ಬೆಂಗಳೂರು: ಹೃದಯಾಘಾತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿ ಐಸಿಯು ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಐಎಎಸ್ ಅಧಿಕಾರಿ, ನಟ ಕೆ.ಶಿವರಾಮ್ ಇಂದು ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ.
ಈ ಕುರಿತಂತೆ ಅವರ ಬಹುಕಾಲದ ಗೆಳೆಯ ನಾಗೇಶ್ ಕಾಳೇನಹಳ್ಳಿ ಅವರು ತಮ್ಮ ಫೇಸ್ ಬುಕ್ ಮುಖ ಪುಟದಲ್ಲಿ ಬರೆದುಕೊಂಡು, ಮಾಹಿತಿ ಹಂಚಿಕೊಂಡಿದ್ದಾರೆ.
Actor K Sivaram No More: “ನಿನ್ನೆ ಸಂಜೆ ನನ್ನ ಅನುಗಾಲದ ಗೆಳೆಯ ಅರದೇಶಹಳ್ಳಿ ವೆಂಕಟೇಶ್ ಕೆ. ಶಿವರಾಂ ಅವರು ಸೀರಿಯಸ್ಸಾಗಿದ್ದಾರೆ. ಹೆಚ್. ಸಿ. ಜಿ ಆಸ್ಪತ್ರೆಯಲ್ಲಿದ್ದಾರೆ ಎಂದರು. ಕೂಡಲೇ ನನ್ನ ಹಿರಿಯಣ್ಣ ಡಾ. ಸ್ವಾಮಿ ಅವರಿಗೆ ಫೋನ್ ಮಾಡಿದೆ. ಅವರ ವೈಧ್ಯಕೀಯ ಭಾಷೆ ನನಗೆ ಅರ್ಥವಾಯಿತು. ವೆಂಕಟೇಶ್ ಅವರಿಗೆ ಹೋಪ್ಸ್ ಇಲ್ಲವೆಂದು ಹೇಳಿದೆ. ಇಂದು ಬೆಳಿಗ್ಗೆ ಅವರು ಇನ್ನಿಲ್ಲವೆಂಬ ಸುದ್ಧಿ ಹೊರಬಿದ್ದಿದೆ. ಕೇವಲ ಹತ್ತನ್ನೆರಡು ಗಂಟೆಗಳ ಹಿಂದಿನ ಸೀರಿಯಸ್ ಎಂಬ ಸುದ್ದಿ ಮಲಗಿ ಏಳುವಷ್ಟರಲ್ಲಿ ‘ಇನ್ನಿಲ್ಲ’ ಎಂದಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಅವರು ತಮ್ಮ ಪೋಸ್ಟಿನಲ್ಲಿ ಬರೆದಿದ್ದಾರೆ.
ಕನ್ನಡದಲ್ಲಿ ಪ್ರಪ್ರಥಮ ಬಾರಿಗೆ ಐಎಎಸ್ ಬರೆದು ಭಾರತೀಯ ಆಡಳಿತಾ ಸೇವೆಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ, ನಿವೃತ್ತರಾಗಿದ್ದ ಹಾಗೂ ‘ಬಾ ನಲ್ಲೆ ಮಧು ಚಂದ್ರಕೆ’ ಸೇರಿದಂತೆ ಹಲವು ಚಿತ್ರಗಳ ಮೂಲಕ ಕನ್ನಡ ಸಿನಿ ರಸಿಕರಿಗೆ ಪರಿಚಿತರಾಗಿದ್ದ ಕೆ. ಶಿವರಾಮ್ ಅವರಿಗೆ ಹೃದಯಾಘಾತವಾಗಿತ್ತು. ಕೂಡಲೇ ಅವರನ್ನು ಬೆಂಗಳೂರಿನ ಎಚ್ ಸಿಜಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆಗೆ ಸ್ಪಂದಿಸದ ಅವರು ಇಂದು ಬೆಳಗ್ಗೆ ಅಸುನೀಗಿದ್ದಾರೆ.
ನಟ ಕೆ.ಶಿವರಾಮ್ ಪರಿಚಯ
ರಾಮನಗರ ಜಿಲ್ಲೆಯ ಬಿಡದಿ ಬಳಿಯ ಹಳ್ಳಿಯೊಂದರಲ್ಲಿ ಬಡ ಕುಟುಂಬದಲ್ಲಿ ಏಪ್ರಿಲ್ 6, 1953 ರಂದು ಜನಸಿದ ಕೆ. ಶಿವರಾಮು 1985 ರಲ್ಲಿ ಕೆಎಎಸ್ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದರು. ಆ ಬಳಿಕ ಕನ್ನಡ ಭಾಷೆಯಲ್ಲಿ ಐಎಎಸ್ ಪರೀಕ್ಷೆ ಬರೆದು, ತೇರ್ಗಡೆಯಾದ ಭಾರತದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
1993ರಲ್ಲಿ ತೆರೆಗೆ ಬಂದ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಬಾ ನಲ್ಲೆ ಮಧುಚಂದ್ರಕೆ’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕೆ.ಶಿವರಾಮ್ ಪ್ರವೇಶಿಸಿದ್ದರು. ‘ವಸಂತ ಕಾವ್ಯ’, ‘ಸಾಂಗ್ಲಿಯಾನಾ ಪಾರ್ಟ್ 3’, ‘ಪ್ರತಿಭಟನೆ’, ‘ಯಾರಿಗೆ ಬೇಡ ದುಡ್ಡು’, ‘ಗೇಮ್ ಫಾರ್ ಲವ್’, ‘ಟೈಗರ್’ ಮುಂತಾದ ಕನ್ನಡ ಚಿತ್ರಗಳಲ್ಲಿ ಕೆ.ಶಿವರಾಮ್ ಅಭಿನಯಿಸಿದ್ದಾರೆ.
ರಾಜಕೀಯಕ್ಕೂ ಧುಮುಕ್ಕಿದ್ದ ಶಿವರಾಮ್
2013ರಲ್ಲಿ ಐಎಎಸ್ ನಿಂದ ಸ್ವಯಂ ನಿವೃತ್ತಿ ಪಡೆದ ನಂತರ ಕಾಂಗ್ರೆಸ್ ಪಕ್ಷದ ಮೂಲಕ ರಾಜಕೀಯ ಜೀವನ ಆರಂಭಿಸಿದ್ದರು. ಕೆ.ಶಿವರಾಮ್, 2014 ರಲ್ಲಿ ವಿಜಯಪುರ ಲೋಕಸಭೆ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿ ಸೋತರು. ನಂತರ ಅದೇ ವರ್ಷ ದಲಿತರಿಗೆ ಸಿ.ಎಂ ಪಟ್ಟ ಸಿಗಬೇಕೆಂದು ಪರಮೇಶ್ವರ್ ಬೆಂಬಲಿಸಿ ಕಾಂಗ್ರೆಸ್ ಸೇರಿದರು. ಆದರೆ ಕಾಂಗ್ರೆಸ್ ನಲ್ಲಿ ಸೂಕ್ತ ಸ್ಥಾನಮಾನ ಸಿಗದೇ ಬಿಜೆಪಿ ಸೇರಿದರು. ಛಲವಾದಿ ಮಹಸಭಾ ಅಧ್ಯಕ್ಷರಾಗಿದ್ದರು. ದಲಿತ ಪರ ಹೋರಾಟಕ್ಕೆ ಹೆಸರುವಾಸಿಯಾಗಿದ್ದರು. ಇಂತಹ ಅವರು ಇಂದು ನಿಧರಾಗುವ ಮೂಲಕ ಇನ್ನಿಲ್ಲವಾಗಿದ್ದಾರೆ.
ಸಮಾಜದ ಹಲವು ಗಣ್ಯರು ಅಗಲಿದ ಚೇತನಕ್ಕೆ ಶೃದ್ಧಾಂಜಲಿ ಸಲ್ಲಿಸುತ್ತಿದ್ದಾರೆ.