ಜಾತ್ರೆಯ ವ್ಯಾಪಾರಕ್ಕೆ ಬಂದಿದ್ದ ಬಿಹಾರ ಮೂಲದ ಯುವಕನೊಬ್ಬ ತುಂಗಾನದಿಗೆ ಬಿದ್ದ ಘಟನೆ ತೀರ್ಥಹಳ್ಳಿಯಲ್ಲಿ ನಡೆದಿದೆ. ನದಿಗೆ ಈಜಲು ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದ್ದು, ಬುಧವಾರ ಮಧ್ಯಾಹ್ನದ ವೇಳೆ ಈ ಯುವಕ ನಾಪತ್ತೆಯಾಗಿದ್ದಾನೆ.
ಜನವರಿ 11, 12 ಹಾಗೂ 13 ರ ಮೂರು ದಿನಗಳ ಕಾಲ ಜರುಗುವ ತೀರ್ಥಹಳ್ಳಿಯಲ್ಲಿ ಎಳ್ಳಮವಾಸ್ಯೆ ಜಾತ್ರೆಗೆ ನೂರಾರು ಅಂಗಡಿಗಳು ನಾನಾ ಮೂಲೆಗಳಿಂದ ಬಂದಿವೆ. ಈ ಹಿನ್ನೆಲೆಯಲ್ಲಿ ತೀರ್ಥಹಳ್ಳಿ ಪಟ್ಟಣಕ್ಕೆ ಎರಡು ದಿನಗಳ ಹಿಂದೆ ಬಂದಿದ್ದ ಬಿಹಾರ ಮೂಲದ ಯುವಕ ನದಿಯಲ್ಲಿ ಈಜುತ್ತಿದ್ದಾಗ ಈ ದುರ್ಘಟನೆ ನಡೆದಿದೆ.
ಯುವಕ ನಾಪತ್ತೆಯಾಗಿರುವ ಜಾಗ ಕೂಡಾ ತೀರಾ ಅಪಾಯಕಾರಿ ಜಾಗವಾಗಿರುವ ಹಿನ್ನೆಲೆಯಲ್ಲಿ ಇಷ್ಟು ಹೊತ್ತಿಗಾಗಲೇ ಆತನ ಜೀವ ಹೋಗಿರಬಹುದು ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ಮುಳುಗು ತಜ್ಞರು ಹಾಗೂ ಅಗ್ನಿಶಾಮಕ ದಳ ಸೇರಿ ದೇಹದ ಶೋಧ ಕಾರ್ಯ ನಡೆಯುತ್ತಿದೆ.