Friday, June 14, 2024

ಸತ್ಯ | ನ್ಯಾಯ |ಧರ್ಮ

ರಾಜ್ಯ ಬಿಜೆಪಿಗೆ ಮುಗಿಯದ ಸಂಕಟ: ಒಬ್ಬರ ನಂತರ ಒಬ್ಬರಂತೆ ಡಿಕೆ ಶಿವಕುಮಾರ್‌ ಅವರ ಮನೆ ಮುಂದೆ ನಿಲ್ಲುತ್ತಿರುವ ಬಿಜೆಪಿ ನಾಯಕರು

ಬೆಂಗಳೂರು: ರಾಜ್ಯ ಬಿಜೆಪಿಯ ಗೋಳು ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಹಳೆಯ ದುರಂತ ಕತೆಗಳ ಸಿನೆಮಾಗಳಂತೆ ಅದಕ್ಕೆ ಕಷ್ಟದ ಮೇಲೆ ಕಷ್ಟ ಒದಗಿ ಬರುತ್ತಿದೆ.

ಬಿಜೆಪಿ ಚುನಾವಣೆ ಸೋತ ನಂತರ ಮಾಲಿಕನಿಲ್ಲದ ದನಗಳ ಕೊಟ್ಟಿಗೆಯಂತಾಗಿದೆ. ಯಾವ ದನಗಳೂ ಒಂದೆಡೆ ನಿಲ್ಲುತ್ತಿಲ್ಲ. ಕೊಟ್ಟಿಗೆ ದಾಟಿ ಹೋಗುತ್ತಿರುವ ದನಗಳನ್ನು ಹಿಡಿದು ಕಟ್ಟುವವರೂ ಇಲ್ಲದಂತಾಗಿದೆ.

ಇತ್ತ ಕಾಂಗ್ರೆಸ್‌ ಒಂದು ಕಾಲದಲ್ಲಿ ಬಿಜೆಪಿ ತನಗೆ ಏನು ಮಾಡಿತ್ತೋ ಅದನ್ನು ಬಿಜೆಪಿಗೆ ವಾಪಸ್‌ ಮಾಡುತ್ತಿದೆ. ಡಿಕೆ ಶಿವಕುಮಾರ್‌ ಅವರಂತೂ ಹಳೆಯ ಸಿನೆಮಾದ ರೆಬೆಲ್‌ ಹೀರೋ ಸೇಡು ತೀರಿಸಿಕೊಳ್ಳುವ ಹಾಗೆ ತನ್ನ ವಿರೋಧ ಪಕ್ಷದ ಒಬ್ಬ ನಾಯಕನ್ನೂ ಬಿಡದೆ ಭೇಟಿಯಾಗಿ ಹೇಳಿಕೆಗಳನ್ನು ನೀಡಿ ಬಿಜೆಪಿಯನ್ನುಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ.

ಈಗಾಗಲೇ ಎಸ್‌ ಟಿ ಸೋಮಶೇಖರ್‌, ಗೋಪಾಲಯ್ಯ, ಬೈರತಿ ಬಸವರಾಜ್‌ ಮೊದಲಾದ ಶಾಸಕರು ಒಂದು ಕಾಲನ್ನು ಬಿಜೆಪಿಯಲ್ಲೂ ಇನ್ನೊಂದು ಕಾಲನ್ನು ಕಾಂಗ್ರಸ್ಸಿನಲ್ಲಿ ಇಟ್ಟಿದ್ದರೆ, ಈಗ ಇನ್ನಷ್ಟು ನಾಯಕರು ಕಾಂಗ್ರೆಸ್‌ ನಾಯಕರ ಮನೆಯ ಹೊಸ್ತಿಲು ತುಳಿಯುವ ಮೂಲಕ ಬಿಜೆಪಿ ಸಂಕಟವನ್ನು ಹೆಚ್ಚಿಸುತ್ತಿದ್ದಾರೆ.

ಇತ್ತೀಚಿನ ಬೆಳವಣಿಗೆಯಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬುಧವಾರ ಮಧ್ಯ ಕರ್ನಾಟಕದ ಪ್ರಮುಖ ಪಕ್ಷದ ನಾಯಕಿ ಹಾಗೂ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ.

ಈ ನಡುವೆ, ಬಿಜೆಪಿಯ ಹಿರಿಯ ನಾಯಕ ಹಾಗೂ ಕೇಂದ್ರ ಸಚಿವ ಅನಂತ್ ಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಕೂಡ ಇತ್ತೀಚೆಗೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದರು.

ಬುಧವಾರದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, ‘ಆಪರೇಷನ್ ಹಸ್ತ’ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ ಡಿಕೆ ಶಿವಕುಮಾರ್, “ನಾವು ಯಾವುದೇ ಆಪರೇಷನ್ ನಡೆಸುವುದಿಲ್ಲ, ನಮ್ಮದೇನಿದ್ದರೂ ಕೋ ಆಪರೇಷನ್” ಎಂದು ಸಮರ್ಥಿಸಿಕೊಂಡರು. ‌

ಪೂರ್ಣಿಮಾ ಶ್ರೀನಿವಾಸ್ ಅವರ ತಂದೆ ಕೃಷ್ಣಪ್ಪ ಈ ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ದರು.

“ಅವರ ತಂದೆ ನಮ್ಮ ನಾಯಕ. ನಮ್ಮ ನಡುವೆ ಕುಟುಂಬದಂತಹ ಬಂಧವಿದೆ. ನಾನು ಅವರ ಜೊತೆ ರಾಜಕೀಯ ಚರ್ಚೆ ಮಾಡಿಲ್ಲ. ಕೃಷ್ಣ ಜನ್ಮಾಷ್ಟಮಿ ಹಬ್ಬದ ಹಿನ್ನೆಲೆಯಲ್ಲಿ ಅವರ ಮನೆಗೆ ನನ್ನನ್ನು ಆಹ್ವಾನಿಸಲಾಗಿತ್ತು,” ಎಂದು ಉಪ ಮುಖ್ಯಮಂತ್ರಿ ತಮ್ಮ ಭೇಟಿಯನ್ನು ಸಮರ್ಥಿಸಿಕೊಂಡರು.

ಆದರೆ ಪೂರ್ಣಿಮಾ ಶ್ರೀನಿವಾಸ್‌ ತಮಗೆ ಕಾಂಗ್ರೆಸ್‌ ಸೇರಲು ಆಹ್ವಾನ ನೀಡಲಾಗಿದೆ ಎಂದಿದ್ದಾರೆ.

ಆದರೆ, ನಾನು ಸದ್ಯಕ್ಕೆ ಬಿಜೆಪಿಯಲ್ಲಿದ್ದೇನೆ ಮತ್ತು ಪಕ್ಷ ಬಿಡುವ ಯೋಚನೆ ಮಾಡಿಲ್ಲ. ವಿಧಾನಸಭೆ ಚುನಾವಣೆಯಿಂದಲೂ ಈ ಚರ್ಚೆ ನಡೆದಿದೆ. ನಾನು ಬಿಜೆಪಿ ತೊರೆಯುವ ಬಗ್ಗೆ ಯಾವತ್ತೂ ಮಾತನಾಡಿಲ್ಲ ಎಂದು ಅವರು ಹೇಳಿದ್ದಾರೆ.

ಈಗಲೂ ನಾನು ಬಿಜೆಪಿ ತೊರೆಯುವ ಯೋಚನೆ ಮಾಡುತ್ತಿಲ್ಲ. ಒಂದು ಹಾಗೊಂದು ನಿರ್ಧಾರ ಮಾಡಿದರೆ, ನಾನೇ ಘೋಷಣೆ ಮಾಡುತ್ತೇನೆ ಮತ್ತು ನನ್ನ ನಿರ್ಧಾರದ ಬಗ್ಗೆ ಎಲ್ಲರಿಗೂ ತಿಳಿಸುತ್ತೇನೆ” ಎಂದು ಅವರು ಹೇಳಿದರು.

ಶ್ರೀನಿವಾಸ್ ಮತ್ತು ತೇಜಸ್ವಿನಿ ಅನಂತ್ ಕುಮಾರ್ ಇಬ್ಬರಿಗೂ ಪಕ್ಷ ತಮ್ಮನ್ನು ನಡೆಸಿಕೊಳ್ಳುತ್ತಿರುವ ರೀತಿಯ ಕುರಿತು ಬೇಸರವಿದೆ ಎನ್ನಲಾಗುತ್ತಿದೆ.

ತೇಜಸ್ವಿನಿಯವರ ಪುತ್ರಿ ಐಶ್ವರ್ಯಾ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ನೇತ್ರತ್ವದ ಅಂದಿನ ಬಿಜೆಪಿ ಸರ್ಕಾರದ ಮೇಲೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.

ಈ ಮಧ್ಯೆ, ಲಿಂಗಾಯತ ಸಮುದಾಯವು ಬಿಜೆಪಿಯಿಂದ ದೂರ ಸರಿಯಲು ಸಂದರ್ಭಗಳು ಒತ್ತಾಯಿಸುತ್ತಿವೆ ಮತ್ತು ಲಿಂಗಾಯತ ಸಮುದಾಯದ ಹೆಚ್ಚಿನ ನಾಯಕರು ಶೀಘ್ರದಲ್ಲೇ ಪಕ್ಷದಿಂದ ಹೊರಬರುತ್ತಾರೆ ಎಂದು ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ಸಹೋದರ, ಬಿಜೆಪಿ ಎಂಎಲ್‌ಸಿ ಪ್ರದೀಪ್ ಶೆಟ್ಟರ್ ಬಹಿರಂಗವಾಗಿ ಹೇಳಿದ್ದಾರೆ.

ಮಾಜಿ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ, ಜೆ.ಸಿ.ಮಾಧುಸ್ವಾಮಿ, ಎಂ.ಪಿ. ರೇಣುಕಾಚಾರ್ಯ ಹಾಗೂ ಮಾಜಿ ಶಾಸಕ ಎಸ್.ಐ.ಚಿಕ್ಕನಗೌಡರ್ ಶೀಘ್ರದಲ್ಲೇ ಬಿಜೆಪಿ ತೊರೆಯಲಿದ್ದಾರೆ.

ಈ ನಡುವೆ ಉಡುಪಿಯ ಬೈಂದೂರು ಕ್ಷೇತ್ರದ ಮಾಜಿ ಶಾಸಕ ಸುಕುಮಾರ ಶೆಟ್ಟಿಯವರು ಕೂಡಾ ಒಂದು ಕಾಲನ್ನು ಬಿಜೆಪಿಯ ಹೊರಗಿಟ್ಟಿದ್ದು, ಅವರು ಕ್ಷೇತ್ರದ ಕಾಂಗ್ರೆಸ್‌ ಮಾಜಿ ಶಾಸಕ ಗೋಪಾಲ ಪೂಜಾರಿಯವರೊಡನೆ ಸೇರಿ ಡಿಕೆ ಶಿವಕುಮಾರ್‌ ಅವರನ್ನು ಭೇಟಿಯಾಗಿದ್ದು, ಅವರು ಕೂಡಾ ಕಾಂಗ್ರೆಸ್‌ ಸೇರಲಿದ್ದಾರೆನ್ನುವ ಗುಸು ಗುಸು ಕ್ರೇತದಾದ್ಯಂತ ಆರಂಭಗೊಂಡಿದೆ.

Related Articles

ಇತ್ತೀಚಿನ ಸುದ್ದಿಗಳು