ಬೆಂಗಳೂರಿನ ಲಗ್ಗೆರೆಯಲ್ಲಿ ಶಾಸಕ ಮುನಿರತ್ನ ನಾಯ್ಡು ಮೇಲೆ ಮೊಟ್ಟೆ ಎಸೆದ ಪ್ರಕರಣ ಈಗ ನಂದಿನಿ ಲೇಔಟ್ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ. ಆದರೆ ಈ ಬೆಳವಣಿಗೆ ಹಿಂದೆ ಯಾವುದೇ ಕಾಂಗ್ರೆಸ್ ಕಾರ್ಯಕರ್ತರ ಕೈವಾಡ ಇಲ್ಲ ಎಂಬ ಬಗ್ಗೆ ಈಗ ಮಾಹಿತಿ ಲಭ್ಯವಾಗಿದೆ. ಅಲ್ಲದೇ ಇದೊಂದು ಮುನಿರತ್ನ ಬಳಗವೇ ಸೃಷ್ಟಿಸಿದ ಯೋಜಿತ ಕೃತ್ಯ ಎಂಬ ಅನುಮಾನವೂ ವ್ಯಕ್ತವಾಗಿದೆ.
ಬುಧವಾರ ಆರ್. ಆರ್. ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಮೇಲೆ ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಜಪೇಯಿ ಹುಟ್ಟು ಹಬ್ಬದ ಅಂಗವಾಗಿ ಸ್ಥಳೀಯ ಬಿಜೆಪಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮೊಟ್ಟೆ ಎಸೆಯಲಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಮೇಲೆ ಹಲ್ಲೆ ಮಾಡಲು ಪ್ರಯತ್ನ ನಡೆಸಿದ್ದಾರೆ ಎಂದು ಗಂಭೀರ ಆರೋಪವನ್ನು ಶಾಸಕ ಮುನಿರತ್ನ ಮಾಡಿದ್ದರು. ಈ ಘಟನೆ ಸಂಬಂಧ ಮೂವರು ಸದ್ಯ ಪೊಲೀಸರ ವಶದಲ್ಲಿದ್ದಾರೆ.
ಘಟನೆ ಬಳಿಕ ಶಾಸಕ ಮುನಿರತ್ನ “ನನಗೆ ಕೊಲೆ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಗನ್ಮ್ಯಾನ್ ಕೇಳಿದ್ದೆ, ಆದರೂ ಕೊಟ್ಟಿಲ್ಲ. ಈ ಘಟನೆಗೆ ಡಿಸಿಎಂ ಡಿ. ಕೆ. ಶಿವಕುಮಾರ್, ಮಾಜಿ ಸಂಸದ ಡಿ. ಕೆ. ಸುರೇಶ್, ಹನುಮಂತರಾಯಪ್ಪ, ಕುಸುಮಾ ಹನುಮಂತರಾಯಪ್ಪ ಅವರೇ ಕಾರಣ” ಎಂದು ಆರೋಪಿಸಿದ್ದಾರೆ. ಗುರುವಾರ ಬೆಳಿಗ್ಗೆ ಮುನಿರತ್ನ ದೂರಿನ ಹಿನ್ನೆಲೆಯಲ್ಲಿ ಮುನಿರತ್ನ ದೂರು ಆಧರಿಸಿ ಎಫ್ಐಆರ್ ದಾಖಲು ಮಾಡಲಾಗಿದೆ. ಒಳಸಂಚು ರೂಪಿಸಿ ಹಲ್ಲೆ ಮತ್ತು ಕೊಲೆಗೆ ಯತ್ನ ಎಂಬಂತೆ ಮುನಿರತ್ನ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.
ಆದರೆ ಘಟನೆ ನಂತರದ ಬೆಳವಣಿಗೆಯಲ್ಲಿ ಘಟನೆ ಸಂಬಂಧ ನಡೆಸಿದ ಮೇಲ್ನೋಟದ ತನಿಖೆಯಲ್ಲೇ ಇದೊಂದು ಪೂರ್ವಯೋಜಿತ ಕೃತ್ಯ ಎಂಬ ಅನುಮಾನ ವ್ಯಕ್ತವಾಗಿದೆ. ಘಟನೆ ಸಂಬಂಧ ಪೊಲೀಸರಿಗೆ ಸಿಕ್ಕ ವಿಡಿಯೋ ತುಣುಕುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಬಿಜೆಪಿ ಶಾಸಕರೇ ಮಾಡಿಕೊಂಡ ಕೃತ್ಯವಾ..? ಅನ್ನೋ ಬಗ್ಗೆ ಅನುಮಾನಗಳು ಮೂಡುತ್ತಿದೆ.

ವಿಡಿಯೋ ತುಣುಕಿನಲ್ಲೂ ಮೊಟ್ಟೆ ಎಸೆಯುವ ಕೆಲವೇ ಕ್ಷಣಗಳ ಮೊದಲು “ಆಸಿಡ್ ಆಸಿಡ್ ದಾಳಿ..” ಎಂಬ ಮಾತು ಸ್ಪಷ್ಟವಾಗಿ ಕೇಳಿ ಬಂದಿದೆ. ಕೆಲವೇ ಸೆಕೆಂಡುಗಳಲ್ಲಿ ಮೊಟ್ಟೆ ಶಾಸಕ ಮುನಿರತ್ನ ಮೇಲೆ ಬಿದ್ದಿದೆ. ಮುನಿರತ್ನ ಮೇಲೆ ಮೊಟ್ಟೆ ಬೀಳುತ್ತಿದ್ದಂತೆಯೇ ಪೊಲೀಸ್ ಇನ್ಸ್ಪೆಕ್ಟರ್ ಸೇರಿದಂತೆ ಬಿಜೆಪಿ ಕಾರ್ಯಕರ್ತರ ಪ್ರತಿಕ್ರಿಯೆ ಸಹಜವಾಗಿ ಇದ್ದಂತೆ ಇಲ್ಲ ಎಂಬುದು ಸ್ಪಷ್ಟ.
ಇನ್ನು ಮೊಟ್ಟೆ ನೇರವಾಗಿ ಮುನಿರತ್ನ ತಲೆಯ ಮೇಲೆಯೇ ಬಿದ್ದಿರುವುದರಿಂದ ಕೇವಲ 10 ರಿಂದ 20 ಅಡಿ ದೂರದಿಂದಷ್ಟೇ ಮೊಟ್ಟೆ ಎಸೆಯಲಾಗಿದೆ ಎಂಬ ಅಂಶವನ್ನು ಗಮನಿಸಲಾಗಿದೆ. ಸ್ವತಃ ಮುನಿರತ್ನ ಅವರೇ ಹೇಳಿದಂತೆ “ಕರೆದರೂ ಒಬ್ಬೇ ಒಬ್ಬ ಪೊಲೀಸರ ಕಳಿಸುತ್ತಿರುವಾಗ ನಿನ್ನೆ ಇಡೀ ಪೊಲೀಸ್ ತುಕಡಿಯೇ ಕಾರ್ಯಕ್ರಮದ ಜಾಗದಲ್ಲಿ ಇತ್ತು. ಅಂದ್ರೆ ಇದು ಕಾಂಗ್ರೆಸ್ ಪೂರ್ವ ಯೋಜಿತ” ಎಂಬ ಮಾತು ಆಡಿದ್ದರು. ಆದರೆ, ಅಷ್ಟೊಂದು ಮಂದಿ ಪೊಲೀಸರು ಇರುವಾಗ ಆರೋಪಿಗಳನ್ನು ಪತ್ತೆ ಹಚ್ಚಲು ಗಂಟೆಗಟ್ಟಲೆ ಸಮಯ ತಗೆದುಕೊಳ್ಳಲಾಗಿದೆ. ಇದೂ ಸಹ ಪ್ರಕರಣದ ಬಗ್ಗೆ ಅನುಮಾನ ವ್ಯಕ್ತವಾಗುವಂತೆ ಮಾಡಿದೆ.
ಮೊಟ್ಟೆ ನೇರವಾಗಿ ತಲೆಯ ಮೇಲೇ ಬಿದ್ದಿದೆ. ಮುಖ, ಕಣ್ಣು, ಮೂಗಿನ ಮೇಲೆ ಮೊಟ್ಟೆ ಬಿದ್ದಿದ್ದರೆ ನೋವು ಸಹಜ. ತಲೆಯ ಮೇಲೆ ಅದು ದೊಡ್ಡ ಪ್ರಮಾಣದಲ್ಲಿ ಹಾನಿ ಆಗಿದೆ ಎಂದರೆ ನಂಬುವುದು ಅಸಾಧ್ಯದ ಮಾತು. ಹೀಗಿರುವಾಗ ಕೆಸಿ ಜನರಲ್ ಆಸ್ಪತ್ರೆಗೆ ದಾಖಲಾಗುವುದು.. ಸಿಟಿ ಸ್ಕ್ಯಾನ್ ಮಾಡಿಸುವುದು… ಅಡ್ಮಿಟ್ ಆಗುವುದು. ಇದೆಲ್ಲವನ್ನೂ ನೋಡಿದಾಗ ಇದೊಂದು ಮುನಿರತ್ನ ಅಥವಾ ಬಿಜೆಪಿ ಯೋಜಿತ ಕೃತ್ಯ ಎಂದೆನಿಸದೇ ಇರದು. ಒಟ್ಟಾರೆ ತನಿಖೆ ಮೂಲಕವಷ್ಟೇ ಇವೆಲ್ಲಾ ಹೊರಬರಬೇಕಿದೆ.