Saturday, June 21, 2025

ಸತ್ಯ | ನ್ಯಾಯ |ಧರ್ಮ

ವಿಜಯೇಂದ್ರ ಪದಗ್ರಹಣ : ಬಹಿರಂಗವಾಗಿ ಅಸಮಾಧಾನ ಹೊಂದಿದವರೆಲ್ಲ ಗೈರು

ಅಂತೂ ರಾಜ್ಯ ಬಿಜೆಪಿಗೆ ಹೊಸ ರಾಜ್ಯಾಧ್ಯಕ್ಷರ ನೇಮಕವಾಗಿದೆ. ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರ ಸಾರಥ್ಯದಲ್ಲಿ ಬಿಜೆಪಿ ಮತ್ತೆ ಹೊಸ ಹುರುಪು ಪಡೆದುಕೊಳ್ಳಲು ಮುಂದಾಗಿದೆ. ಈ ನಡುವೆ ರಾಜ್ಯಾಧ್ಯಕ್ಷ ಹುದ್ದೆಗೆ ಪ್ರಬಲವಾಗಿ ಪೈಪೋಟಿ ಕೊಟ್ಟಂತಹ ಹಲವು ಮಂದಿ ನಾಯಕರು ವಿಜಯೇಂದ್ರ ಪದಗ್ರಹಣ ಕಾರ್ಯದಲ್ಲಿ ಗೈರಾಗಿ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

ಇಂದು ಬೆಳಗ್ಗೆ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಬಿಜೆಪಿ ಪ್ರಧಾನ ಕಚೇರಿ ಜಗನ್ನಾಥದಲ್ಲಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಿ.ವೈ ವಿಜಯೇಂದ್ರ ಅವರಿಗೆ ಮುಂದೆ ಪಕ್ಷ ಕಟ್ಟುವ ಜೊತೆಗೆ ಅಸಮಾಧಾನಿತರನ್ನು ಒಟ್ಟಾಗಿ ಕರೆದುಕೊಂಡು ಹೋಗುವುದೂ ಸಹ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ವಿಜಯೇಂದ್ರ ಆಯ್ಕೆ ಹಿನ್ನೆಲೆಯಲ್ಲಿ ಅನೇಕ ಮಂದಿ ಹಲವು ವರ್ಷಗಳಿಂದ ಪಕ್ಷ ಕಟ್ಟಲು, ಕರ್ನಾಟಕದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿದವರು ಕಾರ್ಯಕ್ರಮಕ್ಕೆ ಗೈರಾಗಿ ವಿಜಯೇಂದ್ರ ಅವರಿಗೆ ಬಹಿರಂಗ ಸಂದೇಶ ರವಾನಿಸಿದ್ದಾರೆ.

ಪ್ರಮುಖವಾಗಿ ಸಿ.ಟಿ.ರವಿ, ವಿ.ಸೋಮಣ್ಣ, ಅರವಿಂದ್ ಬೆಲ್ಲದ, ಅರವಿಂದ್ ಲಿಂಬಾವಳಿ, ಬಸನಗೌಡ ಪಾಟೀಲ್ ಯತ್ನಾಳ್, ಡಾ.ಕೆ.ಸುಧಾಕರ್​, ಎಸ್.ಟಿ ಸೋಮಶೇಖರ್ ಅವರ ಕಡೆಯಿಂದ ವಿಜಯೇಂದ್ರ ಆಯ್ಕೆಗೆ ಬಂಡಾಯದ ಬಾವುಟ ಹಾರಿಸಿದ್ದಾರೆ. ಅದರಲ್ಲಿ ಎಸ್.ಟಿ.ಸೋಮಶೇಖರ್ ಹಾಗೂ ವಿ.ಸೋಮಣ್ಣ ಈಗಾಗಲೇ ಬಿಜೆಪಿ ಪಕ್ಷದಿಂದ ಒಂದು ಹೆಜ್ಜೆ ಹೊರಗೆ ಇಟ್ಟಾಗಿದೆ.

ಇನ್ನು ಬಿ.ಎಲ್ ಸಂತೋಷ್ ಅವರ ಬಣದವರೆಂದೇ ಗುರುತಿಸಿಕೊಂಡಿರುವ ಸಿಟಿ ರವಿ, ಅರವಿಂದ್ ಬೆಲ್ಲದ, ಅರವಿಂದ್ ಲಿಂಬಾವಳಿ, ಡಾ.ಸುಧಾಕರ್ ಯಾವುದೇ ಕೆಲಸದ ಒತ್ತಡ ಇಲ್ಲದಿದ್ದರೂ ಕಾರ್ಯಕ್ರಮಕ್ಕೆ ಗೈರಾಗುವ ಮೂಲಕ ವಿಜಯೇಂದ್ರ ಅವರಿಗೆ ಸವಾಲು ಎಸೆದಿದ್ದಾರೆ. ವಿಜಯೇಂದ್ರ ಆಯ್ಕೆ ನೇರವಾಗಿ ಬಿ.ಎಲ್.ಸಂತೋಷ್ ಬಣಕ್ಕೆ ಹಿನ್ನಡೆಯಾಗಿದ್ದು ಈ ಬಗ್ಗೆ ಕಾರ್ಯಕ್ರಮಕ್ಕೆ ಹಾಜರಾಗಿರುವ ಕೆ.ಎಸ್.ಈಶ್ವರಪ್ಪ ಕೂಡಾ ವಿಜಯೇಂದ್ರಗೆ ಎಲ್ಲಾ ರೀತಿಯ ಅಧಿಕಾರ ಇಲ್ಲ ಎಂದಿದ್ದಾರೆ. ಆ ಮೂಲಕ ತವರು ಜಿಲ್ಲೆ ಶಿವಮೊಗ್ಗದ ಕಡೆಯಿಂದಲೇ ಬಂಡಾಯದ ಬಿಸಿ ತಟ್ಟಿದೆ.

ಇನ್ನು ಹಿಂದುತ್ವದ ಫೈರ್ ಬ್ರಾಂಡ್ ಹಾಗೆ ಗುರುತಿಸಿಕೊಂಡಿರುವ ಯತ್ನಾಳ್ ಅವರು ಹಿಂದಿನಿಂದಲೂ ಯಡಿಯೂರಪ್ಪ ಮತ್ತು ಅವರ ಕುಟುಂಬವನ್ನು ಟೀಕಿಸಿಕೊಂಡು ಬಂದವರು. ಅವರೂ ಸಹ ಕಾರ್ಯಕ್ರಮಕ್ಕೆ ಗೈರಾಗಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ಅದರಲ್ಲೂ ಲಿಂಗಾಯತ ಮತಗಳು ಒಂದು ಕಡೆ ತಗೆದುಕೊಳ್ಳುವ ವಿಚಾರದಲ್ಲಿ ವಿಜಯೇಂದ್ರಗೆ ಪಕ್ಷ ಕಟ್ಟುವುದಕ್ಕಿಂತ ಹೆಚ್ಚಾಗಿ ಬಂಡಾಯ ಶಮನವೇ ದೊಡ್ಡ ತಲೆನೋವಾಗಬಹುದು ಎನ್ನಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page