ಬೆಂಗಳೂರು: ಯಶವಂತಪುರ ವಿಧಾನಸಭಾ ಕ್ಷೇತ್ರದ ಕೊಡಿಗೆಹಳ್ಳಿ ಗ್ರಾಮಪಂಚಾಯಿತಿಯ ಮಂಗನಹಳ್ಳಿ ಕ್ಷೇತ್ರದ ಉಪಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿಗೆ ಉತ್ತಮ ಜನಬೆಂಬಲ ವ್ಯಕ್ತವಾಗುತ್ತಿದ್ದು, ಎಎಪಿ ಬೆಂಬಲಿತ ಅಭ್ಯರ್ಥಿ ಕೆ.ಜಯಲಕ್ಷ್ಮಿರವರು ಗೆಲುವು ಸಾಧಿಸುವುದು ನಿಶ್ಚಿತ ಎಂದು ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಮೋಹನ್ ದಾಸರಿ ಅವರು, ಎಎಪಿ ಬೆಂಬಲಿತ ಅಭ್ಯರ್ಥಿ ಕೆ.ಜಯಲಕ್ಷ್ಮಿರವರು ನಾಮಪತ್ರ ಹಿಂಪಡೆಯಬೇಕೆಂದು ಸ್ಥಳೀಯ ಶಾಸಕ ಹಾಗೂ ಸಚಿವ ಎಸ್ಟಿ.ಸೋಮಶೇಖರ್ ತೀವ್ರ ಒತ್ತಡ ಹೇರಿದ್ದರು. ಆದರೂ ಅವರು ಚುನಾವಣೆ ಕಣದಿಂದ ಹಿಂದೆ ಸರಿಯದೇ ಬಿಜೆಪಿಗೆ ಉತ್ತಮ ಪೈಪೋಟಿ ನೀಡುತ್ತಿದ್ದಾರೆ. ಮಂಗನಹಳ್ಳಿ ಕ್ಷೇತ್ರದಲ್ಲಿ ಆಮ್ ಆದ್ಮಿ ಪಾರ್ಟಿಗೆ ಬಿಜೆಪಿಗೆ ನಡುಕ ಹುಟ್ಟಿಸುವಂತಹ ಜನಬೆಂಬಲ ವ್ಯಕ್ತವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಪ್ರಚಾರ ಇನ್ನಷ್ಟು ಚುರುಕುಗೊಳ್ಳಲಿದೆ ಎಂದು ಹೇಳಿದರು.
ಆಟೋ ರಿಕ್ಷಾ ಚಿಹ್ನೆಯೊಂದಿಗೆ ಸ್ಪರ್ಧಿಸಿರುವ ಕೆ.ಜಯಲಕ್ಷ್ಮಿಯವರು ಅಪಾರ ಜನಪರ ಕಾಳಜಿ ಹೊಂದಿರುವ ನಾಯಕಿಯಾಗಿದ್ದಾರೆ. ಇಂತಹ ವ್ಯಕ್ತಿಗಳು ಗೆಲುವು ಸಾಧಿಸುವುದರಿಂದ ಜನರ ಸಮಸ್ಯೆಗಳು ಪರಿಹಾರ ಕಾಣಲಿವೆ. ಶಾಸಕ ಎಸ್.ಟಿ.ಸೋಮಶೇಖರ್ ಹಾಗೂ ರಾಜ್ಯ ಬಿಜೆಪಿ ಸರ್ಕಾರ ದುರಾಡಳಿತದಿಂದ ಕ್ಷೇತ್ರದ ಜನರು ಬೇಸತ್ತಿದ್ದು, ಈ ಉಪಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿಯನ್ನು ಗೆಲ್ಲಿಸಲು ನಿರ್ಧರಿಸಿದ್ದಾರೆ ಎಂದು ಮೋಹನ್ ದಾಸರಿ ಹೇಳಿದರು.