ಚಿತ್ತಾಪುರ: ನಮೋ ಭಾರತ ಕಾರ್ಯಕ್ರಮದ ಕೋಮುವಾದಿ ಭಾಷಣಕ್ಕೆ ಹೆಸರಾಗಿರುವ ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅವರನ್ನು ಪೊಲೀಸರು ಕಲಬುರಗಿ ಜಿಲ್ಲಾ ಗಡಿ ಪ್ರವೇಶದಲ್ಲೇ ತಡೆದಿದ್ದಾರೆ. ಇದನ್ನು ಪ್ರಶ್ನಿಸಿ ಕೋರ್ಟ್ ಮೊರೆ ಹೋಗಲಾಗಿದೆ ಎಂದು ಸ್ಥಳೀಯ ಬಿಜೆಪಿ ಮುಖಂಡರು ಹೇಳಿದ್ದಾರೆ.
ಮುಖ್ಯ ಭಾಷಣಕಾರರಾಗಿ ಸೂಲಿಬೆಲೆ ಅವರು ಬೀದರ್ನ ಭಾಲ್ಕಿಯಿಂದ ಚಿತ್ತಾಪುರಕ್ಕೆ ಬರುತ್ತಿದ್ದರು. ಬುಧವಾರ ತಡರಾತ್ರಿ ಕಮಲಾಪುರ ತಾಲ್ಲೂಕಿನ ಕಿಣ್ಣಿ ಸಡಕ್ ಬಳಿ ಕಲಬುರಗಿ ಗಡಿ ಪ್ರವೇಶಿಸದಂತೆ ಪೊಲೀಸರು ತಡೆಯೊಡ್ಡಿದರು. ನಿಷೇಧದ ಕ್ರಮವನ್ನು ಪ್ರಶ್ನಿಸಿ ಕೋರ್ಟ್ ಮೊರೆ ಹೋಗಿದ್ದೇವೆ. ಅಧಿಕಾರಿಗಳ ಆದೇಶಕ್ಕೆ ತಡೆಯಾಜ್ಞೆ ಸಿಗುವ ನಿರೀಕ್ಷೆ ಇದೆ. ವಿಜೃಂಭಣೆಯಿಂದ ಕಾರ್ಯಕ್ರಮ ಮಾಡುತ್ತೇವೆ’ ಎಂದು ಬಿಜೆಪಿ ಮಂಡಲ ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
‘ನಮೋ ಭಾರತ ಕಾರ್ಯಕ್ರಮ ಆಯೋಜನೆಗೆ ತಾಲ್ಲೂಕು ಆಡಳಿತದ ಅನುಮತಿ ನಿರಾಕರಿಸಿದೆ. ಸೂಲಿಬೆಲೆ ಚಕ್ರವರ್ತಿ ಅವರ ಗಡಿ ಪ್ರವೇಶಿಸದಂತೆ ಆಡಳಿತ ಮಂಡಳಿ ಸೂಚನೆ ನೀಡಿದೆ. ನಮೋ ಭಾರತ ಕಾರ್ಯಕ್ರಮದ ಮೂಲಕ ಯುವಜನರಲ್ಲಿ ಕೋಮುಭಾವನೆಯನ್ನು ಪ್ರಚೋಧಿಸುತ್ತಾರೆ ಎಂಬ ಆರೋಪ ಸೂಲಿಬೆಲೆಯವರ ಮೇಲಿದೆ. ಅವರು ಕೆಲವೆಡೆ ಭಾಷಣ ಮಾಡುವ ಸಂದರ್ಭದಲ್ಲಿ ಸ್ಥಳೀಯ ಯುವಕರ ನಡುವೆ ಗಲಾಟೆಗಳಾದ ಉದಾಹರಣೆಗಳಿವೆ, ಹಾಗಾಗಿ ಪ್ರವೇಶ ನಿರಾಕರಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ತಾಲ್ಲೂಕಿನಲ್ಲಿ ಸೂಕ್ತ ಬಿಗಿ ಪೋಲಿಸ್ ಬಂದೋಬಸ್ತ್ ಮಾಡಲಾಗಿದೆ’ಎಂದು ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ ತಿಳಿಸಿದ್ದಾರೆ,