Friday, June 20, 2025

ಸತ್ಯ | ನ್ಯಾಯ |ಧರ್ಮ

ಸ್ವಾಮೀಜಿಯ ಹನಿಟ್ರ್ಯಾಪ್‌ ಮಾಡಲು ಹೋಗಿ ತಾವೇ ಟ್ರ್ಯಾಪ್‌ಗೊಳಗಾದ ಆರೋಪಿಗಳು?

ಕುಣಿಗಲ್‌: ಸ್ವಾಮೀಜಿಯೊಬ್ಬರನ್ನು ಹನಿಟ್ರ್ಯಾಪ್‌ ಮಾಡಲು ಯತ್ನಿಸಿ ತಾವೇ ಟ್ರಾಪ್‌ ಆದ ಆರೋಪಿಗಳು ಈಗ ಪೊಲೀಸರ ಬಂಧನದ ಭಯದಲ್ಲಿ ತಲೆ ಮರೆಸಿಕೊಂಡಿದ್ದಾರೆ.


ಸಾಮಾಜಿಕ ಜಾಲತಾಣದಲ್ಲಿ ಸ್ವಾಮೀಜಿಯ ಖಾಸಗಿ ವಿಡಿಯೊ ಹಾಕುವುದಾಗಿ ಮಠಾಧೀಶರಿಗೆ ಹೆದರಿಸಿ ಹಣಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಆರು ಜನರ ವಿರುದ್ಧ ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ, ನನ್ನ ಚರ್ಮದ ಖಾಯಿಲೆಯ ವಾಸಿ ಮಾಡುತ್ತೇನೆಂದು ವಿಡಿಯೋ ಮಾಡಿಕೊಂಡು ನನಗೆ ಬೆದರಿಕೆಯೊಡ್ಡುತ್ತಿದ್ದಾರೆ ಎಂದು ಆರೋಪಿಸಿ ಸ್ವಾಮೀಜಿ ಕಡೆಯುವರು ದೂರು ನೀಡಿದ್ದಾರೆ.


ಪ್ರಕರಣದ ಹಿನ್ನೆಲೆ: ತಾಲ್ಲೂಕಿನ ಹುಲಿಯೂರುದುರ್ಗ ಹೋಬಳಿಯ ಹಂಗರಹಳ್ಳಿಯ ಶ್ರೀವಿದ್ಯಾ ಚೌಡೇಶ್ವರಿ ದೇವಸ್ಥಾನದ ಬಾಲ ಮಂಜುನಾಥ ಸ್ವಾಮೀಜಿಯವರೇ ಈ ಪ್ರಕರಣದ ಕೇಂದ್ರ ವ್ಯಕ್ತಿ. ಇವರ ಖಾಸಗಿ ವಿಡಿಯೊ ನಮ್ಮ ಬಳಿ ಇದ್ದು ಅದನ್ನು ಸಾಮಾಜಿಕ ಜಾಲತಾಣಕ್ಕೆ ಹಾಕುವುದಾಗಿ ಬೆದರಿಸಿ ಆರೋಪಿಗಳು ಆಗಾಗ ಬ್ಲಾಕ್‌ ಮೇಲ್‌ ಮಾಡುತ್ತಿದ್ದರು ಎಂದು ದೇವಸ್ಥಾನದ ಟ್ರಸ್ಟಿ ಕೆ.ಅಭಿಲಾಷ್‌ ಎಂಬುವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.


ಈ ದೂರಿನ ಹಿನ್ನೆಲೆಯಲ್ಲಿ ಕುಣಿಗಲ್‌ ತಾಲ್ಲೂಕಿನ ಹೊಸಕೆರೆ ಗ್ರಾಮದ ಎಚ್‌.ಎಸ್‌.ಅಭಿಷೇಕ್‌, ಬೆಂಗಳೂರಿನ 30 ವರ್ಷದ ಯುವತಿ, ಪಾಂಡವಪುರ ಬಳಿಯ ವಿಜಯಕಾಳಿ ದೇವಸ್ಥಾನದ ರಾಜೇಶ್‌, ಶ್ರೀನಿವಾಸ್‌, ರಾಮನಗರ ಜಿಲ್ಲೆಯ ಕವನಪುರ ಗ್ರಾಮದ ಚೇತನ್‌, ಕುಣಿಗಲ್‌ನ ನಂದೀಶ್‌ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ.


ಸ್ವಾಮೀಜಿಯ ಆಪ್ತ ಸಹಾಯಕರಾಗಿದ್ದ ಎಚ್‌.ಎಸ್‌.ಅಭಿಷೇಕ್‌ ಮೂಲಕ ಸ್ವಾಮೀಜಿಗೆ ಯುವತಿಯ ಪರಿಚಯವಾಗಿತ್ತು. ಆಕೆಯನ್ನು ತನ್ನ ಸಂಬಂಧಿ ಮತ್ತು ವೈದ್ಯೆ ಎಂದು ಸ್ವಾಮೀಜಿಗೆ ಅಭಿಷೇಕ್‌ ಪರಿಚಯಿಸಿದ್ದರು. ಮುಂದಿನ ದಿನಗಳಲ್ಲಿ ಸ್ವಾಮೀಜಿಗೆ ಚರ್ಮ ಸಮಸ್ಯೆ ಶುರುವಾಗಿತ್ತು. ಇದನ್ನು ಸ್ವಾಮೀಜಿ ತಮ್ಮ ಆಪ್ತ ಸಹಾಯಕನಿಗೆ ತಿಳಿಸಿದ್ದರು. ತನ್ನ ಸಂಬಂಧಿ ಚರ್ಮರೋಗ ತಜ್ಞೆಯಾಗಿದ್ದು, ಆಕೆಗೆ ತೋರಿಸುವುದು ಒಳ್ಳೆಯದು ಎಂದು ಅಭಿಷೇಕ್ ಸಲಹೆ ಮಾಡಿದ್ದ. ಇದಕ್ಕೆ ಸ್ವಾಮೀಜಿ ಒಪ್ಪಲಿಲ್ಲ. ನಂತರ ಚರ್ಮರೋಗ ಕಾಣಿಸಿಕೊಂಡ ಜಾಗದ ಚಿತ್ರ ತೆಗೆದು ಯುವತಿಗೆ ವಾಟ್ಸಪ್‌ ಮೂಲಕ ಕಳುಹಿಸಲಾಗಿತ್ತು. ಅವರು ಒಂದಷ್ಟು ಔಷಧಿ, ಮುಲಾಮು ತೆಗೆದುಕೊಳ್ಳುವಂತೆ ತಿಳಿಸಿದ್ದರು.


ಆದರೂ ಚರ್ಮರೋಗ ವಾಸಿಯಾಗದ್ದರಿಂದ ಸ್ವಾಮೀಜಿಯು ಯುವತಿ ಬಳಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದರು. ಕೇವಲ ಬಾಯಲ್ಲಿ ಹೇಳಿದರೆ ಸಾಕಾಗುವುದಿಲ್ಲ. ವಿಡಿಯೋ ಕರೆ ಮಾಡಿ ತೋರಿಸಿ ಎಂದು ಯುವತಿ ಪುಸಲಾಯಿಸಿದ್ದರಿಂದ ಸ್ವಾಮೀಜಿ ವಿಡಿಯೊ ಕರೆ ಮಾಡಿ ಚರ್ಮರೋಗ ಕಾಣಿಸಿಕೊಂಡ ಜಾಗ ತೋರಿಸಿದ್ದರು.


ಅದನ್ನೇ ರೆಕಾರ್ಡ್‌ ಮಾಡಿಕೊಂಡು ಈಗ ಸ್ವಾಮೀಜಿ ವಿರುದ್ಧ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಾರೆ. ಕೇಳಿದಷ್ಟು ಹಣ ಕೊಡದಿದ್ದರೆ ವಿಡಿಯೊವನ್ನು ಫೇಸ್‌ಬುಕ್‌, ಯ್ಯೂಟೂಬ್‌ನಲ್ಲಿ ಹಂಚಿಕೊಳ್ಳಲಾಗುವುದು’ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page