ಬೆಂಗಳೂರು: ಭಾನುವಾರ ಸಂಜೆ ಮಂಡ್ಯ ರಸ್ತೆಯಲ್ಲಿ ಚಲಿಸುತ್ತಿದ್ದ ನಿವೃತ್ತ ಯೋಧರೊಬ್ಬರು ರಸ್ತೆಗುಂಡಿಯ ಅಪಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದ್ದು, ಈ ಕುರಿತು ಬಿಜೆಪಿ ಸರ್ಕಾರದ ಮೇಲೆ ಭ್ರಷ್ಟ ಬಿಬಿಎಂಪಿಗೆ, 40% ಕಮೀಷನ್ ಸರ್ಕಾರಕ್ಕೆ ಧಿಕ್ಕಾರ ಎಂದು ಮಂಗಳವಾರದಂದು ಮಲ್ಲೇಶ್ವರಂ ಬಳಿ ಆಮ್ ಆದ್ಮಿ ಪಕ್ಷ ಪ್ರತಿಭಟನೆ ನಡೆಸಿದ್ದಾರೆ.
ಅವರ ಸಾವು ಸಹಜವಾದ ಸಾವಲ್ಲ, ವ್ಯವಸ್ಥೆ ಅವರನ್ನ ಕೊಲೆ ಮಾಡಿದೆ. ಇದರಿಂದ ಮುಖ್ಯಮಂತ್ರಿಗಳು ಕೂಡಲೇ ಸ್ಥಳಕ್ಕೆ ಆಗಮಿಸಬೇಕು, ತಕ್ಷಣಕ್ಕೆ ಪರಿಹಾರ ವಿತರಿಸಬೇಕು ಹಾಗೂ ತಪ್ಪಿತಸ್ಥ ಅಧಿಕಾರಿಗಳನ್ನು ಕೂಡಲೇ ಬಂಧಿಸಿ ಜೈಲಿಗಟ್ಟಬೇಕೆಂದು ಆಮ್ ಆದ್ಮಿ ಪಕ್ಷದ ಕಾರ್ಯಕರ್ತ ಆಗ್ರಹಿಸಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿ, ʼಗುತ್ತಿಗೆದಾರರು, ಶಾಸಕರು, ಅಧಿಕಾರಿಗಳು ಎಲ್ಲಾ ಅವರೇ ಆಗಿರೋದರಿಂದ ಕಳಪೆ ಕಾಮಗಾರಿ ಎತ್ತಿ ಹಿಡಿಯುವಂತಾಗಿದೆ. ಇಡೀ ಮಲ್ಲೇಶ್ವರಂನಲ್ಲಿ ಕಳೆದ 15 ವರ್ಷಗಳಲ್ಲಿ ಯಾರೂ ಮಾಡದೇ ಇರುವಂತಹ ಭ್ರಷ್ಟಾಚಾರ ಈಗ ನಡೆಯುತ್ತಿದೆ. ಈ ಹಿಂದೆ ಇದ್ದಂತಹ ಯಾರು ಇಷ್ಟರ ಭ್ರಷ್ಟಚಾರ ಮಾಡಿರಲಿಲ್ಲ. ಬಿಬಿಎಂಪಿ ಶಾಸಕರಿರುವ ಎಲ್ಲಾ ಕಡೆಯೂ ಭ್ರಷ್ಟಾಚಾರ ತಾಂಡವ ಆಡುತ್ತಾ ಇದೆ. ಜನಗಳ ರಕ್ಷಣೆಗೆ ಯಾರೂ ಕೆಲಸ ಮಾಡುತ್ತಿಲ್ಲ. ಜನರ ಹೆಣದ ಮೇಲೆ ನಡೆದಾಡುವಂತಹ ಕೆಲಸ ಬಿಜೆಪಿ ಸರ್ಕಾರ ಮಾಡುತ್ತಿದೆʼ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತ್ತೊಬ್ಬರು,ʼ ರಸ್ತೆ ಗುಂಡಿಯಿಂದ ಒಂದು ಸಾವಾಗಿದೆ. ಆ ಸಾವಿಗೆ ನ್ಯಾಯ ದೊರಕಿಸಿಕೊಡಬೇಕು. ಇಡೀ ಬೆಂಗಳೂರಿನಲ್ಲಿ ರಸ್ತೆಗುಂಡಿಗಳಿಂದ ಆಗುತ್ತಿರುವ ಸಮಸ್ಯೆಗಳನ್ನು ಸರಿಮಾಡಿ ಎಂದರೆ ಯಾವೊಬ್ಬ ಶಾಸಕರು, ಬಿಬಿಎಂಪಿ ಅಧಿಕಾರಿಗಳೂ ಇದರ ಬಗ್ಗೆ ಹೆಚ್ಚು ಗಮನಹರಿಸುತ್ತಿಲ್ಲ. ಈ ಅನ್ಯಾಯಕ್ಕೆ ಪೊಲೀಸರೂ ಸಹ ಸಹಕರಿಸುತ್ತಿಲ್ಲ. ಮತ್ತೆ ಎಲ್ಲಿ ನ್ಯಾಯ ಸಿಗುತ್ತೆ. ಒಂದು ಜೀವಕ್ಕೆ ಬೆಲೆ ಎಲ್ಲಿದೆ. ಅಶ್ವತ್ ನಾರಾಯಣ್ ಅವರು ಬರಬೇಕು. ಇದಕ್ಕೆ ಪರಿಹಾರ ದೊರಕಿಸಿಕೊಡಬೇಕು. ಇಷ್ಟಾದರೂ ಬಿಬಿಎಂಪಿಯವರು ಒಬ್ಬರೂ ಇಲ್ಲಿಗೆ ಬರುವುದಕ್ಕೆ ತಯಾರಿಲ್ಲʼ ಎಂದು ಕಿಡಿಕಾರಿದ್ದಾರೆ.