Monday, June 17, 2024

ಸತ್ಯ | ನ್ಯಾಯ |ಧರ್ಮ

ನನ್ನ ಮತ ಮಾರಾಟಕ್ಕಿಲ್ಲ

ನಮ್ಮ ಮತದ ಶಕ್ತಿಯನ್ನು ಕೋಮುವಾದಿ ರಕ್ತ ಪಿಪಾಸುಗಳಿಗೆ ಕೊಡುವುದು ಬೇಡ. ಒಂದು ವೇಳೆ ಕೊಟ್ಟರೆ ಅವರು ನಮ್ಮ ರಕ್ತ ಕುಡಿದು, ನಮ್ಮನ್ನು ನಿಶ್ಯಕ್ತರನ್ನಾಗಿಸಿ ನಮ್ಮ ಬದುಕಿಗೇ ಅಂತಿಮ ವಿದಾಯ ಹೇಳುವಂತೆ ಮಾಡಿಬಿಡುತ್ತಾರೆ. ದಕ್ಷಿಣ ಭಾರತ ರಾಜ್ಯಗಳ ಮತದಾರರು ಕೋಮುವಾದಿಗಳನ್ನು ದೂರ ಇಟ್ಟಿದ್ದಾರೆ, ಕರ್ನಾಟಕದಲ್ಲೂ ಈ ಚುನಾವಣೆಯಲ್ಲಿ ದೂರ ಇಡುತ್ತಾರೆ ಎಂಬ ಆಶಯ ನನ್ನದು – ಆನಂದ್. ಆರ್  ಮುಳಬಾಗಿಲು, ಯುವ ಬರಹಗಾರ

ನಮಗೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರು ಬಹುತೇಕ ಜನರಿಗೆ ಮತಚಲಾವಣೆಯ ಮಹತ್ವ ತಿಳಿಯದಾಗಿದೆ. ನಾವು ನಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ  ಸಂಬಂಧ, ಜಾತಿ, ಧರ್ಮ ನೋಡಿ ಮತ ಹಾಕುತ್ತಿದ್ದೇವೆ ಹಾಗೂ ಅವರು ಕೊಡುವ ಹಣ, ಹೆಂಡ, ಕೆಲವು ಆಮಿಷಗಳಿಗೆ ನಾವು ನಮ್ಮ ಮತವನ್ನು  ಮಾರಿಕೊಳ್ಳುತ್ತಿದ್ದೇವೆ. ಎಲ್ಲಿಯತನಕ ನಾವು ಮತದ ಮಹತ್ವ ಅರಿಯದೆ ಕೇವಲ ಈ ಮೇಲಿನವುಗಳಿಗೆ ಮತ ನೀಡುತ್ತೇವೋ ಅಲ್ಲಿಯತನಕ ನಮ್ಮ ಬದುಕು ಬದಲಾಗುವುದಿಲ್ಲ ಎಂಬುದನ್ನು ನಾವು ತಿಳಿಯಬೇಕು. 

ಮಾಲೀಕ ತಮ್ಮ ಮನೆಗೆ ಕಳ್ಳನನ್ನು ಕಾವಲುಗಾರನಾಗಿ ನೇಮಿಸಿದರೆ ಆ ಮನೆಯ ಮಾಲೀಕನ ಪರಿಸ್ಥಿತಿ ಏನಾಗಬಹುದು ಎಂಬ ಊಹೆ ಮಾಡಿಕೊಳ್ಳಿ. ನಮ್ಮ ನಮ್ಮ ಕ್ಷೇತ್ರಗಳ ಮನೆಗಳಿಗೆ ಕಳ್ಳರನ್ನು ಕಾವಲುಗಾರನಾಗಿ ನೇಮಿಸುವುದು ಬೇಡ. ನಿಷ್ಠಾವಂತ, ಪ್ರಾಮಾಣಿಕ, ಜನರ ಕಷ್ಟಗಳಿಗೆ ಸ್ಪಂದಿಸುವ, ಮುಂದಿನ ಪೀಳಿಗೆಯ ಬಗ್ಗೆ ಯೋಚನೆ ಮಾಡುವ ವ್ಯಕ್ತಿಯನ್ನು ನಮ್ಮ ಪ್ರತಿನಿಧಿಯಾಗಿ ಆಯ್ಕೆ ಮಾಡಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರದ್ದು .

 ಕೇವಲ ಚುನಾವಣೆಯನ್ನೇ ದೃಷ್ಟಿಯಲ್ಲಿಟ್ಟುಕೊಂಡು ಎಲ್ಲಿಂದಲೋ ಬಂದು ಕೋಟಿಗಟ್ಟಲೆ ಖರ್ಚು ಮಾಡಿ ಗೆದ್ದ ನಂತರ ಆ ಕ್ಷೇತ್ರದ ಜನರಿಗೆ ಮುಖ ಕೂಡ ತೋರಿಸುವುದೇ ಇಲ್ಲ, ಅವರ ಕಷ್ಟಗಳಿಗೆ ಸ್ಪಂದಿಸುವುದಿಲ್ಲ, ಯಾವ ಅಭಿವೃದ್ಧಿ ಕೆಲಸಗಳನ್ನು ಮಾಡದೆ ಜನರ ತೆರಿಗೆಯಲ್ಲಿ ಲೂಟಿ ಹೊಡೆಯುತ್ತಾ ಕಾಲಹರಣ ಮಾಡುವ ನಾಯಕರು ನಮಗೆ ಬೇಕೆ? ಎಂಬುದನ್ನು ಪ್ರಜ್ಞಾವಂತ ಮತದಾರರು ಯೋಚಿಸ ಬೇಕಾಗಿದೆ.  500 ರೂಪಾಯಿ ನೋಟು ಕೊಟ್ಟು, ಓಟು ಹಾಕಿಸಿಕೊಳ್ಳುವ ವ್ಯಕ್ತಿಗಳಿಂದ ಜನರು ಅಭಿವೃದ್ಧಿ ಕೆಲಸಗಳನ್ನು ನೀರಿಕ್ಷಿಸಲು ಸಾಧ್ಯವೇ? ರಾಜಕೀಯವನ್ನು ಒಂದು ಉದ್ಯಮವಾಗಿ ನೋಡುವ ಕಾಲಘಟ್ಟದಲ್ಲಿ ನಾವಿದ್ದೇವೆ. 

 ಪ್ರಜಾಪ್ರಭುತ್ವದಲ್ಲಿ ಮತಕ್ಕೆ ಅಪಾರವಾದ ಮಹತ್ವವಿದೆ. ಅದನ್ನು ಯೋಗ್ಯರಿಗೆ ನೀಡೋಣ. ಪ್ರಜಾಪ್ರಭುತ್ವವನ್ನು ಬಲಪಡಿಸೋಣ.

ಹಿಂದೆ ಉಳ್ಳವರಿಗಷ್ಟೇ ಅಧಿಕಾರ ಅನ್ನುವ ಮಾತು ಇನ್ನೂ ಮುಂದುವರಿಯುತ್ತಿದೆ. ಇದು ಬದಲಾಗಬೇಕು. ಜನ ಸಾಮಾನ್ಯರೊಬ್ಬರು ಹಣ ಇಲ್ಲದಿದ್ದರೂ ಅಧಿಕಾರಕ್ಕೆ ಬರಬೇಕು ಅಂತಹಾ ವಾತಾವರಣ ನಿರ್ಮಾಣವಾಗಬೇಕು. ಇದು ಕೇವಲ ನಮ್ಮ ಮತದಿಂದ ಮಾತ್ರ ಸಾಧ್ಯ.

ಹಿಂದೆ ರಾಜರ ಕಾಲದಲ್ಲಿ ಒಂದು ವಂಶದಲ್ಲೇ ರಾಜ ಹುಟ್ಟುತ್ತಿದ್ದ. ಅವನು ಅಯೋಗ್ಯನಾದರೂ, ಭ್ರಷ್ಟನಾದರೂ, ಕ್ರೂರಿಯಾದರು,  ಲೂಟಿಕೋರನಾದರೂ ಅವನೇ ನಾಯಕ (ರಾಜ). ಅವನು ಏನು ಮಾಡಿದರೂ ಅದೇ ಸರಿ ಅಂತ ಜನ ಒಪ್ಪಬೇಕಾಗಿತ್ತು. ಒಂದು ವೇಳೆ ಅವರು ಅದನ್ನು ಧಿಕ್ಕರಿಸಿದರೆ, ಪ್ರಶ್ನೆ ಮಾಡಿದರೆ, ಪ್ರತಿಭಟಿಸಿದರೆ ಅಂಥವರಿಗೆ ಉಳಿಗಾಲವಿರುತ್ತಿರಲಿಲ್ಲ.

ಆದರೆ ಇಂದು ಪ್ರಜಾಪ್ರಭುತ್ವದಲ್ಲಿ ನಾವಿದ್ದೇವೆ. ಇಲ್ಲಿ ನಾಯಕ ( ರಾಜ ) ನೀವು ಹಾಕುವ ಮತ ಯಂತ್ರದಿಂದ ಹುಟ್ಟಿ ಬರುತ್ತಾನೆ.

 ಅಂತಹ ಅದ್ಭುತ ಶಕ್ತಿ ಪ್ರಜೆಗಳ ಮತಗಳಿಗಿದೆ.

ನಮ್ಮ ಮತದ ಶಕ್ತಿಯನ್ನು ಕೋಮುವಾದಿ ರಕ್ತ ಪಿಪಾಸುಗಳಿಗೆ ಕೊಡುವುದು ಬೇಡ. ಒಂದು ವೇಳೆ ಕೊಟ್ಟರೆ ಅವರು ನಮ್ಮ ರಕ್ತ ಕುಡಿದು, ನಮ್ಮನ್ನು ನಿಶ್ಯಕ್ತರನ್ನಾಗಿಸಿ ನಮ್ಮ ಬದುಕಿಗೇ ಅಂತಿಮ ವಿದಾಯ ಹೇಳುವಂತೆ ಮಾಡಿಬಿಡುತ್ತಾರೆ. ದಕ್ಷಿಣ ಭಾರತ ರಾಜ್ಯಗಳ ಮತದಾರರು ಕೋಮುವಾದಿಗಳನ್ನು ದೂರ ಇಟ್ಟಿದ್ದಾರೆ, ಕರ್ನಾಟಕದಲ್ಲೂ ಈ ಚುನಾವಣೆಯಲ್ಲಿ ದೂರ ಇಡುತ್ತಾರೆ ಎಂಬ ಆಶಯ ನನ್ನದು.

ಯಾವುದೇ ಧರ್ಮದಲ್ಲಿರುವ ಕೋಮುವಾದಿಗಳಿಂದ ರಾಜ್ಯಕ್ಕೆ ಯಾವ ಉಪಯೋಗವು ಇಲ್ಲ. ಅವರಿಂದ ಯಾವ ಅಭಿವೃದ್ಧಿ ಕೆಲಸಗಳನ್ನು ನಾವು ನಿರೀಕ್ಷಿಸಲು ಸಾಧ್ಯವಿಲ್ಲ. ಅವರು ಬಡವರ ಮಕ್ಕಳ ಹೆಣಗಳನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುವವರು. ಬಡವರ ಮಕ್ಕಳು ಬೀದಿಯಲ್ಲಿದ್ದರೆ ಕೋಮುವಾದಿ ರಾಜಕಾರಣಿಗಳ ಮಕ್ಕಳು ವಿದೇಶಗಳಲ್ಲಿ ಹಾಯಾಗಿದ್ದಾರೆ ಎಂಬುದನ್ನು ಜನರು ತಿಳಿಯಬೇಕು.

ಭ್ರಷ್ಟರಿಗೆ ಅಧಿಕಾರ ಕೊಟ್ಟರೆ ಅದರ ಪರಿಣಾಮವನ್ನು ಜನರು ಅನುಭವಿಸಲೇ ಬೇಕು. ಕೆಲವು ವರ್ಷಗಳಿಂದ ಜನ ಭ್ರಷ್ಟಾಚಾರದಿಂದ ಕೆಂಗಟ್ಟು ಹೋಗಿದ್ದಾರೆ, ದುರಾಡಳಿತದಿಂದಾಗಿ ಬಡವರ ಬದುಕು ತುಂಬಾ ದುಸ್ಥಿತಿಗೆ ಬಂದಿದೆ, ಜನರಿಗೆ ಸಿಕ್ಕಾಪಟ್ಟೆ ತೆರಿಗೆ ವಿಧಿಸಿ ಹಗಲು ದರೋಡೆ ಮಾಡಿ ಜನಸಾಮಾನ್ಯರ ರಕ್ತ ಹೀರುತ್ತಿದ್ದಾರೆ. ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್, ದಿನನಿತ್ಯ ಬಳಸುವ ವಸ್ತುಗಳ ಬೆಲೆಗಳು ಈಗ ಗಗನಕ್ಕೇರಿವೆ.  ಹಲವು ವರ್ಷಗಳಿಂದ ಕಟ್ಟಿ ಬೆಳೆಸಿಕೊಂಡು ಬಂದ ಸರ್ಕಾರಿ ಸಂಸ್ಥೆಗಳನ್ನು ಒಂದೊಂದಾಗಿ ಮಾರುತ್ತಿದ್ದಾರೆ, ಸಂವಿಧಾನದ ಆಶಯಗಳಿಗೆ ಧಕ್ಕೆ ತರುತ್ತಿರುವ ಇಂತಹ ಸರ್ಕಾರವನ್ನು ಮನೆಗೆ ಕಳುಹಿಸದೆ ನಮಗೆ ಉಳಿಗಾಲವಿಲ್ಲ ಎಂಬುದನ್ನು ನಾವು ನೆನಪಿನಲ್ಲಿಡ ಬೇಕಾಗಿದೆ.

ಮತ (ಓಟು) ನಮ್ಮ ಮನೆಯ ಹೆಣ್ಣುಮಗಳಷ್ಟೇ ಶ್ರೇಷ್ಠ, ಅದನ್ನು ಯಾರೂ ಮಾರಿಕೊಳ್ಳಬೇಡಿ ಎಂಬ ಡಾ. ಬಿ. ಆರ್ ಅಂಬೇಡ್ಕರ್ ರವರು ಹೇಳಿದ ಮಾತನ್ನು ನೆನಪಿಸಿಕೊಂಡು ನಾವು ಈ ಬಾರಿ ಮತ ಚಲಾಯಿಸೋಣ

ನನ್ನ ಮತ ಅಭಿವೃದ್ಧಿಗೆ, ಸೌಹಾರ್ದತೆಗೆ, ನಮ್ಮ ಭವಿಷ್ಯಕ್ಕೆ, ಮುಂದಿನ ಪೀಳಿಗೆಗೆ.

ಆನಂದ್. ಆರ್  ಮುಳಬಾಗಿಲು 

ಯುವ ಬರಹಗಾರ

ಇದನ್ನೂ ಓದಿhttp://ಗದಗ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು : ಯಾರಿಗೆ ಗೆಲುವು? ಯಾರಿಗೆ ಸೋಲು?

Related Articles

ಇತ್ತೀಚಿನ ಸುದ್ದಿಗಳು