Friday, November 15, 2024

ಸತ್ಯ | ನ್ಯಾಯ |ಧರ್ಮ

ಉದ್ಧವ್‌ ಠಾಕ್ರೆಗೆ ತಾಕತ್‌ ಇದ್ದರೆ ರಾಹುಲ್‌ ಗಾಂಧಿ ಬಳಿ ಬಾಳಾ ಠಾಕ್ರೆ, ಸಾವರ್ಕರ್ ಕುರಿತು ಒಂದೆರಡು ಒಳ್ಳೆಯ ಮಾತುಗಳನ್ನಾಡಿಸಲಿ: ಅಮಿತ್‌ ಶಾ ಸವಾಲು

ಮಹಾರಾಷ್ಟ್ರ ಚುನಾವಣೆ ಕಣ ದಿನದಿಂದ ದಿನಕ್ಕೆ ಕಾವೇರುತ್ತಾ ಸಾಗಿದೆ. ಇಂದು ಮಹಾರಾಷ್ಟ್ರದಲ್ಲಿ ಕರ್ನಾಟದಿಂದ ಹೋಗಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಮಹಾರಾಷ್ಟ್ರದ ಒಂದೆಡೆ ಧೂಳೆಬ್ಬಿಸುತ್ತಿದ್ದರೆ ಇನ್ನೊಂದೆಡೆ ಕೇಂದ್ರ ಗೃಹ ಸಚಿವ ತಮ್ಮ ಪಕ್ಷದ ಪರ ತಮ್ಮ ಬತ್ತಳಿಕೆಯಿಂದ ಅಸ್ತ್ರಗಳನ್ನು ಚಲಾಯಿಸುತ್ತಿದ್ದಾರೆ.

ಅವರು ತಮ್ಮ ಇಂದಿನ ಭಾಷಣದಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಹಾಗೂ ಶಿವಸೇನೆ ನಾಯಕ ಉದ್ಧವ್‌ ಠಾಕ್ರೆಯವರಿಗೆ ನೇರ ಸವಾಲನ್ನು ಎಸೆದಿದ್ದಾರೆ.

ಮಹಾರಾಷ್ಟ್ರದ ಹಿಂಗೋಲಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು “ಮಹಾರಾಷ್ಟ್ರದ ಮುಂದಿನ ಐದು ವರ್ಷಗಳ ಕಾಲ ಶಿವಾಜಿ ಮಹಾರಾಜರ ಪರಂಪರೆಯನ್ನು ಅನುಸರಿಸುತ್ತದೆಯೇ ಅಥವಾ ಔರಂಗಜೇಬ್ ಅವರ ಮಾರ್ಗವನ್ನು ಅನುಸರಿಸುತ್ತದೆಯೇ ಎನ್ನುವುದನ್ನು ಈ ಬಾರಿ ವಿಧಾನಸಭಾ ಚುನಾವಣೆ ನಿರ್ಧರಿಸುತ್ತದೆ” ಎಂದು ಹೇಳಿದರು.

ಮುಂದುವರೆದು ಮಾತನಾಡಿದ ಅವರು “ರಾಹುಲ್ ಬಾಬಾ ನಿಮ್ಮ ಸ್ನೇಹಿತ ಉದ್ಧವ್ ಠಾಕ್ರೆ ಅವರ ತಂದೆ ಬಾಳಸಾಹೇಬ್ ಠಾಕ್ರೆ ಅವರನ್ನು 2 ನಿಮಿಷಗಳ ಕಾಲ ಹೊಗಳಿ ಮಾತನಾಡಿ, ಉದ್ಧವ್ ಠಾಕ್ರೆ ಅವರಿಗೆ ಧೈರ್ಯವಿದ್ದರೆ, ರಾಹುಲ್ ಗಾಂಧಿ ಅವರಿಂದ ವೀರ್ ಸಾವರ್ಕರ್ ಹಾಗೂ ಬಾಳಾಸಾಹೇಬ್ ಠಾಕ್ರೆ ಅವರ ಬಗ್ಗೆ ಒಂದೆರಡು ಒಳ್ಳೆಯ ಮಾತುಗಳನ್ನಾಡಿಸಲಿ” ಎಂದು ಕುಟುಕಿದರು.

ನಮ್ಮ ಮಹಾಯುತಿ ಮೈತ್ರಿಕೂಟ ಯಾವುದೇ ಹಿಂಜರಿಕೆ ಇಲ್ಲದೇ, ಛತ್ರಪತಿ ಶಿವಾಜಿ ಮಹಾರಾಜ್ ಹಾಗೂ ವೀರ್ ಸಾವರ್ಕರ್ ಅವರ ಪರಂಪರೆಯನ್ನು ಯಾವುದೇ ಹಿಂಜರಿಕೆಯಿಲ್ಲದೆ ಆಯ್ಕೆ ಮಾಡಿದೆ, ಆದರೆ ಅಘಾಡಿ ಒಕ್ಕೂಟವು ಔರಂಗಜೇಬ್ ಅಭಿಮಾನಿಗಳ ಸಂಘವಾಗಿದೆ ಎಂದು ಅವರು ಹೇಳಿದರು.

ರಾಹುಲ್ ಗಾಂಧಿ ಅವರನ್ನು ಪದೇ ಪದೇ ಅಪಘಾತಕ್ಕೀಡಾದ ವಿಮಾನಕ್ಕೆ ಹೋಲಿಸಿದ ಅಮಿತ್ ಶಾ, ಸೋನಿಯಾ ಗಾಂಧಿ ರಾಹುಲ್ ಬಾಬಾ ಹೆಸರಿನ ವಿಮಾನ 20 ಬಾರಿ ಇಳಿಸಲು ಪ್ರಯತ್ನಿಸಿದ್ದಾರೆ, ಮತ್ತು 20 ಬಾರಿ ಕ್ರ್ಯಾಶ್ ಆಗಿದೆ. ಈ ಬಾರಿಯೂ ಆ ವಿಮಾನ ಮತ್ತೆ ಕ್ರ್ಯಾಶ್‌ ಆಗುವುದು ಖಂಡಿತಾ ಎಂದು ಅಮಿತ್‌ ಶಾ ಹೇಳಿದ್ದಾರೆ

Related Articles

ಇತ್ತೀಚಿನ ಸುದ್ದಿಗಳು

You cannot copy content of this page