Wednesday, June 19, 2024

ಸತ್ಯ | ನ್ಯಾಯ |ಧರ್ಮ

ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ – ದಶಮಾನೋತ್ಸವ ವಿಶೇಷ ಸರಣಿ – 1

ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟಕ್ಕೆ 10 ವರ್ಷಗಳಾದ ನೆನಪಿಗೆ ಬೆಂಗಳೂರಿನ ಸ್ಕೌಟ್ಸ್ ಅಂಡ್ ಗೈಡ್ಸ್ (ಕೊಂಡಜ್ಜಿ ಬಸಪ್ಪ) ಸಭಾಂಗಣದಲ್ಲಿ 2023, ಜನವರಿ 8ನೇ ತಾರೀಕು ಭಾನುವಾರ `ಒಕ್ಕೂಟ-10: ಒಗ್ಗೂಡುವ ಹಬ್ಬ’ ಕಾರ್ಯಕ್ರಮವನ್ನು ಒಕ್ಕೂಟವು ಆಯೋಜಿಸಿದೆ. ಆ ಸಂದರ್ಭದಲ್ಲಿ ಒಕ್ಕೂಟವು ಪಯಣ ನಡೆಸಿದ 11 ಜಿಲ್ಲೆಗಳಿಂದ ಒಬ್ಬೊಬ್ಬ ಹಿರಿಯ ಸಂಗಾತಿಯ ವ್ಯಕ್ತಿಗತ-ಸಂಘಟಿತ ಹೋರಾಟದ ಸ್ಫೂರ್ತಿಯನ್ನು ತೆರೆದಿಡುತ್ತಾ, `ನಮ್ಮ ಅಕ್ಕ, ನಮ್ಮ ಹಿರಿಮೆ’ ಎಂದು ಅವರನ್ನು ಗೌರವಿಸಲಿದೆ. ಅಕ್ಕಂದಿರ ಬದುಕು-ಸಾಧನೆಯ ಕಿರು ಚಿತ್ರಗಳನ್ನು ಪೀಪಲ್‌ ಮೀಡಿಯಾವು ಸರಣಿಯಲ್ಲಿ ಇಂದಿನಿಂದ ಓದುಗರಿಗೆ ತೆರೆದಿಡಲಿದೆ. ಇಂದಿನ ಓದಿಗೆ ಧಾರವಾಡದ ಲೂಸಿ ಕಾಶಮೀರ್ ಸಾಲ್ಡಾನ ಅವರು.

`ನಮ್ಮ ಅಕ್ಕ ನಮ್ಮ ಹಿರಿಮೆʼ : ಲೂಸಿ ಕಾಶಮೀರ್ ಸಾಲ್ಡಾನ, ಧಾರವಾಡ

ಉಡುಪಿ ಜಿಲ್ಲೆ ಕಾರ್ಕಳ ತಾಲೂಕು ಬೈಲೂರಿನ ಲೂಸಿ ಸಾಲ್ಡಾನಾ, ಕುಟುಂಬದ ಏಳನೇ ಮಗುವಾಗಿ ಜೂನ್ 4, 1948ರಂದು ಜನಿಸಿದರು. 1956ರ ಆಸುಪಾಸು. ಮೂರನೇಯತ್ತೆ ಕಲಿಯುತ್ತಿದ್ದ ಸಂದರ್ಭದಲ್ಲಿ ತಮ್ಮ ಪಾಲಕರೊಂದಿಗೆ ರೈಲಿನಲ್ಲಿ ಮುಂಬೈಗೆ ಪ್ರಯಾಣ ಬೆಳೆಸಿದ್ದರು. ಪುಟ್ಟ ಬಾಲಕಿ ನೀರಡಿಕೆಯಿಂದ, ಹುಬ್ಬಳ್ಳಿ ರೇಲ್ವೆ ನಿಲ್ದಾಣದಲ್ಲಿ ನೀರು ಕುಡಿಯಲು ಇಳಿದಾಗ ರೈಲು ಹೊರಟೇ ಬಿಡುತ್ತದೆ. ಮಗುವು ತಂದೆ-ತಾಯಿಯರಿಂದ ಬೇರ್ಪಟ್ಟು ಒಂಟಿಯಾಗುತ್ತದೆ. ಕೇವಲ ಕೊಂಕಣಿ ಮತ್ತು ತುಳು ಮಾತನಾಡುವ ಬಾಲಕಿಯ ಭಾಷೆ ಅಲ್ಲಿಯ ರೇಲ್ವೆ ಸಿಬ್ಬಂದಿಗಳಾದ ಮಹಾದೇವ ಮಡಿವಾಳ, ವೈ. ಎಂ. ಸದ್ಲಾಪುರ, ಬಿ. ಸಿ. ಚಕ್ರವರ್ತಿ ಎಂಬ ಮೂವರಿಗೂ ಅರ್ಥವಾಗುವುದಿಲ್ಲ. ಕೊಂಕಣಿ ಬಲ್ಲ ಸ್ಥಳೀಯರೊಬ್ಬರನ್ನು ಕರೆತಂದು ವಿಚಾರಿಸಿದಾಗ ನಿಜ ಸಂಗತಿ ತಿಳಿದು ಬಾಲಕಿಯ ತಂದೆಯನ್ನು ಹುಡುಕಲು ಪ್ರಯತ್ನಿಸುತ್ತಾರೆ. ಆದರೆ ಅದು ಫಲ ಕೊಡುವುದಿಲ್ಲ. ರೇಲ್ವೆ ಪ್ಲಾಟ್‍ಫಾರ್ಮಿನಲ್ಲಿ ಅಳುತ್ತ ಕುಳಿತ ಬಾಲಕಿಗೆ ಏನಾದರೂ ದಾರಿ ತೋರಲೇಬೇಕು. ಕೊನೆಗೆ ಆ ಮೂವರು ಮಾನವೀಯ ದೃಷ್ಟಿಯಿಂದ ರಕ್ಷಣೆ ನೀಡಿ ಆಸರೆ ಒದಗಿಸಲು ಯೋಚಿಸುತ್ತಾರೆ. ಲೂಸಿಯವರ ತಂದೆ ಮುಂದಿನ ನಿಲ್ದಾಣದಲ್ಲಿಳಿದು ಹುಬ್ಬಳ್ಳಿ ಸ್ಟೇಷನ್ನಿನಲ್ಲಿ ಮಗುವನ್ನು ಹುಡುಕಲು ಬರುವ ಹೊತ್ತಿಗೆ, ಪುಟ್ಟ ಲೂಸಿಯನ್ನು ಆ ಸಿಬ್ಬಂದಿ ಅಮರಗೋಳದಲ್ಲಿರುವ ತಮ್ಮ ಮನೆಗೆ ಕರೆದೊಯ್ದು ಊಟ, ತಿಂಡಿ, ಕೊಟ್ಟು ಉಪಚರಿಸಿ ಸಂತೈಸುತ್ತಿರುತ್ತಾರೆ. ತಂದೆ ಮಗುವಿನ ಸುಳಿವು ಕಾಣದೇ ವಾಪಸಾಗುತ್ತಾರೆ. 

ಮೂವರು ರೈಲು ಸಿಬ್ಬಂದಿಯ ಆಶ್ರಯದಲ್ಲಿ ಬೆಳೆದ ಪುಟ್ಟ ಬಾಲಕಿ, ಕನ್ನಡ ಕಲಿಯುತ್ತ, ಆಡುತ್ತ, ಶಾಲೆಗೆ ಹೋಗುತ್ತ ಕಾಲ ಕಳೆಯಬೇಕಾದರೆ ಮೂವರಲ್ಲಿ ಇಬ್ಬರಿಗೆ ಬೇರೆಡೆಗೆ ವರ್ಗವಾಗುತ್ತದೆ. ಅಷ್ಟೊತ್ತಿಗೆ ಲೂಸಿ ಹದಿನಾಲ್ಕು ವರ್ಷದ ಹುಡುಗಿ. ವಯಸ್ಸಿಗೆ ಬಂದ ಹುಡುಗಿಯೊಡನೆ ಮಹಾದೇವ ಮಡಿವಾಳ ಒಬ್ಬರೇ ಇರುವಂತಾಗುತ್ತದೆ. ಲೂಸಿಯವರಿಗಿಂತ ಅವರು ಇಪ್ಪತ್ತು ವರ್ಷ ಹಿರಿಯರು. ಲೂಸಿಯು ಜನರ ನಿಂದನೆಗೆ ಒಳಗಾಗಬಾರದು ಮತ್ತು ಅವಳು ಯಾವ ಕಾರಣಕ್ಕೂ ಅನಾಥವಾಗಬಾರದು ಎನ್ನುವ ಕಾರಣಕ್ಕೆ ಅವರನ್ನು ಬಾಲ್ಯವಿವಾಹವಾಗುತ್ತಾರೆ. ಮಡಿವಾಳರ ಅಣ್ಣ ಅದನ್ನು ವಿರೋಧಿಸಿದರೂ ಮದುವೆ ನಡೆಯುತ್ತದೆ. ದುರದೃಷ್ಟವಶಾತ್ ಮಹಾದೇವ ಮಡಿವಾಳ ಅವರು ಮದುವೆಯಾದ ಹತ್ತೇ ತಿಂಗಳಿಗೆ ತೀವ್ರತರ ಅನಾರೋಗ್ಯಕ್ಕೆ ತುತ್ತಾಗಿ ಕೊನೆಯುಸಿರೆಳೆಯುತ್ತಾರೆ. ಅದಕ್ಕೂ ಮುನ್ನ ತಮ್ಮ ಸ್ನೇಹಿತರನ್ನು ಕರೆದು, `ನನ್ನ ಸಾವು ಸಂಭವಿಸಿದರೆ ಮತ್ತೆ ಮದುವೆ ಮಾಡಿ. ಲೂಸಿಗೆ ಒಳ್ಳೆಯ ಶಿಕ್ಷಣ ಕೊಡಿಸಿ’ ಎಂದು ಅವರ ಬಳಿ ಮಾತು ತೆಗೆದುಕೊಂಡು ಕೊನೆಯುಸಿರೆಳೆಯುತ್ತಾರೆ. ಸೋದರ ತೀರಿದ ನಂತರ ಮಡಿವಾಳರ ಅಣ್ಣ, `ಲೂಸಿಯನ್ನು ತನ್ನ ಮಗಳಂತೆ ನೋಡಿಕೊಂಡು ಶಿಕ್ಷಣ ಕೊಡಿಸುತ್ತೇನೆ’ ಎಂದು ಮುಂದೆ ಬರುತ್ತಾರೆ. ಮಡಿವಾಳರ ಸ್ನೇಹಿತರಾದ ಸ್ಟೇಷನ್ ಮಾಸ್ಟರ್ ವಸಂತ ಕುಲಕರ್ಣಿಯವರೂ ಅದಕ್ಕೆ ಸಹಕರಿಸಿ ಧಾರವಾಡದ ವನಿತಾ ಸಮಾಜ ಶಾಲೆಗೆ ಸೇರಿಸುತ್ತಾರೆ. ಅಲ್ಲಿ ನೇರ ಏಳನೇ ತರಗತಿ ಪರೀಕ್ಷೆಗೆ ಹಾಜರಾದ ಲೂಸಿ, ಮೊದಲ ದರ್ಜೆಯಲ್ಲಿ ಉತ್ತೀರ್ಣರಾಗುತ್ತಾರೆ. ನಂತರ ಹುಬ್ಬಳ್ಳಿ ಮಹಿಳಾ ವಿದ್ಯಾಪೀಠದಲ್ಲಿ ಹೈಸ್ಕೂಲು ಕಲಿಯುತ್ತಿದ್ದಾಗ ತಂದೆ-ತಾಯಿ ಮತ್ತು ಊರಿನ ನೆನಪಾಗಿ ಉಡುಪಿಗೆ ಹೋಗಿ ನೋಡಿದರೆ, ಅವರು ಅಲ್ಲಿಂದ ಹೊಟ್ಟೆಪಾಡಿಗಾಗಿ ಊರು ಬಿಟ್ಟಿರುತ್ತಾರೆ. ನಿರಾಸೆಯಿಂದ ಹಿಂತಿರುಗಿದ ಲೂಸಿ ತಮ್ಮ ವಿದ್ಯಾಭ್ಯಾಸದತ್ತ ಗಮನ ಕೇಂದ್ರೀಕರಿಸುತ್ತಾರೆ. 

ಎಸೆಸ್ಸೆಲ್ಸಿಯನ್ನು ಮೊದಲ ದರ್ಜೆಯಲ್ಲಿ ಮುಗಿಸಿದ ಲೂಸಿ, ಹುಬ್ಬಳ್ಳಿಯ ಮಹಿಳಾ ಕಾಲೇಜಿನಲ್ಲಿ ಬಿ.ಎ ಪದವಿ ಪಡೆದು, ಮುಂದೆ ಕುಮಟಾದ ಬಾಳಿಗಾ ಕಾಲೇಜಿನಲ್ಲಿ ಬಿ.ಇಡಿಗೆ ಸೇರಿಕೊಳ್ಳುತ್ತಾರೆ. ಅಲ್ಲಿಯೂ ಉತ್ತಮ ಅಂಕಗಳನ್ನು ತೆಗೆದುಕೊಂಡಾಗ ಖಾನಾಪುರ ತಾಲೂಕಿನ ಬೀಡಿ ಗ್ರಾಮದ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಸಿಕ್ಕಿತು. ಕೆಲಸ ಮಾಡುತ್ತಲೇ ಕರ್ನಾಟಕ ವಿ.ವಿ.ಯಿಂದ ಕನ್ನಡ ಎಂ.ಎ. ಪಡೆದರು. ಖಾನಾಪುರ, ಬೀಡಿ, ಹೆಬ್ಬಳ್ಳಿ, ಮುಗದ, ಲೋಕೂರು, ಧಾರವಾಡ ಮುಂತಾದ ಕಡೆಗಳಲ್ಲಿ ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿದರು. ಮಕ್ಕಳ ನಗುವಿನಲ್ಲಿ ಬದುಕಿನ ಕಹಿ ಅನುಭವಗಳನ್ನು ಮರೆತರು. ಪ್ರಾಥಮಿಕ ಶಾಲೆಯಲ್ಲಿ ಮುಖ್ಯಾಧ್ಯಾಪಕಿಯಾಗಿ, ನಂತರ ಪ್ರೌಢಶಾಲೆಯಲ್ಲೂ ಸೇವೆ ಸಲ್ಲಿಸಿದರು. ಆಗಲೇ ಅವರಿಗೆ ಬಡ ವಿದ್ಯಾರ್ಥಿಗಳ ಕಷ್ಟ ಗಮನ ಸೆಳೆಯುತ್ತದೆ. ಕನಿಷ್ಠ ಸೌಕರ್ಯವೂ ಇಲ್ಲದ ಪರಿಸ್ಥಿತಿಯಲ್ಲಿ ಶಾಲೆಗೆ ಬರುವ ಮಕ್ಕಳಿಗೆ ಸಹಾಯ ಹಸ್ತ ನೀಡುವ ಔದಾರ್ಯವನ್ನು ಮೈಗೂಡಿಸಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ತಮ್ಮ ಪಾಲಕರು ಮಿರಜದಲ್ಲಿರುವುದು ತಿಳಿದು ಅವರನ್ನು ಹುಡುಕುತ್ತಾರೆ. ಕುಟುಂಬದವರನ್ನು ಭೇಟಿಯಾಗುತ್ತಾರೆ. ತಮ್ಮ ಬಳಿಗೇ ಬಂದಿದ್ದು ಮತ್ತೆ ವಿವಾಹ ಮಾಡಿಕೋ ಎಂಬ ಕುಟುಂಬದ ಸಲಹೆಯನ್ನು ತಳ್ಳಿಹಾಕಿ, ತಮ್ಮ ಸಮಾಜಸೇವೆಯ ಇಂಗಿತವನ್ನು ಅವರಿಗೆ ಮನವರಿಕೆ ಮಾಡಿಸುತ್ತಾರೆ. 

2006ರ ನಿವೃತ್ತಿಯ ನಂತರ ಬಂದ ಹಣವನ್ನು ಸುಮಾರು 93 ಸರ್ಕಾರಿ ಶಾಲೆಗಳಿಗೆ ದತ್ತಿದಾನವಾಗಿ ವಿನಿಯೋಗಿಸಿದ್ದಾರೆ. ಆಯಾ ಶಾಲೆಗಳು ಅದರ ಬಡ್ಡಿಹಣದ ಮೊತ್ತವನ್ನು ಬಡಮಕ್ಕಳ ವಿದ್ಯಾಭ್ಯಾಸಕ್ಕೆ ಮೀಸಲಾಗಿಟ್ಟಿವೆ. ಬರುವ ಪಿಂಚಣಿಯ ಹಣದಲ್ಲೂ ವಿಕಲಚೇತನ ಶಾಲೆ ಹಾಗೂ ವೃದ್ಧಾಶ್ರಮಗಳಿಗೆ ಅಗತ್ಯ ವಸ್ತುಗಳನ್ನು ದಾನ ಮಾಡುವ ಕಳಕಳಿ ಇವರದು. ಇದೀಗ ಕೆಲಗೇರಿಯಲ್ಲಿ ತಮ್ಮ ಪತಿಯ ಹೆಸರಿಗೆ ಬಂದ ಚಿಕ್ಕ ಮನೆಯಲ್ಲಿ ಅತ್ಯಂತ ಸರಳವಾಗಿ ಜೀವನ ನಡೆಸುತ್ತಿದ್ದಾರೆ. ಈಗಲೂ ಪ್ರತಿನಿತ್ಯ ಕೆಲಗೇರಿ ಕನ್ನಡ ಶಾಲೆಯಲ್ಲಿ ಉಚಿತವಾಗಿ ಬೋಧಿಸಲು ಹೋಗುತ್ತಾರೆ. ಮನೆಯಲ್ಲೂ ಕೆಲ ಬಡಮಕ್ಕಳಿಗೆ ಪಾಠ ಹೇಳಿಕೊಡುತ್ತಾರೆ. ವಚನ ಸಾಹಿತ್ಯದ ಕುರಿತು ಆಸಕ್ತಿ ಇರುವ ಲೂಸಿ ಟೀಚರ್ ಮಕ್ಕಳಿಗೂ ಅದರ ಸಾರವನ್ನು ತಿಳಿಹೇಳುತ್ತಾರೆ. ಇವರು ಶಾಲೆಗಳಿಗೆ ದತ್ತಿ ನೀಡಿದ ವಿಷಯಗಳು ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಪಡೆದು ಹಲವು ದಾನಿಗಳು ತಾವೂ ಸರ್ಕಾರೀ ಶಾಲೆಗಳಲ್ಲಿ ದತ್ತಿ ಇಡುವ ಮೂಲಕ ಸಾಮಾಜಿಕ ಕೆಲಸಕ್ಕೆ ಮುಂದಾಗಿದ್ದಾರೆ. ಲೂಸಿ ಟೀಚರ್ ಜೀವನಾಧಾರಿತ ಕಿರುಚಿತ್ರ ‘ಬದುಕು ಬಂಡಿ’ ತಯಾರಾಗಿದೆ.

ಅವರು ಬರೆದ ಪುಸ್ತಕಗಳು

• ಆತ್ಮಚರಿತ್ರೆ ‘ಕತೆಯಲ್ಲ, ಜೀವನ’ (ವೈ.ಬಿ ಕಡಕೋಳ ಸಂಪಾದಕತ್ವ) 

• ಒಂಟಿ ಪಯಣ – ಕವನ ಸಂಕಲನ

• ಅಮೃತಧಾರೆ –ನುಡಿ ಮುತ್ತುಗಳ ಸಂಗ್ರಹ

• ಮನೆ ಮದ್ದು

• ಅಡುಗೆ ವೈವಿಧ್ಯತೆ

• ವಚನ ದರ್ಪಣ (ಶರಣ ಸಾಹಿತ್ಯದ ಕುರಿತು) 

ಪ್ರಶಸ್ತಿ- ಪುರಸ್ಕಾರ

ಅವರಿಗೆ ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘ, ರಾಜ್ಯ ಮಟ್ಟದ 6ನೇ ಸಾಹಿತ್ಯ ಸಾಂಸ್ಕೃತಿಕ ಅವ್ವ ಪ್ರಶಸ್ತಿ, ಗದಗಿನ ಚಿಕ್ಕಟ್ಟಿ ಶಾಲಾ ಪ್ರಶಸ್ತಿ ಮುಂತಾದ ಪುರಸ್ಕಾರಗಳು ಲಭಿಸಿವೆ. ಸುವರ್ಣ ಕನ್ನಡ ಚಾನೆಲ್ 2014 ಮತ್ತು 2018ರಲ್ಲಿ ಗುರುತಿಸಿ ಪುರಸ್ಕರಿಸಿದೆ. ಪ್ರಜಾವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳಲ್ಲಿ ಇವರ ಕುರಿತು ಲೇಖನಗಳು ಪ್ರಕಟವಾಗಿವೆ. ಅವರಿಂದ ಸಹಾಯ ಪಡೆದ ಮತ್ತು ವಿದ್ಯೆ ಪಡೆದ ಕೆಲವು ವಿದ್ಯಾರ್ಥಿಗಳು ಧಾರವಾಡದಲ್ಲಿ ‘ಅಕ್ಷರ ತಾಯಿ ಲೂಸಿ ಸಾಲ್ಡಾನಾ ಸೇವಾ ಸಂಸ್ಥೆ’ ಸ್ಥಾಪಿಸಿದ್ದಾರೆ. ಸಮಾಜ ಸೇವೆಯಲ್ಲಿ ತೊಡಗಿಕೊಂಡ ಆಯ್ದ ಮಹಿಳೆಯರಿಗೆ ಈ ಸಂಸ್ಥೆ ಪ್ರತಿ ವರ್ಷ ಶ್ರಮಿಕರತ್ನ, ಶಿಕ್ಷಕ ರತ್ನ ಪ್ರಶಸ್ತಿಗಳನ್ನು ನೀಡುತ್ತಿದೆ.

ಧಾರವಾಡದ ದಾನಚಿಂತಾಮಣಿ ಎಂದೇ ಕರೆಸಿಕೊಳ್ಳುವ ಲೂಸಿ ಸಾಲ್ಡಾನಾರ ಬದುಕು ನಮ್ಮೆಲ್ಲರಿಗೂ ಮಾದರಿ, `ದತ್ತಿ ನೀಡುವುದರಲ್ಲಿ ನನಗೆ ಆತ್ಮ ಸಂತೋಷವಿದೆ. ಸರ್ಕಾರಿ ಶಾಲೆಗಳಲ್ಲಿ ಸಾಕಷ್ಟು ಸುಪ್ತ ಪ್ರತಿಭೆಗಳಿವೆ. ಅವರು ಶೈಕ್ಷಣಿಕವಾಗಿ ಮುಂದೆ ಬರಲು ಶಿಕ್ಷಕರ ಬೋಧನೆಯೊಂದಿಗೆ ಪೂರಕ ಶೈಕ್ಷಣಿಕ ಸಾಧನಗಳು ಅಗತ್ಯ. ಆದ್ದರಿಂದ ಗ್ರಾಮೀಣ ಸರ್ಕಾರಿ ಶಾಲೆಗಳಿಗೆ ದತ್ತಿ ನೀಡುತ್ತಿದ್ದೇನೆ’ ಎನ್ನುವುದು ಅವರ ಹೃದಯಾಂತರಾಳದ ಮಾತು.

ಇದು ತಮಗೊದಗಿದ ಅನಾಥ ಪ್ರಜ್ಞೆ, ಆತಂಕ, ಒಂಟಿತನಕ್ಕೆ ಎದೆಗುಂದದೇ, ಸದಾ ಲವಲವಿಕೆಯಿಂದ ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ, ಲೂಸಿ ಸಾಲ್ಡಾನಾ ಎಂಬ ಹೆಣ್ಣು ಜೀವದ ಆರು ದಶಕಗಳ ಸಾಧನೆಯ ಬದುಕಿನ ಕತೆ. ಹಲವು ಸಂಕಷ್ಟಗಳನ್ನು ಸಮರ್ಥವಾಗಿ ಎದುರಿಸಿ, ಮತಧರ್ಮಗಳ ಆಚೆಗೆ ಮಹಾ ಮಾನವೀಯತೆ ಬೆಳೆಸಿಕೊಂಡು ಸಹಬಾಳ್ವೆಯ ರೂಪಕವಾಗಿ ಬದುಕಿರುವ ಅವರು `ನಮ್ಮ ಅಕ್ಕ, ನಮ್ಮ ಹಿರಿಮೆ’ಯಾಗಿದ್ದಾರೆ.

ಸುನಂದಾ ಕಡಮೆ, ಧಾರವಾಡ

Related Articles

ಇತ್ತೀಚಿನ ಸುದ್ದಿಗಳು