ಸರ್ಕಾರವನ್ನು ಪ್ರಶ್ನಿಸುವವರೇ ಪ್ರಧಾನಿ ಪಾಲಿಗೆ ‘ದಿಮಾಗಿ ನಕ್ಸಲರು’: ನಟ ಪ್ರಕಾಶ್ ರಾಜ್ ಆಕ್ರೋಶ

ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಳಸಿದ ‘ದಿಮಾಗಿ ನಕ್ಸಲರು’ (ಬುದ್ಧಿಜೀವಿ/ಮನಸ್ಥಿತಿಯ ನಕ್ಸಲರು) ಎಂಬ ಪದಪ್ರಯೋಗದ ವಿರುದ್ಧ ಬಹುಭಾಷಾ ನಟ ಪ್ರಕಾಶ್ ರಾಜ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಸರ್ಕಾರದ ವೈಫಲ್ಯಗಳನ್ನು ಪ್ರಶ್ನಿಸುವ ಹಾಗೂ ಆಡಳಿತದ ವಿರುದ್ಧ ಧ್ವನಿ ಎತ್ತುವ ವಿರೋಧಿಗಳನ್ನು ಗುರಿಯಾಗಿಸಿಕೊಂಡು ಪ್ರಧಾನಿ ಈ ಪದ ಬಳಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಈ ಕುರಿತು ವೀಡಿಯೊ ಸಂದೇಶ ಬಿಡುಗಡೆ ಮಾಡಿರುವ ಪ್ರಕಾಶ್ ರಾಜ್, “ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ದೇಶದಲ್ಲಿ ಎರಡು ರೀತಿಯ ಜನರನ್ನು ನಾವು ಕಂಡಿದ್ದೇವೆ.

ಒಬ್ಬರು ಸ್ವಯಂಘೋಷಿತ ‘ಸುಪ್ರೀಂ ಲೀಡರ್’ ಆದರೆ, ಇನ್ನೊಬ್ಬರು ಸರ್ಕಾರದ ದೃಷ್ಟಿಯಲ್ಲಿ ಜಿರಳೆಗಳು ಅಥವಾ ‘ದಿಮಾಗಿ ನಕ್ಸಲರು’. ಸರ್ಕಾರದ ತಪ್ಪುಗಳನ್ನು ಪ್ರಶ್ನಿಸುವ ಹಾಗೂ ಜನಪರ ಧ್ವನಿ ಎತ್ತುವ ಪ್ರತಿಯೊಬ್ಬರನ್ನೂ ಪ್ರಧಾನಿ ನಕ್ಸಲರೆಂದು ಪರಿಗಣಿಸುತ್ತಾರೆ ಎಂಬುದನ್ನು ಅವರ ಹೇಳಿಕೆಯೇ ಸ್ಪಷ್ಟಪಡಿಸಿದೆ” ಎಂದು ವ್ಯಂಗ್ಯವಾಡಿದ್ದಾರೆ.

ಇದೇ ವೇಳೆ, ಸರ್ಕಾರಿ ಶಾಲೆಗಳ ದುಸ್ಥಿತಿಯನ್ನು ಹೊರತಂದು ಅವುಗಳ ಸುಧಾರಣೆಗೆ ಶ್ರಮಿಸುತ್ತಿರುವ ‘ಕಾಕ್ರೋಚ್ ಜನತಾ ಪಾರ್ಟಿ’ ಕಾರ್ಯಕರ್ತರ ಸಾಮಾಜಿಕ ಕಳಕಳಿಯನ್ನು ಪ್ರಕಾಶ್ ರಾಜ್ ಪ್ರಶಂಸಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು