ಪ್ರಧಾನಿ ಮೋದಿ ಭಾಷಣದಿಂದ ನೀತಿ ಸಂಹಿತೆ ಉಲ್ಲಂಘನೆ ಆರೋಪ: 700ಕ್ಕೂ ಹೆಚ್ಚು ನಾಗರಿಕರಿಂದ ಚುನಾವಣಾ ಆಯೋಗಕ್ಕೆ ಪತ್ರ

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 18 ರಂದು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣವು ಮಾದರಿ ನೀತಿ ಸಂಹಿತೆಯನ್ನು (MCC) ಉಲ್ಲಂಘಿಸಿದೆ ಎಂದು ಆರೋಪಿಸಿ, 700ಕ್ಕೂ ಹೆಚ್ಚು ನಾಗರಿಕರು ಭಾರತೀಯ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಈ ಕುರಿತು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ.

ಮಾಜಿ ನಾಗರಿಕ ಸೇವಕರು, ಶಿಕ್ಷಣ ತಜ್ಞರು, ಕಾರ್ಯಕರ್ತರು ಮತ್ತು ಪತ್ರಕರ್ತರು ಸೇರಿದಂತೆ 700ಕ್ಕೂ ಹೆಚ್ಚು ಮಂದಿ ಸಹಿ ಹಾಕಿರುವ ಏಪ್ರಿಲ್ 20ರ ಈ ದೂರಿನಲ್ಲಿ, ದೂರದರ್ಶನ, ಸಂಸದ್ ಟಿವಿ ಮತ್ತು ಆಕಾಶವಾಣಿಯಂತಹ ಅಧಿಕೃತ ಮಾಧ್ಯಮಗಳಲ್ಲಿ ಪ್ರಸಾರವಾದ ಭಾಷಣವು “ಚುನಾವಣಾ ಪ್ರಚಾರ ಮತ್ತು ಪಕ್ಷಪಾತದ ಪ್ರಚಾರ”ಕ್ಕೆ ಸಮಾನವಾಗಿದೆ ಎಂದು ಪ್ರತಿಪಾದಿಸಲಾಗಿದೆ.

ಪ್ರಸ್ತುತ ಅಸ್ಸಾಂ, ಕೇರಳ, ಪುದುಚೇರಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಇಂತಹ ಸಮಯದಲ್ಲಿ ಸರ್ಕಾರಿ ಅನುದಾನಿತ ಮಾಧ್ಯಮಗಳನ್ನು ಬಳಸಿಕೊಳ್ಳುವುದು ಆಡಳಿತಾರೂಢ ಪಕ್ಷಕ್ಕೆ “ಅನಗತ್ಯ ಲಾಭ” ನೀಡುತ್ತದೆ ಮತ್ತು ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಗತ್ಯವಾದ ಸಮಾನ ಅವಕಾಶವನ್ನು (level playing field) ಬುಡಮೇಲು ಮಾಡುತ್ತದೆ ಎಂದು ದೂರುದಾರರು ದೂರಿದ್ದಾರೆ.

ಚುನಾವಣಾ ನೀತಿ ಸಂಹಿತೆಯ ನಿಬಂಧನೆಗಳನ್ನು ಉಲ್ಲೇಖಿಸಿರುವ ದೂರುದಾರರು, ಮಂತ್ರಿಗಳು ಅಧಿಕೃತ ಕಾರ್ಯಗಳನ್ನು ಚುನಾವಣಾ ಪ್ರಚಾರದೊಂದಿಗೆ ಬೆರೆಸದಂತೆ ಮತ್ತು ಪಕ್ಷಪಾತದ ಉದ್ದೇಶಗಳಿಗಾಗಿ ಅಧಿಕೃತ ಯಂತ್ರೋಪಕರಣಗಳನ್ನು ಬಳಸದಂತೆ ನಿರ್ಬಂಧಿಸಲಾಗಿದೆ ಎಂದು ನೆನಪಿಸಿದ್ದಾರೆ. ಅಲ್ಲದೆ, ಪ್ರಸಾರಕ್ಕೆ ಮೊದಲೇ ಅನುಮತಿ ನೀಡಿದ್ದರೆ, ಇತರ ರಾಜಕೀಯ ಪಕ್ಷಗಳಿಗೂ ಸಾರ್ವಜನಿಕ ಪ್ರಸಾರಕರಲ್ಲಿ ಸಮಾನ ಸಮಯ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಮಾಜಿ ದೆಹಲಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್, ರಾಜಕೀಯ ಅರ್ಥಶಾಸ್ತ್ರಜ್ಞ ಪರಕಾಲ ಪ್ರಭಾಕರ್, ಕಾರ್ಯಕರ್ತ ಯೋಗೇಂದ್ರ ಯಾದವ್, ಅರ್ಥಶಾಸ್ತ್ರಜ್ಞ ಜಯತಿ ಘೋಷ್, ಸಂಗೀತಗಾರ ಟಿ.ಎಂ. ಕೃಷ್ಣ, ಮಾಜಿ ಕೇಂದ್ರ ಕಾರ್ಯದರ್ಶಿ ಇ.ಎ.ಎಸ್. ಶರ್ಮಾ, ಹರ್ಷ ಮಂದರ್, ಪತ್ರಕರ್ತ ಪರಂಜಯ್ ಗುಹ ಠಾಕುರ್ತಾ, ಶಿಕ್ಷಣ ತಜ್ಞೆ ಜೋಯಾ ಹಸನ್, ಮಾಜಿ ರಾಯಭಾರಿ ಮಧು ಭಾದುರಿ ಮತ್ತು ಅಂಜಲಿ ಭಾರದ್ವಾಜ್ ಸೇರಿದಂತೆ ಅನೇಕರು ಪತ್ರದಲ್ಲಿ ಸಹಿ ಹಾಕಿದ್ದಾರೆ.

ಚುನಾವಣಾ ಪ್ರಕ್ರಿಯೆಯ ಪಾವಿತ್ರ್ಯತೆಯನ್ನು ಎತ್ತಿಹಿಡಿಯಲು ಚುನಾವಣಾ ಆಯೋಗವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಸಹಿದಾರರು ಒತ್ತಾಯಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು