ಶಿಕ್ಷಕರ ನೇಮಕಾತಿ ಹಗರಣ: ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿಗೆ ಇಡಿ ಸಮನ್ಸ್

ಪಶ್ಚಿಮ ಬಂಗಾಳದ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ (TMC) ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದ ಅಭಿಷೇಕ್ ಬ್ಯಾನರ್ಜಿ ಅವರಿಗೆ ಜಾರಿ ನಿರ್ದೇಶನಾಲಯ (ED) ಸಮನ್ಸ್ ಜಾರಿ ಮಾಡಿದೆ.

ಜೂನ್ 15 ರಂದು ಕೋಲ್ಕತಾದ ಸಾಲ್ಟ್‌ಲೇಕ್‌ನಲ್ಲಿರುವ ಸಿಜಿಒ ಕಾಂಪ್ಲೆಕ್ಸ್‌ನ ಇಡಿ ಪ್ರಾದೇಶಿಕ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ಬುಧವಾರ ಸಂಜೆ ದಕ್ಷಿಣ ಕೋಲ್ಕತಾದ ಕಾಳೀಘಾಟ್ ರಸ್ತೆಯಲ್ಲಿರುವ ಅಭಿಷೇಕ್ ಬ್ಯಾನರ್ಜಿ ಅವರ ನಿವಾಸಕ್ಕೆ ತೆರಳಿದ ನಾಲ್ವರು ಸದಸ್ಯರ ಇಡಿ ಅಧಿಕಾರಿಗಳ ತಂಡವು ಈ ನೋಟಿಸ್ ತಲುಪಿಸಿದೆ. ಆ ಸಮಯದಲ್ಲಿ ಡೈಮಂಡ್ ಹಾರ್ಬರ್ ಸಂಸದರು ಮನೆಯಲ್ಲಿ ಇಲ್ಲದ ಕಾರಣ, ಅವರ ಕಚೇರಿ ಸಿಬ್ಬಂದಿಗೆ ಸಮನ್ಸ್ ಹಸ್ತಾಂತರಿಸಲಾಗಿದೆ.
ಪ್ರಾಥಮಿಕ ಶಿಕ್ಷಕರ ನೇಮಕಾತಿಯಲ್ಲಿ ದೊಡ್ಡ ಮಟ್ಟದ ಅಕ್ರಮಗಳು, ಅರ್ಹತೆ ಇಲ್ಲದವರಿಗೆ ಉದ್ಯೋಗ ನೀಡಿರುವುದು ಮತ್ತು ಮೆರಿಟ್ ಪಟ್ಟಿಯ ಅವಕತವಕಗಳ ಕುರಿತು 2022 ರಿಂದ ಇಡಿ ತನಿಖೆ ನಡೆಸುತ್ತಿದೆ.

ಈ ಪ್ರಕರಣದಲ್ಲಿ ಈಗಾಗಲೇ ಮಾಜಿ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಸೇರಿದಂತೆ ಹಲವು ಪ್ರಮುಖ ಟಿಎಂಸಿ ನಾಯಕರನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಈ ಹಗರಣದಲ್ಲಿ ದಲ್ಲಾಳಿಗಳ ಮೂಲಕ ನಡೆದ ಕೆಲವು ಶಂಕಾಸ್ಪದ ಆರ್ಥಿಕ ವಹಿವಾಟುಗಳಿಗೆ ಸಂಬಂಧಿಸಿದಂತೆ ಅಭಿಷೇಕ್ ಬ್ಯಾನರ್ಜಿ ಅವರ ಲಿಂಕ್ ಇರುವ ಸಾಧ್ಯತೆಯನ್ನು ತನಿಖಾ ಸಂಸ್ಥೆಗಳು ಶಂಕಿಸಿವೆ. ಆದರೆ, ಈ ಎಲ್ಲ ಆರೋಪಗಳನ್ನು ಅಭಿಷೇಕ್ ಬ್ಯಾನರ್ಜಿ ತೀವ್ರವಾಗಿ ಖಂಡಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು