ಜಂತರ್ ಮಂತರ್ ಪ್ರತಿಭಟನೆಯ ನಂತರ ಅಭಿಜಿತ್ ದೀಪ್ಕೆ ಮುಂದಿನ ನಡೆ ಏನು? ಮಾಹಿತಿ ಹಂಚಿಕೊಂಡ ತಾಯಿ

ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿದ್ದ ಸುದೀರ್ಘ ಪ್ರತಿಭಟನೆ ಮುಕ್ತಾಯಗೊಂಡಿದ್ದು, ಆಂದೋಲನದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಹಾಗೂ ಬೆಂಬಲಿಗರು ತಮ್ಮ ತಮ್ಮ ಮನೆಗಳಿಗೆ ಹಿಂತಿರುಗುತ್ತಿದ್ದಾರೆ. ಈ ನಡುವೆ, ಯುವಜನರ ಈ ಬೃಹತ್ ಚಳವಳಿಯ ಮುಂಚೂಣಿಯಲ್ಲಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಸಂಸ್ಥಾಪಕ ಅಭಿಜಿತ್ ದೀಪ್ಕೆ ಕೂಡ ಮನೆಗೆ ಮರಳಲು ಸಿದ್ಧತೆ ನಡೆಸಿದ್ದಾರೆ. ಇದೇ ವೇಳೆ ಅವರ ತಾಯಿ, ಅಭಿಜಿತ್ ಅವರ ಮುಂದಿನ ಯೋಜನೆಯ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಪ್ರಸ್ತುತ ಅಭಿಜಿತ್ ದೀಪ್ಕೆ ಅವರ ಪೋಷಕರಿಗೆ ಸಾಲು ಸಾಲು ಮದುವೆ ಪ್ರಸ್ತಾಪಗಳು ಬರುತ್ತಿವೆ. ಡಿಸೆಂಬರ್ ಅಥವಾ ಜನವರಿ ವೇಳೆಗೆ ಅಭಿಜಿತ್ ಮದುವೆ ನಡೆಯಬಹುದು ಎಂದು ಅವರ ತಾಯಿ ನಿರೀಕ್ಷಿಸುತ್ತಿದ್ದಾರಾದರೂ, ಮದುವೆಯ ದಿನಾಂಕ ಮತ್ತು ತಿಂಗಳ ಆಖೈರು ನಿರ್ಧಾರವನ್ನು ಮಗನ ವಿವೇಚನೆಗೇ ಬಿಟ್ಟಿದ್ದಾರೆ.

ಇನ್ನೂ ಬರುತ್ತಿವೆ ಮದುವೆ ಪ್ರಸ್ತಾಪಗಳು

ಅಭಿಜಿತ್ ಅವರ ತಾಯಿ ಅನಿತಾ ದೀಪ್ಕೆ ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ಜೊತೆ ಮಾತನಾಡಿ, “ನೀಟ್ ಪೇಪರ್ ಲೀಕ್ ವಿರುದ್ಧ ಸಿಜೆಪಿ ಪ್ರತಿಭಟನೆ ಆರಂಭಿಸುವ ಮೊದಲೇ ಅಭಿಜಿತ್‌ಗೆ ಮದುವೆ ಪ್ರಸ್ತಾಪಗಳು ಬರಲು ಪ್ರಾರಂಭವಾಗಿದ್ದವು. ಈಗಲೂ ಆ ಪ್ರಸ್ತಾಪಗಳು ಬರುತ್ತಲೇ ಇವೆ” ಎಂದು ತಿಳಿಸಿದ್ದಾರೆ.

ಅಭಿಜಿತ್ ಅಮೆರಿಕದ ಬೋಸ್ಟನ್ ನಗರದಲ್ಲಿದ್ದಾಗ ಫೋನ್‌ನಲ್ಲಿ ಈ ಕುರಿತು ಮಾತನಾಡಿದ್ದನ್ನು ನೆನಪಿಸಿಕೊಂಡ ಅನಿತಾ, “ಅವನು ಈ ವಿಷಯದ ಬಗ್ಗೆ ಹೆಚ್ಚೇನೂ ಮಾತನಾಡಲಿಲ್ಲ, ಕೇವಲ ಮುಗುಳ್ನಕ್ಕನಷ್ಟೇ. ಪೋಷಕರಾಗಿ ನಾವು ಅವನಿಗೆ ಮದುವೆಯಾಗಲು ಒತ್ತಾಯಿಸುತ್ತಿದ್ದೇವೆ. ಇನ್ನು ಕೆಲವೇ ದಿನಗಳಲ್ಲಿ ಅವನು ಮನೆಗೆ ಮರಳಲಿದ್ದು, ನಂತರ ಮತ್ತೊಮ್ಮೆ ಈ ವಿಷಯ ಎತ್ತಿ ನಿರ್ಧಾರವನ್ನು ಅವನಿಗೆ ಬಿಡುತ್ತೇವೆ” ಎಂದಿದ್ದಾರೆ.

ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯ ನಂತರ ಪ್ರತಿಭಟನೆ ಮುಕ್ತಾಯಗೊಂಡ ಬೆನ್ನಲ್ಲೇ ಅಭಿಜಿತ್ ಮನೆಗೆ ಮರಳಬೇಕಿತ್ತು. ಆದರೆ ಟೈಫಾಯಿಡ್ ಜ್ವರದಿಂದ ಬಳಲುತ್ತಿದ್ದ ಕಾರಣ ಪ್ರಯಾಣವನ್ನು ಮುಂದೂಡಿದ್ದರು. “ಅವನು ಮನೆಗೆ ಮರಳಲು ಇನ್ನು ನಾಲ್ಕೈದು ದಿನಗಳು ಬೇಕಾಗಬಹುದು” ಎಂದು ಅವರ ತಾಯಿ ತಿಳಿಸಿದ್ದಾರೆ.

ಬೆದರಿಕೆಗಳ ನಂತರ ಎರಡು ವಾರ ಮನೆ ತೊರೆದಿದ್ದ ಕುಟುಂಬ

ಅಭಿಜಿತ್ ದೀಪ್ಕೆ ‘ಕಾಕ್ರೋಚ್ ಜನತಾ ಪಾರ್ಟಿ’ ಸ್ಥಾಪಿಸುವುದಾಗಿ ಘೋಷಿಸಿದ ತಕ್ಷಣ, ಅವರ ಕುಟುಂಬವು ಸುಮಾರು ಎರಡು ವಾರಗಳ ಕಾಲ ತಲೆಮರೆಸಿಕೊಳ್ಳಬೇಕಾಯಿತು ಎಂದು ಕುಟುಂಬದವರು ಬಹಿರಂಗಪಡಿಸಿದ್ದಾರೆ.

ಅನಿತಾ ದೀಪ್ಕೆ ಮಾತನಾಡಿ, “ಪಾರ್ಟಿ ಪ್ರಾರಂಭಿಸಿದ ನಂತರ, ಬೋಸ್ಟನ್‌ನಲ್ಲಿದ್ದ ಅಭಿಜಿತ್‌ಗೆ ಬೆದರಿಕೆ ಕರೆಗಳು ಬರಲು ಪ್ರಾರಂಭವಾದವು. ಅವನು ಬೋಸ್ಟನ್‌ನಲ್ಲಿದ್ದ ಕಾರಣ, ಭಾರತದಲ್ಲಿರುವ ಅವನ ಪೋಷಕರನ್ನು ಗುರಿಯಾಗಿಸುವುದಾಗಿ ಕರೆ ಮಾಡಿದವರು ಬೆದರಿಕೆ ಹಾಕಿದ್ದರು. ತಕ್ಷಣವೇ ನಮಗೆ ಫೋನ್ ಮಾಡಿದ ಅಭಿಜಿತ್, ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ತಿಳಿಸಿದನು. ಅದರಂತೆ ನಾವು ಕೊಂಕಣ ಭಾಗಕ್ಕೆ ತೆರಳಿ, ಎರಡು ವಾರಗಳ ಕಾಲ ಸಂಬಂಧಿಕರ ಮನೆಯಲ್ಲಿದ್ದೆವು. ಜೂನ್ ಮೊದಲ ವಾರದಲ್ಲಿ ಅವನು ಬೋಸ್ಟನ್‌ನಿಂದ ಹಿಂತಿರುಗಿದಾಗ ನಾವು ಅವನನ್ನು ಕರೆತರಲು ಹೋದೆವು” ಎಂದಿದ್ದಾರೆ. ಪ್ರಸ್ತುತ ಅಭಿಜಿತ್ ಕುಟುಂಬವು ಛತ್ರಪತಿ ಸಂಭಾಜಿನಗರದ ವಾಲುಜ್ ಪ್ರದೇಶದಲ್ಲಿ ವಾಸಿಸುತ್ತಿದೆ.

ಮನೆಯಲ್ಲಿ ಅಭಿಜಿತ್ ತಮ್ಮ ರಾಜಕೀಯ ಯೋಜನೆಗಳ ಬಗ್ಗೆ ಯಾರಿಗೂ ಹೇಳಿರಲಿಲ್ಲ. “ಸಿಜೆಪಿ ಪ್ರಾರಂಭಿಸುವ ಯೋಜನೆಯ ಬಗ್ಗೆ ಅವನು ನಮಗೆ ಎಂದಿಗೂ ಹೇಳಿರಲಿಲ್ಲ. ಮಾಧ್ಯಮಗಳಲ್ಲಿ ಬಂದ ಅವರ ಸಂದರ್ಶನಗಳನ್ನು ನೋಡಿಯೇ ನಮಗೆಲ್ಲ ವಿಷಯ ತಿಳಿದದ್ದು” ಎಂದು ಅನಿತಾ ಹೇಳಿದ್ದಾರೆ.

ಮೌನಿಯಾಗಿದ್ದ ಹುಡುಗ ಈಗ ಪ್ರಖರ ವಾಗ್ಮಿ

ಅಭಿಜಿತ್ ಬಾಲ್ಯವನ್ನು ನೆನಪಿಸಿಕೊಂಡ ಅನಿತಾ, ಟಿವಿಯಲ್ಲಿ ಮಗನ ಸಾರ್ವಜನಿಕ ಭಾಷಣ ಹಾಗೂ ವಾಗ್ದಾಳಿಗಳನ್ನು ನೋಡಿ ಆಶ್ಚರ್ಯಪಟ್ಟಿದ್ದಾಗಿ ಹೇಳಿದರು. “ಮನೆಯಲ್ಲಿದ್ದಾಗ ಅವನು ತುಂಬಾ ಕಡಿಮೆ ಮಾತನಾಡುತ್ತಿದ್ದ. ಊಟ ಅಥವಾ ಅಗತ್ಯ ವಸ್ತುಗಳನ್ನು ಕೇಳುವುದನ್ನು ಬಿಟ್ಟರೆ, ಸುದೀರ್ಘ ಸಂಭಾಷಣೆ ನಡೆಸುತ್ತಿರಲಿಲ್ಲ. ಶಾಲೆಯಲ್ಲಿದ್ದಾಗಲೂ ಅವನು ಯಾವುದೇ ಭಾಷಣ ಅಥವಾ ಚರ್ಚಾ ಸ್ಪರ್ಧೆಗಳಲ್ಲಿ ಭಾಗವಹಿಸಿರಲಿಲ್ಲ.”

ಕೋವಿಡ್ ಸಮಯದಲ್ಲಿ ನೆರವು

“ಅವನು ಯಾವಾಗಲೂ ಶಾಂತ ಸ್ವಭಾವದ ಹುಡುಗ. ಕೋಪಗೊಳ್ಳುವುದಾಗಲಿ ಅಥವಾ ಜೋರು ಧ್ವನಿಯಲ್ಲಿ ಮಾತನಾಡುವುದಾಗಲಿ ನಾವು ಅಪರೂಪಕ್ಕೆ ನೋಡಿದ್ದೇವೆ. ರಾಷ್ಟ್ರೀಯ ಟಿವಿಯಲ್ಲಿ ಮೂರು ಭಾಷೆಗಳನ್ನು ಸರಾಗವಾಗಿ ಮಾತನಾಡುವುದನ್ನು ನೋಡಿ ನಮಗೆ ಆಶ್ಚರ್ಯವಾಯಿತು” ಎಂದು ತಾಯಿ ಹೆಮ್ಮೆಯಿಂದ ಹೇಳಿದರು.

ಅಭಿಜಿತ್ ಅವರ ದಯಾಪರ ಗುಣವನ್ನು ಸ್ಮರಿಸಿದ ಅವರು, ಕೋವಿಡ್-19 ಸಾಂಕ್ರಾಮಿಕ ರೋಗದ ಸಮಯದಲ್ಲಿ ನಿರಾಶ್ರಿತರಾಗಿದ್ದ ಸುಮಾರು 15 ಬುಡಕಟ್ಟು ಕುಟುಂಬಗಳಿಗೆ ನೆರವಾದದ್ದನ್ನು ನೆನಪಿಸಿಕೊಂಡರು. “ನಮ್ಮ ಪಾರ್ಕಿಂಗ್ ಜಾಗದಲ್ಲಿ ಅವರಿಗೆ ವಾಸಿಸಲು ಜಾಗ ನೀಡಿ, ಮನೆಯಲ್ಲಿದ್ದ ಪಡಿತರ ಬಳಸಿ ಅವರಿಗೆ ಆಹಾರದ ವ್ಯವಸ್ಥೆ ಮಾಡಿದ್ದನು. ಅವರು ಹಲವು ದಿನಗಳ ಕಾಲ ನಮ್ಮ ಪಾರ್ಕಿಂಗ್ ಏರಿಯಾದಲ್ಲೇ ತಂಗಿದ್ದರು. ಮಗ ನಮ್ಮ ಉಳಿತಾಯವನ್ನೆಲ್ಲ ಮುಗಿಸುತ್ತಾನೆ ಎಂದು ಅವನ ತಂದೆಗೆ ಆತಂಕವಿತ್ತು, ಆದರೆ ಆ ಕುಟುಂಬಗಳ ಸೇವೆ ಮಾಡುವುದು ಮಾನವೀಯ ಕರ್ತವ್ಯ ಎಂದು ಅಭಿಜಿತ್ ವಾದಿಸುತ್ತಿದ್ದನು. ಇತರರ ಬಗ್ಗೆ ಕಾಳಜಿ ವಹಿಸುವ ಅವನ ಈ ಗುಣವೇ ದೆಹಲಿಯಲ್ಲಿ ಎಲ್ಲರನ್ನೂ ಒಗ್ಗೂಡಿಸಲು ನೆರವಾಯಿತು.”

ಶಿಕ್ಷಣದಲ್ಲೂ ಮುಂಚೂಣಿ

ಅಭಿಜಿತ್ ಶಿಕ್ಷಣದಲ್ಲೂ ಅತ್ಯಂತ ಬುದ್ಧಿವಂತನಾಗಿದ್ದನು; ಸೆಂಟ್ ಅಲ್ಫೋನ್ಸಾ ಶಾಲೆಯಲ್ಲಿ 10 ನೇ ತರಗತಿಯಲ್ಲಿ ಶೇ. 96 ರಷ್ಟು ಅಂಕಗಳನ್ನು ಗಳಿಸಿದ್ದನು ಹಾಗೂ ಛತ್ರಪತಿ ಸಂಭಾಜಿನಗರದ ಎಸ್‌ಬಿ ಕಾಲೇಜಿನಲ್ಲಿ ಶಿಕ್ಷಣ ಮುಂದುವರಿಸಿದ್ದನು. ಆದರೆ ತಂದೆ ಸಿವಿಲ್ ಇಂಜಿನಿಯರ್ ಆಗಿದ್ದರಿಂದ, ಮಗನನ್ನೂ ಇಂಜಿನಿಯರಿಂಗ್ ಮಾಡಲು ಒತ್ತಾಯಿಸಿದ್ದಕ್ಕಾಗಿ ಕುಟುಂಬದವರು ಈಗ ವಿಷಾದಿಸುತ್ತಿದ್ದಾರೆ.

12 ನೇ ತರಗತಿ ವಿಜ್ಞಾನ ವಿಭಾಗದಲ್ಲಿ ಶೇ. 65 ರಷ್ಟು ಅಂಕ ಗಳಿಸಿದ ನಂತರ, ಪೋಷಕರ ಒತ್ತಾಯದ ಮೇರೆಗೆ ಪುಣೆಯ ಸಿಂಹಗಡ್ ಸಂಸ್ಥೆಗೆ ಇಂಜಿನಿಯರಿಂಗ್‌ಗೆ ಸೇರಿದನು. ಆದರೆ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲಾಗದೆ, ಅಂತಿಮ ಪರೀಕ್ಷೆಗೂ ಮೊದಲೇ ಶಿಕ್ಷಣವನ್ನು ಮೊಟಕುಗೊಳಿಸಿದನು. “ಅವನನ್ನು ಇಂಜಿನಿಯರಿಂಗ್‌ಗೆ ಒತ್ತಾಯಿಸಿದ್ದು ತಪ್ಪಾದ ನಿರ್ಧಾರ ಎಂದು ನಮಗೆ ಅರಿವಾಯಿತು, ನಂತರ ಆ ಕ್ಷೇತ್ರದಿಂದ ಹೊರಬರಲು ನಾವು ಅನುಮತಿಸಿದೆವು” ಎಂದು ಅನಿತಾ ಹೇಳಿದರು.

ಕೆನ್ನೆಗೆ ಹೊಡೆದಾಗ ಕಣ್ಣೀರಿಟ್ಟ ತಾಯಿ

ಇತ್ತೀಚಿನ ಪ್ರತಿಭಟನೆಗಳ ಸಮಯದಲ್ಲಿ ಅಭಿಜಿತ್ ಮೇಲೆ ನಡೆದ ದಾಳಿಗಳ ಕುರಿತು ಕುಟುಂಬದವರು ಆತಂಕ ವ್ಯಕ್ತಪಡಿಸಿದ್ದಾರೆ. “ಅವನಿಗೆ ಕೆನ್ನೆಗೆ ಹೊಡೆದು, ಮಸಿ ಬಳಿಯಲಾಯಿತು ಎಂಬ ಸುದ್ದಿ ಕೇಳಿದಾಗ ನಾನು ಕಣ್ಣೀರಿಟ್ಟೆ. ಅವನಿಗೆ ಗಂಭೀರ ಗಾಯಗಳಾಗಿರಬಹುದು ಎಂದು ಭಯವಾಯಿತು. ಆದರೆ ಅವನ ಬಳಿ ಮಾತನಾಡಿದಾಗ, ‘ನಾನೀಗ ದೇಶದ ಮಗ, ಚಿಂತಿಸಬೇಡಿ’ ಎಂದು ಧೈರ್ಯ ತುಂಬಿದನು” ಎಂದು ತಾಯಿ ಅನಿತಾ ನೆನಪಿಸಿಕೊಂಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು