ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯನ್ನು “ಮೂಗಿಗೆ ತುಪ್ಪ ಸವರುವ ಕ್ಯಾಬಿನೆಟ್” ಎಂದು ಲೇವಡಿ ಮಾಡಿರುವ ಬಿಜೆಪಿಯ ಹೇಳಿಕೆಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ತಿರುಗೇಟು ನೀಡಿದ್ದಾರೆ. ಕರಾವಳಿಗರ ಕೈಗೆ ರಕ್ತ ಸವರುವುದನ್ನೇ ಕೆಲಸವನ್ನಾಗಿ ಮಾಡಿಕೊಂಡಿದ್ದ ಬಿಜೆಪಿಗೆ ಸರ್ಕಾರದ ಅಭಿವೃದ್ಧಿಪರ ನಿಲುವುಗಳನ್ನು ನೋಡಿ ತಳಮಳ ಶುರುವಾಗಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿಯು ಕರಾವಳಿಯನ್ನು ಕೋಮುವಾದದ ಪ್ರಯೋಗಶಾಲೆಯನ್ನಾಗಿ ಮಾಡಿಕೊಂಡು ಕೇವಲ ಮತಬ್ಯಾಂಕ್ ದೃಷ್ಟಿಯಿಂದ ಮಾತ್ರ ನೋಡುತ್ತಿತ್ತು. ಪ್ರಚೋದನಕಾರಿ ಭಾಷಣಗಳಿಂದ ಕೋಮು ಕಲಹ ಹುಟ್ಟುಹಾಕುವುದನ್ನು ಬಿಟ್ಟರೆ ಕರಾವಳಿಗೆ ಬಿಜೆಪಿಯ ಕೊಡುಗೆ ಶೂನ್ಯ. ಆದರೆ, ನಮ್ಮ ಸರ್ಕಾರವು ಕರಾವಳಿಯನ್ನು ಅಭಿವೃದ್ಧಿಯ ಪ್ರಯೋಗಶಾಲೆಯನ್ನಾಗಿ ಪರಿವರ್ತಿಸಿದ್ದು, ಜನರ ಆತ್ಮಗೌರವವನ್ನು ಗೌರವಿಸುವ ಕೆಲಸ ಮಾಡಿದೆ ಎಂದು ಅವರು ಹೇಳಿದ್ದಾರೆ.
ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಗೆ ₹32,611 ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳನ್ನು ಘೋಷಿಸಿರುವುದು ಐತಿಹಾಸಿಕ ಹೆಜ್ಜೆ. ತುಳು ಭಾಷೆಯನ್ನು ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಿಸಿರುವುದು, ಡೇಟಾ ಸೆಂಟರ್, ವಾಟರ್ ಮೆಟ್ರೋ, ಪ್ರವಾಸೋದ್ಯಮ, ಮರೀನ್ ಬಯೋಟೆಕ್ ಹಾಗೂ ಮಾಹಿತಿ ತಂತ್ರಜ್ಞಾನದಂತಹ ಪ್ರಗತಿಪರ ವಿಚಾರಗಳ ಚರ್ಚೆಯನ್ನು ಸರ್ಕಾರ ಮುನ್ನೆಲೆಗೆ ತಂದಿದೆ. ಕರಾವಳಿಯ ಜನತೆ ಕೋಮು ಭಾವನೆಗಳನ್ನು ಬದಿಗೊತ್ತಿ ಪ್ರಗತಿಯತ್ತ ಚಿಂತನೆ ಆರಂಭಿಸಿರುವುದರಿಂದಲೇ ಬಿಜೆಪಿಗೆ ಅಸ್ತಿತ್ವದ ಭಯ ಶುರುವಾಗಿದೆ ಎಂದು ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.
