ ಅದು ಮನುಷ್ಯರ ರಕ್ತ ಮತ್ತು ಮಾನವ ಮಾಂಸಕ್ಕೆ ಒಗ್ಗಿಕೊಂಡಿರುತ್ತದೆ. ಅದಕ್ಕೆ ಮತ್ತೊಂದು ಅವಕಾಶ ನೀಡುವುದಿಲ್ಲ,’’ ಎಂದು ನಾಗೇಶ್ವರರಾವ್ ಹೇಳಿದರು.

ಚಿರತೆಗಳು ಸಾಮಾನ್ಯವಾಗಿ ಮನುಷ್ಯರ ಮೇಲೆ ದಾಳಿ ಮಾಡುವುದಿಲ್ಲ ಎಂದು ಅವರು ಹೇಳಿದರು. ಚಿರತೆ ಮಗುವನ್ನು ಯಾವುದೋ ಪ್ರಾಣಿ ಎಂದು ತಪ್ಪಾಗಿ ಭಾವಿಸಿ ಫುಟ್‌ಪಾತ್‌ನಿಂದ ಕೆಳಗೆ ಹೋಗುತ್ತಿದ್ದಂತೆ ದಾಳಿ ಮಾಡಿದೆ ಎಂದು ಅವರು ಹೇಳಿದರು. ಶಬ್ದ ಮಾಡುತ್ತಾ ಮೆಟ್ಟಿಲುಗಳ ಮೇಲೆ ನಡೆಯುವವರ ಹತ್ತಿರ ಚಿರತೆಗಳು ಬರುವುದಿಲ್ಲ ಎಂದು ಅವರು ಹೇಳಿದರು.

ಬೋನುಗಳು, ಕ್ಯಾಮೆರಾಗಳು

ಅಪಾಯದ ವಲಯ ಎಂದು ಗುರುತಿಸಲಾದ ಪ್ರದೇಶದಲ್ಲಿ ಅಧಿಕಾರಿಗಳು ಎರಡು ಬೋನುಗಳನ್ನು ಇಟ್ಟಿದ್ದಾರೆ. ಈ ಮೂಲಕ ಈ ಪ್ರದೇಶದಲ್ಲಿ ಬೇರೆ ಚಿರತೆಗಳಿದ್ದರೆ ಅವುಗಳನ್ನು ಸೆರೆಹಿಡಿಯಲು ಪ್ರಯತ್ನಿಸುತ್ತಿದ್ದಾರೆ.

ಈ ಎರಡೂ ಬೋನುಗಳು ಕಾಲುದಾರಿಯ ಉದ್ದಕ್ಕೂ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿವೆ. ಈ ಪ್ರದೇಶದಲ್ಲಿ ಒಟ್ಟು ಚಿರತೆಗಳ ಸಂಖ್ಯೆ ತಿಳಿಯಲು ಟ್ರ್ಯಾಪ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ನಾಗೇಶ್ವರ ರಾವ್ ಮಾತನಾಡಿ, ಒಟ್ಟು 300 ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದ್ದು, ಅಲಿಪಿರಿ ರಸ್ತೆಯಲ್ಲಿ 70 ಸಿಬ್ಬಂದಿ ಹಾಗೂ ಶ್ರೀವಾರಿ ಮೆಟ್ಟು ಬಳಿ 50 ಸಿಬ್ಬಂದಿ ಗಸ್ತು ತಿರುಗುತ್ತಿದ್ದಾರೆ ಎಂದರು.

ನಡೆದು ಹೋಗುವ ಭಕ್ತರಿಗೆ ಕೋಲು

ತಿರುಮಲ ಪಾದಚಾರಿ ಮಾರ್ಗದಲ್ಲಿ ಚಿರತೆ ದಾಳಿ ನಡೆಸಿರುವ ಬಗ್ಗೆ ಮಾಧ್ಯಮಗಳಲ್ಲಿ ದೊಡ್ಡ ಮಟ್ಟದಲ್ಲಿ ವರದಿಯಾಗುತ್ತಿದ್ದಂತೆ ಟಿಟಿಡಿ ತಿರುಮಲ ಪಾದಚಾರಿ ಮಾರ್ಗದಲ್ಲಿ ಭಕ್ತರ ಸುರಕ್ಷತೆಗೆ ಒತ್ತು ನೀಡಿದೆ.

ಅಪಾಯಕಾರಿ ವಲಯ ಎಂದು ಪರಿಗಣಿಸಲಾಗಿರುವ ಈ ಪ್ರದೇಶದಲ್ಲಿ ಒಟ್ಟು ಚಿರತೆಗಳ ಸಂಖ್ಯೆ ಎಷ್ಟಿದೆ ಎಂಬುದನ್ನು ಪತ್ತೆ ಹಚ್ಚುವ ಕಾರ್ಯ ಆರಂಭಿಸಿದ್ದೇವೆ ಎಂದು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ (ಇಒ) ಧರ್ಮ ರೆಡ್ಡಿ ತಿಳಿಸಿದ್ದಾರೆ.

‘‘ಪುಟ್ಟ ಮಕ್ಕಳೊಂದಿಗೆ ಅಲಿಪಿರಿ ಮತ್ತು ಶ್ರೀವಾರಿ ಮೆಟ್ಟು ಮಾರ್ಗದಲ್ಲಿ ಬೆಳಗ್ಗೆ 5ರಿಂದ ಮಧ್ಯಾಹ್ನ 2ಗಂಟೆವರೆಗೆ ಸಂಚರಿಸಲು ಬಯಸುವ ಪೋಷಕರಿಗೆ ಅವಕಾಶ ನೀಡಲು ಟಿಟಿಡಿ ನಿರ್ಧರಿಸಿದೆ. 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಮಧ್ಯಾಹ್ನ 2ಗಂಟೆಯ ನಂತರ ಯಾವುದೇ ಸಂದರ್ಭಗಳಲ್ಲಿ ಅನುಮತಿಸಲಾಗುವುದಿಲ್ಲ. ವಯಸ್ಕರಿಗೆ ರಾತ್ರಿ 10ರವರೆಗೆ ಅವಕಾಶವಿದೆ. ಇದಲ್ಲದೇ ಕಾಲ್ನಡಿಗೆಯಲ್ಲಿ ಸಂಚರಿಸುವ ಪ್ರತಿಯೊಬ್ಬ ಭಕ್ತರಿಗೂ ಒಂದು ಕೋಲು ನೀಡಲು ನಿರ್ಧರಿಸಿದ್ದೇವೆ’’ ಎಂದು ಕರುಣಾಕರರೆಡ್ಡಿ ತಿಳಿಸಿದರು.

ಭಕ್ತಾದಿಗಳ ರಕ್ಷಣೆಗೆ ಕೋಲು ನೀಡುವುದು ಸರಿ ಎಂದು ರಾಯಲಸೀಮಾ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಭೂಮನ್ ಅಭಿಪ್ರಾಯಪಡುತ್ತಾರೆ.

“ಅವುಗಳನ್ನು ಕೊಲ್ಲಲು ನಾವು ಯಾರು? ಅವುಗಳ ಜಾಗಕ್ಕೆ ಹೋಗಿ ಸಾಯಿಸುವುದರಿಂದ ಏನು ಪ್ರಯೋಜನ? ಅವು ಎಂದಿಗೂ ಮನುಷ್ಯರಿಗೆ ಅಪಾಯ ಎಸಗುವ ಪ್ರಾಣಿಗಳಲ್ಲ, ನಾವು ಅವಕ್ಕೆ ತೊಂದರೆ ನೀಡಿದರೆ, ನಾವು ದಾಳಿ ಮಾಡಲು ಪ್ರಯತ್ನಿಸಿದರೆ ಮಾತ್ರ ಅವು ನಮ್ಮ ಮೇಲೆ ದಾಳಿ ಮಾಡುತ್ತವೆ.”

“ಕೋಲು ಕೈಯಲ್ಲಿದ್ದಾಗ ಪ್ರಾಣಿಗಳು ಹೆದರಿ ದೂರ ಹೋಗುತ್ತವೆ. ಕೋಲು ಹಿಡಿದುಕೊಳ್ಳುವುದರ ಜೊತೆಗೆ, ಮಕ್ಕಳು ಮತ್ತು ವಯಸ್ಕರು ಎಲ್ಲಿಯೂ ಕುಳಿತುಕೊಳ್ಳದಿರುವಂತೆ ತಿಳಿಸಬೇಕು. ಆ ಜಾಗದಲ್ಲಿ ಕೂರದೆ ನೇರವಾಗಿ ಹೋಗುವಂತೆ” ಹೇಳಬೇಕು ಎಂದು ಅವರು ಸಲಹೆ ನೀಡಿದರು.

ಕಾಲ್ನಡಿಗೆ ದಾರಿಯ ಉದ್ದಕ್ಕೂ ಬೇಲಿ ಸಾಧ್ಯವೇ?

ಭಕ್ತಾದಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಇಡೀ ಪಾದಚಾರಿ ಮಾರ್ಗಕ್ಕೆ ಬೇಲಿ ಹಾಕಲು ಸಾಧ್ಯವೇ ಎಂದು ಬಿಬಿಸಿ ಅರಣ್ಯ ಅಧಿಕಾರಿಗಳನ್ನು ಕೇಳಿತು.

“ಮನುಷ್ಯರಂತೆ ಪ್ರಾಣಿಗಳಿಗೂ ಚಲಿಸುವ ಹಕ್ಕುಗಳಿವೆ. ಯಾವುದೇ ತೊಂದರೆಯಾಗದ ಹಾಗೆ ಅವುಗಳ ಚಲನೆಗೆ ವ್ಯವಸ್ಥೆ ಮಾಡಲು ತಜ್ಞರ ಸಮಿತಿಯನ್ನು ರಚಿಸಬೇಕಿದೆ” ಎಂದು ಅವರು ಅಭಿಪ್ರಾಪಟ್ಟರು.

ಫೆನ್ಸಿಂಗ್ ಜೊತೆಗೆ, ಪ್ರಾಣಿಗಳು ಕೆಳಗಿನಿಂದ ಅಥವಾ ಮೇಲಿನಿಂದ ಹಾದುಹೋಗುವಂತೆ ಬೇಲಿಯನ್ನು ನಿರ್ಮಿಸಬೇಕು. ಎಲ್ಲವನ್ನೂ ವೈಜ್ಞಾನಿಕವಾಗಿ ಮಾಡುವುದು ಹೇಗೆನ್ನುವುದರ ಕುರಿತು ವೈಲ್ಡ್‌ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಹಯೋಗದೊಂದಿಗೆ ಚರ್ಚಿಸಿ, ನಂತರ ನಿರ್ಧಾರ ತೆಗೆದುಕೊಳ್ಳುತ್ತೇವೆ,’’ ಎಂದು ನಾಗೇಶ್ವರರಾವ್ ಹೇಳಿದರು.

ಶೇಷಾಚಲಂ ಬೆಟ್ಟಗಳನ್ನು ಜೈವಿಕ ಮೀಸಲು ಪ್ರದೇಶವೆಂದು ಘೋಷಿಸಿರುವುದರಿಂದ ಪ್ರಾಣಿಗಳಿಗೆ ತಿರುಗಾಡುವ ಹಕ್ಕಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

Source: BBC

You cannot copy content of this page

Exit mobile version