Friday, June 14, 2024

ಸತ್ಯ | ನ್ಯಾಯ |ಧರ್ಮ

ಮೌಲ್ಯ ಮರೆತ ರಾಜಕಾರಣ

ಜಗದೀಶ್ ಶೆಟ್ಟರ್ ರವರು ತಮಗೆ ಹೈಕಮಾಂಡ್ ಟಿಕೆಟ್ ನಿರಾಕರಿಸಲು ಏನು ಕಾರಣವಿದೆ ಎಂದು ಕೇಳುವಾಗ ತಾನೇನು ಸೆಕ್ಸ್ ಸ್ಕ್ಯಾಂಡಲ್ ನಲ್ಲಿದ್ದೇನಾ? ಸಿಡಿ ಹಗರಣವಿದೆಯಾ? ಸೀರೆ ಎಳೆದಿದ್ದೇನಾ? ಹಣ ಮುಳುಗಿಸಿದ್ದೇನಾ? ಅಂತ ಹೋಲಿಕೆ ಮಾಡಿಕೊಳ್ಳುತ್ತಾರೆ. ನೀಚತನದ ರಾಜಕಾರಣಿಯೊಂದಿಗೆ ಹೋಲಿಸಿಕೊಳ್ಳುತ್ತಾ ನಾನೇನು ಅಷ್ಟು ನೀಚನಲ್ಲ ಎಂದು ಸಮರ್ಥಿಸಿ ಕೊಳ್ಳುವಷ್ಟರ ಮಟ್ಟಿಗೆ ರಾಜಕಾರಣ ಹೇಸಿಗೆಯಾಗಿದೆ- ಶಾಂತಾಕುಮಾರಿ

ಅರಾಜಕತೆಯೇ ತಾಂಡವವಾಡುತ್ತಿರುವ ಈ ಹೊತ್ತಿನಲ್ಲಿ ಭಾರತದಲ್ಲಿ ಒಂದು ಗಂಭೀರ ಅಥವಾ ಸೈದ್ಧಾಂತಿಕ ರಾಜಕಾರಣವಿದೆ ಎಂದು ಅನಿಸುತ್ತಿಲ್ಲ. ಅನೈತಿಕ ರಾಜಕಾರಣ, ಸೇಡಿನ ರಾಜಕಾರಣ, ಜಾತಿಯ ರಾಜಕಾರಣ ಧರ್ಮಾಧಾರಿತ ರಾಜಕಾರಣ ಎಂದು ಹೀಗೆ ಬಗೆಬಗೆಯಾಗಿ ಅಧಃಪತನಕ್ಕೆ ಇಳಿಯುತ್ತಾ ಬಂದ ರಾಜಕಾರಣ ಈ ಚುನಾವಣಾ ಸಂದರ್ಭದಲ್ಲಿ ಇವೆಲ್ಲವನ್ನೂ ಒಳಗೊಂಡಂತೆ ಪಕ್ಷಾತೀತವಾಗಿ ಕೇವಲ  ಹಣ ಮತ್ತು ಅಧಿಕಾರದ ರಾಜಕಾರಣವಾಗಿ ಮಾರ್ಪಟ್ಟಿದೆ.  ಮೌಲ್ಯಾಧಾರಿತ ರಾಜಕಾರಣ ಎನ್ನುವುದು ಅಪಹಾಸ್ಯವಾಗುವ ಮಟ್ಟಿಗೆ ಇವತ್ತಿನ ರಾಜಕೀಯ ಸ್ಥಿತಿ ಅಧೋಗತಿಯನ್ನು ತಲುಪಿದೆ. 

ರಾಜಕಾರಣ ಅಪಮೌಲ್ಯವಾಗುತ್ತಾ  ಭ್ರಷ್ಟರ ಆಡಳಿತದಲ್ಲಿ ವ್ಯವಸ್ಥೆ ತೀರಾ ಹದಗೆಟ್ಟು ಆರ್ಥಿಕ ಅಭದ್ರತೆ ಸಾಮಾಜಿಕ ಅಸಮಾನತೆಗಳಿಂದ ಸಾಮಾನ್ಯ ಜನರೂ ಸಹ ಹಣಕ್ಕಾಗಿ ಏನು ಮಾಡಲೂ ಹೇಸದಂತಹ ವಾತಾವರಣ ಈಗಾಗಲೇ ನಿರ್ಮಾಣವಾಗಿದೆ. ಪ್ರಾಮಾಣಿಕತೆ ಆದರ್ಶ ಇವೆಲ್ಲ ಸೋಗಲಾಡಿತನವಾಗಿ ಆ ಬಗ್ಗೆ ಮಾತಾಡುವವರೇ ನಂಬಿಕೆ ಕಳೆದು ಕೊಳ್ಳಬಹುದಾದ ಸನ್ನಿವೇಶದಲ್ಲಿ ನಾವಿದ್ದೇವೆ. ಯಾವ ಸಮಾಜ ಕನಸುಗಳನ್ನು ಆದರ್ಶಗಳನ್ನು ಕಳೆದುಕೊಳ್ಳುತ್ತದೆಯೊ ಆ ದೇಶಕ್ಕೆ ಭವಿಷ್ಯವೆಲ್ಲಿಯದು? ಆದರ್ಶ ರಾಜ್ಯ ಎನ್ನುವುದು ಕಲ್ಪನೆಯಾದರೂ ವಾಸ್ತವಿಕ ನೆಲೆಯಲ್ಲಿ ಆ ದಿಕ್ಕಿನೆಡೆ ಸಾಗಲು ಉತ್ತೇಜಿಸುವ ಒಂದು ಮೌಲ್ಯ.  ಇಂದಿನ  ಭ್ರಷ್ಟ ರಾಜಕಾರಣಿಗಳು ಆದರ್ಶದ ಕಲ್ಪನೆಯಿಂದಲೂ ವಂಚಿತರಾಗುವ ಸಮಾಜವನ್ನು ಸೃಷ್ಟಿ ಸಾಗಿರುವುದೇ ದುರಂತ!

ಚುನಾವಣೆಯನ್ನು ಎದುರಿಸುವ ವ್ಯಕ್ತಿ ಒಂದಷ್ಟು ಮೌಲ್ಯಗಳನ್ನು ಹೊಂದಿರಬೇಕು ಎಂದು ಭಾವಿಸುವುದಕ್ಕಿಂತ  ನೀಚತನದ ರಾಜಕಾರಣಿಯೊಂದಿಗೆ ಹೋಲಿಸಿಕೊಳ್ಳುತ್ತಾ ನಾನೇನು ಅಷ್ಟು ನೀಚನಲ್ಲ ಎಂದು ಸಮರ್ಥಿಸಿಕೊಳ್ಳುವಷ್ಟರ ಮಟ್ಟಿಗೆ ರಾಜಕಾರಣ ಹೇಸಿಗೆಯಾಗಿದೆ. ಜಗದೀಶ್ ಶೆಟ್ಟರ್ ರವರು ತಮಗೆ ಹೈಕಮಾಂಡ್ ಟಿಕೆಟ್ ನಿರಾಕರಿಸಲು ಏನು ಕಾರಣವಿದೆ ಎಂದು ಕೇಳುವಾಗ ತಾವೇನು ಸೆಕ್ಸ್ ಸ್ಕ್ಯಾಂಡಲ್ ನಲ್ಲಿದ್ದೇನಾ? ಸಿಡಿ ಹಗರಣವಿದೆಯಾ? ಸೀರೆ ಎಳೆದಿದ್ದೇನಾ? ಹಣ ಮುಳುಗಿಸಿದ್ದೇನಾ? ಅಂತ ಹೋಲಿಕೆ ಮಾಡಿಕೊಳ್ಳುತ್ತಾರೆ ಅಂದರೆ, ಇವತ್ತು ನೈತಿಕತೆ/ ಅನೈತಿಕತೆಯ ಮಾನದಂಡ ಎಂತಹುದು? 

ಮೂವತ್ತೈದು ವರ್ಷಗಳಿಂದ ಒಂದು ಸಿದ್ಧಾಂತದ ಪರವಾಗಿ ಕೆಲಸ ಮಾಡಿ ಅಧಿಕಾರ ಅನುಭವಿಸಿ ಕೇವಲ ವೈಯಕ್ತಿಕ ಪ್ರತಿಷ್ಠೆಗಾಗಿ ತೀರಾ ವ್ಯತಿರಿಕ್ತ ಸಿದ್ಧಾಂತದ ಪಕ್ಷಕ್ಕೆ ಸೇರಲು ತಯಾರಾದರೆ ಇಡೀ ಜೀವನಪೂರ್ತಿ ನಂಬಿದ ಮೌಲ್ಯದ ಕತೆ ಏನು? ಸಾರಾಸಗಟಾಗಿ ಎನ್. ಮಹೇಶ್ ರವರು, ಬಿಎಸ್ಪಿಯಿಂದ ಬಿಜೆಪಿಗೆ ಸೇರುವಾಗ ” ಹೋರಾಟದ ರಾಜಕಾರಣವೇ ಬೇರೆ ಅಧಿಕಾರದ ರಾಜಕಾರಣವೇ ಬೇರೆ” ಎಂದು ಸಮರ್ಥಿಸಿಕೊಂಡರು! ಅಲ್ಲಿಗೆ ನಡೆನುಡಿ ಒಂದೇ ಆಗಬೇಕಿಲ್ಲ ಎನ್ನುವುದು ವೇದ್ಯ.

ಇವತ್ತು ರಾಜಕೀಯದಲ್ಲುಳಿಯಲು ಅಧಿಕಾರ ಅನಿವಾರ್ಯ. ಮತ್ತು ಆ ಅಧಿಕಾರಕ್ಕಾಗಿ ಹಣ ಚೆಲ್ಲುವುದು, ಎಂತದ್ದೇ ದುಷ್ಟ ಮಾರ್ಗವನ್ನು ಅನುಸರಿಸುವುದು ಅನಿವಾರ್ಯ ಎನ್ನುವಂತಹ ಸ್ಥಿತಿಯನ್ನು ಸ್ವತಃ ರಾಜಕಾರಣಿಗಳು ತಂದುಕೊಂಡಿದ್ದಾರೆ.

ಒಂದು ಕಾಲದಲ್ಲಿ ನಕ್ಸಲೈಟರು, ಪ್ರಗತಿಪರರು, ರೈತರು, ದಲಿತರು ಒಂದಷ್ಟು ಚಳುವಳಿ ಹೋರಾಟ ಅಂತಲಾದರೂ ವ್ಯವಸ್ಥೆಯ ವಿರುದ್ಧ ದನಿ ಎತ್ತುತ್ತಿದ್ದರು. ಇವತ್ತು ಅಂತಹ ದನಿಗಳಿಗೇ ಲಕ್ವ ಬಡಿದಿದೆ. ಶ್ರೀಮಂತರು ತಮ್ಮ ಹೂಡಿಕೆಯನ್ನು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಮೌನವಾಗಿದ್ದರೆ ಮಧ್ಯಮವರ್ಗದವರು ತಮ್ಮಬದುಕಿನ ಅಸ್ತಿತ್ವಕ್ಕಾಗಿ ಮೌನದ ಮೊರೆ ಹೋಗುತ್ತಿದ್ದಾರೆ. ಇನ್ನು ಕೆಳವರ್ಗದವರ ಪ್ರಾಣಕ್ಕೇ ಬೆಲೆ ಇಲ್ಲದಿರುವಾಗ ದನಿ ಎತ್ತುವ ಮಾತೇ ಇಲ್ಲ.  ದನಿ ಅಡಗಿಸುವ ಅಸ್ತ್ರಗಳು ಇಂದಿನ ಪ್ರಭುತ್ವದಲ್ಲಿ ಎಲ್ಲರನ್ನೂ ದುರ್ಬಲಗೊಳಿಸಿವೆ. ಆರ್ಥಿಕ ನೀತಿಗಳು ಬಂಡವಾಳಶಾಹಿಗಳ ಪರವಾಗಿ ಕೆಲಸ ಮಾಡುತ್ತಾ ಉಳಿದವರನ್ನು ಅಸಹಾಯಕರನ್ನಾಗಿ ಮಾಡುತ್ತಿವೆ.  ಸರ್ಕಾರಿ ಸಂಸ್ಥೆಗಳೆಲ್ಲ ಕಾರ್ಪೋರೇಟ್ ಉದ್ಯಮವಾಗಿ ಬದಲಾಗುತ್ತಿವೆ. ಕಾರ್ಪೋರೇಟ್ ಜಗತ್ತು ಎನ್ನುವುದು ಮುಖವಿಲ್ಲದವರು ನಿಷ್ಕಾರುಣ್ಯವಾಗಿ ಒಮ್ಮುಖವಾಗಿ ದುಡಿಸುತ್ತಲೇ ಇರುವವರದು. ಇಲ್ಲಿ ಆದೇಶಗಳಿಗೆ ಕಿವಿಯಾಗುವವರು ಬೇಕು. ಪ್ರಶ್ನೆಯಾಗುವ ಬಾಯಿಗೆ ಇಲ್ಲಿ ಕೆಲಸವಿಲ್ಲ!

ಇದನ್ನೂ ಓದಿ-http://ಪುಲ್ವಾಮಾ | ಆ ನಲವತ್ತು ಧೀರ ಯೋಧರ ಸಾವಿಗೆ ಯಾರು ಹೊಣೆ?

ಜನಸಮುದಾಯದ ಹಕ್ಕುಬಾಧ್ಯತೆಗಳ ನಿಟ್ಟಿನಲ್ಲಿ ದುಡಿಯುವ ರಟ್ಟೆಗಳನ್ನು ಗಟ್ಟಿಗೊಳಿಸುವಲ್ಲಿ ರಚನಾತ್ಮಕ ಯೋಜನೆಗಳನ್ನು ಜಾರಿಗೆ ತರುವಲ್ಲಿ ಕ್ರಿಯಾತ್ಮಕ ರಾಜಕೀಯ  ನಿಭಾಯಿಸಬಹುದಾದ ಜವಾಬ್ದಾರಿಗಳ ಬಗ್ಗೆ ಮಾತನಾಡುವವರೇ ಅಪರೂಪವಾಗಿದ್ದಾರೆ. ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು ಎಡಬಲ ಸಿದ್ಧಾಂತಗಳ ಹೆಸರಿನಲ್ಲಿ ವೈಯಕ್ತಿಕ ನಿಂದನೆಗಳಲ್ಲಿ ತೊಡಗಿ ಸಮಾಜದ ಅಸಹನೆ ಅಶಾಂತಿಗೆ ಕಾರಣವಾಗುತ್ತಿವೆ.  ಇವೆಲ್ಲವುಗಳನ್ನೂ ಪೋಷಿಸುವಲ್ಲಿ ರಾಜಕಾರಣಿಗಳು ಗೆದ್ದಿದ್ದಾರೆ.

ಇಂತಹ ಉಸಿರುಗಟ್ಟುವ ವಾತಾವರಣದಲ್ಲೂ ಸಿಕ್ಕ ಒಂದಿಷ್ಟು ಆರ್ಥಿಕ ಹಾಗೂ ಅಭಿವ್ಯಕ್ತಿಯ ಸ್ವಾತಂತ್ರ್ಯದ ಕಾರಣದಿಂದ ಮಹಿಳೆಯರು ರಾಜಕೀಯ ವ್ಯವಸ್ಥೆಯ ಬಗ್ಗೆ ಮಾತಾಡುತ್ತಿದ್ದಾರೆ. ರಾಜಕೀಯದಲ್ಲಿ ಮೂವತ್ತ ಮೂರು ಪರ್ಸೆಂಟ್ ಸಿಗದೇ ಇದ್ದರೂ ವ್ಯವಸ್ಥೆಯ ಲೋಪದೋಷಗಳ ಬಗ್ಗೆ ಚಿಂತಿಸುವ ಪ್ರಾಜ್ಞರು ಮುಂದೆ ಬರುತ್ತಿದ್ದಾರೆ.  ಆದರೆ ಇವರೂ ಪುರುಷ ರಾಜಕಾರಣದ ಪ್ರತಿಬಿಂಬವೇ ಆಗುವುದನ್ನು ತಪ್ಪಿಸಿಕೊಳ್ಳುವ ಜರೂರತ್ತು ಇದೆ. 

ದುರಾಡಳಿತ, ಸರ್ವಾಧಿಕಾರ, ವ್ಯವಸ್ಥೆಯಲ್ಲಿನ ಅಸಮತೋಲನ ಇವೆಲ್ಲ ದಂಗೆಗೆ ಕಾರಣವಾದ ಇತಿಹಾಸ ನಮ್ಮ ಮುಂದಿದೆ. ಆದರೆ ಇಂದಿನ ರಾಜಕಾರಣ ಅಂತಹ ದಂಗೆಯ ಮನಸ್ಥಿತಿಯನ್ನೂ ನಿರ್ವೀರ್ಯವಾಗಿಸಿ  ಸ್ವಾರ್ಥಪ್ರಲೋಭನೆಯ ಅಸ್ವಸ್ಥ ಸಮಾಜದೆಡೆ ಸಾಗಿದೆ.  ಅಭಿವೃದ್ಧಿ ರಾಜಕಾರಣದ ಮಾತೇ ಇಲ್ಲದೆ ಭಾವಪ್ರಧಾನತೆಯ ಮಂತ್ರವನ್ನು ಜಪಿಸುತ್ತಿದೆ. ಜನತೆಗೆ ಉದ್ಯೋಗ ಕೊಡುವ ಯೋಜನೆಗಳಿಗಿಂತ ದೇವಾಲಯ ಪುರಾಣ ವ್ಯಕ್ತಿಗಳ ಪ್ರತಿಮೆಗಳ ಸ್ಥಾಪನೆಗಳಿಂದ  ಜನರನ್ನು ಭಾವಗಡಲಲ್ಲಿ ತೇಲಿಸುತ್ತಾ ಭ್ರಮಾತ್ಮಕ ಸುಖಸಮಾಜವನ್ನು ಮಾದರಿಯಾಗಿಸುತ್ತಿದೆ.  ಪ್ರಾಚೀನ ಭಾರತದ ಶ್ರೇಷ್ಠತೆಯನ್ನು ಮತ್ತೆ ಮರಳಿಸುವ ಮಾತಾಡುತ್ತಾ ಡಿಜಿಟಲ್ ಇಂಡಿಯಾದ ಕಾನ್ಸೆಪ್ಟ್ ಜನರ ಮುಂದಿರಿಸುತ್ತದೆ. ಭಾವಕ್ಕೂ ವಾಸ್ತವಿಕತೆಗೂ ದೊಡ್ಡ ಕಂದಕ ನಿರ್ಮಾಣ ಮಾಡುತ್ತಾ ಜನರನ್ನು ಗೊಂದಲಕ್ಕೊಳಪಡಿಸಿ ನಾವು ಯಾವ ದಿಕ್ಕಿನಲ್ಲಿ ಹೋಗುತ್ತಿದ್ದೇವೆ ಎಂದರಿಯದಾಗಿದ್ದೇವೆ. 

ಇವತ್ತಿನ ಚುನಾವಣಾ ರಾಜಕೀಯ ಈ ನಿಟ್ಟಿನಲ್ಲಿ ಜನರ ಕಣ್ತೆರೆಸುವಂತಿದೆ. ಜನರು ಎಚ್ಚೆತ್ತುಕೊಳ್ಳಲೇಬೇಕಾದ ಜರೂರತ್ತು, ಅರ್ಥವಾಗುವ ನಿರೀಕ್ಷೆ ಈ ಚುನಾವಣಾ  ಸಮಯದ ನಡೆಗಳಲ್ಲಿ ಅಡಗಿದೆ.  ರಾಜಕೀಯ ಮರುಮೌಲ್ಯಕ್ಕೆ ಇದು ಸಕಾಲವಾಗಿದೆ.

 ಶಾಂತಾಕುಮಾರಿ

ಲೇಖಕಿ, ಉದ್ಯಮಿ, ಆಪ್ತಸಮಾಲೋಚಕಿ

ಇದನ್ನೂ ಓದಿhttp://ತಿಪಟೂರು | ಶಿಕ್ಷಣ ಸಚಿವರಿಗೆ ಯಡಿಯೂರಪ್ಪನವರ ಕಣ್ಣೀರು ಮುಳುವಾಗುತ್ತಾ?

Related Articles

ಇತ್ತೀಚಿನ ಸುದ್ದಿಗಳು