ಹೊಸದಿಲ್ಲಿ, ಅಕ್ಟೋಬರ್ 18: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸುಮಾರು ಎರಡು ವರ್ಷಗಳ ಬಳಿಕ ಆಪ್ ನಾಯಕ ಹಾಗೂ ಮಾಜಿ ಸಚಿವ ಸತ್ಯೇಂದರ್ ಜೈನ್ ಅವರಿಗೆ ದಿಲ್ಲಿ ನ್ಯಾಯಾಲಯ ಶುಕ್ರವಾರ ಜಾಮೀನು ಮಂಜೂರು ಮಾಡಿದೆ.
ವಿಚಾರಣೆ ವಿಳಂಬ ಹಾಗೂ ಸುದೀರ್ಘ ಕಾಲದಿಂದ ಬಂಧನದಲ್ಲಿರುವ ಕಾರಣ ಜಾಮೀನು ಮಂಜೂರು ಮಾಡಲಾಗುತ್ತಿದೆ ಎಂದು ಹೇಳಲಾಗಿದೆ. ಅವರಿಗೆ ಸಂಬಂಧಿಸಿದ ನಾಲ್ಕು ಕಂಪನಿಗಳ ಮೂಲಕ ಹಣ ವರ್ಗಾವಣೆ ಮಾಡಿದ ಆರೋಪದ ಮೇಲೆ ಜಾರಿ ನಿರ್ದೇಶನಾಲಯವು ಮೇ 30, 2022 ರಂದು ಅವರನ್ನು ಬಂಧಿಸಿತು.
ಈ ಪ್ರಕರಣದ ತನಿಖೆ ಸುದೀರ್ಘವಾಗಿ ನಡೆಯುತ್ತಿದ್ದು, ಆರೋಪಿ 18 ತಿಂಗಳಿನಿಂದ ಬಂಧನದಲ್ಲಿರುವುದರಿಂದ ಜಾಮೀನು ನೀಡಲಾಗುತ್ತಿದೆ ಎಂದು ನ್ಯಾಯಾಧೀಶ ವಿಶಾಲ್ ಗೋಗ್ನೆ ತಿಳಿಸಿದ್ದಾರೆ.