Friday, June 20, 2025

ಸತ್ಯ | ನ್ಯಾಯ |ಧರ್ಮ

ಭಾರತ್‌ ಜೋಡೊ ಯಾತ್ರೆಯಲ್ಲಿ ನಟ ಸಂಚಾರಿ ವಿಜಯ್‌ ನೆನಪು

ಇಂದಿನ ಭಾರತ್‌ ಜೋಡೊ ಯಾತ್ರೆಯ ಸಂದರ್ಭದಲ್ಲಿ ರಾಹುಲ್‌ ಗಾಂಧಿಯವರು ನಟ ಸಂಚಾರಿ ವಿಜಯ್‌ ಅವರನ್ನು ಭಾವುಕರಾಗಿ ನೆನಪಿಸಿಕೊಂಡಿದ್ದಾರೆ. ಅವರ ಕುಟುಂಬದವರು ರಾಹುಲ್‌ ಗಾಂಧಿಯವರೊಡನೆ ಭಾರತ್‌ ಜೋಡೊ ಯಾತ್ರೆಯಲ್ಲಿ ಭಾಗವಹಿಸಿದ ಹಿನ್ನೆಲೆಯಲ್ಲಿ ರಾಹುಲ್‌ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಗಳಲ್ಲಿ ಭಾವುಕ ಪೋಸ್ಟ್‌ ಒಂದನ್ನು ಹಂಚಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಅವರು ಡಾ. ರಾಜ್‌ಕುಮಾರ್‌ ಮತ್ತು ಪುನೀತ್‌ ರಾಜ್‌ಕುಮಾರ್‌ ಅವರನ್ನೂ ಸ್ಮರಿಸಿದ್ದು, ಅವರ ಕಾರ್ಯಗಳು ಸಮಸ್ಥ ಕನ್ನಡಿಗರಿಗೆ ಮತ್ತು ಭಾರತೀಯರಿಗೆ ಸ್ಫೂರ್ತಿ ಎಂದಿದ್ದಾರೆ.

ಪೋಸ್ಟ್‌ನ ಪೂರ್ಣ ಪಾಠ ಕೆಳಗಿನಂತಿದೆ.

“ಅವರದ್ದು ಖಂಡಿತ ನಮ್ಮೆಲ್ಲರನ್ನು ಅಗಲಿ ಹೋಗುವ ವಯಸ್ಸಲ್ಲಾ. ರಕ್ಷಿತಾ, ವೇದಾ ಹಾಗೂ ವಿಜಯ್ ಈ ಜಗತ್ತಿಗೆ ಬಹಳ ಬೇಗ ವಿದಾಯ ಹೇಳಿಬಿಟ್ಟರು. ಅವರ ಸಾವಿನಲ್ಲೂ ತಮ್ಮ ಅಂಗಾಂಗಗಳನ್ನು ದಾನ ಮಾಡಿ ಬೇರೊಬ್ಬರ ಜೀವ ಉಳಿಸುವ ಮೂಲಕ ಇತರರಿಗೆ ಸಂತಸ ಹಾಗೂ ಜೀವನ ಮೌಲ್ಯಗಳನ್ನ ಉಡುಗೊರೆಯಾಗಿ ನೀಡಿದರು. ಇದು ಪ್ರೀತಿ ಮತ್ತು ತ್ಯಾಗದ ಒಂದು ಉದಾಹರಣೆ.

ಈ ಅಂಗಾಂಗ ದಾನಿಗಳ ಕೆಚ್ಚೆದೆಯ ಹೃದಯವುಳ್ಳ ಕುಟುಂಬದ ಸದಸ್ಯರೊಂದಿಗೆ ಜೊತೆಯಾಗಿ ನಡೆಯುವ ಅವಕಾಶ ಇಂದು ನನ್ನದಾಗಿತ್ತು. ಅವರು ಜೀವನದಲ್ಲಿ ತ್ಯಾಗ, ಸಹಾನುಭೂತಿ ಮತ್ತು ಮಾನವೀಯತೆಯನ್ನು ನಿಜವಾದ ಅರ್ಥದಲ್ಲಿ ನಿರೂಪಿಸಿ ತೋರಿಸಿದ್ದಾರೆ.

ಮಾನವೀಯತೆ, ಸಾಮಾಜಿಕ ಕಳಕಳಿ ಮತ್ತು ಸಹಾನುಭೂತಿಯ ಜೀವನೋತ್ಸಾಹವನ್ನು ನಾವು ಉತ್ತೇಜಿಸಬೇಕು ಮತ್ತು ಪಾಲಿಸಬೇಕು. ಇಂದಿನ ದ್ವೇಷಪೂರಿತ ಮತ್ತು ದುರಾಸೆಯ ಸಮಾಜದಲ್ಲಿ ಇವು ನಾವೆಂದಿಗೂ ಮರೆಯಲಾಗದ, ಕೈಬಿಡಲಾಗದ ಜೀವನದ ಅತ್ಯಮೂಲ್ಯ ಭಾಗಗಳಾಗಿವೆ.

ದಿವಂಗತ ಡಾ. ರಾಜ್‌ಕುಮಾರ್ ಮತ್ತು ಅವರ ಪುತ್ರ, ದಿವಂಗತ ಡಾ. ಪುನೀತ್ ರಾಜ್‌ಕುಮಾರ್ ಅವರ ನೇತ್ರದಾನದಂತಹ ನಿಸ್ವಾರ್ಥ ಕಾರ್ಯವು ಸಹಸ್ರಾರು ಕನ್ನಡಿಗರು ಮತ್ತು ಭಾರತೀಯರಿಗೆ ಸ್ಫೂರ್ತಿ ನೀಡಿದ್ದು, ಅಂಗಾಂಗ ದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿವೆ.

ಕರ್ನಾಟಕದ ಈ ಸುಂದರ ನಾಡಿನಿಂದ 33 ಭಾರತ ಯಾತ್ರಿಗಳು ತಮ್ಮ ಕಣ್ಣುಗಳನ್ನು ದಾನ ಮಾಡಲು ಪಣ ತೊಟ್ಟಿದ್ದಾರೆ ಎಂದು ನಿಮಗೆ ತಿಳಿಸಲು ನನಗೆ ಅಪಾರ ಹೆಮ್ಮೆಯಿದೆ.

ಸಾಮರಸ್ಯ, ಭ್ರಾತೃತ್ವ ಮತ್ತು ಮಾನವೀಯ ಗುಣಗಳಲ್ಲಿ ಅಪರಿಮಿತ ಪ್ರೀತಿ ಹಾಗೂ ಸಂತಸ ಅಡಗಿದೆ.”

Related Articles

ಇತ್ತೀಚಿನ ಸುದ್ದಿಗಳು

You cannot copy content of this page